“ಗಂಧರ್ವ ವಿದ್ಯೆ ಸಂಗೀತ”
ಸಂಗೀತ ದೈವಿಕವಾದ ಕಲೆ. ವೇದ ಕಾಲದಿಂದಲೂ ಬೆಳೆದು ಬಂದ ಒಂದು ಕಲೆ, ಸಾಮವೇದದಲ್ಲಿ ಸಂಗೀತದ ಮೂಲ ಸ್ವರ, ಆಲಾಪ, ರಾಗ ತಾಳಗಳ ಸವಿವರ ಜ್ಞಾನವನ್ನು ನೀಡುತ್ತದೆ. ವಿದ್ಯೆಗೆ ಅಧಿದೇವತೆಯಾದ ಸರಸ್ವತಿಯೇ ಈ ಸಂಗೀತದ ಪ್ರತಿಪಾದ್ಯಳು ಅವಳ ಕೈಯಲ್ಲಿ ವೀಣೆಯಿದೆ. ಭಾರತೀಯರಲ್ಲಿ ಹಿಂದುಗಳಲ್ಲಿ ನವವಿಧ ಭಕುತಿಯಲ್ಲಿ ಸಂಗೀತ ಸೇವೆಯನ್ನು ಭಗವಂತನನ್ನು ಮೆಚ್ಚಿಸಲೆಂದೇ ಮಾಡಲಾಗುತ್ತದೆ. ವೇದ ಉಪನಿಷತ್ತುಗಳನ್ನು ಪಠಿಸುವ ಸ್ವರ ಬದ್ಧವಾದ ನಿಯಮವೇ ಸಂಗೀತ.
ಇತ್ತೀಚಿನ ಆಧುನಿಕ ಯುಗದಲ್ಲಿ ವಿಶ್ವ ಸಂಗೀತ ದಿನದ ಆಚರಣೆ ಆರಂಭ ವಾಗಿ 43 ವರ್ಷಗಳಾಗಿವೆ. ವಿಶ್ವ ಸಂಗೀತ ದಿನದ ಆರಂಭ ಫ್ರಾನ್ಸ್ನ ಸಾಂಸ್ಕೃತಿಕ ಮಂತ್ರಿ ಜಾಕ್ ಲಾಂಗ್ರವರು 1982ರಲ್ಲಿ ಮೊದಲ ಬಾರಿಗೆ ಆರಂಭಿಸಿದರು. ಪ್ಯಾರಿಸ್ನಲ್ಲಿ 1000 ಜನರ ಸಂಗೀತ ಕಲಾವಿದರು ಪಾರ್ಕ್ ಮತ್ತು ರಸ್ತೆಗಳಲ್ಲಿ ತಮ್ಮ ಸಂಗೀತದ ಸುಧೆಯನ್ನು ಪ್ರದರ್ಶಿಸಿದರು. ಈ ದಿನವು ಜೂನ್ 21 ಅಗಿದ್ದು ಅಂದಿನಿಂದ ಇಲ್ಲಿಯವರೆಗೂ ವಿಶ್ವ ಸಂಗೀತ ದಿನವನ್ನು ಜೂನ್ 21 ರಂದೇ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಆರಂಭವಾದ ಈ ಆಚರಣೆಯನ್ನು ಇಂದು 700 ನಗರಗಳಲ್ಲಿ 120 ದೇಶಗಳಲ್ಲಿ ಆಚರಿಸಲಾಗುತ್ತಿದೆ. ಈ ಆಚರಣೆಯ ಮೂಲ ಉದ್ದೇಶ ಸಂಗೀತದ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ಮತ್ತು ಜನರಲ್ಲಿ ಸಂಗೀತದ ಬಗ್ಗೆ ಆಸಕ್ತಿ ಪ್ರೀತಿಯನ್ನು ಹುಟ್ಟಿಸುವುದು ಆಗಿದೆ.
“ಗಾನ ವಿದ್ಯಾ ಬಡಿ ಕಠಿಣ ಹೈ “ ಎಂಬುದು ಸರ್ವೆ ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುವ ಸಾಲು. ನಿಜ, ಅದು ಸುಲಭವಾದ ವಿದ್ಯೆಯಂತೂ ಅಲ್ಲ. ಸಂಗೀತದ ಗಂಧ ಗಾಳಿಯಿಲ್ಲದವರು ಕೂಡ ಒಂದು ವೇಳೆ ಯಾವುದಾದರು ಹಾಡನ್ನ ಕೇಳಿ ತಾಳ ಹಾಕಿದರೆ ಅಥವಾ ಎದ್ದು ಕುಣಿದರೆ ಅದು ಸಂಗೀತದಲ್ಲಿರುವ ಶಕ್ತಿ ಹಾಗು ಮಾಯೆ. ಸಂಗೀತವೆಂದರೆ ಏನು ಎಂಬುದರ ಮೇಲೆ ಹಲವಾರು ವ್ಯಾಖ್ಯಾನಗಳಿದ್ದರು , ಒಬ್ಬ ಸಂಗೀತಗಾರನಿಗೆ “ಸಂಗೀತ ಎಂದರೇನು?” ಎಂದು ಕೇಳಿದರೆ ಭೀಮಸೇನ್ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್, ಎಂಎಸ್ ಸುಬ್ಬಲಕ್ಷ್ಮಿಯಿಂದ ಹಿಡಿದು ಉಷಾ ಉತ್ತಪ್, ಅರಿಜಿತ್ ಸಿಂಗ್, ಎ. ಆರ್. ರಹ್ಮಾನ್ ಮುಂತಾದ ದಿಗ್ಗಜರ ಹೆಸರು ಹೇಳುತ್ತಾನೆ. ಹಾಗಿರುವಾಗ, ಸಂಗೀತ ಮತ್ತು ಸಂಗೀತಗಾರ ಒಂದೆ ಅಂತಾಯಿತಲ್ಲವೆ?
ತೋಡಿ ರಾಗ ಎಂದರೆ ಭೀಮಸೇನ್ ಜೋಶಿ, “ನರಜನ್ಮ ಬಂದಾಗ ನಾಲಿಗೆ ಇರುವಾಗ” ಹಾಡು ನೆನಪಿಸಿದರೆ ಟಿ.ಎನ್. ಶೇಷಗೋಪಾಲನ್, ಪಿಟೀಲು ಎಂದರೆ ಚೌಡಯ್ಯನವರು, ಹೀಗೆ ಉದಾಹರಣೆ ಒಂದೇ ಎರಡೇ, ಸಂಗೀತವೆಂದಾಗ ಮೊದಲು ನೆನಪಾಗುವುದು ಸ್ವರ. ಭಾರತೀಯ ಶಾಸ್ತ್ರೀಯ ಸಂಗೀತದ ಸರಿಗಮಪದನಿ ಇರಬಹುದು ಅಥವಾ ಪಾಶ್ಚಾತ್ಯದ ದೋರೇಮೀಫಾಸೊಲಾಟಿ ಇರಬಹುದು, ಸಾರುವುದು ಹಿತವನ್ನ ಮತ್ತು ಕೊಡುವುದು ಶಾಂತಿಯನ್ನ ಅಲ್ಲವೇ?
ಹಾಗಿರುವಾಗ ಭಾರತದ ಶಾಸ್ತ್ರೀಯ ಸಂಗೀತದಲ್ಲಿ ಜನರಿಗೆ ಏಕೆ ಕಮ್ಮಿ ಆಸಕ್ತಿ? ಯಾರನ್ನೇ ಕೇಳಿ “ ಅಯ್ಯೋ ಈ ರಾಗ ಎಳಿಯೋದನ್ನ ಯಾರ್ ಕೇಳ್ತಾರೆ ಸ್ವಾಮಿ” ಅನ್ನುವವರೇ ಹೆಚ್ಚು. ಪರದೇಶದವರು ಗುರುತಿಸಿ, ಕಲಿಯುತ, ಗೌರವಿಸುತ್ತಿರುವ ಈ ಕಲೆಯನ್ನು ಭಾರತೀಯರಾಗಿ ನಾವೆ ಏಕೆ ಕಡೆಗಣಿಸುತ್ತಿದ್ದೇವೆ? ಭಾರತದ ಶಾಸ್ತ್ರೀಯ ಸಂಗೀತವು ಅತ್ಯಂತ ಪ್ರಾಚೀನ ಹಾಗು ವೈಜ್ಞಾನಿಕವಾಗಿರುವಂತದ್ದು. ಆರೋಗ್ಯ ಗುಣಪಡಿಸುವ ಶಕ್ತಿಯೊಂದಿಗೆ ಬುದ್ಧಿಗೆ ಕೆಲಸ ಕೊಡುವ ಕಠಿಣವಾದ- ವಕ್ರವಾದ ಗುಣಿತವೂ ಸೇರಿರುವ ಅಪರೂಪದ ಕಲೆ. ಹಿಂದುಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವೆಂದು ವಿಭಜನೆಗೊಂಡಿರುವ ಈ ಕಲೆಯು, ಬಹಳ ಭಿನ್ನವಾಗಿದೆ. ಹಿಂದುಸ್ಥಾನಿಯಲ್ಲಿ ರಾಗಕ್ಕೆ ಒತ್ತುಕೊಟ್ಟರೆ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತಾಳ- ಲಯಕ್ಕೆ ಒಟ್ಟು ಕೊಡಲಾಗಿದೆ. ಬೆಳಗ್ಗಿನ ಮೊದಲನೇ ಪ್ರಹರದಿಂದ ಶುರುವಾದರೆ ರಾತ್ರಿಯ ಕೊನೆ ಪ್ರಹರದವರೆಗೂ ಅನೇಕ ರಾಗಗಳನ್ನು ಒಳಗೊಂಡಂತಹ ಶಾಸ್ತ್ರೀಯಯುಕ್ತ ಶೈಲಿಯಿದು. ಎರಡು ತಾಸಿಗೆ ಒಂದು ಪ್ರಹರ್ ಲೆಕ್ಕದಲ್ಲಿ ದಿನಕ್ಕೆ ೧೨ ಪ್ರಹರ್ ಗಳಿವೆ. ಅಲಾಪ್, ಜೋಡ್,ಝಲ್ಲ ಎಂದು ಹಿಂದೂಸ್ಥಾನಿಯಲ್ಲಿದ್ದರೆ, ರಾಗ-ತಾನ-ಪಲ್ಲವಿಯೆಂದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕರೆಯುತ್ತಾರೆ. ಈ ರಾಗಗಳಲ್ಲಿ ಆರೋಗ್ಯವನ್ನು ಗುಣಪಡಿಸುವ ಶಕ್ತಿಗಳು ಅಡಗಿದ್ದು, ಮನಶಾಸ್ತ್ರಜ್ಞರು ಮ್ಯೂಸಿಕ್ ಥೆರಪಿ ಎಂಬ ಚಿಕಿತ್ಸೆಯೊಂದಿಗೆ ಮಂದ ಬುದ್ಧಿಗಳನ್ನು ಮತ್ತು ಮಾನಸಿಕ ಒತ್ತಡದಲ್ಲಿರುವವರನ್ನು ಗುಣಪಡಿಸಿರುವ ಸಾಕಷ್ಟು ಉದಾಹರಣೆಗಳು ಲಭ್ಯವಿದೆ.ಇದನ್ನು ಓದಿ –ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ
ಇಂತಹ ಅಮೂಲ್ಯವಾದ, ನಮ್ಮ ಪುರಾತನ ಶಿಕ್ಷಣ ಶೈಲಿಯಾಗಿರುವ ಪಾರಂಪರಿಕ ಗುರು-ಶಿಷ್ಯ ಶೈಲಿಯಲ್ಲೇ ಇಂದಿಗೂ ನಡೆದುಕೊಂಡು ಬರುತ್ತ, ವಿಶ್ವಕ್ಕೆ ಭಾರತವು “ಗುರು “ ಎಂದು ಮತ್ತೆ ಮತ್ತೆ ಸಾರಿ ಹೇಳುವ ಭಾರತೀಯ ಶಾಸ್ತ್ರೀಯ ಸಂಗೀತವನ್ನ ಆಲಿಸುತ್ತ, ಅಭ್ಯಾಸ ಮಾಡುತ್ತ, ಅರಿವು ಮೂಡಿಸುತ್ತ, ಜಾಗರೂಕ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ವಿಶ್ವ ಸಂಗೀತ ದಿನದಂದು, ವಿಶ್ವಕ್ಕೆ ಸಂಗೀತವನ್ನ ಪರಿಚಯಿಸಿಕೊಟ್ಟ, ನಮ್ಮ ಪೂರ್ವಜರು ಕೊಟ್ಟು ಹೋದ ಈ ಅಮೂಲ್ಯ ಜ್ಞಾನಭಂಡಾರವನ್ನು ರಕ್ಷಿಸುತ್ತ ಮುಂದಿನ ಪೀಳಿಗೆಗೆ ಸಾರುವ ಪ್ರತಿಜ್ಞೆ ಮಾಡಬೇಕಾಗಿದೆ ಭಾರತೀಯ ಶಾಸ್ತ್ರೀಯ ಸಂಗೀತ ಕಲಿಯಲು ಆಗದೇ ಹೋದರೂ ಇಷ್ಟ ಪಟ್ಟು ಆಲಿಸೋಣ. ಸಂಗೀತ ಮನಕ್ಕೆ ಮುದ ನೀಡುವುದರಿಂದ ಯಾವುದೇ ಬಗೆಯ ಸಂಗೀತ ಆಲಿಸಿ ಸಂತಸ ಪಡಬಹುದು ಆದರೆ ನಮ್ಮ ಸಂಸಕೃತಿ ಸಂಪ್ರದಾಯವನ್ನು ಬಿಂಬಿಸುವ ಭಾರತೀಯ ಸಂಗೀತದ ಅಭ್ಯಾಸ ಮತ್ತು ಉಪಾಸನೆ ನಮನ್ನು ದೈವಿಕ ಆನಂದದೆಡೆಗೆ ಹಾಗೂ ಮನಸ್ಸು ಪ್ರಶಾಂತವಾಗಿಡುವಲ್ಲಿ ಸಹಾಯಕವಾಗಿರುವುದರಿಂದ ಹೆಚ್ಚಿಗೆ ಆಲಿಸಿ ಸಂಗೀತಗಾರರು ಆಗದೇ ಹೋದರೂ ಆರಾದಕರಾಗೋಣ.

ಸಂಜೀವ ಪಿ, ಬೆಂಗಳೂರು