ಭಾರತೀಯ ದರ್ಶನ ಶಾಸ್ತ್ರದಲ್ಲಿ ಸನಾತನ ಧರ್ಮದ ಪ್ರತೀಕವಾದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತಗಳು ಬಹಳ ಪ್ರಮುಖ ಮತಗಳಾಗಿವೆ. ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿದರು ಮತ್ತು ಭಾರತದಾದ್ಯಂತ ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡುವದಲ್ಲದೇ ಬಹಳಷ್ಟು ಕಡೆಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿ ಸನಾತನ ವೈದಿಕ ಧರ್ಮದ ಪ್ರಚಾರ ಮಾಡಿದವರು.
ಕಲಿಯುಗದ ಆರಂಭದಿಂದ ವೈದಿಕ ಧರ್ಮವನ್ನು ಅಲ್ಲಗಳೆಯುವ ಅನೇಕ ಅವೈದಿಕ ಮತಗಳು ಹುಟ್ಟಿಕೊಂಡು ಎಲ್ಲವೂ ನಶ್ವರ ದೇವರು ಇಲ್ಲ ಎಂದು ಪ್ರಚಾರ ಮಾಡುತ್ತಾ ಇದ್ದ ಎಲ್ಲ ಮತಗಳನ್ನು ಖಂಡಿಸಿ ಪುನಃ ವೈದಿಕ ಧರ್ಮ ಹಿಂದು ಧರ್ಮದ ಅಸ್ತಿತ್ವ ಉಳಿಯಲು ಕಾರಣರಾದವರು. ಅದರಲ್ಲಿ ಬೌದ್ಧ ಧರ್ಮದ ನೈರಾತ್ಮ ವಾದ ಎಂದರೆ ದೇಹ ಆತ್ಮ ಬೇರೆ ಅಲ್ಲ. ನಾವು ಬದುಕಿರುವವರೆಗೆ ಮಾತ್ರ ಆತ್ಮ ನಂತರ ಯಾವುದೂ ಇಲ್ಲ ಎಂದು ಪ್ರತಿಪಾದಿಸಿ ಜನರಲ್ಲಿ ನಾಸ್ತಿಕತೆ ಅರಾಜಕತೆಯ ಅಲೆ ಎಬ್ಬಿಸಿದ್ದರು. ಚಾರ್ವಾಕರೂ ಕೂಡ ಅವರದ್ದು ಹೆಚ್ಚು ಕಡಿಮೆ ಇದೇ ವಾದ ದೇಹವೇ ಆತ್ಮ ದೇಹವಿದ್ದಾಗ ಮಾತ್ರ ಜೀವನ ಅದರ ನಂತರ ಜೀವನ ಇರುವುದಿಲ್ಲ.
ಪಾಪ ಪುಣ್ಯಗಳು ಇಲ್ಲ. ಇರುವವರೆಗೂ ಸುಖದಿಂದ ಬಾಳ ಬೇಕು. ಸಾಲ ಮಾಡಿ ಆದರೂ ತುಪ್ಪ ತಿನ್ನಬೇಕು ಎಂಬ ಸಿದ್ಧಾಂತದವರು. ಇದೇ ರೀತಿ ಭಗವಂತನ ಅಸ್ತಿತ್ವವನ್ನು ನಿರಾಕರಿಸಿದ ಒಟ್ಟು 72 ಮತಗಳನ್ನು ಸನಾತನ ಧರ್ಮವನ್ನು ಉಳಿಸಲು ಮೂರು ಮತಗಳ ಪ್ರವರ್ತಕರಾದ ದ್ವೈತಾದ್ವೈತ ಮತ್ತು ವಿಶಿಷ್ಟಾದ್ವೈತದ ಮೂರು ಆಚಾರ್ಯರು ಖಂಡಿಸಿದ್ದಾರೆ. ದೇವಸ್ಥಾನಗಳ ಸ್ಥಾಪನೆ ತಮ್ಮ ಸಿದ್ಧಾಂತದ ಪ್ರಚಾರ ಪ್ರಸಾರ ಮಾಡುವ ಶಿಷ್ಯರನ್ನು ಭಾರತದಾದ್ಯಂತ ನೆಲೆಸುವಂತೆ ಮಾಡಿದರು.
ಅವನತಿಯ ಅಂಚಿನಲ್ಲಿದ್ದ ಸನಾತನ ವೈದಿಕ ಧರ್ಮದ ಪ್ರಚಾರಕ್ಕಾಗಿ ಉಪನಿಷತ್ತುಗಳು ಭಾಷ್ಯಗಳನ್ನು ಬರೆದರು. ವೇದವ್ಯಾಸ ದೇವರ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದು ಜನಸಾಮಾನ್ಯರಿಗೆ ದೇವರು ಧರ್ಮ ಮತ್ತು ತಮ್ಮ ಸಿದ್ಧಾಂತಗಳ ಪರಿಚಯವನ್ನು ಮಾಡಿಸಿದವರು.
ವಿಶಿಷ್ಟಾದ್ವೈತ ಪ್ರವರ್ತಕರಾದ ರಾಮಾನುಜಾಚಾರ್ಯರು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೂ ಅಲ್ಲಿ ಅವರಿಗೆ ನೆಲೆ ನಿಲ್ಲಲು ಬಿಡದ ಕಾರಣ ಮೇಲುಕೋಟೆಯಲ್ಲಿ ನೆಲೆ ನಿಂತು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿ ಕೊಂಡರು. ಕ್ರಿ.ಶ 1017ರ ವೈಶಾಖ ಶುದ್ಧ ಪಂಚಮಿಯಂದು ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಕೇಶವ ಸೋಮಯಾಜಿ ಮತ್ತು ಕಾಂತಿಮತಿ ದಂಪತಿಗಳ ಮಗನಾಗಿ ಹುಟ್ಟಿದ ರಾಮಾನುಜಾಚಾರ್ಯರು ವೈದಿಕ ಸಂಪ್ರದಾಯದ ಅನುಯಾಯಿಗಳಾಗಿದ್ದರು. ಇವರ ವಿದ್ಯಾಗುರುಗಳು ಅದ್ವೈತ ವಿದ್ವಾಂಸರಾದ ಯಾದವ ಪ್ರಕಾಶರಲ್ಲಿ ಆಯಿತು. ಅದ್ವೈತ ಅಧ್ಯಯನ ಮಾಡಿದರೂ ಮುಂದೆ ಅವರ ಜಿಜ್ಞಾಸೆ ಮತ್ತು ಪರಮಾತ್ಮನ ಹುಡುಕಾಟ ಅವರಲ್ಲಿ ಹೊಸ ವಿಚಾರವನ್ನು ಹುಟ್ಟು ಹಾಕಿತು.
ನಂತರ ಅವರು ಹೊಸ ಗುರುವಿನ ಅನ್ವೇಷಣೆಗೆ ತೊಡಗಿದಾಗ ಶ್ರೀವೈಷ್ಣವ ಸಂಪ್ರದಾಯದ ಆಗಿನ ಗುರುಗಳಾಗಿದ್ದ ಯಮುನಾಚಾರ್ಯರರಲ್ಲಿ ಮಾರ್ಗದರ್ಶನ ಪಡೆದರು. ಅವರ ಆಶೀರ್ವಾದ ಪಡೆಯುವ ಮೊದಲಿಗೆ ಅವರು ನಿಧನರಾದ ಕಾರಣ ಶ್ರೀ ವೈಷ್ಣವ ಸಂಪ್ರದಾಯದ ಪ್ರಚಾರ ಪ್ರಸಾರ ಮಾಡುವ ನಿರ್ಣಯ ತೆಗೆದುಕೊಂಡರು.
ರಾಮಾನುಜಾಚಾರ್ಯರೂ ಕೂಡ ಶಂಕರರಂತೆ ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತದ ತತ್ವದ ಭಾಷ್ಯಗಳನ್ನು ಬರೆದಿದ್ದಾರೆ. ಶರಣಾಗತಿ ಗದ್ಯಮ್, ಶ್ರೀರಂಗ ಗದ್ಯಮ್ ಮತ್ತು ವೈಕುಂಠ ಗದ್ಯಮ್ ಇವುಗಳನ್ನು ಗದ್ಯ ತ್ರಯಮ್ ಎನ್ನಲಾಗುತ್ತದೆ. ಇದಲ್ಲದೇ ವೇದಾಂತ ದೀಪಮ್ ಮತ್ತು ವೇದಾಂತ ಸಾರ ಗದ್ಯಮ್, ವೇದಾರ್ಥ ಸಂಗ್ರಹ, ಹೀಗೆ ಅನೇಕ ಕೃತಿಗಳನ್ನು ಬರೆದಿದ್ದಾರೆ. ಕಾಶ್ಮೀರದ ಸರಸ್ವತೀ ದೇವಿಗೆ ಅರ್ಪಿಸಿದಾಗ ಸರಸ್ವತಿ ದೇವಿಯು ಸ್ವೀಕರಿಸಿ ಹಯಗ್ರೀವ ದೇವರನ್ನು ನೀಡಿ ಅವರ ಭಾಷ್ಯಕ್ಕೆ ಶ್ರೀ ಭಾಷ್ಯ ಎಂದಿದ್ದಾರೆ. ಇದಲ್ಲದೇ ಗೀತಾ ಭಾಷ್ಯಗಳನ್ನು ಕೂಡ ಬರೆದರು. ಈ ಹಯಗ್ರೀವ ದೇವರ ಮೂರ್ತಿಯೂ ಇಂದಿಗೂ ಶ್ರೀ ಪರಕಾಲಸ್ವಾಮಿಗಳ ಮಠದಲ್ಲಿ ನೋಡಬಹುದು. ಶ್ರೀರಾಮಾನುಜಾಚಾರ್ಯರು ದಕ್ಷಿಣ ಭಾರತದಲ್ಲಂತೂ ಅನೇಕ ದೇವಸ್ಥಾನಗಳನ್ನು ಸ್ಥಾಪಿಸಿ ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ.
ನೀವು ಗಮನಿಸಿದರೆ ದಕ್ಷಿಣ ಭಾರತದಲ್ಲಿ ಶ್ರೀ ವೈಷ್ಣವರ ಅಂದರೆ ವಿಶಿಷ್ಟಾದ್ವೈತ ಅನುಯಾಯಿಗಳು ಪೂಜೆ ಮಾಡುವ ದೇವಸ್ಥಾನಗಳನ್ನು ಹೇರಳವಾಗಿ ಕಾಣಬಹುದು. ಶ್ರೀ ರಾಮಾನುಜಾಚಾರ್ಯರು ಶ್ರೀರಂಗ, ತಿರುಮಲ-ತಿರುಪತಿ, ಕಾಂಚೀಪುರಂ, ಮಧುರಾಂತಕಂಗಳಲ್ಲಿ ಜೀರ್ಣೋದ್ಧಾರ ಮಾಡಿ ಪೂಜೆಗೆ ವ್ಯವಸ್ಥೆ ಮಾಡಿದರೆ. ಶ್ರೀ ಕೂರ್ಮಂ, ಸಿಂಹಾಚಲ, ಪುರಿ ಜಗನ್ನಾಥ, ಬದರಿಕಾಶ್ರಮ, ನೈಮಿಷಾರಣ್ಯದಲ್ಲಿ ತಮ್ಮ ದೇವಸ್ಥಾನಗಳನ್ನು ನಿರ್ಮಿಸಿ ಅಲ್ಲಿ ಪೂಜೆಯ ಏರ್ಪಾಡು ಮಾಡಿದರು. ಯದುಗಿರಿಯ ಯತಿರಾಜ ಮಠದಂತಹ ಮಠಗಳನ್ನು ಸ್ಥಾಪಿಸಿ ವೇದಾಂತ ಪ್ರಸಾರಕ್ಕೆ ಅನುಕೂಲ ಮಾಡಿದರು.
ಕರ್ನಾಟಕದಲ್ಲಿ ತೊಂಡನೂರಿನ ನಂಬಿನಾರಾಯಣ, ಮೇಲುಕೋಟೆಯ ಚಲುವ ನಾರಾಯಣ, ಬೇಲೂರಿನ ವಿಜಯ ನಾರಾಯಣ, ಗದುಗಿನ ವೀರನಾರಾಐಣ , ತಲಕಾಡಿನ ಕೀರ್ತಿ ನಾರಾಯಣ ಪಂಚ ನಾರಾಯಣ ಕ್ಷೇತ್ರಗಳನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಮೂಲಕ ಮಾಡಿಸಿದರು. ರಾಮಾನುಜರ ಪ್ರಮುಖ ಶಿಷ್ಯರಲ್ಲಿ ಜೈನ ಸಂಪ್ರದಾಯದ ಅನುಯಾಯಿಯಾಗಿದ್ದ ಬಿಟ್ಟಿದೇವ ಅವರಿಗೆ ಕರ್ನಾಟಕದಲ್ಲಿ ನೆಲೆಸಲು ಅವಕಾಶ ನೀಡಿದವನು ಜೈನ ಮತದ ಅನುಯಾಯಿಯಾಗಿದ್ದವನನ್ನು ಶ್ರೀವೈಷ್ಣವ ಸಂಪ್ರದಾಯದ ಅನುಯಾಯಿಯನ್ನಾಗಿ ಮಾಡಿ ಅವನಿಂದ ಅನೇಕ ದೇವಾಲಯಗಳ ನಿರ್ಮಾಣ ಮಾಡಿಸಿ ಸನಾತನ ಧರ್ಮದ ಉಳಿವಿಗಾಗಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಸಾಮಾಜಿಕವಾಗಿ ಶ್ರೀರಾಮಾನುಚಾರ್ಯರ ಕೊಡುಗೆ ಅಪಾರ ಜಾತಿ ಪದ್ಧತಿ ಮತ್ತು ಅಸ್ಪ್ರಶ್ಯತೆಯನ್ನು ವಿರೋಧ ಮಾಡಿದ ರಾಮಾನುಜಾರ್ಯರು. ಸಾಮಾಜಿಕ ಕುಪ್ರಥೆಗಳ ವಿರೋಧ ಮಾಡಿದರು. ಪರಮಾತ್ಮನ ದೃಷ್ಠಿಯಲ್ಲಿ ಎಲ್ಲ ಜೀವಗಳೂ ಒಂದೇ ಎಂದು ದೇವಾಲಯಗಳ್ಲಲಿ ಕೀಳು ಜಾತಿಯ ಜನರ ಪ್ರವೇಶ ನಿಷೇಧವನ್ನು ವಿರೋಧಿಸಿದರು. ಎಲ್ಲ ಜಾತಿಯ ಶಿಷ್ಯರನ್ನು ಶಿಷ್ಯರನ್ನಾಗಿ ಮಾಢಿಕೊಂಡು ಹೃದಯ ವೈಶಾಲ್ಯವನ್ನು ಮತ್ತು ಸಾಮಾಜಿಕ ಬದ್ಧತೆ ಕಾಳಜಿಯನ್ನು ತೋರಿದರು.
ಇವರ ಕೊಡುಗೆ ಸನಾತನ ಧರ್ಮದಲ್ಲಿ ನಂಬಿಕೆ ಶ್ರದ್ಧೆಯನ್ನು ಉಳಿಸಿಕೊಳ್ಳಲು ಅಂದಿನ ಕಾಲದಲ್ಲಿ ಬಹಳ ದೊಡ್ಡ ಪ್ರೇರಣೆ ಹಾಗೂ ಶಕ್ತಿಯನ್ನು ನೀಡಿದವು.

ಮಾಧುರಿ ದೇಶಪಾಂಡೆ, ಬೆಂಗಳೂರು