ಬೆಂಗಳೂರು: ಪಡಿತರ ಚೀಟಿಯಲ್ಲಿ ಅರ್ಹರ ಹೆಸರು ಅಳಿಸಲಾಗಿದ್ದಲ್ಲಿ, ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ರಿಗೆ ಅಗತ್ಯ ದಾಖಲೆಗಳೊಂದಿಗೆ 45 ದಿನಗಳೊಳಗೆ ಮನವಿ ಸಲ್ಲಿಸಿದರೆ, ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಅರ್ಹರಾಗಿರುವವರಿಗೆ ಆದ್ಯತಾ ಪಡಿತರ ಚೀಟಿ (PHH) ಮರುಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮಾನದಂಡಗಳ ಆಧಾರದ ಮೇಲೆ ಅನರ್ಹರೆಂದು ಕಂಡುಬಂದ ಆದ್ಯತಾ ಪಡಿತರ ಚೀಟಿಗಳನ್ನು (PHH) ತಾತ್ಕಾಲಿಕವಾಗಿ ಆದ್ಯತೇತರ ಪಡಿತರ ಚೀಟಿಗಳಾಗಿ (NPHH) ಪರಿವರ್ತಿಸಲಾಗುತ್ತಿದೆ. ಈ ರೀತಿ NPHH ಆಗಿ ಪರಿವರ್ತಿಸಲಾದ ಪಡಿತರ ಚೀಟಿದಾರರು, ತಾವು ಆದ್ಯತಾ ಪಡಿತರ ಚೀಟಿಗೆ ಅರ್ಹರೆಂದು ಭಾವಿಸಿದಲ್ಲಿ, 45 ದಿನಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಬಹುದು. ಪರಿಶೀಲನೆಯ ನಂತರ ಅರ್ಹತೆ ಕಂಡುಬಂದರೆ, ಅವರ ಆದ್ಯತಾ ಪಡಿತರ ಚೀಟಿಯನ್ನು ಮರುಸ್ಥಾಪಿಸಲಾಗುತ್ತದೆ.
ಇದಲ್ಲದೆ, ಯಾವುದೇ ಅರ್ಹ ಫಲಾನುಭವಿಯ ಆದ್ಯತಾ ಪಡಿತರ ಚೀಟಿಯನ್ನು ರದ್ದುಪಡಿಸಿದಲ್ಲಿ, ಅದನ್ನು ಮರುಪಡೆಯಲು ತಹಶೀಲ್ದಾರ್ರಿಗೆ ಮನವಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಒದಗಿಸಿದೆ.
ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳ ನೀಡಿಕೆಗೆ ಸಂಬಂಧಿಸಿ ಸರ್ಕಾರವು 2017ರಲ್ಲಿ ಕೆಲವು ಹೊರಗಿಡುವ ಮಾನದಂಡಗಳನ್ನು ರೂಪಿಸಿದೆ.
ಸರ್ಕಾರದ ಖಾಯಂ ನೌಕರರು ಹಾಗೂ ಸರ್ಕಾರದಿಂದ ಅಥವಾ ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ನಿಗಮಗಳು, ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳ ನೌಕರರ ಕುಟುಂಬಗಳು, ಜೊತೆಗೆ ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್ಟಿ ಅಥವಾ ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು.
ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿಯನ್ನು ಹೊಂದಿರುವ ಕುಟುಂಬಗಳು ಹಾಗೂ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
ಜೀವನೋಪಾಯಕ್ಕಾಗಿ ಸ್ವತಃ ಬಳಸುವ ಒಂದು ವಾಣಿಜ್ಯ ವಾಹನವನ್ನು (ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಮುಂತಾದವು) ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
ವಾರ್ಷಿಕ ಆದಾಯ ರೂ.1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳು.ಇದನ್ನು ಓದಿ –ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 8ಕ್ಕೆ ಏರಿಕೆ
ಈ ಮಾನದಂಡಗಳನ್ನು ಆಧರಿಸಿ ಪಡಿತರ ಚೀಟಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಅರ್ಹರು ನಿಗದಿತ ಅವಧಿಯೊಳಗೆ ಮನವಿ ಸಲ್ಲಿಸುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ.








