ನಾವು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ? ಅಂದು ಸರಿ ಸುಮಾರು ಮಧ್ಯಾಹ್ನ 12:00 ಆಗಿತ್ತು. ಮಟಮಟ ಮಧ್ಯಾಹ್ನ ಉರಿಬಿಸಿಲು ಬೇರೆ. ರಮೇಶ್ (ಹೆಸರು ಬದಲಿಸಲಾಗಿದೆ) ಬಂದವರೇ “ಮೇಡಂ ಏನೋ ಹೇಳಬೇಕಿತ್ತು” ಎಂದರು. ಆದರೆ ಅವರ ಧ್ವನಿ ಮಾಮೂಲಿನಂತೆ ಇರಲಿಲ್ಲ. ”ಏನಾಯ್ತು ಸರ್ ಯಾಕೆ ಡಲ್ಲಾಗಿದ್ದೀರಾ?” ಎಂದು ಕೇಳಿದೆ . ಒಂದು ಕ್ಷಣ ಆತ ಸುತ್ತ ಮುತ್ತ ನೋಡಿದರು. ಪರಿಚಯದವರು ಯಾರಾದರೂ ಇದ್ದಾರೆಯೇ ಎನ್ನುವಂತೆ. “ಪರವಾಗಿಲ್ಲ ಮೇಡಂ ಇನ್ನು ಸ್ವಲ್ಪ ಹೊತ್ತು ಆಗಲಿ, ನಿಮ್ಮ ಕೆಲಸ ಮಾಡಿಕೊಳ್ಳಿ, ಆಮೇಲೆ ಹೇಳುತ್ತೇನೆ” ಎಂದರು . ನನಗೆ ಸೂಕ್ಷ್ಮತೆ ತಿಳಿಯಿತು. ಬಹುಶಃ ಬೇರೆ ಯಾರಿಗೂ ತಿಳಿಯದಂತಹ ಯಾವುದೋ ವಿಚಾರ ಹೇಳಲು ಇರಬಹುದು ಎಂದು. ಸರಿ ನಾಲ್ಕಾರು ಜನ ಹೋದ ಮೇಲೆ ಹತ್ತಿರ ಬಂದು “ಮೇಡಂ ನನ್ನ ಅಕೌಂಟಿನಿಂದ ದಿನ 200, 300, 400 ಹೋಗುತ್ತಿದೆ” ಎಂದರು . “ಹೌದಾ ಯಾರು ಅಕೌಂಟಿಗೆ ಹೋಗುತ್ತಿದೆ ನೋಡೋಣ. ನಿಮ್ಮ ಅಕೌಂಟ್ ನಂಬರ್ ಕೊಡಿ” ಎಂದು ಕೇಳಿ ಅವರ ಅಕೌಂಟ್ ಡೀಟೇಲ್ಸ್ ನೋಡಿದಾಗ ಹಣ ಅವರ ಮಗನ ಖಾತೆಗೆ ಹೋಗುತ್ತಿತ್ತು . “ನಿಮ್ಮ ಮಗನ ಖಾತೆಗೆ ಹೋಗುತ್ತಿದೆಯಲ್ಲಾ” ಎಂದೆ. “ನನಗೂ ಅದೇ ಹೆಸರು ಬಂದಿದೆ ಆದರೆ ಮಗ ಹೇಳುತ್ತಿದ್ದಾನೆ ನನ್ನ ಖಾತೆಗೆ ಬಂದಿಲ್ಲಪ್ಪ ಎಂದು. ಅವನ ಫೋನ್ ಪೇ ಹಿಸ್ಟರಿ ಕೂಡ ತೋರಿಸಿದ. ಅದರಲ್ಲೂ ಕೂಡ ಅವನಿಗೆ ಯಾವುದೇ ಜಮೆ ಆಗಿಲ್ಲ” ಎಂದರು. ಈ ಹಿಂದೆ ನನ್ನ ಗೆಳತಿಯ ಮಗನೇ ಅಪ್ಪನ ಫೋನ್ ಪೇ ಇಂದ ಆಗಾಗ ಹಣ ವರ್ಗಾಯಿಸಿಕೊಂಡು ಹಿಸ್ಟರಿ ಡಿಲೀಟ್ ಮಾಡಿ ನೋಡೀಪ್ಪಾ ನನ್ನ ಖಾತೆಗೆ ಹಣ ಬಂದೇ ಇಲ್ಲ ಎಂದಿದ್ದು, ಅವನ ಖಾತೆ ಬೇರೆ ಬ್ಯಾಂಕಿನಲ್ಲಿದ್ದು ಅಲ್ಲಿ ಚೆಕ್ ಮಾಡಿದಾಗ ಹಣ ಅವನಿಗೇ ಹೋಗಿದ್ದು, ನನ್ನ ಗೆಳತಿಯ ಗಂಡ ನಮ್ಮಲ್ಲೇ ತಮ್ಮ ಫೋನ್ ಪೇ ಲಾಕ್ ಮಾಡಿಸಿ ಮೇಡಂ ಈ ವಿಷಯ ನಿಮ್ಮಲ್ಲೇ ಇರಲಿ. ಇರುವುದೊಬ್ಬನೇ ಮಗ ನಾವು ಏನಾದರು ಹೆಚ್ಚು ಕೇಳಿ, ಆತ ಹೆದರಿ ಅಥವಾ ನಾಚಿ ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡುವುದು ಮೆಲ್ಲನೆ ಬ್ಲಾಕ್ ಮಾಡಿಸಿ ಏನೂ ಗೊತ್ತಾಗದ ಹಾಗೆ ಇದ್ದುಬಿಡುತ್ತೇನೆ ಎಂದದ್ದು ನನ್ನ ನೆನಪಿಗೆ ಬಂದಿತು. “ಸರ್ ಒಮ್ಮೆ ಮನೆಯಲ್ಲಿ ವಿಚಾರಿಸಿ ನೋಡಿ: ಎಂದೆ. ಇದಾಗಿ ಒಂದು ವಾರಕ್ಕೆ ಮತ್ತೆ ಆತ ಬಂದರು. “ಮೇಡಂ ಈಗಲೂ ದಿನ ನನ್ನ ಖಾತೆಯಿಂದ ನನ್ನ ಮಗನ ಹೆಸರಿಗೆ ಹೋಗುತ್ತಿದೆ. ಏನು ಮಾಡಲಿ ಮನೆಯಲ್ಲಿ ಜೋರಾಗಿ ಕೇಳಿದರೆ ಎಲ್ಲಿ ಅವನು ನೊಂದುಕೊಳ್ಳುತ್ತಾನೋ ಎನ್ನುವ ಭಯ” ಎಂದರು. “ ಸರಿ ಯುಪಿಐ ಬ್ಲಾಕ್ ಮಾಡಿಬಿಡಿ ಸರ್” ಎಂದೆ. ಆತ ಅರ್ಜಿ ಕೊಟ್ಟರು. ನಾವು ಯುಪಿಐ ಬ್ಲಾಕ್ ಮಾಡಿದ್ದೆವು. “ಇನ್ನು ಮೇಲಿನ ಭಯ ಇಲ್ಲ. ನಿಮ್ಮ ಖಾತೆಯಿಂದ ಫೋನ್ ಪೇ ಗೂಗಲ್ ಪೇ ಯಾವುದು ಆಗುವುದಿಲ್ಲ ಆರಾಮವಾಗಿರಿ” ಎಂದೆ. ಇದಾಗಿ ಮೂರ್ನಾಲ್ಕು ದಿನಕ್ಕೆ ಆತ ಮತ್ತೆ ಮುಖ ಸಣ್ಣದು ಮಾಡಿಕೊಂಡು ಬಂದರು. “ಏನಾಯ್ತು ಸರ್?” ಎಂದೆ. ಆ ವ್ಯಕ್ತಿಯನ್ನು ನಾನು ಕಡೆಯ ಪಕ್ಷ 20 ವರ್ಷಗಳಿಂದ ಬಲ್ಲೆ. ತುಂಬಾ ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದವರು. ಹಣದ ಬೆಲೆ ತಿಳಿದವರು ಬಡತನದಿಂದ ಬಂದ ಕುಟುಂಬದವರಾದರೂ ಈಗ ಒಳ್ಳೆಯ ವ್ಯಾಪಾರಸ್ಥರಾಗಿ ಚೆನ್ನಾಗಿ ದುಡಿದು ಹೆಂಡತಿ ಮಕ್ಕಳನ್ನು ಜೊತೆಗೆ ತಾಯಿಯನ್ನು ತುಂಬಾ ಸುಖವಾಗಿ ನೋಡಿಕೊಳ್ಳುತ್ತಾ ಇರುವವರು. 20 ವರ್ಷಗಳ ಹಿಂದೆ ಸಣ್ಣ ಮೊತ್ತದ ಆರ್.ಡಿಯನ್ನು ಮುಂದೆ ಉಪಯೋಗವಾಗುತ್ತದೆ ಮಾಡಿ ಸರ್ ಎಂದು ನಾನೇ ಬಲವಂತದಿಂದ ಮಾಡಿಸಿದ್ದೆ. ನಾನು ಎಂಟು ವರ್ಷ ಆ ಶಾಖೆಯಲ್ಲಿ ಇರಲಿಲ್ಲ ಬೇರೆ ಬೇರೆ ಶಾಖೆಗಳನ್ನು ಸುತ್ತಿಕೊಂಡು ವಾಪಸ್ ಬಂದ ಒಂದು ವಾರದಲ್ಲಿ ಈ ವ್ಯಕ್ತಿ ಬ್ಯಾಂಕಿಗೆ ಬಂದಾಗ ನನ್ನನ್ನು ನೋಡಿ ತುಂಬಾ ಸಂತೋಷಪಟ್ಟು “ಮೇಡಂ ನೀವು ಅಂದು ಮಾಡಿಸಿದ ಆರ್.ಡಿ ದುಡ್ಡು ಬೆಳೆದು ಬೆಳೆದು ಲಕ್ಷಗಟ್ಟಲೆಯಾಗಿದೆ. ನಾನು ನನ್ನ ತಾಯಿ ಸದಾ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾ ಇರುತ್ತೇವೆ” ಎಂದರು ನನ್ನನ್ನು ನೋಡಿದ ಕೂಡಲೇ ಹೀಗೆ ಹೇಳಿ ಹೊರಗೆ ಹೋಗಿ ಐದು ನಿಮಿಷ ನಂತರ ಬಂದು ಕೈನಲ್ಲಿ ದೊಡ್ಡ ಪ್ಯಾಕೆಟ್ ಕಡಲೆ ಮಿಠಾಯಿಯನ್ನು ತಂದುಕೊಟ್ಟರು. “ಸರ್ ಇದೇಕೆ” ಎಂದು ಕೇಳಿದಾಗ “ ಮೇಡಂ, ಎಷ್ಟೋ ವರ್ಷಗಳ ನಂತರ ಪುನಃ ನೀವು ನಮ್ಮ ಶಾಖೆಗೆ ಬಂದಿದ್ದೀರಿ. ನಿಮ್ಮನ್ನು ಸಿಹಿ ಕೊಟ್ಟು ಸ್ವಾಗತಿಸಬೇಕು ಎನಿಸಿತು ಇದನ್ನು ನಾನು ಹೋಲ್ಸೇಲ್ ವ್ಯಾಪಾರ ಮಾಡುತ್ತಿದ್ದೀನಿ. ಇದರ ಜೊತೆಗೆ ಬೇರೆ ಬೇರೆ ಅನೇಕ ವ್ಯವಹಾರಗಳಿವೆ. ನನಗೆ ಈಗ ಮುಂಚಿನಷ್ಟು ಕಷ್ಟ ಇಲ್ಲ ಮೇಡಂ. ನಿಮ್ಮೆಲ್ಲರ ಸಹಕಾರವನ್ನು ನಾನು ಸದಾ ನೆನೆಯುತ್ತಾ ಇರುತ್ತೇನೆ” ಎಂದರು. ಆ ಅಭಿಮಾನವನ್ನು ನಿರಾಕರಿಸಲಾಗದೆ ಅಂದು ಆತ ಕೊಟ್ಟ ಚಿಕ್ಕಿಯನ್ನು ಮನೆಗೆ ತಂದು ತಿಂದಿದ್ದೆ. ತೀರಾ ಗಟ್ಟಿಯೂ ಅಲ್ಲದ ಗರಿಗರಿಯಾಗಿದ್ದ ಚಿಕ್ಕಿ ತುಂಬಾ ಸೊಗಸಾಗಿತ್ತು. ಈಗ ಅದೇ ಮನುಷ್ಯ ಇಂದು ಸಪ್ಪಗಾಗಿ ಬಂದು ನಿಂತಿರುವುದನ್ನು ನೋಡಿ ನನಗೆ ಪೆಚ್ಚು ಎನಿಸಿತು. “ಮತ್ತೆ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗುತ್ತಿದೆಯಾ?” ಎಂದು ಕೇಳಿದೆ. ಹೌದು ಎಂದರು. ಮನೆಯಲ್ಲಿ ಮಗ ಈಗಲೂ ಅವನ ಖಾತೆಗೆ ಹೋಗುತ್ತಿರುವುದನ್ನು ಒಪ್ಪುತ್ತಿಲ್ಲ ಎಂದೂ ಹೇಳಿದರು . “ಹಾಗಿದ್ದರೆ ನಿಮ್ಮ ಮಗನ ಸಹವಾಸ ಸರಿ ಇಲ್ಲದಿರಬಹುದು ಅಥವಾ ಯಾವುದಾದರೂ ಗೇಮ್ಸ್ ಹುಚ್ಚು ಹತ್ತಿಸಿಕೊಂಡಿರಬಹುದು. ಸ್ವಲ್ಪ ಎಚ್ಚರಿಕೆಯಿಂದ ಅವನನ್ನು ಗಮನಿಸಿ ಸರ್” ಎಂದು ಮೆಲ್ಲನೆ ಹೇಳಿದೆ ಆದರೆ ಆತ *ನನಗೆ ಗೊತ್ತು ಮೇಡಂ ಅವನಿಗೆ ಅಂತ ಸಹವಾಸಗಳಾಗಲಿ ಅಥವಾ ಗೇಮ್ ಗಳಾಗಲಿ ಅಡಿಕ್ಷನ್ ಇಲ್ಲ. ಅವನಿಗೆ ದಿನಾ ಹೊರಗೆ ತಿನ್ನುವ ಕ್ರೇಝ್. ಕೇಳಿದರೆ ನಾ ಕೊಡುವುದಿಲ್ಲವೇ? ನಾ ದುಡಿಯುತ್ತಿರುವುದೇ ಹೆಂಡತಿ, ಮಕ್ಕಳಿಗಾಗಿ. ಅವರು ಕೇಳಿದರೆ ನಾನು ಇಲ್ಲ ಎನ್ನುವುದಿಲ್ಲ. ಆದರೆ ಅದೇ ಅಭ್ಯಾಸವಾಗಬಾರದು ಎಂದು ಏನಕ್ಕೆ ದುಡ್ಡು ಬೇಕು ಎಂದು ಕೇಳಿ ಕೊಡುತ್ತೇನೆ. ಹಾಗೆ ಕೇಳಬಾರದು ಎಂದು ಅವರು ನಿರೀಕ್ಷಿಸಿದರೆ ತಂದೆ ತಾಯಿಗಳಾಗಿ ನಾವು ಮತ್ತೇನು ಮಾಡಬಹುದು? ಮಕ್ಕಳು ಅಡ್ಡದಾರಿ ಹಿಡಿಯಬಾರದು ಎಂದು ಪ್ರಶ್ನಿಸುತ್ತೇವೆ. ಹಾಗೆ ಕೇಳುತ್ತೇವೆ ಎಂದು ಮುಜುಗರ ಪಟ್ಟುಕೊಂಡು ಈ ರೀತಿ ಅಡ್ಡದಾರಿ ಹಿಡಿದರೆ ನಾವು ಏನು ಮಾಡಬೇಕು ಮೇಡಂ? ಮಕ್ಕಳನ್ನು ನಾವು ಹೇಗೆ ಬೆಳೆಸುವುದು?” ಇಷ್ಟು ಹೇಳುವಷ್ಟರಲ್ಲಿ ಆತನ ಕಣ್ಣು ತುಂಬಿ ಗಂಟಲು ಬಿಗಿದಿತ್ತು. ಆತ ಕಣ್ಣೊರೆಸಿಕೊಳ್ಳುವುದನ್ನೇ ನಾನು ನೋಡುತ್ತಾ ಕುಳಿತಿದ್ದೆ. “ಇರಲಿ ಮೇಡಂ ಇವೆಲ್ಲ ನಮ್ಮ ಹಣೆಯ ಬರಹ. ಹೋಗಲಿ ಏನು ಮಾಡಬೇಕು ಹೇಳಿ” ಎಂದು ಕೇಳಿದರು.…