ತಾಯಿಯ ಗರ್ಭದಲ್ಲಿ ಮಗುವೊಂದು ಹೇಗೆ ರೂಪುಗೊಳ್ಳುತ್ತದೆ ಎನ್ನುವುದು ನಿಜಕ್ಕೂ ನಮ್ಮ ಗ್ರಹಿಕೆಗೆ ನಿಲುಕದ ವಿಷಯ. ಇಂದಿನ ವೈಜಾನಿಕಯುಗದಲ್ಲಿ ಮಕ್ಕಳನ್ನು ನೈಸರ್ಗಿಕವಾಗಿ ಅಲ್ಲದೆ ಹಲವಾರು ವಿಧಾನಗಳಿಂದ ವೈದ್ಯಕೀಯ ಸಹಾಯ ಬಳಸಿ ಮಗುವನ್ನು ಪಡೆಯಬಹುದಾಗಿದೆ ಇದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆದರೂ ಯಾವುದೇ ಪ್ರಕ್ರಿಯೆ ಇರಲಿ ಅದು ಪೂರ್ಣಗೊಂಡು ತಾಯಿಯ ಗರ್ಭದಲ್ಲಿ ನವಮಾಸಗಳು ಇದ್ದು ಪುಟ್ಟ ಜೀವವೊಂದು ಹೊರ ಜಗತ್ತಿಗೆ ಕಾಲಿಡುವುದು ನಿಜಕ್ಕೂ ವಿಸ್ಮಯವೇ…ಸರಿ!!
ಇಂತಹ ಮಗುವಿನ ಜನನದ ಕ್ಷಣದಿಂದ ಹೆತ್ತವರ ಜವಾಬ್ದಾರಿ ಶುರುವಾಗುತ್ತದೆ. ಮೊದಮೊದಲು ಮಗುವಿನ ಜನ್ಮದಾತರ ಸಂಪೂರ್ಣ ಗಮನ ಆರೈಕೆ ಮತ್ತು ಆಸರೆ ಬೇಕಾಗುತ್ತದೆ. ಮಕ್ಕಳು ಬೆಳೆಯುತ್ತಾ ಹೋದಂತೆ ಶಾರೀರಿಕ ಆರೈಕೆಗಿಂತ ಹೆಚ್ಚಿನದ್ದನ್ನು ಹೆತ್ತವರು ನೀಡಬೇಕಾಗುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವಂತೆ ಮಾನಸಿಕ, ಭಾವನಾತ್ಮಕ, ನೈತಿಕ ಸ್ಥೈರ್ಯವನ್ನು ತುಂಬುವುದರ ಜೊತೆಗೆ ಆಧ್ಯಾತ್ಮಿಕ ವಿಚಾರಗಳ ಬಗ್ಗೆಯೂ ಮಕ್ಕಳ ಮನಸ್ಸಿನಲ್ಲಿ ಹದವಾಗಿ ಬಿತ್ತುವ ಮೂಲಕ ಮೂಲಕ ಮಕ್ಕಳನ್ನು ಸದೃಢವಾಗಿಸಬೇಕಾಗುತ್ತದೆ.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆತಾಯಿಯ ಪಾತ್ರ ತುಂಬಾ ಮಹತ್ವದ್ದು ಮಾತ್ರವಲ್ಲದೆ ಅವರು ಯಾವ ರೀತಿಯಲ್ಲಿ ಮಗುವಿನ ಭವಿಷ್ಯಕ್ಕಾಗಿ ತಮ್ಮನ್ನು ಮುಡಿಪಾಡಿಟ್ಟು ಕೊಳ್ಳುವರು ಎನ್ನುವುದರ ಮೇಲೆ ಎಲ್ಲವೂ ನಿರ್ಧಾರಿತವಾಗಿರುವುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತು ಹಾಗೂ ಸಂಸ್ಕೃತಿಯನ್ನು ಕಲಿಸಿಕೊಡುವುದು ಅತೀ ಅಗತ್ಯವಾಗಿದೆ ಒಂದು ವೇಳೆ ನಾವು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ವೈಟ್ ಕಾಲರ್ ನಂತಹ ಕೆಲಸ ಪಡೆಯುವಂತೆ ಮಾಡಿದ್ರು ಅವರಲ್ಲಿ, ಶಿಸ್ತು ಹಾಗೂ ಸಂಸ್ಕೃತಿ ಇಲ್ಲದೆ ಇದ್ದರೆ ಅದು ಅಪ್ರಯೋಜಕ. ಈ ಕಾರಣದಿಂದಲೇ ತಂದೆತಾಯಂದಿರು ದಿನವಿಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತೊಡಗಿಕೊಂಡರೆ ಸಾಲದು ಇದಕ್ಕಾಗಿ ಪೋಷಕರು ಕೆಲವೊಂದು ನಿಯಮಗಳನ್ನು ರೂಪಿಸಿಕೊಳ್ಳುವುದು ಅತೀ ಅಗತ್ಯ, ಅಂತಹ ಕೆಲವು ಹಲವು ನಿಯಮಗಳಲ್ಲಿ ಕಾನೂನಿನ ಅರಿವು, ಹಣಕಾಸಿನ ತಿಳುವಳಿಕೆ, ಹಿರಿಯರ ಬಗ್ಗೆ ಗೌರವ, ದೇಶದ ಸಂಸ್ಕೃತಿ,ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಸತ್ಪ್ರಜೆಯಾಗಿಸುವ ಕರ್ತವ್ಯ ಪ್ರತಿಯೊಬ್ಬ ಪೋಷಕರಾದಾಗಿದೆ.
ತಮ್ಮ ಬಗ್ಗೆ ಮತ್ತು ಇತರರಿಗೆ ಒಳ್ಳೆಯ ಗೌರವ ನೀಡುವುದು, ಮತ್ತೊಬ್ಬರ ಬಗ್ಗೆ ಸಹಾನುಭೂತಿ ಬೆಳೆಸುವುದರಿಂದ ಒಂದೊಳ್ಳೆಯ ಬಾಂಧವ್ಯವನ್ನು ಸೃಷ್ಟಿ ಮಾಡಬಹುದು, ಬುದ್ಧಿ ಬೆಳೆದ ನಂತರ ಮಕ್ಕಳಿಗೆ ತಾನು ಮಾಡುವ ಕೆಲಸಕಾರ್ಯಗಳು ಅರಿವಿಗೆ ಬರಲು ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ತಮಗಿಂತ ವಯಸ್ಸಿನಲ್ಲಿ ಹಿರಿಯರಿಗೆ ಅವರು ಪುರುಷರಾಗಿರಲಿ ಅಥವಾ ಮಹಿಳೆಯರಾಗಿರಲಿ ಅವರಿಗೆ ಸಮಾನ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು ಎಂಬುದನ್ನು ತಿಳಿಹೇಳುವುದರ ಜೊತೆಗೆ. ವಿಶೇಷವಾಗಿ ಮನೆಯ ಹಿರಿಯರ ಬಗ್ಗೆ ಅಪಾರವಾದ ಕಾಳಜಿ ಮತ್ತು ಗೌರವವನ್ನು ಹೊಂದಬೇಕು ಎಂಬುದನ್ನು ಮಕ್ಕಳಿಗೆ ಪೋಷಕರು ಚಿಕ್ಕ ವಯಸ್ಸಿನಿಂದ ಮನವರಿಗೆ ಮಾಡಿಕೊಡುತ್ತಾ ಬರಬೇಕು.ಮಕ್ಕಳ ಭವಿಷ್ಯ ಹೇಗಿರುತ್ತದೆ ಎನ್ನುವುದು ಮನೆಯಲ್ಲೇ ನಿರ್ಧಾರವಾಗುವುದು. ಹೀಗಾಗಿ ಮಕ್ಕಳಿಗೆ ಜೀವನದ ಕೆಲವೊಂದು ಪಾಠಗಳನ್ನು ಕಲಿಸಿಕೊಡುವುದು ಅಗತ್ಯ.
ಎಳೆಯ ಜೀವಿಗಳಿಗೆ ಯಾವುದೇ ಸಮಸ್ಯೆಗಳು ಎದುರಾದಾಗ ಎದೆಗುಂದದೆ ಧೈರ್ಯದಿಂದ, ಸೃಜನಶೀಲತೆಯಿಂದ ಯೋಚಿಸಿ ಸ್ವತಂತ್ರವಾಗಿ ಆತ್ಮವಿಶ್ವಾಸದಿಂದ ವರ್ತಿಸಬೇಕು ಎಂಬುದನ್ನು ಮಕ್ಕಳಲ್ಲಿ ಫೊಷಕರು ತಮ್ಮ ಮಕ್ಕಳಿಗೆ ಹುಟ್ಟಿನಿಂದಲೇ ಹೇಳಿಕೊಡಬೇಕು. ಯಾಕೆಂದರೆ ಮಕ್ಕಳು ತಮ್ಮ ಪೋಷಕರಿಂದಲೇ ಎಲ್ಲವನ್ನು ಕಲಿಯುವರು.
ಯಾವುದೇ ವಿಷಯವಾಗಲಿ ಅದು ಶಾಲೆಯಲ್ಲಿ ಆಟ ಅಥವಾ ಪಾಠದ ವಿಚಾರವಾಗಿರಲಿ ಮಕ್ಕಳಿಗೆ ಹಂತ-ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗದರ್ಶನ ನೀಡಬೇಕು. ಹಾಗೆಯೇ ಪ್ರತಿಯೊಂದು ಪರಿಹಾರಗಳ ಲಾಭ-ನಷ್ಟಗಳ ಬಗ್ಗೆ ಅವರೊಂದಿಗೆ ಕುಳಿತು ಚರ್ಚಿಸಬೇಕು.
ಇನ್ನು ಮಕ್ಕಳ ಕೈಗೆ ಒಂದಿಷ್ಟು ಹಣವನ್ನು ಅವರು ಕೇಳಿದಾಗಲೆಲ್ಲ ಕೊಟ್ಟು ಬಿಟ್ಟರೆ ಸಾಲದು, ಯಾಕೆಂದರೆ ಅವರಿಗೆ ಅದನ್ನು ಉಳಿತಾಯ, ಖರ್ಚು ಮತ್ತು ತಿಂಗಳಿಡಿ ಅದರಿಂದ ಹೇಗೆ ಖರ್ಚನ್ನು ನಿಭಾಯಿಸಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುವುದು ಕೂಡಾ ಹೆತ್ತವರ ಕರ್ತವ್ಯವಾಗಿದೆ ನಾವು ಹೆತ್ತವರು ಹೇಗೆ ಇರುತ್ತೆವೂ ಹಾಗೆ ಮಕ್ಕಳು ಕೂಡ ವರ್ತಿಸುವರು. ಅತಿಯಾದ ಒತ್ತಡದ ಜೀವನದಲ್ಲಿ ಸಹಾನುಭೂತಿ ಎನ್ನುವುದೇ ಮಾಯವಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಸಹಾನುಭೂತಿ ಮೂಡಿಸಿ, ಅವರನ್ನು ಒಬ್ಬ ಸೌಜನ್ಯಯುತ ವ್ಯಕ್ತಿಯನ್ನಾಗಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬ ತಂದೆ ತಾಯಿ ಕರ್ತವ್ಯವಾಗಿದೆ.
ಹಾಗೆ ಮಕ್ಕಳು ಎಲ್ಲಾ ಸಮಯದಲ್ಲೂ ಗೆಲ್ಲಲೇ ಬೇಕು ಎಂದು ಬಯಸುವ ಮೊದಲು ಸೋಲಿನಿಂದ ಜೀವನಪಾಠವನ್ನು ಕಲಿಯುವುದನ್ನು ಕಲಿಸಬೇಕು ಸೋಲು ಎನ್ನುವುದು ಗೆಲುವಿನ ಸೋಪಾನ ಎನ್ನುವ ಮಾತಿದೆ. ಅದೇ ರೀತಿಯಾಗಿ ಮಕ್ಕಳು ಸೋತಾಗ ಅವರನ್ನು ಬೈಯ್ಯುವ ಬದಲು ಅವರನ್ನು ಪ್ರೋತ್ಸಾಹಿಸಿ ಮತ್ತು ಮುಂದೆ ಕೂಡ ಸೋಲನ್ನು ಮೆಟ್ಟಿ ಗೆಲುವು ಪಡೆಯಬಹುದು ಎಂದು ಹೇಳಿಕೊಡಿ. ಜೀವನದಲ್ಲಿ ಸೋಲು ಹಾಗೂ ಗೆಲುವು ಎರಡೂ ಇರುವುದು. ಇದನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ತಿಳಿಸುವುದರಿಂದ ಮಕ್ಕಳು ಆತ್ಮಹತ್ಯೆಯ ಕಡೆಗೆ ಮುಖಮಾಡದಂತೆ, ಮಾದಕದ್ರವ್ಯ ವ್ಯಸನಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ತಡೆಯಬಹುದಾಗಿದೆ.
ದೇಶದ ಅಭಿವೃದ್ಧಿಯ ಪಥದಲ್ಲಿ ಇಂದಿನ ಮಕ್ಕಳೇ ಹೂ ಹಾಸುವಿನಂತೆ ಎಂದರೆ ತಪ್ಪಾಗಲಾರದು ಆದರೆ ಅದೇ ಮಕ್ಕಳು ಗೊತ್ತೋ ಗೊತ್ತಿಲ್ಲದೆಯೋ ಕಾನೂನು ಬಾಹಿರವಾದ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಜೊತೆಗೆ ಆರೋಪಿಯಾಗಿ ಬಾಲಾಪರಾಧಿಗಳಾಗಿ ಜೈಲು ಸೇರುವುದು ಒಂದೆಡೆ ಆದರೆ, ಹದಿಹರೆಯದ ಆಕರ್ಷಣೆ ಇಂದು ಅನೇಕ ಎಳೆಯ ಪ್ರಾಯದ ಅಂದರೆ 18 ರಿಂದ 24ರೊಳಗಿನ ವಯಸ್ಸಿನ ಯುವಕರು ಪೋಕ್ಸೋ ಮತ್ತು ಮಾದಕದ್ರವ್ಯ ಅಪರಾಧಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ಇದು ಗಂಡುಮಕ್ಕಳ ಕಥೆಯಾದರೆ ನಮ್ಮ ರಾಜ್ಯಯೊಂದರಲ್ಲೆ 18 ವಯಸ್ಸಿನೊಳಗಿನ 20000 ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳು ಗರ್ಭವತಿಯಾರಗಿ ಪುಟ್ಟ ವಯಸ್ಸಿನಲ್ಲಿ ಮಗುವನ್ನು ಹೇರತ್ತಿರುವುದು ಸ್ವಸ್ಥ ಸಮಾಜದ ಬೆಳವಣಿಗೆಗೆ ತೊಡಕು ಉಂಟು ಮಾಡುವುದರ ಜೊತೆಗೆ ಅವರ ದೈಹಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
ಪ್ರತಿ ಮಗುವಿಗೂ ಮನೆಯೇ ಮೊದಲ ಪಾಠಶಾಲೆ ಆಗಿದ್ದರೂ.. ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳಿಗೆ ಅವರ ಪುಟ್ಟ ಹೃದಯದಲ್ಲಿ ಜೀವನಕ್ಕೆ ಸ್ಫೂರ್ತಿ ತುಂಬುವ ವಿಚಾರಗಳ ಬೀಜವನ್ನು ಬಿತ್ತುವ ಕೆಲಸ ಮಾಡಬೇಕು… ಹಾಗೆ ಹುಟ್ಟಿನಿಂದ ಮರಣದವರೆಗೆ ನಮ್ಮೊಂದಿಗೆ ಹಾಸುಹೊಕ್ಕಾಗಿರುವ ಕಾನೂನು ,ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಪಾಲನೆಗೆ ಸಂಬಂಧಿಸಿದ ಕಾನೂನುಗಳ ರಚನೆ.ತಾರತಮ್ಯದಿಂದ ಮಕ್ಕಳಿಗೆ ರಕ್ಷಣೆ ನೀಡುವುದು.ಮಕ್ಕಳ ಸುರಕ್ಷಿತ ಮತ್ತು ಆರೋಗ್ಯಕರ ಬೆಳವಣಿಗೆಗೆ ಅಗತ್ಯವಿರುವ ಪರಿಸರವನ್ನು ನಿರ್ಮಿಸುವುದು. ಮಕ್ಕಳನ್ನು ಹಿಂಸೆ, ಶೋಷಣೆ ಮತ್ತು ನಿರ್ಲಕ್ಷ್ಯದಿಂದ ರಕ್ಷಿಸುವುದು ಇವುಗಳ ಜೊತೆಗೆ
ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015: ಇದರ ಅಡಿಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ನೋಂದಣಿಯಾಗದಿದ್ದರೆ, ದಂಡ ಅಥವಾ ಜೈಲು ಶಿಕ್ಷೆ ವಿಧಿಸಬಹುದು.
ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ (POCSO), 2012: ಇದು ಮಕ್ಕಳ ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ರೂಪಿಸಲಾದ ಪ್ರಮುಖ ಕಾಯ್ದೆ.
ದತ್ತು ನಿಯಮಾವಳಿಗಳು, 2022ರಲ್ಲಿ ಜಾರಿಗೊಂಡಿರುವ ಮಕ್ಕಳ ದತ್ತು ಪ್ರಕ್ರಿಯೆಯನ್ನು ನಿಯಂತ್ರಿಸುವ ನಿಯಮಗಳು.
ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006: ಬಾಲ ವಿವಾಹವನ್ನು ನಿಷೇಧಿಸುವ ಕಾನೂನು. ಇದರ ಪ್ರಕಾರ ಹುಡುಗರಿಗೆ 21 ಮತ್ತು ಹುಡುಗಿಯರಿಗೆ 18 ವರ್ಷ ಕನಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ಕಾಯ್ದೆ, 1966: ಇದರ ನಿಯಮ 29ಎ ಪ್ರಕಾರ, ಸರ್ಕಾರಿ ನೌಕರರು 14 ವರ್ಷದೊಳಗಿನ ಮಕ್ಕಳನ್ನು ಮನೆಕೆಲಸಕ್ಕೆ ನೇಮಿಸುವುದು ಶಿಕ್ಷಾರ್ಹ ಅಪರಾಧ ಈ ಕಾನೂನಗಳ ಬೇಲಿಯಿಂದ ಸಂರಕ್ಷಣೆ ಮಾಡುವುದು ಜೊತೆಗೆ ಜಾಗೃತಿ ಮೂಡಿಸುವ ಕೆಲಸ ನಮ್ಮ ನಿಮ್ಮೆಲ್ಲರದಾಗಿದೆ.

✍️ ಪವಿತ್ರ ಹೆತ್ತೂರು








