ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿಧಾನಸಭೆಯ ಸ್ಪೀಕರ್ ಕುರ್ಚಿ ಕರ್ನಾಟಕದಲ್ಲಿ ತಯಾರಾಗಿದೆ ಎಂಬುದು ರಾಜ್ಯದ ಕೈಗಾರಿಕೆ, ಕಲೆ ಮತ್ತು ಶಿಲ್ಪ ಪರಂಪರೆಯ ಗರ್ವಕ್ಕೆ ಮತ್ತೊಂದು ದೊಡ್ಡ ಸಾಕ್ಷಿಯಾಗಿದೆ.
ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ, ಲಷ್ಕರ್ ಮೊಹಲ್ಲ ನಿವಾಸಿ ಕೈಸರ್ ಅಲಿ ಖಾನ್ ಅವರ ಕೈಚಾಣಾಕ್ಷ್ಯದ ಕೆತ್ತನೆಯೊಂದಿಗೆ ಈ ಭವ್ಯ ಪೀಠ ರೂಪುಗೊಂಡಿದೆ. ಮರದ ಮೇಲೆ ಸೂಕ್ಷ್ಮವಾದ ಕೆತ್ತನೆ, ಪಾರಂಪರಿಕ ಶೈಲಿ, ರಾಜಸಿಕ ವಿನ್ಯಾಸ – ಎಲ್ಲವೂ ಸೇರಿ ಈ ಕುರ್ಚಿಗೆ ವಿಶೇಷ ಗೌರವ ಮತ್ತು ಗಂಭೀರತೆಯನ್ನು ನೀಡಿದೆ. ಕೇವಲ ಒಂದು ಆಸನ ಮಾತ್ರವಲ್ಲ, ಇದು ಕರ್ನಾಟಕದ ಶಿಲ್ಪಕಲೆಯ ವೈಭವವನ್ನು ಉತ್ತರ ಭಾರತದ ವಿಧಾನಸಭೆಯೊಳಗೆ ಪ್ರತಿಷ್ಠಾಪಿಸಿದ ಪ್ರತೀಕವಾಗಿದೆ.
ಇಷ್ಟು ದಿನ ರಾಜಕೀಯ ವಲಯದಲ್ಲಿ “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಅಂತ ಅಭಿವೃದ್ಧಿ ಮಾದರಿಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಇದೀಗ ಆಡಳಿತದ ಗರ್ಭಗುಡಿಯಾದ ವಿಧಾನಸಭೆಯ ಸ್ಪೀಕರ್ ಕುರ್ಚಿಯೇ ಕರ್ನಾಟಕದಲ್ಲಿ ತಯಾರಾಗಿರುವಾಗ, ಕಲೆ, ಕೈಚಾಣಾಕ್ಷ್ಯ ಮತ್ತು ಗುಣಮಟ್ಟದ ವಿಷಯದಲ್ಲಿ “ಕರ್ನಾಟಕ ಮಾಡೆಲ್” ಅನ್ನು ದೇಶವೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಮೈಸೂರಿನಂತಹ ಪಾರಂಪರಿಕ ನಗರದಲ್ಲಿ ಬೆಳೆದಿರುವ ಕರಕುಶಲ ಪರಂಪರೆ ಇಂದು ರಾಜ್ಯದ ಗಡಿ ದಾಟಿ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಕೈಸರ್ ಅಲಿ ಖಾನ್ ಅವರಂತಹ ಶಿಲ್ಪಿಗಳ ಶ್ರಮ, ನೈಪುಣ್ಯ ಮತ್ತು ಕಲಾತ್ಮಕ ದೃಷ್ಟಿಕೋನದಿಂದ ಕರ್ನಾಟಕದ ಕೈಗಾರಿಕೆಗೆ ಹೊಸ ಗೌರವ ದೊರಕಿದೆ.
ಇದು ಕೇವಲ ಒಂದು ರಾಜ್ಯದ ವಿಧಾನಸಭೆಗೆ ತಯಾರಾದ ಕುರ್ಚಿಯ ಕಥೆಯಲ್ಲ. ಇದು ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಶಿಲ್ಪಕೌಶಲ್ಯಕ್ಕೆ ದೊರಕುತ್ತಿರುವ ರಾಷ್ಟ್ರಮಟ್ಟದ ಮಾನ್ಯತೆ. ಆದ್ದರಿಂದ, ಇನ್ನು ಮುಂದೆ “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಜೊತೆಗೆ ಗರ್ವದಿಂದ “ಕರ್ನಾಟಕ ಮಾಡೆಲ್” ಎಂದೂ ಹೇಳುವ ಕಾಲ ಬಂದಿದೆ.
ಪೀಠದ ಹಿನ್ನೆಲೆ:
1956ರಲ್ಲಿ ಸ್ಥಾಪಿಸಲಾದ ಕರ್ನಾಟಕ ವಿಧಾನಸಭಾಧ್ಯಕ್ಷರ ಪೀಠ ಅತ್ಯಂತ ಆಕರ್ಷಕವಾಗಿದೆ. ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಆಣತಿಯಂತೆ ಹುಣಸೂರು ಬೀಟಿಮರ ಹಾಗೂ ಶಿವಮೊಗ್ಗದ ಗುಡಿಕಾರರಿಂದ ಈ ಪೀಠ ಕೆತ್ತನೆಯಾಗಿತ್ತು. ಸ್ಪೀಕರ್ ಆಸೀನರಾಗುವ ಪೀಠದ ಮೇಲ್ತುದಿಯಲ್ಲಿ ಕೊಡೆ ಹಾಗೂ ರಾಷ್ಟ್ರ ಲಾಂಛನದ ಕೆತ್ತನೆಯಿದೆ. ಸಭಾಧ್ಯಕ್ಷರ ಕೈ ಇಟ್ಟು ಕೂರುವಲ್ಲಿ ಅರ್ಧ ಸಿಂಹ ಹಾಗೂ ಆನೆಯ ಕಲಾಕೃತಿ ಒಳಗೊಂಡಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಾಮನ್ವೆಲ್ತ್ ಸಮ್ಮೇಳನಕ್ಕೆ ಬಂದಿದ್ದ ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನ ಇದನ್ನು ನೋಡಿ ಆಕರ್ಷಿತರಾಗಿ ಇಂತಹದ್ದೇ ಪೀಠವನ್ನು ಬಯಸಿದ್ದರು.
ಕರ್ನಾಟಕದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರ ಜತೆ ಚರ್ಚಿಸಿ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನ ಮರದ ಕೆತ್ತನೆಕಾರ ಕೈಸರ್ ಆಲಿಖಾನ್ ಅವರಿಗೆ ಈ ಜವಾಬ್ದಾರಿ ವಹಿಸಲಾಯಿತು. ಇದೀಗ ಉತ್ತರ ಪ್ರದೇಶದ ವಿಧಾನಸಭೆ ಸ್ಪೀಕರ್ ಅವರಿಗೆ ಪೀಠಾಸೀನ ಸಿದ್ಧಗೊಂಡು ಅಲ್ಲಿಗೆ ರವಾನಿಸಲಾಗಿದೆ.
ಸ್ಪೀಕರ್ ಯು.ಟಿ. ಖಾದರ್ ಪಾತ್ರ :
ಈ ಪೀಠ ಸಿದ್ಧಪಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ಪಾತ್ರವೂ ಮಹತ್ವದ್ದಾಗಿದೆ.
ಸಂವಿಧಾನಾತ್ಮಕ ಹುದ್ದೆಯ ಗೌರವವನ್ನು ಕಾಪಾಡುವ ಸಂಕೇತವಾಗಿ, ವಿಧಾನಸಭೆಯ ಸ್ಪೀಕರ್ ಪೀಠ ಕೇವಲ ಆಸನವಲ್ಲ, ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪ್ರತೀಕವಾಗಿರಬೇಕು ಎಂಬ ದೃಷ್ಟಿಕೋನ ಖಾದರ್ ಅವರದು. ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಬಳಕೆಯಾಗುವ ಪೀಠಗಳ ಗುಣಮಟ್ಟ, ವಿನ್ಯಾಸ ಮತ್ತು ಶೈಲಿಯ ಬಗ್ಗೆ ಅಧ್ಯಯನ ನಡೆಸಿ, ಭಾರತದ ಪಾರಂಪರಿಕ ಕಲೆ ಹಾಗೂ ಕೈಚಾಣಾಕ್ಷ್ಯವನ್ನು ಪ್ರತಿಬಿಂಬಿಸುವಂತಹ ಪೀಠ ನಿರ್ಮಾಣವಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದರು.
ಅದೇ ದೃಷ್ಟಿಯಿಂದ, ಮೈಸೂರು ಭಾಗದ ಶಿಲ್ಪಕಲೆಗೆ ದೇಶಾದ್ಯಂತ ಖ್ಯಾತಿ ಇರುವುದನ್ನು ಗಮನದಲ್ಲಿಟ್ಟುಕೊಂಡು, ಶಿಲ್ಪಿ ಕೈಸರ್ ಅಲಿ ಖಾನ್ ಅವರಂತಹ ನಿಪುಣ ಕರಕುಶಲ ಕಲಾವಿದರ ಕೈಚಾಣಾಕ್ಷ್ಯವನ್ನು ಬಳಸಿಕೊಂಡು ಈ ಪೀಠವನ್ನು ರೂಪಿಸುವ ನಿರ್ಧಾರಕ್ಕೆ ಬಂದರು. ಮರದ ಕೆತ್ತನೆ, ಪಾರಂಪರಿಕ ವಿನ್ಯಾಸ, ರಾಜಸಿಕ ಭಂಗಿ – ಇವೆಲ್ಲವೂ ಸಂವಿಧಾನಾತ್ಮಕ ಹುದ್ದೆಯ ಗಂಭೀರತೆಯನ್ನು ತೋರಿಸುವಂತೆ ಇರಬೇಕು ಎಂಬುದು ಅವರ ಮಾರ್ಗದರ್ಶನವಾಗಿತ್ತು.ಇದನ್ನು ಓದಿ –ಬೈಕ್–ಕೆಎಸ್ಆರ್ಟಿಸಿ ಬಸ್ ಅಪಘಾತ; ಮಹಿಳೆ ಮೃತ್ಯು
ಇದರಿಂದ ಒಂದು ಕಡೆ ಕರ್ನಾಟಕದ ಶಿಲ್ಪಕಲೆಗೆ ರಾಷ್ಟ್ರಮಟ್ಟದಲ್ಲಿ ಗೌರವ ದೊರಕಿದರೆ, ಇನ್ನೊಂದು ಕಡೆ ವಿಧಾನಸಭಾ ಸ್ಪೀಕರ್ ಹುದ್ದೆಯ ಘನತೆ ಮತ್ತು ಪರಂಪರೆ ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಿದೆ. ಯು.ಟಿ. ಖಾದರ್ ಅವರ ಈ ಪ್ರಯತ್ನ, “ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಕೈಚಾಣಾಕ್ಷ್ಯವೇ ನಮ್ಮ ಗುರುತು” ಎಂಬ ಸಂದೇಶವನ್ನು ದೇಶಕ್ಕೆ ಸಾರುವಂತಾಗಿದೆ.








