ಬಿಜಾಪುರ: ದಕ್ಷಿಣ ಛತ್ತೀಸ್ಗಢದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಇಂದು ಮುಂಜಾನೆ ನಡೆಸಿದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಒಟ್ಟು 14 ಸಶಸ್ತ್ರ ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ. ಇದು ಈ ವರ್ಷದ ಮೊದಲ ಪ್ರಮುಖ ನಕ್ಸಲ್ ವಿರೋಧಿ ಕಾರ್ಯಾಚರಣೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಯಪುರದಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಬಿಜಾಪುರ ಜಿಲ್ಲೆಯ ಬಸಗುಡ–ಟಾರೆಮ್ ಅರಣ್ಯ ಪ್ರದೇಶ ಹಾಗೂ ಸುಕ್ಮಾ ಜಿಲ್ಲೆಯ ಕೊಂಟಾ–ಕಿಸ್ತಾರಾಮ್ ಅರಣ್ಯ ಭಾಗಗಳಲ್ಲಿ ನಕ್ಸಲೀಯರ ಹಾಜರಾತಿ ಬಗ್ಗೆ ನಿಖರ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ (ಡಿಆರ್ಜಿ) ತಂಡಗಳು ಬೆಳಗಿನ ಜಾವ ಶೋಧ ಕಾರ್ಯಾಚರಣೆ ಆರಂಭಿಸಿವೆ. ಈ ವೇಳೆ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿಯಲ್ಲಿ ಎನ್ಕೌಂಟರ್ ನಡೆದಿದೆ.
ಸುಕ್ಮಾದ ಎನ್ಕೌಂಟರ್ ಸ್ಥಳದಿಂದ 12 ನಕ್ಸಲೀಯರು ಹಾಗೂ ಬಿಜಾಪುರದಿಂದ ಇಬ್ಬರು ನಕ್ಸಲೀಯರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಎನ್ಕೌಂಟರ್ ಸ್ಥಳಗಳಿಂದ ಎಕೆ–47, ಇನ್ಸಾಸ್ ಅಸಾಲ್ಟ್ ರೈಫಲ್, ಸ್ವಯಂ ಲೋಡಿಂಗ್ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡೂ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಈವರೆಗೆ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿರುವ ಬಗ್ಗೆ ವರದಿ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳು ಬಸ್ತಾರ್ ವಿಭಾಗದ ಅತ್ಯಂತ ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಕಳೆದ ವರ್ಷದಲ್ಲಿ ಛತ್ತೀಸ್ಗಢದಲ್ಲಿ ನೂರಾರು ನಕ್ಸಲೀಯರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಮುಖ್ಯವಾಹಿನಿಗೆ ಸೇರಲು ಶರಣಾಗಿದ್ದಾರೆ.ಇದನ್ನು ಓದಿ –ಹವಾಮಾನ ವರದಿ: ತುಂತುರು ಮಳೆ, ಕೆಲವೆಡೆ ಚಳಿ ಮುಂದುವರಿಕೆ
ಮಾರ್ಚ್ 31, 2026ರೊಳಗೆ ದೇಶವನ್ನು ಮಾವೋವಾದಿ ಹಿಂಸಾಚಾರದಿಂದ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಅದಕ್ಕೆ ಅನುಗುಣವಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








