ನಾಯಕತ್ವ ಬದಲಾವಣೆ ಮತ್ತು ಪವರ್ ಶೇರ್ ಕುರಿತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೊಸ ಹೇಳಿಕೆ ನೀಡಿದ್ದು, “ಸಮಯ ಬಂದಾಗ ಸಿದ್ದರಾಮಯ್ಯ ಅವರೇ ರಾಜ್ಯದ ಜನತೆಗೆ ತಿಳಿಸುತ್ತಾರೆ” ಎಂದು ಹೇಳಿದ್ದಾರೆ.
ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಾನು ಯಾರಿಗೂ ಉತ್ತರ ಕೊಡಲು ಸಿದ್ದವಿಲ್ಲ. ನಾಯಕತ್ವ ವಿಚಾರವಾಗಿ ನಾನು ಮತ್ತು ಸಿಎಂ ಮಾತುಕತೆ ನಡೆಸಿದ್ದೇವೆ. ಹೈಕಮಾಂಡ್ ಜೊತೆಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಮಯ ಬಂದಾಗ ಎಲ್ಲವೂ ಸ್ಪಷ್ಟವಾಗುತ್ತದೆ. ಇದರಲ್ಲಿ ಯಾವುದೇ ಗುಟ್ಟು ವ್ಯವಹಾರ ಇಲ್ಲ” ಎಂದು ಹೇಳಿದರು.
ಇದಕ್ಕೂ ಮೊದಲು ಶಾಸಕ ಬಸವರಾಜ ಶಿವಗಂಗಾ ಸಿಎಂ ಸ್ಪಷ್ಟನೆ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಇದೀಗ ಡಿಕೆಶಿ ಕೂಡ ಸಿಎಂ ಅಂಗಳಕ್ಕೆ ವಿಚಾರವನ್ನು ಎಸೆದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇನ್ನೊಂದೆಡೆ, ಕಾಂಗ್ರೆಸ್ನ ಕೆಲ ಶಾಸಕರ ವಿದೇಶ ಪ್ರವಾಸ ಕುರಿತು ಪ್ರಶ್ನಿಸಿದಾಗ, “ನನಗೆ ಯಾವುದೇ ಮಾಹಿತಿ ಇಲ್ಲ. ಅದು ಅವರ ವೈಯಕ್ತಿಕ ವಿಚಾರವಾಗಿರಬಹುದು. ಯಾರು ಕಳಿಸುತ್ತಿದ್ದಾರೆ, ಯಾರು ಪ್ರಾಯೋಜಕರು ಎನ್ನುವುದೂ ಗೊತ್ತಿಲ್ಲ. ನಾನು ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ” ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.



