ಬಾಯಿಗೆ ಯಾವುದು ರುಚಿಯಾಗಿರುವುದಿಲ್ಲವೋ, ಅದು ಎಂದಿಗೂ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಬಾಯಿಗೆ ರುಚಿ ಎನಿಸುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೇ ಹೆಚ್ಚು. ಅದೇ ಸಾಲಿಗೆ ಸೇರುತ್ತೆ ಈ ಮೂಲಂಗಿ.
ಮೂಲಂಗಿ ಅಂದರೆ, ಮೂಗು ಮುರಿಯುವವರೇ ಹೆಚ್ಚು. ಅದರ ರುಚಿ ಹಾಗೂ ವಾಸನೆಯಿಂದ ಅತೀ ಕಡಿಮೆ ಜನರ ಫೇವರೆಟ್ ಆಗಿದೆ ಈ ಮೂಲಂಗಿ. ಆದರೆ, ಇದರಲ್ಲಿರುವ ಪೋಷಕಾಂಶಗಳು, ಅದು ದೇಹಕ್ಕೆ ನೀಡುವ ಪ್ರಯೋಜನಗಳ ಬಗ್ಗೆ ನೀವು ಕೇಳಿದರೆ, ಅಚ್ಚರಿ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮೂಲಂಗಿಯಲ್ಲಿರುವ ಪೋಷಕಾಂಶಗಳು
ಚಳಿಗಾಲದಲ್ಲಿ ಬಿಳಿ ಮೂಲಂಗಿ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ. ಮೂಲಂಗಿಯನ್ನು ಸಲಾಡ್ಗಳಲ್ಲಿ ಮತ್ತು ತರಕಾರಿಯಾಗಿ ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್-ಎ, ವಿಟಮಿನ್-ಬಿ, ಸಿ, ಕಬ್ಬಿಣ, ಅಯೋಡಿನ್, ಕ್ಯಾಲ್ಸಿಯಂ, ಸಲ್ಪರ್, ಸೋಡಿಯಂ, ಮೆಗ್ನಿಸಿಯಮ್, ರಂಜಕ ಮತ್ತು ಕ್ಲೋರಿನ್ ಸಮೃದ್ಧವಾಗಿದೆ. ಮೂಲಂಗಿಯಲ್ಲಿ ವಿಟಮಿನ್ ಎ, ಸಿ, ಬಿ6, ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುವ ಅಂಶಗಳಾಗಿವೆ.ಇವೆಲ್ಲವೂ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.
ಚಳಿಗಾಲದಲ್ಲಿ ಮೂಲಂಗಿ ಸೇವನೆಯಿಂದ ಸಿಗುವ ಪ್ರಯೋಜನಗಳು:

ಪೋಷಕಾಂಶಗಳಿಂದ ಸಮೃದ್ಧವಾಗರುವ ಮೂಲಂಗಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಚಳಿಗಾಲದಲ್ಲಿ ಇದರ ಸೇವನೆ ದೇಹವನ್ನು ಬೆಚ್ಚಗಿಡುತ್ತದೆ. ಇದೇ ರೀತಿ ಚಳಿಗಾಲದಲ್ಲಿ ಮೂಲಂಗಿ ಯಾವ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ.
ಮೂಲಂಗಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಲು ನೆರವಾಗುವ ನೈಸರ್ಗಿಕ ನೈಟ್ರೇಟ್ಗಳ ಉತ್ತಮ ಮೂಲವಾಗಿದೆ. ಜೊತೆಗೆ ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಕೊಲ್ಯಾಜೆನ್ ಎಂಬ ಪೋಷಕಾಂಶವಿದೆ. ಇದು ರಕ್ತನಾಳಗಳನ್ನು ಬಲಪಡಿಸಲು ನೆರವಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಚಳಿಗಾಲದಲ್ಲಿ ಮೂಲಂಗಿಯನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸಲು ಮೂಲಂಗಿ ಅತ್ಯುತ್ತಮ ಔಷಧಿಯಾಗಿದೆ. ಮೂಲಂಗಿಯಲ್ಲಿ ಶೀತವನ್ನು ತಡೆಯುವ ಗುಣವಿದ್ದು, ಇದು ಕೆಮ್ಮಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ ಈ ಅಸಿಡಿಟಿ. ನೀವು ಅಸಿಡಿಟಿಯಿಂದ ತೊಂದರೆ ಗೊಳಗಾಗಿದ್ದರೆ, ಹಸಿ ಮೂಲಂಗಿಯನ್ನು ಸೇವಿಸಿ. ಹಸಿ ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಇದು ಅಸಿಡಿಟಿ ಹೋಗಲಾಡಿಸಲು ಸಹಕಾರಿ.
1 ರಿಂದ 2 ಮೂಲಂಗಿ ಬೇರುಗಳನ್ನು ಕತ್ತರಿಸಿ ನಂತರ ಅದಕ್ಕೆ 3 ರಿಂದ 4 ಗ್ಲಾಸ್ ಅಷ್ಟು ನೀರನ್ನು ಸೇರಿಸಿ ಈ ಮಿಶ್ರಣವನ್ನು 1 ರಿಂದ 2 ಗಂಟೆ ಗಳ ಕಾಲ ನೆನೆಯಲು ಬಿಡಿ ನಂತರ ದಿನಪೂರ್ತಿ ಈ ಮಿಶ್ರಣವನ್ನ ಕುಡಿಯುವುದರಿಂದ ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಅರ್ಧ ಲೋಟದಷ್ಟು ಮೂಲಂಗಿ ರಸ ಹಾಗೂ ಅಷ್ಟೇ ಪ್ರಮಾಣದ ನೀರು ಹಾಗೂ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಸೇವಿಸಿ ನಂತರ ಈ ಮಿಶ್ರಣವನ್ನು ಊಟದ ಮೊದಲು ಕುಡಿಯಿರಿ ಇದರಿಂದಾಗಿ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ನಿಧಾನವಾಗಿ ನಿವಾರಣೆ ಮಾಡುತ್ತದೆ.
ಮೂಲಂಗಿ ಎಲೆಗಳನ್ನು ಬೇರ್ಪಡಿಸಿ ಅದನ್ನು ರುಬ್ಬಿ ನಂತರ ದೊರೆತ ಪಾನಿಯವನ್ನು 40-50 ಮಿಲಿಯಷ್ಟು ತೆಗೆದುಕೊಂಡು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಕಣ್ಣಿನ ತೊಂದರೆ ಕಣ್ಣಿನ ಉರಿಯೂತ ಇರುಳು ಕುರುಡು ಮುಂತಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.
ಒಂದರಿಂದ ಎರಡು ಮೂಲಂಗಿಯ ಬೇರುಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ ರುಬ್ಬಿದ ಮಿಶ್ರಣವನ್ನು ಚರ್ಮ ಮತ್ತು ಮುಖದ ಮೇಲೆ ಹಚ್ಚಿಕೊಳ್ಳಿ 15-20 ನಿಮಿಷ ಹಾಗೇ ಬಿಟ್ಟು ನಂತರ ಮುಖ ತೊಳೆದುಕೊಂಡು ಹೀಗೆ ಮಾಡುವುದರಿಂದ ಮುಖ ಹಾಗೂ ಚರ್ಮದ ಕಾಂತಿಯನ್ನು
ಹೆಚ್ಚಿಸುತ್ತದೆ.
ರಕ್ತದ ಒತ್ತಡ ಕಡಿಮೆಯಾದರೂ ತೊಂದರೆ, ಹೆಚ್ಚಾದರೂ ತೊಂದರೆ. ಬಿಳಿ ಮೂಲಂಗಿಯಲ್ಲಿರುವ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ ಒತ್ತಡವನ್ನು ಆರೋಗ್ಯಕರ ಮಿತಿಯಲ್ಲಿರಿಸಲು ನೆರವಾಗುವ ಕಾರಣದಿಂದಲೇ ರಕ್ತದ ಒತ್ತಡಕ್ಕೆ ಅತ್ಯುತ್ತಮ ಆಹಾರ ಎಂಬ ಅನ್ವರ್ಥನಾಮವನ್ನು ಪಡೆದಿದೆ.
ಸಾಮಾನ್ಯ ಶೀತ, ಜ್ವರ, ಕೆಮ್ಮು ಮೊದಲಾದ ವೈರಸ್ಸುಗಳ ಮೂಲಕ ಎದುರಾಗುವ ಸೋಂಕುಗಳು ಎದುರಾಗದಂತೆ ರಕ್ಷಿಸುತ್ತದೆ. ಅಲ್ಲದೇ ಬಾವು ಮತ್ತು ಉರಿಯೂತ ಎದುರಾಗಿದ್ದರೆ ಮೂಲಂಗಿಯ ಸೇವನೆಯಿಂದ ಶೀಘ್ರವೇ ಗುಣವಾಗುತ್ತದೆ.
ಮೂಲಂಗಿಯನ್ನು ನಿತ್ಯದ ಆಹಾರದಲ್ಲಿ ಸಾಲಾಡ್ ರೂಪದಲ್ಲಿ ಸೇವಿಸುತ್ತಾ ಬರುವ ಮೂಲಕ ಜೀರ್ಣಾಂಗಗಳು ಉತ್ತಮವಾದ ಆರೋಗ್ಯದಲ್ಲಿರುತ್ತವೆ. ಆಮ್ಲೀಯತೆ, ಸ್ಥೂಲಕಾಯ, ಗ್ಯಾಸ್ಟ್ರಿಕ್ ತೊಂದರೆಗಳು, ವಾಕರಿಕೆ ಮೊದಲಾದ ತೊಂದರೆಗಳು ಎದುರಾಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.
ಪೈಲ್ಸ್ ಸಮಸ್ಯೆ ಇರುವವರಿಗೆ ವೈದ್ಯರು ಸಾಮಾನ್ಯವಾಗಿ ಹಸಿ ಮೂಲಂಗಿ ಸೇವಿಸಲು ಹೇಳುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶವಿದೆ. ಅಂದರೆ ಜೀರ್ಣವಾಗದ ಕಾರ್ಬೋಹೈಡ್ರೇಟ್ಗಳಿಂದ ಕೂಡಿದೆ. ಹಾಗಾಗಿ ಉತ್ತಮ ನಿರ್ವಿಶೀಕರಣದ ಗುಣವಿರುವುದರಿಂದ ಪೈಲ್ಸ್ ರೋಗಲಕ್ಷಣಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಮತ್ತು ವಿಸರ್ಜನಾ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ ಹಾಗೂ ಕ್ರಮೇಣ ಪೈಲ್ಸ್ ಸಮಸ್ಯೆಯನ್ನು ನಿವಾರಿಸುತ್ತದೆ.
ಮೂತ್ರವರ್ಧಕ, ಕ್ಲೀನರ್ ಮತ್ತು ನಂಜುನಿರೋಧಕವಾಗಿ, ಮೂಲಂಗಿಯು ಹಲವಾರು ಮೂತ್ರಪಿಂಡದ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದರ ನಂಜುನಿರೋಧಕ ಗುಣಲಕ್ಷಣಗಳು ಮೂತ್ರಪಿಂಡಗಳನ್ನು ಯಾವುದೇ ಸೋಂಕುಗಳಿಂದ ರಕ್ಷಿಸುತ್ತದೆ.
ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.
ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ. ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದಲ್ಲದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು. ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
ಮೂಲಂಗಿಯನ್ನು ಸಾರು, ಸಾಂಬಾರ್, ಪಲ್ಯ, ಬೇಯಿಸಿ ಪರೋಟ ಮಾಡುವ ಮೂಲಕ ಮೊದಲಾದ ಹಲವು ಬಗೆಯಲ್ಲಿ ಸೇವಿಸಬಹುದಾದರೂ ಹಸಿಯಾಗಿ ತಿನ್ನುವ ಮೂಲಕ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.

ಸೌಮ್ಯ ಸನತ್.



