ಮಹಾಕಾವ್ಯಗಳು ಕೇವಲ ಗ್ರಂಥವಲ್ಲ. ಅದು ಕಥೆಯ ಮೂಲಕ ಹೇಳಲಾಗಿರುವ ಪಾಠ. ಬದುಕಿಗೆ ಸರಿಯಾದ ಮಾರ್ಗ ತೋರುವ ದಾರಿದೀಪ. ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾಗಿರುವ ಮಾರ್ಗಸೂಚಿಯನ್ನು ಮಹಾಕಾವ್ಯದಲ್ಲಿ ಕಾಣಬಹುದು. ಅವುಗಳನ್ನು ಅರ್ಥೈಸಿಕೊಂಡು ಬದುಕಿನಲಿ ಅಳವಡಿಸಿಕೊಳ್ಳುವ ಮನಸ್ಸು, ವಿವೇಕ ಇಂದು ಮರೆಯಾಗಿದೆ. ಮಹಾಕಾವ್ಯಗಳಲ್ಲಿ ಮಾನವ ಜೀವನದ ಸಾಂಸಾರಿಕ, ಮಾನಸಿಕ, ಧಾರ್ಮಿಕ ಹಂತಗಳನ್ನು ಗಮನಿಸಬಹುದು. ಗ್ರಂಥದ ಪಾತ್ರಗಳು ನಮ್ಮೊಂದಿಗೆ, ನಮ್ಮೊಳಗೆ ಅಡಗಿದೆ. ಯಾವ ಪಾತ್ರ, ಯಾವ ಪಾತ್ರದ ವಿಚಾರಧಾರೆ ನಮ್ಮೊಳಗಿದೆ ಎನ್ನುವ ಅವಲೋಕನದ ಅಗತ್ಯ ಪ್ರತಿಯೊಬ್ಬರಿಗಿದೆ.
ರಾಮಾಯಣ ಹಾಗು ಮಹಾಭಾರತ ಎಂಬ ಧರ್ಮ ಗ್ರಂಥ ಬದುಕಿಗೆ ಬುನಾದಿ. ಸಮಾಜದ ಸ್ವಾಸ್ಥ್ಯಕ್ಕೆ ಕನ್ನಡಿ. ನೈತಿಕತೆಯನ್ನು ಹೊತ್ತು ಧರ್ಮವನ್ನು ಸಾರುತ್ತಾ ಭಕ್ತಿಯನ್ನು ಬಿತ್ತುವ ಈ ಗ್ರಂಥಗಳು ಕೇವಲ ಕಥೆಯಾಗಿ ಉಳಿದುಕೊಂಡಿರುವುದು ಬೇಸರದ ಸಂಗತಿ. ರಾಮಾಯಣ ಗೊತ್ತಾ ಎಂದು ಕೇಳಿದರೆ ರಾವಣ ಸೀತೆಯನ್ನು ಅಪಹರಿಸಿದ. ರಾಮ ರಾವಣನನ್ನು ಕೊಂದು ಸೀತೆಯನ್ನು ಕರೆತಂದ ಎಂದು ಒಂದು ವರ್ಗ ರಾಮನ ಶೌರ್ಯವನ್ನು ಸಾರಿದರೆ, ಸೀತೆಗೆ ರಾಮ ಅಗ್ನಿಪ್ರವೇಶ ಮಾಡಲು ಹೇಳಿದ, ತುಂಬು ಗರ್ಭಿಣಿಯನ್ನು ಅಡವಿಗಟ್ಟಿ ಕಂಬನಿಯಲ್ಲಿ ಕೈತೊಳೆಯುವಂತೆ ಮಾಡಿದ ಎಂದು ರಾಮನ ತಪ್ಪುಗಳ ಪಟ್ಟಿಯನ್ನು ಇನ್ನೊಂದಿಷ್ಟು ಜನ ಹೇಳ್ತಾರೆ.. ಕೈಕೇಯಿ ಹಾಗು ಮಂಥರೆಯಿಂದ ರಾಮಾಯಣ ನಡೆಯಿತು ಎಂದು ಹೇಳುವವರೂ ಇದ್ದಾರೆ. ಮಹಾಭಾರತದ ಬಗ್ಗೆ ಕೇಳಿದರೆ ದುರ್ಯೋಧನನ ದರ್ಪ, ಧೃತರಾಷ್ಟ್ರನ ಕುರುಡು ಪ್ರೇಮ, ಪಾಂಡವರ ತಾಳ್ಮೆ, ದ್ರೌಪದಿಯ ನೋವು, ಕರ್ಣನ ಮೂರ್ಖತನ, ಕೃಷ್ಣನ ಲೀಲೆ, ಪಾಂಡವರಿಗಾದ ಅನ್ಯಾಯದ, ದಾಯಾದಿಗಳ ಜಗಳದ ಬಗ್ಗೆ ಹೇಳಿ ತಪ್ಪುಗಳನ್ನು ಎತ್ತಿ ಹೇಳುತ್ತಾರೆ. ಭಗವದ್ಗೀತೆ ಪ್ರವಚನದ ಪಾಠವನ್ನಾಗಿಸಿಕೊಂಡಿದ್ದಾರೆ ಹೊರತು ಅಳವಡಿಸಿಕೊಳ್ಳುವ ಆಲೋಚನೆ ಬಹು ವಿರಳ.
ಹಾಗಾದರೆ ಈ ಗ್ರಂಥಗಳಲ್ಲಿ ಕೇವಲ ತಪ್ಪುಗಳ ಬಗ್ಗೆ ಮಾತ್ರ ಇದೆಯೇ? ಮೋಸ, ವಂಚನೆ,ಕಪಟ, ಧರ್ಮ ಸಂಕಟದ ಬಗ್ಗೆ ಮಾತ್ರ ಹೇಳಲಾಗಿದೆಯೇ? ಖಂಡಿತ ಇಲ್ಲ. ಹೇಳಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಬೇಕಾಗಿದ್ದನ್ನು ಆಯ್ದುಕೊಳ್ಳುವಲ್ಲಿ ಸೋತ್ತಿದ್ದೇವೆ.
ರಾಮಾಯಣದಲ್ಲಿ ಗುರುಹಿರಿಯರ ಮಾತಿಗಿದ್ದ ಬೆಲೆ, ಅವರ ಗೌರವ ಕಾಳಜಿಯ ಬಗ್ಗೆ, ಮನದ ಆಸೆ ಆಮಿಷಗಳು ತಂದೊಡ್ಡುವ ಅಪಾಯದ ಬಗ್ಗೆ, ನಾನು ನಿನ್ನಿಂದ ಎನ್ನುವ ಅಹಂಕಾರದ ಬಗ್ಗೆ ಎಳೆ ಎಳೆಯಾಗಿ ತೆರೆದಿಡುತ್ತದೆ. ಅಹಂಕಾರ ಸರ್ವನಾಶಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಉದಾಹರಣೆಗಳು ಧರ್ಮ ಗ್ರಂಥದಲ್ಲಿ ನೋಡಬಹುದು. ಮಹಾಭಾರತದಲ್ಲಿ ಭೀಷ್ಮ, ದ್ರೋಣ, ಕೃಪ, ಕರ್ಣ, ಧೃತರಾಷ್ಟ್ರ, ಯುಧಿಷ್ಠಿರ ವೈಯುಕ್ತಿಕ ಧರ್ಮಕ್ಕಾಗಿ ಸಾಮಾಜಿಕ ಧರ್ಮವನ್ನು ಮರೆತು ಅದನ್ನು ರಕ್ಷಿಸುವಲ್ಲಿ ಸೋತು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿ ಕುರುವಂಶದ ವಿನಾಶಕ್ಕೆ ಕಾರಣವಾಯಿತು ಎನ್ನುವ ಸಂದೇಶವಿದೆ.
ಸಾಮಾಜಿಕ ಧರ್ಮವೋ, ವೈಯುಕ್ತಿಕ ಧರ್ಮವೋ ಎನ್ನುವ ಆಯ್ಕೆ ನಮ್ಮ ಮುಂದೆ ಬಂದಾಗ ದೇಶದ ರಕ್ಷಣೆಗೆ ಸಮಾಜದ ಸ್ವಾಸ್ಥ್ಯಕ್ಕೆ ಸಾಮಾಜಿಕ ಧರ್ಮ ಶ್ರೇಷ್ಠ. ಆದರೆ ಯಾರಿಗೆ ಏನಾದರೂ ಚಿಂತೆ ಇಲ್ಲ ನಾನು ಆರಾಮಾಗಿ ಬದುಕಬೇಕು ಎನ್ನುವ ಧೋರಣೆ ಇರುವವರೇ ಜಾಸ್ತಿ. ವೈಯುಕ್ತಿಕ ಹಿತಾಸಕ್ತಿಗೆ ಸ್ವತಃ ಸಂಕಟ ಅನುಭವಿಸುವ ಜೊತೆಗೆ ಸುತ್ತಲಿನವರನ್ನು ಸಂಕಷ್ಟಕ್ಕೆ ದೂಡುವ ಮನಸ್ಥಿತಿ ಹೆಚ್ಚಾಗಿದೆ. ಧರ್ಮ ಗ್ರಂಥದಲ್ಲಿ ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಮಹಾಭಾರತದ ಪಾತ್ರಗಳು ಹೇಗೆ ಬದುಕಬಾರದು ಎನ್ನುವ ಪಾಠವನ್ನು ಸಾರಿದರೆ ರಾಮಾಯಣದ ಪಾತ್ರಗಳು ಹೇಗೆ ಬದುಕಬೇಕು ಎನ್ನುವುದನ್ನು ಸಾರುತ್ತದೆ. ರಾಮನ ತಾಳ್ಮೆ ನಮ್ಮ ನಿತ್ಯದ ಜಂಜಾಟದ ಬದುಕಿಗೆ ಬೇಕಿದೆ. ಲಕ್ಷ್ಮಣ, ವಿಭೀಷಣ ಹಾಗು ಹನುಮಂತನ ನಿಷ್ಠೆ ನಾವು ಮಾಡುವ ಕೆಲಸದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಸಿಗುತ್ತದೆ. ಸೀತೆಯ ಸಹಿಸುವಿಕೆ ಹಾಗು ದ್ರೌಪದಿಯ ದಿಟ್ಟತನ ಎರಡೂ ಬದುಕಿಗೆ ಅವಶ್ಯಕ. ಅರ್ಜುನನ ಯುಕ್ತಿ, ಭೀಮನ ಶಕ್ತಿ ಪ್ರತಿಯೊಬ್ಬರಿಗೂ ಅವಶ್ಯಕ. ನಕುಲ ಸಹದೇವರಂತೆ ನಿಷ್ಕಲ್ಮಶವಾಗಿ ಪ್ರೀತಿಸುವ ಗುಣವೂ ಬೇಕು.
ತಾಳ್ಮೆ, ಸಹನೆ, ಶಾಂತಿ,ಪ್ರೀತಿ, ಕೋಪ, ದ್ವೇಷ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಯಾವುದು ಹೆಚ್ಚಾದರೂ ಅದರಿಂದ ಸಮಸ್ಯೆ ಉಂಟಾಗುತ್ತದೆ. ಸಮಸ್ಯೆಗೆ ಪರಿಹಾರವಿಲ್ಲವೆಂದಲ್ಲ. ಪರಿಹಾರ ಹುಡುಕುವ ಮನಸ್ಥಿತಿ ಬೇಕು. ಸೂಕ್ತ ಸಮಯಕ್ಕೆ ಕಾಯಬೇಕು. ಧರ್ಮದಿಂದ ನೆಡೆಯುವವರನ್ನು ಪರಮಾತ್ಮ ಕಾಯುತ್ತಾನೆ ಎಂದ ಮಾತ್ರಕ್ಕೆ ಪರೀಕ್ಷೆಗಳನ್ನು ಇಡಲಾರ ಎಂದರ್ಥವಲ್ಲ. ಪರೀಕ್ಷೆಯನ್ನು ಗೆಲ್ಲುವ ಮಾರ್ಗವನ್ನು ಅವನೇ ತೋರುತ್ತಾನೆ. ಎಲ್ಲವೂ ನಂಬಿಕೆಯ ಮೇಲೆ ನಿಂತಿದೆ ಎನ್ನುವುದನ್ನು ಧರ್ಮ ಗ್ರಂಥ ಸಾರುತ್ತದೆ. ಪವಿತ್ರ ಗ್ರಂಥಗಳು ಬದುಕಿನ ದಿಕ್ಸೂಚಿ. ಬದುಕಿಗೊಂದು ಭರವಸೆಯನ್ನು ನೀಡುವ ಶಕ್ತಿಯನ್ನು ಹೊಂದಿದೆ. ಆ ಶಕ್ತಿಯ ಸದ್ಬಳಕೆ ನಮ್ಮ ಕೈಯಲ್ಲಿದೆ. ಕಥೆಯಾಗಿ ನೋಡದೆ ಅದರಲ್ಲಿನ ಪಾತ್ರಗಳ ಬಗ್ಗೆ ತೀರ್ಪನ್ನು ನೀಡದೆ ಅಲ್ಲಿಂದ ಕಲಿಯಬೇಕಾದ ವಿಷಯವನ್ನು ಅಳವಡಿಸಿಕೊಂಡಾಗ ಗ್ರಂಥದ ಬೆಲೆ ಅರಿವಾಗುತ್ತದೆ. ಬದುಕು ಸುಂದರವೆನಿಸುತ್ತದೆ.

✍️ ಆಶ್ರಿತಾ ಕಿರಣ್