- – ಜುಲೈ 1ರಿಂದ ಆಗಸ್ಟ್ 10ರವರೆಗೆ ನಿರ್ಬಂಧ
ಶ್ರೀನಗರ: ಜಮ್ಮು-ಕಾಶ್ಮೀರ ಸರ್ಕಾರ ಪ್ರಸಿದ್ಧ ಧಾರ್ಮಿಕ ಯಾತ್ರೆಯಾಗಿರುವ ಅಮರನಾಥ ಯಾತ್ರೆಗಾಗಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರ ಭಾಗವಾಗಿ, ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳನ್ನು ಹಾರಾಟ ನಿಷೇಧ ವಲಯ (No Flying Zone) ಎಂದು ಘೋಷಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನಿರ್ದೇಶನದಂತೆ, ರಾಜ್ಯದ ಗೃಹ ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಪ್ರಕಟಣೆಯ ಪ್ರಕಾರ, ಡ್ರೋನ್ಗಳು, ಯುಎವಿಗಳು (ಮಾನವರಹಿತ ವೈಮಾನಿಕ ವಾಹನಗಳು), ಬಲೂನ್ಗಳು ಮತ್ತು ಇತರ ಯಾವುದೇ ರೀತಿಯ ಹಾರುವ ಸಾಧನಗಳನ್ನು ಈ ಮಾರ್ಗಗಳಲ್ಲಿ ಹಾರಿಸುವುದನ್ನು ಜುಲೈ 1 ರಿಂದ ಆಗಸ್ಟ್ 10ರವರೆಗೆ ನಿಷೇಧಿಸಲಾಗಿದೆ.
ಆದರೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳನ್ನು ಸ್ಥಳಾಂತರಿಸುವ ಕಾರ್ಯ, ವಿಪತ್ತು ನಿರ್ವಹಣೆ ಮತ್ತು ಭದ್ರತಾ ಕಣ್ಗಾವಲು ಕಾರ್ಯಗಳಿಗೆ ಈ ನಿಷೇಧ ಅನ್ವಯವಾಗದು.ಇದನ್ನು ಓದಿ –ಬಿಸಾಡಿದ ಬೀಡಿ ತುಂಡು ನುಂಗಿ 10 ತಿಂಗಳ ಶಿಶು ದುರ್ಮರಣಕ್ಕೆ ಶಿಕಾರ
ಜುಲೈ 3ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆನ್ನು ಶಾಂತಿಯುತ ಹಾಗೂ ಭದ್ರತೆಯಿಂದ ನಡೆಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತರು ಯಾವುದೇ ಆತಂಕವಿಲ್ಲದೇ ಯಾತ್ರೆ ನಡೆಸಿಕೊಳ್ಳಲು ಎಲ್ಲಾ ಅಗತ್ಯ ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿರುವುದಾಗಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.