ಬೆಂಗಳೂರು: ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪೀಟರ್ ಕ್ಯಾಡಿ ಎಂಬುವರ ಮನೆ ಮೇಲೆ ಸಿಐಡಿ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ, ವಂಚನೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಫುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪದಲ್ಲಿರುವ ಪೀಟರ್ ಕ್ಯಾಡಿ ನಿವಾಸಕ್ಕೆ ಸಿಐಡಿ ಅಧಿಕಾರಿಗಳ ತಂಡ ಬೆಳಂಬೆಳಿಗ್ಗೆ ದಾಳಿ ನಡೆಸಿತು. ಕಳೆದ ಸುಮಾರು 15 ವರ್ಷಗಳಿಂದ ಉದ್ಯಮಿಗಳನ್ನು ವಂಚಿಸಿ ಕಾನೂನು ಕ್ರಮದಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿರುವ ಪೀಟರ್ ಕ್ಯಾಡಿ, ವಂಚನೆಗೆ ಒಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದನೆಂದು ಸಿಐಡಿ ಮೂಲಗಳು ತಿಳಿಸಿವೆ. ಈತನಿಂದ 500ಕ್ಕೂ ಹೆಚ್ಚು ಮಂದಿ ವಂಚನೆಗೆ ಒಳಗಾಗಿರುವ ಶಂಕೆಯಿದೆ.
ಸಾಲದ ಅಗತ್ಯವಿರುವ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು, ಬ್ಯಾಂಕ್ ಬಡ್ಡಿಗಿಂತ ಕಡಿಮೆ ಬಡ್ಡಿದರದಲ್ಲಿ ಕೋಟ್ಯಂತರ ರೂಪಾಯಿ ಸಾಲ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಪೀಟರ್ ಕ್ಯಾಡಿ ನಂಬಿಸುತ್ತಿದ್ದ. ಆರಂಭದಲ್ಲಿ ಉದ್ಯಮಿಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಡಿಡಿಗಳನ್ನು ತೆಗೆದುಕೊಂಡು ತೋರಿಸಿ ನಂಬಿಕೆ ಮೂಡಿಸುತ್ತಿದ್ದನು. ಈ ನಾಟಕಕ್ಕೆ ಮಾರುಹೋದವರು ಖಾಲಿ ಚೆಕ್ಗಳು ಹಾಗೂ ಆಸ್ತಿ ಪತ್ರಗಳನ್ನು ನೀಡುತ್ತಿದ್ದರು.
ನಂತರ ‘ಪ್ರೊಸೆಸಿಂಗ್ ಫೀ’ ಮತ್ತು ‘ಕಮೀಷನ್’ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಹಣ ಪಡೆದುಕೊಂಡು, ಸಾಲ ನೀಡದೇ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಹಣ ವಾಪಸು ಕೇಳಿದವರ ವಿರುದ್ಧ, ಅವರು ನೀಡಿದ್ದ ಚೆಕ್ ಹಾಗೂ ಆಸ್ತಿ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯದ ಮೂಲಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.
ಇನ್ನು ಕೆಲವರು ಕಚೇರಿಗೆ ಬಂದು ಹಣ ವಾಪಸು ಕೇಳಿದರೆ, ಅಶ್ವಿನಿ ಎಂಬ ಮಹಿಳೆಯ ಹೆಸರಿನಲ್ಲಿ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ಹಾಕುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ. ಸಿಐಡಿ ತನಿಖೆಯಲ್ಲಿ ಹಲವಾರು ಮಂದಿಯ ವಿರುದ್ಧ 15ಕ್ಕಿಂತ ಹೆಚ್ಚು ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪೀಟರ್ ಕ್ಯಾಡಿ ತನ್ನ ಸಹಚರರಾದ ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಾಫ್, ಚಾರಿ ಮುರಳಿ ಸೇರಿದಂತೆ ಇತರರೊಂದಿಗೆ ಸೇರಿ ಈ ವಂಚನಾ ಜಾಲವನ್ನು ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಈತನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಸುಬ್ಬರಾವ್ ಪ್ರಕರಣ
ಕಳೆದ ವರ್ಷ ಸುಬ್ಬರಾವ್ ಎಂಬವರು ಪೀಟರ್ ಕ್ಯಾಡಿ ವಿರುದ್ಧ ಫುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಮೀನು ದಾಖಲೆ ಸರಿಪಡಿಸಿ 300 ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಡುತ್ತೇನೆ ಎಂದು ನಂಬಿಸಿ 96 ಲಕ್ಷ ರೂ. ಹಣ ಪಡೆದು ನಂತರ ಮೋಸ ಮಾಡಿದ ಆರೋಪ ಇದೆ. ಅಲ್ಲದೇ, ಕಮೀಷನ್ ಹೆಸರಿನಲ್ಲಿ ಪಡೆದ ಚೆಕ್ಗಳನ್ನು ದುರುಪಯೋಗಪಡಿಸಿಕೊಂಡು ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.ಸೌಜನ್ಯ ಕೊಲೆ ಪ್ರಕರಣ: ಸಿಬಿಐಗೆ ಹೈಕೋರ್ಟ್ ನೋಟಿಸ್
ಈ ಹಿನ್ನಲೆಯಲ್ಲಿ ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ವಂಚನೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಈತನ ವಿರುದ್ಧ ಅಶೋಕನಗರ, ಜೀವನ್ ಭೀಮಾನಗರ, ಹಲಸೂರು, ಫುಲಿಕೇಶಿನಗರ ಮತ್ತು ಬೆಳ್ಳಂದೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ. ಅಚ್ಚರಿಯ ಸಂಗತಿಯೆಂದರೆ, ಹಣ ವಾಪಸು ಕೇಳದಂತೆ ಬೆದರಿಸಲು 300ಕ್ಕೂ ಹೆಚ್ಚು ಸುಳ್ಳು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.








