ಮೊನ್ನೆ ಕೆಲವು ಆಂತರಿಕ ಕಾರಣಗಳಿಂದಾಗಿ ಇಂಡಿಗೋ ವಿಮಾನದ ನೂರಾರು ವಿಮಾನಗಳು ಧಿಡೀರ್ ಎಂದು ರದ್ದಾಗಿದ್ದಕ್ಕೇ ದೇಶದ ಎಲ್ಲಾ ವಿಮಾನನಿಲ್ದಾಣಗಳಲ್ಲೂ ಪ್ರಯಾಣಿಕರು ಸಿಕ್ಕಾಪಟ್ಟೆ ಪರದಾಡುವಂತಾಗಿತ್ತು. ಅವರ ಪರಿಸ್ಥಿತಿ, ಸಾಲು ಸಾಲು ಹಬ್ಬಗಳ ರಜೆ ಸಿಕ್ಕಾಗ ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿ ತುಂಬಿರುವ ಪ್ರಯಾಣಿಕರಿಗಿಂತಲೂ ಕಡೆಯಾಗಿತ್ತು. ಏರ್ಪೋರ್ಟ್ ಗಳಂತೂ ಥೇಟು ಸಿಟಿ ಬಸ್ ಸ್ಟಾಂಡಿಗಿಂತಲೂ ಗಿಜಿಗಿಜಿ ಎನ್ನುತ್ತಾ ರಣರಗಳೆಯಾಗಿದ್ದ ದೃಶ್ಯ ಕಂಡುಬಂದಿತ್ತು. !!
ಆದರೆ ತಮ್ಮವೇ ಆದ ಹತ್ತಾರು ಅವಸರದ ಕಾರಣಗಳಿಂದಾಗಿ ತಮ್ಮ ತಮ್ಮ ಗಮ್ಯ ತಲುಪಬೇಕಾಗಿದ್ದ ಪ್ರಯಾಣಿಕರ ಇಂಥಾ ಅಸಹಾಯಕ ಪರಿಸ್ಥಿತಿಗೆ ಹಾಗೂ ಇಂಡಿಗೋ ವಿಮಾನದ ಬದಲು ಬೇರೆ ವಿಮಾನ ಹಿಡಿದಾದರೂ ಜರ್ನಿ ಮಾಡಬೇಕಾಗಿದ್ದ ಪ್ರಯಾಣಿಕರ ಒತ್ತಡದ ಆ ಸನ್ನಿವೇಶಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದ್ದ ವಿಮಾನ ಸಂಸ್ಥೆಗಳು_ ಜನರ ಈ ದಿಕೆಟ್ಟ ಸ್ಥಿತಿಯಲ್ಲೂ ಇನ್ನಷ್ಟು ದುಡ್ಡು ಮಾಡಿಕೊಳ್ಳುವ ಮೂರೂಬಿಟ್ಟ ಹೆಜ್ಜೆ ಇಟ್ಟಿರುವುದು ಅಪ್ಪಟ ನಾಚಿಕೆಗೇಡು.
ಮನುಷ್ಯನ ಸನ್ನಿವೇಶದ ಅಸಹಾಯಕತೆ, ಅವಸರ , ಅವಶ್ಯಕತೆ, ಅತಂತ್ರತೆ ಅಥವಾ ದೌರ್ಬಲ್ಯದ ಲಾಭ ಪಡೆಯುವಲ್ಲಿ ಎಲ್ಲಾ ಸೇವಾ ಕ್ಷೇತ್ರಗಳೂ ತಾಮುಂದು ನಾ ಮುಂದು ಎನ್ನುವ ಕಾಂಪಿಟೇಷನ್ನು ಇರುವುದು ನಿಜವಾದರೂ ಅದು ಈ ರೀತಿ ಅಮಾನವೀಯ ಮಟ್ಟಕ್ಕೆ ಮುಟ್ಟಬಾರದಿತ್ತು.
ಇದೇ ಉದಾಹರಣೆಯಲ್ಲಿ, ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿದ್ದಕ್ಕೆ ಇದರ ಲಾಭ ಪಡೆದ ಇತರೆ ಸಂಸ್ಥೆಗಳು ದೆಹಲಿಯಿಂದ ಕೊಚ್ಚಿಗೆ ಇರುವ ನಾರ್ಮಲ್ ಪ್ರಯಾಣ ದರ ₹. 5000 ಕ್ಕೆ ಬದಲು ಸುಮಾರು ಎಂಟರಿಂದ ಹತ್ತುಪಟ್ಟು ಹೆಚ್ವಿಸಿದ್ದಾರೆ. ಅಂದರೆ ಅದನ್ನು ಧಿಡೀರ್ ಎಂದು ₹. 40000 ದಿಂದ ₹ 50000/- ಕ್ಕೆ ಹೆಚ್ಚಿಸಿ ಜನರನ್ನು ಸುಲಿಗೆ ಮಾಡಿದ್ದಾರೆ. ಈ ವಿಮಾನ ಸಂಸ್ಥೆಗಳಿಗೆ ” ಮಾನ ” ಇದ್ದಿದ್ದರೆ ಹೀಗೆ ಶೋಷಿಸುತ್ತಿರಲಿಲ್ಲ….!
ಈಗ ಹೇಳಿ…ಇದನ್ನು ಹಗಲು ದರೋಡೆ ಅಂತೀರೋ ಸುಲಿಗೆ ಅಂತೀರೋ ಅಥವಾ ಮನುಷ್ಯನ ಅಸಹಾಯಕತೆಯನ್ನು ಹೀಗೂ ದುರುಪಯೋಗ ಮಾಡಿಕೊಳ್ಳಬಹುದೆಂಬುದಕ್ಕೆ ನಿದರ್ಶನ ಅಂತೀರೋ..! ಮತ್ತೆ ನೋಡಿದರೆ ಇವು ಹೇಳಿಕೇಳಿ ಸೇವಾಕ್ಷೇತ್ರಗಳು.!
ನನಗನಿಸಿದ ಮಟ್ಟಿಗೆ ಜನರ ಅಸಹಾಯಕತೆಯ ದಿಕ್ಕೆಟ್ಟ ಪರಿಸ್ಥಿತಿಯ ಲಾಭ ಪಡೆದು ಅವರಿಗೆ ಇನ್ನಷ್ಟು ತೊಂದರೆ ಕೊಟ್ಟು ದುಡ್ಡು ಮಾಡುವ ವಿಧಾನ ಇದೆಯಲ್ಲಾ.. ಅದು ಯಾವ ಭ್ರಷ್ಟಾಚಾರಕ್ಕೂ ಡಕಾಯಿತಿ ಅಥವಾ ಲೂಟಿಗೂ ಕಡಿಮೆಯೇನಿಲ್ಲ.!
ನಮ್ಮನ್ನಾಳುವ ಸರ್ಕಾರಗಳಿಗೆ ಇಂಥಾ ಸಾಮಾನ್ಯ ಸಂಗತಿಗಳು, ಜನರ ಸಂಕಷ್ಟಗಳು ಅರ್ಥವೇ ಆಗೋಲ್ಲ. ಅರ್ಥವಾದ್ರೂ ಅವುಗಳದ್ದು ಜಾಣಕಿವುಡು. ಏಕೆಂದರೆ ಸರ್ಕಾರಗಳಿರುವುದು ಕಾರ್ಪೊರೇಟ್ ಖೂಳರ ಋಣದಲ್ಲೇ ಆಗಿರುವುದರಿಂದ ಅವರ ಋಣ ತೀರಿಸುವ ಯಾವ ಅವಕಾಶವನ್ನೂ ಅದು ವ್ಯರ್ಥವಾಗಿಸೋಲ್ಲ. ಅವರಿಗೆ ಜನ ನೆನಪಾಗೋದು ಎಲೆಕ್ಷನ್ ಟೈಮಲ್ಲಿ ಮಾತ್ರ !
ಇದೇ ದಂಧೆಯನ್ನು ಇವರು ಕುಂಭಮೇಳದ ಸಂದರ್ಭದಲ್ಲಿಯೂ ಮಾಡಿ ದುಡ್ಡು ಮಾಡಿದ್ದರು. ನಮ್ಮ ಜನರ ಧಾರ್ಮಿಕ ದೌರ್ಬಲ್ಯ ಗೊತ್ತಿದ್ದೇ ಪ್ರಯಾಗ್ ರಾಜ್ ಗೆ ಹೋಗುವ ವಿಮಾನ ದರವನ್ನು ಹತ್ತು ಪಟ್ಟು ಹೆಚ್ಚಿಸಿದ್ದರು. ಅವರಿಗೆ ಜನ ಎಷ್ಟು ದುಡ್ಡಾದರೂ ಕೊಟ್ಟು ಪಯಣಿಸುತ್ತಾರೆಂದು ಗೊತ್ತು.! ಅಲ್ಲದೇ ಹಲವು ವಿಶೇಷ ಸಂದರ್ಭಗಳಲ್ಲಿ ಜನರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡೇ ಈ ಸಂಸ್ಥೆಗಳು ತಮ್ಮ ಅಸ್ತಿತ್ವ ಕಂಡುಕೊಂಡಿವೆ.
ಬಹುಶಃ ಕೇಂದ್ರ ಸರ್ಕಾರದ ಭಾಗವಾಗಿ ನಾಗರಿಕ ವಿಮಾನಯಾನ ಸಚಿವಾಲಯ ಎಂಬುದೊಂದು ಮಿನಿಸ್ಟ್ರಿ ಇದೆ ಅದಕ್ಕೊಬ್ಬ ಮಂತ್ರಿಯೂ ಇದ್ದಿರಬಹುದು. ಅದಕ್ಕೆ ಇರುವ ಪವರ್ ಗಳೇನು ಎಂಬುದು ಮಾತ್ರ ಜನಸಾಮಾನ್ಯರಿಗೆ ಅರ್ಥವಾಗಿಲ್ಲ. ವಿಮಾನಗಳು ರದ್ದಾಗಿ ಪ್ರಯಾಣಿಕರು ಪರದಾಡುವಂತಹ ದುಸ್ತರ ಸನ್ನಿವೇಶಗಳಲ್ಲಿ ಜನರ ಹಿತ ಕಾಪಾಡಿ ಅನಗತ್ಯ ದರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡದೇ ಇರುವುದು ವಿಮಾನ ಸಚಿವಾಲಯದ ಆ ಹೊತ್ತಿನ ಕರ್ತವ್ಯವಾಗಬೇಕಿತ್ತು. ಆದರೆ ಇದನ್ನೆಲ್ಲಾ ನೋಡಿಯೂ ನಮ್ಮ ವಿಮಾನಯಾನ ಸಚಿವಾಲಯ ತೆಪ್ಪಗೇ ಇತ್ತು.
ವಿಮಾನ ಪ್ರಯಾಣದರಗಳು ಪ್ರತೀ ಕ್ಷಣಕ್ಕೂ ಷೇರುಮಾರುಕಟ್ಟೆಯ ದರದಂತೆ ಬದಲಾಗುತ್ತಲೇ ಇರುತ್ತದೆ. ಹೀಗೆ ಮನಬಂದಂತೆ ಪ್ರಯಾಣದರಗಳನ್ನು ಹೆಚ್ಚಿಸುವ ವಿಮಾನ ಸಂಸ್ಥೆಗಳ ಮೇಲೆ ಸಚಿವಾಲಯಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲವೇ…? ಕಣ್ಣೆದುರೇ ಹೀಗೆ ಪ್ರಯಾಣಿಕರನ್ನು ಅವರ ಅಸಹಾಯಕತೆಯ ಲಾಭ ಪಡೆದು ಲೂಟಿ ಮಾಡುವ ಭಂಡತನವನ್ನು ನಿಯಂತ್ರಿಸಬೇಕೆಂಬ ಕನಿಷ್ಠ ಯೋಚನೆಯೂ ವಿಮಾನಯಾನಖಾತೆಯ ಮಂತ್ರಿಗೆ ಬಂದಿಲ್ಲವೇ..? ಅಥವಾ ದರ ಏರಿಕೆಗೂ ತಮಗೂ ಕೊನೇಪಕ್ಷ ಒಂದು ನೈತಿಕ ಸಂಬಂಧವೂ ಇಲ್ಲವೇ..?
ಜನರನ್ನು ಹಗಲುದರೋಡೆ ಮಾಡುವ, ಲೂಟಿ ಮಾಡುವ ಇಂಥಾ ಸನ್ನಿವೇಶಗಳನ್ನು ನಿಯಂತ್ರಿಸುವ ತಾಕತ್ತಿಲ್ಲವೆಂದ ಮೇಲೆ ಅಂಥಾದ್ದೊಂದು ಇಲಾಖೆಯಾದರೂ ಏಕೆ ಬೇಕು. ಇದೇ ಮಾತು ಸಾಲು ಸಾಲು ಹಬ್ಬಗಳ ರಜೆಗಳಿದ್ದಾಗ ನಮ್ಮ ಖಾಸಗಿಬಸ್ ನವರು ಹುಚ್ಚಾಪಟ್ಟೆ ಏರಿಸುವ ಬಸ್ ಪ್ರಯಾಣದರಕ್ಕೂ ಮತ್ತು ಅವರನ್ನು ನಿಯಂತ್ರಿಸದ ರಾಜ್ಯದ ಸಾರಿಗೆ ಸಚಿವಾಲಯಕ್ಕೂ ಅನ್ವಯಿಸುತ್ತದೆ.
ಅಂತೂ ಜನರಿರುವುದೇ ಶೋಷಣೆಗೆ ಒಳಗಾಗಲು ಎನ್ನುವಂತಾಗಿರುವ ಈ ಹೊತ್ತಿನ ದುರಂತವೆಂದರೆ ಜನರೂ ಕೂಡಾ ಅವರು ಬಸ್ ಪ್ರಯಾಣಿಕರೇ ಆಗಿರಲೀ, ವಿಮಾನ ಪ್ರಯಾಣಿಕರೇ ಆಗಿರಲೀ ಇಂತಹ ಅಪಸವ್ಯಗಳಿಗೆ, ಅನ್ಯಾಯಗಳಿಗೆ , ಸುಲಿಗೆಗೆ, ಅಕ್ರಮಗಳಿಗೆ, ಲಂಚಬಾಕರಿಗೆ ಹಾಗೂ ಎಲ್ಲಾ ರೀತಿಯ ಶೋಷಕರ ಅಟ್ಟಹಾಸಗಳ ಕೃತ್ಯಕ್ಕೆ ಈಗಾಗಲೇ ಒಗ್ಗಿಹೋಗಿ ಅದನ್ನೇ ನಾರ್ಮಲ್ಲೈಫ಼ು ಅಂದುಕೊಂಡಿರೋದರಿಂದ ಇಂತಹ ದೌರ್ಜನ್ಯದ ವಿರುದ್ಧ ದನಿ ಎತ್ತುವ ಚಲನೆಯನ್ನೇ ಕಳೆದುಕೊಂಡಿದ್ದಾರೆ.
ವಿಪರ್ಯಾಸವೆಂದರೆ ಜನರೂ ಸಹಾ ಪುರಾಣ, ಇತಿಹಾಸ ಪ್ರತಿಮೆ_ ದೇವರು ,ಧರ್ಮ ಜಾತಿ ಈ ವಿಚಾರಗಳಿಗೆ ಸಡನ್ ಆಗಿ ಸ್ಪಾರ್ಕ್ ಆಗುವಷ್ಟು ಚುರುಕಾಗಿ ನಾನಾ ಇಲಾಖೆಗಳ ಹಗಲು ದರೋಡೆಯ ವಿರುದ್ಧ , ಭ್ರಷ್ಟಾಚಾರದ ವಿರುದ್ಧ ಕಣ್ಣೆದುರಿನ ನಿತ್ಯ ಬವಣೆಗಳ ವಿರುದ್ಧ ಉಸಿರೆತ್ತುವ ಉಸಿರನ್ನೇ ಕಳೆದುಕೊಂಡಿದ್ದಾರೆ.
ಬಹುಶಃ ಜನರ ಈ ವೀಕ್ನೆಸ್ಸೇ ಆಳುವವರ ಸ್ಟ್ರೆಂತು.!
ಜನರ ಸನ್ನಿವೇಶದ ಅಸಹಾಯಕತೆಯ ಲಾಭ ಪಡೆಯುವುದು ಕೇವಲ ಕಾರ್ಪೊರೇಟ್ ಕುಳಗಳು ಮಾತ್ರವಲ್ಲ, ನಮ್ಮ ನಡುವೆಯೇ ಅಂಥಾ ಧೀಮಂತರಿದ್ದಾರೆ.! ಹಾಗೇ ಗಮನಿಸಿ.. ನಿಮ್ಮ ಮಗನ ಶಾಲೆಗೆ ಹತ್ತಿರವೇ ಇರುವ ಬಾಡಿಗೆ ಮನೆ ಹುಡುಕಿದರೆ ಅದಕ್ಕೆ ಹೆಚ್ಚು ಬಾಡಿಗೆ ಪೀಕುತ್ತಾರೆ, ಈಗಾಗಲೇ ಇರುವ ನಿಮ್ಮ ಪ್ರಾಪರ್ಟಿ ಪಕ್ಕದ ಜಾಗ ಖರೀದಿಸಲು ಹೊರಟಾಗ ಅದಕ್ಕೆ ಇನ್ನೂ ಹೆಚ್ಚಿನ ದರ ಡಿಮ್ಯಾಂಡ್ ಮಾಡುತ್ತಾರೆ, ಸಾರಿಗೆ ಮುಷ್ಕರದ ಸಮಯದಲ್ಲಿ ಸಿಗುವ ಇತರೆ ವಾಹನಗಳಿಗೆ ಸಿಕ್ಕಾಪಟ್ಟೆ ಹೆಚ್ವಿನ ಪ್ರಯಾಣ ದರ ಕೀಳುತ್ತಾರೆ, ಪ್ರವಾಸಿ ತಾಣಗಳಲ್ಲಿ ಸೀಸನ್ ಗಳಲ್ಲಿ ಒಂದಕ್ಕೆ ನಾಲ್ಕರಷ್ಟು ಊಟ ತಿಂಡಿ ರೇಟು ಕಕ್ಕಲೇ ಬೇಕು, ಸ್ವಲ್ಪ ಫಲಿತಾಂಶ ಹೆಚ್ಚಿಗೆ ಬಂದ ಶಾಲಾ ಕಾಲೇಜು ಕೋಚಿಂಗ್ ಸೆಂಟರ್ ಗಳು ಪೋಷಕರ ದೌರ್ಬಲ್ಯ ಅರಿತು ಅಮಾನವೀಯವಾಗಿ ಪೋಷಕರಿಂದ ಹಣದ ಸುಲಿಗೆಗೆ ಇಳಿಯುತ್ತವೆ, ನಿಮ್ಮ ಪೇಷೆಂಟ್ ಯಾವ ಕ್ಷಣದಲ್ಲಾದರೂ ಸಾಯುವನೆಂದು ಗೊತ್ತಿದ್ದರೂ, ನೀವು ಹಣ ಖರ್ಚು ಮಾಡುವ ತಾಕತ್ತಿರುವವರಾಗಿದ್ದಲ್ಲಿ ಏನೇನೋ ಹೇಳಿ ಒಂದಕ್ಕೆ ಹತ್ತರಷ್ಟು ಹಣ ಲಪಟಾಯಿಸುವ ಕಾರ್ಪೊರೇಟ್ ಆಸ್ಪತ್ರೆಗಳ ಹಗಲುದರೋಡೆಗಳದ್ದೇ ದೊಡ್ಡ ಕತೆಗಳಿವೆ, ಹಾಗೆಯೇ ಸರ್ಕಾರಿ ಇಲಾಖೆ ಅಥವಾ ಇನ್ನಾವುದೇ ಇಲಾಖೆಯಲ್ಲಿ ನಿಮ್ಮದಲ್ಲದ ತಪ್ಪಿಗೆ ನೀವು ಕೊಡಲೇ ಬೇಕಾದ ದಂಡ, ಹೆಚ್ಚಿನ ಹಣ ಶ್ರಮ….ಇವೆಲ್ಲಾ ಹೇಳುತ್ತಾ ಹೋದಂತೆಲ್ಲಾ ಅನಿಸೋದು….
ಇವೆಲ್ಲಾ ಯಾವ ಲೂಟಿಗೆ ಕಡಿಮೆಯಿವೆ..?
ಇದು ಬಿಟ್ಟಾಕಿ.
ಆನ್ಲೈನ್ನಲ್ಲಿ ಷಾಪಿಂಗ್ ನಲ್ಲಿ ನೀವು ಬ್ರೌಸ್ ಮಾಡೋ ಪ್ರಾಡಕ್ಟ್ ನಿಂದಲೇ ನಿಮ್ಮ ಅಭಿರುಚಿ ಏನೂ ಅಂತ ತಿಳಿದು, ಆ ವಸ್ತುವಿಗೆ , ನೀವು ಹುಡುಕುವ ಆ ಸೈಜ಼ಿಗೇ ಮಾತ್ರ ಬೇಕಾಗಿಯೇ ಇದ್ದಕ್ಕಿದ್ದಂತೆ ರೇಟು ಜಾಸ್ತಿಮಾಡ್ತಾರೆ ಅಂದ ಮೇಲೆ ಇವೆಲ್ಲವೂ ಜನರ ಅಸಹಾಯಕತೆಯ ದುರ್ಲಾಭ ಪಡೆಯುವ ಡಕಾಯಿತರ ಮನೋಭಾವದಂತಲ್ಲವೇ..?
ನೆನಪಿಡಿ ! ದರೋಡೆ ಡಕಾಯಿತಿ ಭ್ರಷ್ಟಾಚಾರ ಕಳ್ಳತನ ಎಂದರೆ ಅದು ಗೌಪ್ಯವಾಗಿ ಕರಾಳದಲ್ಲಿ ಕೆಟ್ಟವರೇ ಮಾಡಬೇಕೆಂದೇನಿಲ್ಲ. ಒಳ್ಳೆಯ ಮುಖವಾಡದ ಸೋಗಿನವರೂ ರಾಜಾರೋಷವಾಗಿ ಮಾಡುತ್ತಾರೆ. ಆದರೆ ಯಾಮಾರಿಸುವ ರೀತಿ ಸ್ವಲ್ಪ ಡಿಫ಼ರೆಂಟು ಅಷ್ಟೇ. !
ರಿಯಾಲಿಟಿ ಅಂದ್ರೆ, ನಮ್ಮ ಜನ ಕೂಡಾ, ದುಡಿಮೆ-ದುಡ್ಡು ಹೆಚ್ಚಾಗಿರುವುದರಿಂದಲೋ ಏನೋ, ಈ ರೀತಿಯ ಸನ್ನಿವೇಶಗಳಿಗೆಲ್ಲಾ ಕೊನೇಪಕ್ಷ ಒಂದು ಸಣ್ಣ ಪ್ರತಿಭಟನೆಯೂ ಇಲ್ಲದಂತೆ ಮೂಕರಾಗಿಯೇ ಸ್ಪಂದಿಸುತ್ತಲೇ ಬಂದಿದ್ದಾರೆ….!!
ಯಾರಿಗೆ ಹೇಳೋದು….ಏನನ್ನು ಕೇಳೋದು..??

ಹಿರಿಯೂರು ಪ್ರಕಾಶ್.








