ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಬಳಕೆಗೆ ಕೇಂದ್ರ ಸರ್ಕಾರ ನಿಯಂತ್ರಣ ವಿಧಿಸಿರುವ ಹಿನ್ನೆಲೆ, ಹಾಲು ಹಾಗೂ ನಂದಿನಿ ಉತ್ಪನ್ನಗಳ ಬೆಲೆ ಹೆಚ್ಚಳ ಸಾಧ್ಯತೆ ಇದೆ ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ತೈಲ ಸರಬರಾಜಿನಲ್ಲಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಆದರೆ ಅಡುಗೆ ಅನಿಲವನ್ನು ಶೇಕಡಾ 55ರಷ್ಟು ಮಾತ್ರ ಬಳಸುವಂತೆ ನಿರ್ದೇಶನ ನೀಡಲಾಗಿದೆ. ಸಂಪೂರ್ಣ (100%) ಅನಿಲ ಬಳಕೆ ಮಾಡಲು ಶೇಕಡಾ 35ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದರು.
ಈ ರೀತಿಯ ಹೆಚ್ಚುವರಿ ವೆಚ್ಚದಿಂದ ಉತ್ಪಾದನಾ ಖರ್ಚು ಹೆಚ್ಚಾಗುತ್ತಿದ್ದು, ಇದರ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆಯೇ ಬೀಳುತ್ತದೆ. ಇದರ ಪರಿಣಾಮವಾಗಿ ಹಾಲು ಹಾಗೂ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯವಾಗಬಹುದು ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಈ ಸೂಚನೆಗಳಿಂದ ಹಾಲು ಒಕ್ಕೂಟಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಹಾಲು ಉತ್ಪಾದನೆಯಲ್ಲಿ ಅಡುಗೆ ಅನಿಲ ಬಳಕೆಯ ಬಾಯ್ಲರ್ಗಳನ್ನು ಹೆಚ್ಚು ಬಳಸಲಾಗುತ್ತದೆ. ವಿದ್ಯುತ್ ಅಥವಾ ಸೌರ ಶಕ್ತಿಯ ಬಾಯ್ಲರ್ಗಳಿಗೆ ತಕ್ಷಣ ಬದಲಾವಣೆ ಸಾಧ್ಯವಿಲ್ಲ.ಇದನ್ನು ಓದಿ –ಏ. 1ರಿಂದ ಹೊಸ ಆರ್ಥಿಕ ವರ್ಷ: ಹಲವು ಪ್ರಮುಖ ಬದಲಾವಣೆ ಜಾರಿ
ಪರ್ಯಾಯ ಬಾಯ್ಲರ್ ವ್ಯವಸ್ಥೆಗೆ ಬದಲಾವಣೆ ಮಾಡಲು ಟೆಂಡರ್ ಪ್ರಕ್ರಿಯೆ ಸೇರಿದಂತೆ ಹಲವು ಹಂತಗಳು ಬೇಕಾಗಿದ್ದು, ಇದಕ್ಕೆ ಸಮಯ ಹಿಡಿಯಲಿದೆ ಎಂದು ಡಿ.ಕೆ. ಸುರೇಶ್ ವಿವರಿಸಿದರು.








