ದಟ್ಟಾರಣ್ಯದಲ್ಲಿ ರಾತ್ರಿ ವೇಳೆಯಲ್ಲಿ ತಾಯಿಯು ರೌದ್ರರೂಪದಲ್ಲಿ ಸಂಚರಿಸುತ್ತಾ ಇರುತ್ತಾಳೆ. ಅವಳು ನರಭಕ್ಷಕಿಯೂ ಆಗಿದ್ದಾಳೆ. ನೀನು ಹೋಗಬೇಡ ಮಗೂ. ಎಂದು ಗೃಹಿಣಿಯೊಬ್ಬಳು ಎಚ್ಚರಿಕೆ ನೀಡಿದ್ದಾಗ್ಯೂ ಬಾಲಕರಾಗಿದ್ದ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರು ಅವಳನ್ನು ನೋಡುವುದೇ ಸೌಭಾಗ್ಯ, ಅವಳು ನನ್ನನ್ನು ಭಕ್ಷಿಸಿದರೆ ಅದೇ ಮಹಾಪ್ರಸಾದ ಎಂದುಕೊಂಡು ಅರಣ್ಯ ಪ್ರವೇಶಿಸಿಯೇಬಿಡುತ್ತಾರೆ.
ಆಮೇಲೆ ತಾಯಿಯೊಂದಿಗೆ ನಡೆದ ಸಂಭಾಷಣೆ, ತಾಯಿಯು ಶಂಕರಭಗವತ್ಪಾದರಿಗೆ ವರಪ್ರದಾನ ಮಾಡಿದ್ದು ಎಲ್ಲವೂ ತಿಳಿದಿರುವ ಸಂಗತಿಗಳೇ. ಇಲ್ಲಿ ಗಮನಿಸಬೇಕಾದ್ದು, ತಾಯಿ ಭಯಂಕರ ರೂಪದಲ್ಲಿ ಪ್ರತ್ಯಕ್ಷಳಾಗುವಳು ಎಂದಾದರೂ, ದುಷ್ಟರ ದಮನಕ್ಕಾಗಿ ಆ ರೂಪವಷ್ಟೇ. ತನ್ನ ಮಕ್ಕಳನ್ನು, ಸಾತ್ವಿಕರನ್ನು ಏನು ತಾನೇ ಮಾಡಿಯಾಳು? ‘ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ’ ಎಂಬ ಅವರ ದೃಢವಾದ ಆತ್ಮವಿಶ್ವಾಸ, ನಂಬಿಕೆ.
ತಾಯಿ ಅಂಬಿಕೆಯ ಅಂಥದ್ದೇ ಇನ್ನೊಂದು ಭಯಂಕರ ರೂಪ ಕಾಲರಾತ್ರಿ. ‘ಶುಭಂಕರೀ’ ಎಂದೂ ಸಹ ಕರೆಯಲ್ಪಡುವ ಅವಳು ಉಪಾಸಕರಿಗೆ ಶುಭಫಲವನ್ನೇ ನೀಡುವವಳಾಗಿದ್ದಾಳೆ. ಅವರು ಅಗ್ನಿ, ಜಲ, ಶತ್ರು, ಜಂತು, ರಾತ್ರಿಭಯಗಳಿಂದ ಮುಕ್ತರಾಗುವಂತೆ ಅಭಯ ನೀಡುತ್ತಾಳೆ. ಕಾಯಾ, ವಾಚಾ, ಮನಸಾ ಪರಿಶುದ್ಧತೆ ಕಾಪಾಡಿಕೊಂಡು ಅವಳ ಉಪಾಸನೆ (ಸ್ಮರಣೆ, ಪೂಜೆ ಮತ್ತು ಧ್ಯಾನ) ಮಾಡಿದರೆ, ಶುಭಫಲಗಳನ್ನೇ ನೀಡುವ ಶುಭದಾಯಿನಿಯಾಗಿರುವವಳು ಅವಳು.
ಕಾಲರಾತ್ರಿಯು ಆವಿರ್ಭವಿಸಿದ್ದಕ್ಕೆ ಹಲವು ಹಿನ್ನೆಲೆಗಳ ಉಲ್ಲೇಖವಿದೆ. ಸಾವರ್ಣಿಕಾ ಮನ್ವಂತರದ ಮಾರ್ಕಂಡೇಯ ಪುರಾಣದಲ್ಲಿನ ಉಲ್ಲೇಖದನ್ವಯ, ಈ ಹಿಂದೆ ಶುಂಭ-ನಿಶುಂಭರೆಂಬ ದೈತ್ಯರು ಭೂಮಿಯನ್ನು ಆಳುತ್ತಿದ್ದರು. ಅವರ ಆಳ್ವಿಕೆಯಲ್ಲಿ ಅಧರ್ಮ ತಾಂಡವವಾಡುತ್ತಿತ್ತು. ಸಾಲದೆಂಬಂತೆ, ಅವರು ದೇವಲೋಕವನ್ನೂ ಆಕ್ರಮಿಸಿಕೊಂಡು ಇಂದ್ರನ ಸ್ಥಾನವನ್ನೂ ಕಿತ್ತುಕೊಂಡರು. ಅವರ ಹಾಗೂ ಅವರ ಸಹಚರರ ಉಪಟಳ, ದರ್ಪಗಳಿಂದ ಬೇಸತ್ತ ದೇವತೆಗಳೆಲ್ಲರೂ ಇಂದ್ರನನ್ನು ಮುಂದಿಟ್ಟುಕೊಂಡು ಹಿಮಾಲಯಕ್ಕೆ ತೆರಳಿ ತಾಯಿ ಪಾರ್ವತೀದೇವಿಯನ್ನು ಶುಂಭ-ನಿಶುಂಭರ ನಿಗ್ರಹಕ್ಕಾಗಿ ಪ್ರಾರ್ಥಿಸುತ್ತಾರೆ. ಪಾರ್ವತಿಯು, ‘ಚಂಡೀ’ ಎಂಬ ತನ್ನ ಮತ್ತೊಂದು ರೂಪದಲ್ಲಿ ಅವರೊಂದಿಗೆ ಬರುತ್ತಾಳೆ. ಶುಂಭ ನಿಶುಂಭರೂ ತನ್ನ ಭಂಟರಾದ, ಚಂಡಮುಂಡರೆಂಬ ದೈತ್ಯರನ್ನು ಚಂಡಿಯ ಜೊತೆ ಯುದ್ಧ ಮಾಡಲು ಕಳುಹಿಸುತ್ತಾರೆ.
ಸರ್ವಶಕ್ತಿಸ್ವರೂಪಳಾದ ಚಂಡಿಯು ಆ ದೈತ್ಯರೊಂದಿಗೆ ಕಾದಾಡಿ, ಅವರನ್ನು ಸಂಹರಿಸಲೋಸುಗ ತನ್ನ ಭಯಂಕರ ರೂಪದಲ್ಲಿ ಆವಿರ್ಭವಿಸುತ್ತಾಳೆ. ಆ ರೂಪವೇ ‘ಕಾಳಿ’ ಅಥವಾ ‘ಮಹಾಕಾಳಿ’. ಇವಳನ್ನು ‘ಕಾಲರಾತ್ರಿ’ ಎಂದೂ ಹೆಸರಿಸುವುದುಂಟು. ಮಹಾಕಾಳಿಯಾಗಿ ಚಂಡಮುಂಡರನ್ನು ವಧಿಸಿದ ಅಂಬಿಕೆಯು ಚಾಮುಂಡಿಯೆನಿಸಿದಳು.
ಸಂಸ್ಕೃತದಲ್ಲಿ ‘ಲ’ ಮತ್ತು ‘ಳ’ ಕಾರಗಳ ನಡುವೆ ಭೇದವಿಲ್ಲದ ಕಾರಣ, ಕಾಳಿ ಮತ್ತು ಕಾಳ ಪದಗಳನ್ನು ಅದಲುಬದಲಾಗಿ ಬಳಸುವ ವಾಡಿಕೆಯಿದೆ. ಸಂಸ್ಕೃತದ ಒಂದು ಪದಕ್ಕೆ ಹಲವಾರು ಅರ್ಥಗಳುಂಟು. ‘ಕಾಲರಾತ್ರಿ’ ಎಂಬುದು ಕಾಲ ಮತ್ತು ರಾತ್ರಿ ಎಂಬೆರಡು ಪದಗಳಿಂದಾಗಿದ್ದು, ಕಾಲ ಎಂದರೆ ಯಮ, ಸಮಯ ಎಂಬ ಅರ್ಥಗಳೂ ಇವೆ. ಸೂರ್ಯನ ಬೆಳಕಿಲ್ಲದ ವೇಳೆಯೇ ರಾತ್ರಿ. ಕಾಲರಾತ್ರಿಯು ರಾತ್ರಿಯ ಅಂಧಕಾರದಂತೆ ಕಪ್ಪಾದ ಬಣ್ಣದಿಂದ ಕೂಡಿದವಳಾಗಿದ್ದು, ‘ಏಕವೇಣೀ’ ಅಂದರೆ ಕೂದಲನ್ನು ಬಿಟ್ಟುಕೊಂಡಿರುವವಳು ಎಂದು ಭಾವಿಸುತ್ತಾ ಸಾಧಕನು ಉಪಾಸನೆ ಮಾಡಬಹುದಾಗಿದೆ. ಕಬ್ಬಿಣದಿಂದ ಮಾಡಿರುವ ಆಭರಣವನ್ನು ಎಡಪಾದದಲ್ಲಿಯೂ, ಮುಳ್ಳುಗಳಿಂದ ಮಾಡಿದ ಆಭರಣವನ್ನು ಕತ್ತು ಹಾಗೂ ಕೈಗಳಲ್ಲಿ ಧರಿಸಿದ್ದು, ಭಯಂಕರ ರೂಪದಲ್ಲಿದ್ದರೂ ಸಜ್ಜನರಿಗೆ ಅಭಯದಾಯಕಳಾಗಿದ್ದಾಳೆ. ನಾಲ್ಕು ಕೈಗಳನ್ನು ಹೊಂದಿರುವ ಕಾಲರಾತ್ರಿಯು ಎರಡು ಕೈಗಳಲ್ಲಿ ಖಡ್ಗ, ಮುಳ್ಳಿನ ಆಯುಧವನ್ನು ಹಿಡಿದಿದ್ದರೂ, ಮತ್ತೆರಡು ಕೈಗಳಲ್ಲಿ ಅಭಯಮುದ್ರೆ ಮತ್ತು ವರದಮುದ್ರೆಯನ್ನು ಹೊಂದಿ, ಅಭಯಪ್ರದಾಯಕಳೂ ವರಪ್ರದಾಯಕಳೂ ಆಗಿ ಕಂಡುಬರುತ್ತಾಳೆ. ಕತ್ತೆಯ ವಾಹನ ಹೊಂದಿರುವ ತಾಯಿಯು ತ್ರಿನೇತ್ರಿಯಾಗಿದ್ದಾಳೆ.
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ
ವರ್ಧನಾಮೂರ್ಧಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ॥
ದೈತ್ಯ, ದಾನವ, ಭೂತ-ಪ್ರೇತ ಪಿಶಾಚಿಗಳಿಗೆ ಭಯಪ್ರದಳಾಗಿರುವ ದೇವಿಯು, ಗ್ರಹಬಾಧೆಯನ್ನೂ ಕೂಡ ದೂರ ಮಾಡಿ ಸಾಧಕನು ಭಯರಹಿತನಾಗಿರುವಂತೆ ಮಾಡುತ್ತಾಳೆ. ನವರಾತ್ರಿಯ ಏಳನೇ ದಿನದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ಕಾಲರಾತ್ರಿಯು ದುಷ್ಟಭಯಂಕರಿಯಾಗಿದ್ದಾಳೆ. ಶರೀರದಲ್ಲಿ ಇರುವ ಅಸಂಖ್ಯಾತ ಚಕ್ರಗಳಲ್ಲಿ ಸಪ್ತ ಚಕ್ರಗಳು ಪ್ರಮುಖವಾಗಿವೆ. ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ ಹಾಗೂ ಸಹಸ್ರಾರ ಚಕ್ರಗಳೆಂಬ ಸಪ್ತ ಚಕ್ರಗಳ ಪೈಕಿ ಶಿರಸ್ಸಿನಲ್ಲಿ ಕಂಡುಬರುವ ಸಹಸ್ರಾರ ಚಕ್ರದಲ್ಲಿ ಕಾಲರಾತ್ರಿಯು ನೆಲೆಗೊಂಡು, ಸಾಧಕನ ಮನಸ್ಸು ಕೂಡ ಅಲ್ಲಿಯೇ ಸ್ಥಿರವಾಗಿರುವಂತೆ ಮಾಡುತ್ತಾಳೆ. ಕಾಲರಾತ್ರಿ ರೂಪದಲ್ಲಿ ತಾಯಿಯನ್ನು ಪ್ರಾರ್ಥಿಸುವುದರಿಂದ ಪುಣ್ಯ ಪ್ರಾಪ್ತಿಯಾಗಿ, ಬ್ರಹ್ಮಾಂಡದಲ್ಲಿರುವ ಎಲ್ಲಾ ಸಿದ್ಧಿಗಳೂ ಸಾಧಕನ ವಶವಾಗಿ, ಸಾಕ್ಷಾತ್ಕಾರ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.

ರಶ್ಮಿ ಮಂಜುನಾಥ್ ಜೋಯಿಸ್








