ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜ್ಯದಲ್ಲಿ ಜನೌಷಧಿ ಯೋಜನೆ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ರಾಜ್ಯದಾದ್ಯಂತ ಒಟ್ಟು 1,400 ಜನೌಷಧಿ ಕೇಂದ್ರಗಳಿದ್ದು, ಅವುಗಳಲ್ಲಿ 180 ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಈ ಕೇಂದ್ರಗಳಲ್ಲಿ ಔಷಧ ಮಾರಾಟ ನಡೆಯುವುದು ಸರಿಯಲ್ಲ, ಏಕೆಂದರೆ ಸರ್ಕಾರವೇ ಉಚಿತವಾಗಿ ಔಷಧಿ ನೀಡುತ್ತಿದೆ. ಹೀಗಾಗಿ, ಆಸ್ಪತ್ರೆಯೊಳಗಿನ ಔಷಧ ಮಾರಾಟ ಕೇಂದ್ರಗಳು ಅಗತ್ಯವಿಲ್ಲ ಎಂಬ ದೃಷ್ಟಿಯಿಂದ ಈ ಚಿಂತನೆ ನಡೆದಿದೆ” ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳನ್ನು ರಾಜಕೀಯ ವಿಷಯವನ್ನಾಗಿ ಮಾಡುವುದು ಸರಿಯಲ್ಲ ಎಂದು ಬಿಜೆಪಿಯನ್ನು ಟೀಕಿಸಿದ ಸಚಿವರು, ಇನ್ನೂ 1,220 ಜನೌಷಧಿ ಕೇಂದ್ರಗಳಿವೆ, ಅವು ಹಂದಯವಾಗಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಈಗಿರುವ ಕೇಂದ್ರಗಳ ಒಪ್ಪಂದಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ ಎಂದರು.
ಅಲ್ಲದೇ, ಹಲವು ಕೇಂದ್ರಗಳು ನವೀಕರಣವಿಲ್ಲದ ಒಪ್ಪಂದದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ, ಇತ್ತೀಚೆಗಷ್ಟೆ ಪ್ರಾರಂಭವಾಗಿರುವ ಕೆಲವು ಕೇಂದ್ರಗಳಲ್ಲಿ ವ್ಯಾಪಾರಿಗಳು ಹೆಚ್ಚಿನ ಬಂಡವಾಳ ಹೂಡಿರುವ ಕಾರಣ, ತಾತ್ಕಾಲಿಕವಾಗಿ ಯಾವುದೇ ತೊಂದರೆ ನೀಡದಿರಲು ನಿರ್ಧರಿಸಲಾಗಿದೆ. ಒಪ್ಪಂದ ಮುಗಿದ ಬಳಿಕ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬ್ರಾಂಡೆಡ್ ಔಷಧಿಗಳ ಮಾರಾಟ ಕುರಿತು ಎಚ್ಚರಿಕೆ:
“ಜನೌಷಧಿ ಕೇಂದ್ರಗಳಲ್ಲಿ ಕೇವಲ ಜನರಿಕ್ ಔಷಧಿಗಳನ್ನೇ ಮಾರಾಟ ಮಾಡಬೇಕು, ಆದರೆ ಕೆಲವು ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧಿಗಳ ಮಾರಾಟ ನಡೆಯುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಮಂಡಳಿ ಪರಿಶೀಲನೆ ಆರಂಭಿಸಿದೆ” ಎಂದಿದ್ದಾರೆ.ಇದನ್ನು ಓದಿ –ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳ ಪ್ರಾರಂಭ
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಿಲ್ಲ:
“ಸಾರ್ವಜನಿಕರಿಗೆ ಉಚಿತ ಔಷಧಿ ಸರಬರಾಜು ಸುಲಭವಾಗಿರುವುದು ಸರ್ಕಾರದ ಗುರಿಯಾಗಿದೆ. ಅಲ್ಪ ಬೇಡಿಕೆ ಇರುವ ಔಷಧಿಗಳನ್ನು BPPI ಮೂಲಕ ಖರೀದಿಸಲು ಜಿಲ್ಲೆಯ ಆರೋಗ್ಯಾಧಿಕಾರಿಗೆ ಅವಕಾಶ ನೀಡಲಾಗಿದೆ. ಆರ್ಥಿಕ ನೆರವು ಕೂಡ ಲಭ್ಯವಿದೆ. ವೈದ್ಯರು ಚೀಟಿ ಬರೆದು ಹೊರಗಿನಿಂದ ಔಷಧ ತರುವ ಪದ್ಧತಿ ನಿಲ್ಲಬೇಕು” ಎಂದು ಸಚಿವರು ಹೇಳಿದರು.