- ವಿಪಕ್ಷಗಳ ತೀವ್ರ ವಿರೋಧ
ಬೆಳಗಾವಿ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ್ದ ಮಸೂದೆಯನ್ನು ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೇ ಅಂಗೀಕರಿಸಲಾಗಿದೆ.
ವಿಪಕ್ಷ ಸದಸ್ಯರು ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಮಸೂದೆ ಪ್ರತಿಗಳನ್ನು ಹರಿದು ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಸರ್ಕಾರದ ನಿರ್ಧಾರಕ್ಕೆ ವಿರೋಧ ಸೂಚಿಸಿದರು. ಆದರೆ ಗದ್ದಲ ಮತ್ತು ಗೊಂದಲದ ನಡುವೆಯೇ ಸರ್ಕಾರ ಮಸೂದೆಯನ್ನು ಪಾಸ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಸದನದಲ್ಲಿ ಈ ವೇಳೆ ಬಿಜೆಪಿ ಸದಸ್ಯರು ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕರಾವಳಿಯಲ್ಲಿ ಬೆಂಕಿ ಹಚ್ಚಿ ಇಲ್ಲೂ ಬೆಂಕಿ ಹಚ್ಚುತ್ತಿದ್ದಾರೆ ಎಂಬ ಬೈರತಿ ಸುರೇಶ್ ಹೇಳಿಕೆ ಕೋಲಾಹಲಕ್ಕೆ ಕಾರಣವಾಯಿತು. ಇದರಿಂದ ಕರಾವಳಿ ಭಾಗದ ಶಾಸಕರು ಆಕ್ರೋಶಗೊಂಡು ಏಕಾಏಕಿ ಸದನದ ಬಾವಿಗಿಳಿದರು.
ಈ ಬೆಳವಣಿಗೆಯಿಂದ ಸದನದಲ್ಲಿ ಗೊಂದಲ ಮತ್ತಷ್ಟು ಹೆಚ್ಚಾಯಿತು. ಕೊನೆಗೆ ಗದ್ದಲದ ನಡುವೆಯೇ ಸರ್ಕಾರ ಮಸೂದೆಯನ್ನು ಅಂಗೀಕರಿಸಿತು. ಈ ಸಂದರ್ಭದಲ್ಲಿ ಅಶೋಕ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಮಸೂದೆ ಪ್ರತಿಗಳನ್ನು ಹರಿದು ಹಾಕಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ದ್ವೇಷ ಭಾಷಣಕ್ಕೆ ಗರಿಷ್ಠ 7 ವರ್ಷ ಜೈಲು: ಪರಮೇಶ್ವರ್
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯಡಿ ಮೊದಲ ಬಾರಿ ತಪ್ಪು ಮಾಡಿದರೆ 1ರಿಂದ 7 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ, ಪುನರಾವರ್ತನೆಯಾದರೆ 2ರಿಂದ 7 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಈ ಹಿಂದೆ ಇದ್ದ 10 ವರ್ಷ ಜೈಲು ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಹಳೆಯ ಪುಸ್ತಕಗಳಲ್ಲಿ ದ್ವೇಷ ಅಂಶಗಳಿದ್ದರೂ ಈ ಕಾನೂನಿನಡಿ ಕ್ರಮ ಹಾಗೂ ನಿಷೇಧ ಸಾಧ್ಯ ಎಂದರು. ವಿಪಕ್ಷ ನಾಯಕ ಆರ್. ಅಶೋಕ್, ಈ ಮಸೂದೆಯನ್ನು ರಾಜಕೀಯ ದ್ವೇಷಕ್ಕೆ ದುರುಪಯೋಗ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಇದನ್ನು ಓದಿ –ರಾಮನಗರ: 19 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಮಸೂದೆಯ ಪ್ರಮುಖ ಅಂಶಗಳು:
- ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳಿಗೆ ಕಾನೂನು ಕ್ರಮ
- ದ್ವೇಷ ಭಾಷಣ ಪ್ರಕರಣಗಳು ಜಾಮೀನು ರಹಿತ
- ಮೊದಲ ತಪ್ಪಿಗೆ 1–7 ವರ್ಷ ಜೈಲು ಹಾಗೂ ₹50 ಸಾವಿರ ದಂಡ
- ಪುನರಾವರ್ತಿತ ತಪ್ಪಿಗೆ 2–7 ವರ್ಷ ಜೈಲು ಹಾಗೂ ₹1 ಲಕ್ಷ ದಂಡ
- ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆ
- ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಡಿವೈಎಸ್ಪಿ ಹಂತದ ಅಧಿಕಾರಿ ತನಿಖೆಗೆ ಅಧಿಕಾರ
- ನೋಂದಾಯಿತ–ನೋಂದಾಯಿತವಲ್ಲದ ಸಂಘ ಸಂಸ್ಥೆಗಳಿಗೂ ಹೊಣೆಗಾರಿಕೆ
- ದ್ವೇಷ ಭಾಷಣ ವಿಷಯಗಳನ್ನು ಬ್ಲಾಕ್ ಅಥವಾ ತೆಗೆದುಹಾಕುವ ಅಧಿಕಾರ








