ಮೈಸೂರು: ಕಾವೇರಿ ಕಣಿವೆಯಲ್ಲಿ ಮುಂಗಾರಿನ ಮಳೆ ಸಂತಸ ತಂದಿದ್ದು, ಕೇವಲ ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಜಲಾಶಯದಲ್ಲಿ ಈಗಾಗಲೇ 2,280 ಅಡಿ ಮಟ್ಟದ ನೀರು ಸಂಗ್ರಹವಾಗಿದೆ, ಈ ಜಲಾಶಯದ ಸಂಪೂರ್ಣ ಸಾಮರ್ಥ್ಯ 2,284 ಅಡಿಗಳು.
ಮುಂಜಾಗೃತ ಕ್ರಮವಾಗಿ, ಕಬಿನಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ 8,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕೇರಳದ ವಯನಾಡಿನಲ್ಲಿ ಉತ್ತಮ ಮಳೆಯಿರುವುದರಿಂದ ಒಳಹರಿವು 18,018 ಕ್ಯೂಸೆಕ್ ಆಗಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹಾಸನದಲ್ಲಿ ಹೇಮಾವತಿ ಜಲಾಶಯಕ್ಕೂ ಉತ್ತಮ ಒಳಹರಿವು
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯು ಮುಂದುವರಿದಿದೆ. ಸಕಲೇಶಪುರ, ಆಲೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಹೇಮಾವತಿ ನದಿಗೆ ಉತ್ತಮ ಒಳಹರಿವು ಬಂದಿದೆ. ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ 7,992 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಈ ಜಲಾಶಯದಲ್ಲಿ ಗರಿಷ್ಠ 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದರೆ, ಪ್ರಸ್ತುತ 23.661 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 2905.85 ಅಡಿಯಾಗಿದೆ. ನದಿಗೆ 3,875 ಕ್ಯೂಸೆಕ್ ನೀರು ಹೊರಹರಿಯುತ್ತಿದೆ.ಇದನ್ನು ಓದಿ –ಜೂನ್ 2ರವರೆಗೆ ಭಾರಿ ಮಳೆ
ಈ ಮಳೆ ಜಲಾಶಯಗಳಿಗೆ ಹೊಸ ಜೀವ ನೀಡಿದ್ದು, ಕೃಷಿಗೆ, ನೀರಿನ ಅಗತ್ಯತೆಗಳಿಗೆ ಸಹಕಾರಿಯಾಗಲಿದೆ.