ಹತ್ತೊಂಬತ್ತನೆಯ ಶತಮಾನದಲ್ಲಿ ಪಾಶ್ಚಾತ್ಯದ ಪ್ರಭಾವದಿಂದ ಭಾರತೀಯ ಆಚರಣೆಗಳೆಲ್ಲವೂ ಅರ್ಥಹೀನವೆಂದೇ ಖಂಡಿಸಿ ಆಧ್ಯಾತ್ಮಿಕ ನೆಲೆಯನ್ನೇ ಕಳೆದುಕೊಂಡು ಮುಂದೇನು ಎಂದು ತೋಚದ ಅಂಧಕಾರ ಕವಿದಿದ್ದ ಭಾರತದ ದಿಗಂತದಲ್ಲಿ ಮೂಡಿದ ಆಶಾಕಿರಣದ ಹೊಂಗಿರಣವೇ “ಭಗವಾನ್ ಶ್ರೀರಾಮಕೃಷ್ಣರು ಪರಮಹಂಸರು”.
ಪ್ರಾಚೀನಕಾಲದಿಂದಲೂ ರಾಮ, ಕೃಷ್ಣ, ಬುದ್ಧ, ಶಂಕರರಂತಹ ಅವತಾರಪುರುಷರಿಗೆ ಜನ್ಮನೀಡಿ ಜಗತ್ತಿಗೆ ಮಾರ್ಗದರ್ಶನ ನೀಡಿದ್ದ ಭಾರತದ ಆಧ್ಯಾತ್ಮಿಕ ಚೇತನ ಪುನಃ ಚೇತರಿಸಿಕೊಂಡು ಆತ್ಮವಿಶ್ವಾಸದಿಂದ ತನ್ನ ಎಲ್ಲ ಸಂಕೋಲೆಗಳನ್ನು ಕೊಡವಿಹಾಕಿ ಆತ್ಮಬಲದ ಅಭಯವಾಣಿಯನ್ನು ಸ್ವಾಮಿ ವಿವೇಕಾನಂದರ ಸಿಂಹಗರ್ಜನೆಯ ಮೂಲಕ ಜಗತ್ತಿಗೆ ನೀಡಿ ಕುಗ್ಗಿಹೋಗಿದ್ದ ಭಾರತಮಾತೆ ಮತ್ತೆ ತಲೆಯೆತ್ತಿ ನಿಲ್ಲುವಂತೆ ಮಾಡಿದ ಅವತಾರ ಪುರುಷರು.
ಜನವರಿ1 ಬಂತೆಂದರೆ, ಇಡೀ ಲೋಕವೆಲ್ಲ ಹೊಸವರ್ಷದ ಸಂಭ್ರಮದಲ್ಲಿರುತ್ತದೆ. ಆದರೆ ಜನವರಿ1 ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನಪಿನಲ್ಲಿಡುವ ಪುಣ್ಯದಿನವಾದ ‘ಕಲ್ಪತರು ದಿನ’. ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಗೃಹಸ್ಥ ಭಕ್ತರಿಗೆಲ್ಲ ಅವರು ಕೇಳಿದ್ದನ್ನೆಲ್ಲ ಅನುಗ್ರಹಿಸಿದ ದಿನ. ಅದು ಸಂಭವಿಸಿದ್ದು ತೀರಾ ಅನಿರೀಕ್ಷಿತವಾದರೂ ಈ ದಿನ ಕೇಳಿದ್ದನ್ನೆಲ್ಲ ಕರುಣಿಸುವ ‘ಕಲ್ಪತರು ದಿನ’ವಾಗಿದೆ. ವಾಸ್ತವವಾಗಿ ರಾಮ ಕೃಷ್ಣರ ಜನ್ಮದಿನ ಫೆಬ್ರವರಿಯಲ್ಲೇ ಇದ್ದರೂ ‘ಕಲ್ಪತರು ದಿನ’ವು ರಾಮಕೃಷ್ಣರ ಅವತರಣದಲ್ಲಿ ಘಟಿಸಿದಂತಹ ಸ್ಮರಣೀಯ ಘಟನೆಗಳಲ್ಲಿ ಅತ್ಯoತ ಮಹತ್ವದ್ದೂ ಹಾಗು ಸ್ಮರಣೀಯವಾಗಿದೆ.
ಭಾರತದ ಬೆನ್ನೆಲುಬಾದ ಧರ್ಮವು ಕುಂಟುತ್ತಿದ್ದ ಕಾಲ. ಪರಕೀಯರ ಆಕ್ರಮಣ, ಇಂಗ್ಲೀಷ್ ಶಿಕ್ಷಣ ಪಡೆದ ಯುವಕರಿಂದಾಗಿ, ಅನೇಕ ಭಾರತೀಯರು ತಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಸಂಶಯಾತ್ಮಕ ದೃಷ್ಟಿಯಿಂದ ಕಾಣತೊಡಗಿದ್ದರು. ತಮ್ಮ ಧರ್ಮದಲ್ಲಿ ಶ್ರದ್ಧೆಯನ್ನು ಕಳೆದುಕೊಂಡಿದ್ದರು. ಸತತವಾಗಿ ಪರಕೀಯರ ಆಳ್ವಿಕೆಯಿಂದ ಜರ್ಜರಿತವಾಗಿ, ನಾವು ಭಾರತೀಯರು ಎಂದು ಆತ್ಮವಿಶ್ವಾಸದಿಂದ ಹೇಳಲು ಸಂಕೋಚಪಡುತ್ತಿದ್ದರು. ತಮ್ಮ ಹಿರಿಯರ ಕುರಿತು ಶ್ರದ್ಧಾಹೀನರಾಗಿದ್ದರು. ಅಂತಹ ವಿಷಮ ಪರಿಸ್ಥಿತಿಯಲ್ಲಿ ಅಮೃತ ಕಲಶವೆಂಬಂತೆ ಯುಗಾವತಾರಿ ಭಗವಾನ್ ಶ್ರೀರಾಮಕೃಷ್ಣರ ಅವತರಣವಾಯಿತು.
ಶ್ರೀ ರಾಮಕೃಷ್ಣ ಪರಮಹಂಸರು ಭಾರತೀಯ ಧರ್ಮದ ವಿವಿಧ ಮತಗಳಾದ ಶಾಕ್ಯ, ವೈಷ್ಣವ, ತಂತ್ರ ಮುಂತಾದ ಮತಗಳ ಸಾಧನೆ ಮಾಡಿ ದೇವರ ದರ್ಶನವನ್ನು ಪಡೆದರು. ಶಾಸ್ತ್ರಗಳು ಬರಿಯ ಪುಸ್ತಕಗಳು, ಬೌದ್ಧಿಕ ವಿಚಾರಗಳಲ್ಲದೆ, ಋಷಿಮುನಿಗಳ ಅನುಭವಗಳು, ಅವು ಸತ್ಯ ಎಂದು ನಮಗೆ ಹಾಗೂ ವಿಶ್ವಕ್ಕೆ ಮನಗಾಣಿಸಿದರು. ಧರ್ಮ-ಅಧ್ಯಾತ್ಮಗಳಿಗೆ ತಮ್ಮ ಸಾಧನೆ-ತಪಸ್ಸಿನಿಂದ ನವಚೇತನವನ್ನು ತುಂಬಿದರು. ಅನ್ಯದೇಶದ ಧರ್ಮಗಳ ಸಾಧನೆಯನ್ನು ಮಾಡಿದರು. ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ’ ಅಂಥ ಜ್ಞಾನವನ್ನು ಪಡೆದರು. ಇಷ್ಟೇ ಅಲ್ಲದೇ ಒಂದು ಇಡೀ ಯುಗ ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿ ,ವಿವಿಧ ಕಠೋರ ಸಾಧನೆಗಳನ್ನು ಮಾಡಿ, ತಪಸ್ಸಿನ ಫಲವನ್ನು, ತಾವು ಕಂಡ ಸತ್ಯವನ್ನು ಆಧ್ಯಾತ್ಮಿಕ ಪಿಪಾಸುಗಳಿಗೆ ಉಣಬಡಿಸಿ ಭಕ್ತಿ ಶ್ರದ್ಧೆ, ವ್ಯಾಕುಲತೆ ಇದ್ದರೆ ಎಲ್ಲವನ್ನೂ ಪಡೆಯಬಲ್ಲಿರಿ ಎಂಬುದನ್ನು ಸಾಧಿಸಿ ತೋರಿಸಿದರು.
ಬೆಳಗ್ಗೆ-ರಾತ್ರಿಯೆನ್ನದೆ ಬಂದ ನೂರಾರು ಭಕ್ತರಿಗೆ ಪ್ರತಿನಿತ್ಯ ಮಾರ್ಗದರ್ಶನ ನೀಡಿದವರು ಶ್ರೀ ರಾಮಕೃಷ್ಣ ಪರಮಹಂಸರು. ಮಂತ್ರೋಪದೇಶದ ಅನುಗ್ರಹ ಮಾಡಿದರು, ಭಕ್ತರ ಪಾಪಗಳನ್ನು ಸ್ವೀಕರಿಸಿದರು. ಪ್ರತಿಫಲವಾಗಿ ಅವರಿಗೆ ಗಂಟಲಿನಲ್ಲಿ ನೋವು ಕಾಣಲಾರಂಭಿಸಿತು. ವೈದ್ಯರು ಹೆಚ್ಚು ಮಾತನಾಡದಿರಲು ತಿಳಿಸಿದರು. ಭಕ್ತರು ಅವರ ಕಾಲುಗಳನ್ನು ಮುಟ್ಟಿ ನಮಸ್ಕಾರವನ್ನು ಮಾಡದಿದ್ದರೆ ಒಳಿತು ಎಂದು ವೈದ್ಯರು ನಿರ್ದೇಶನ ನೀಡಿದ್ದರು. ಆದರೆ ಶ್ರೀರಾಮಕೃಷ್ಣರು ʼನನ್ನಿಂದ ಒಬ್ಬ ವ್ಯಕ್ತಿಗೆ ಮುಕ್ತಿ ಸಿಗುವುದಾದರೆ, ಒಳ್ಳೆಯದಾಗುವುದಾದರೆ ಎಷ್ಟು ಜನ್ಮಗಳನ್ನು ಬೇಕಾದರೂ ಎತ್ತಿ ಬರುವೆ’ ಎಂದರು. ವ್ಯಭಿಚಾರಿ, ಕಳ್ಳ, ಬಡವ, ಶ್ರೀಮಂತ, ಕುಡುಕ ಎಂಬ ಭೇದಭಾವ ಮಾಡದೆ ಪ್ರತಿಯೊಬ್ಬ ಜೀವಿಗೂ ಅವರಿಗೆ ಬೇಕಾಗುವ ರೀತಿಯಲ್ಲಿ ನೆರವನ್ನು ನೀಡಿದರು. ಅವರ ಗಂಟಲುನೋವು ದಿನೇದಿನೆ ಹೆಚ್ಚಾಗುತ್ತಾ ಬಂದಿತು. ವೈದ್ಯಕೀಯ ತಪಾಸಣೆಗೆ ಅನುಕೂಲವಾಗಲೆಂದು ದಕ್ಷಿಣೇಶ್ವರದಿಂದ ಕಲ್ಕತ್ತೆಯ ಹೊರವಲಯದ ಕಾಶೀಪುರದಲ್ಲಿದ್ದ ಒಂದು ತೋಟದ ಮನೆಗೆ ಶ್ರೀ ರಾಮಕೃಷ್ಣರನ್ನು ಕರೆತಂದರು. ಭಕ್ತರು ಹಗಲು-ರಾತ್ರಿ ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದರು. ಗಂಟಲು ನೋವಿನಿಂದ ಆಹಾರ ಸೇವಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ಅವರ ಶರೀರವು ಕೃಶಗೊಂಡಿತು. ಅಂತಹ ಅನಾರೋಗ್ಯದ ಸಮಯದಲ್ಲಿ ಒಂದು ಮುಖ್ಯವಾದ ಘಟನೆ ಸಂಭವಿಸಿತು. ಅದು ಶಿಷ್ಯರ ಬಗ್ಗೆ ಶ್ರೀರಾಮಕೃಷ್ಣರಿಗಿದ್ದ ಅಪಾರ ಕರುಣೆಯನ್ನೂ, ಅವರ ವಿಶಿಷ್ಟ ಆಧ್ಯಾತ್ಮಿಕ ಶಕ್ತಿಯನ್ನೂ ತೋರಿಸುತ್ತದೆ. ಅಂದು ೧೮೮೬ರ ಜನವರಿಯ ಮೊದಲನೇ ದಿನ ಶ್ರೀರಾಮಕೃಷ್ಣರು ಆರೋಗ್ಯ ಸುಧಾರಿಸಿದೆ ಎಂದೆನಿಸಿ ತೋಟದಲ್ಲಿ ನಡೆದಾಡಲು ಇಷ್ಟಪಟ್ಟರು. ಆಗ ಅಪರಾಹ್ನ ೩ ಘಂಟೆ ಸಮಯವಾಗಿತ್ತು. ಅಂದು ರಜಾದಿನವಾದ್ದರಿಂದ ಸುಮಾರು ೩೦ ಜನ ಗೃಹಸ್ಥ ಭಕ್ತರು ಅಲ್ಲಿ ಇದ್ದರು. ಕೆಲವರು ಕೆಳಗಿನ ಹಜಾರದಲ್ಲಿ ಹಾಗೂ ಇನ್ನು ಕೆಲವರು ಮರಗಳ ಕೆಳಗೆ ಕುಳಿತಿದ್ದರು. ಶ್ರೀರಾಮಕೃಷ್ಣರು ಕೆಳಗಿಳಿದು ಬಂದಾಗ ಹಜಾರದಲ್ಲಿದ್ದವರಿಗೆ ಅವರು ನಡೆದುಬರುತ್ತಿರುವುದನ್ನು ಕಂಡು ಆನಂದ ಉಂಟಾಯಿತು. ಕಲ್ಕತ್ತೆಯ ಪ್ರಸಿದ್ಧ ನಾಟಕಕಾರ, ಸಾಹಿತಿ ಗಿರೀಶ್ ಚಂದ್ರ ಘೋಷರು ಶ್ರೀರಾಮಕೃಷ್ಣರ ಪರಮ ಭಕ್ತ. ಅವರ ಬಳಿ ಬಂದು ಶ್ರೀರಾಮಕೃಷ್ಣರು, ‘ಏನು ತನ್ನ ಬಗ್ಗೆ ಅವತಾರಪುರುಷ, ದೇವರು ಎಂದು ಹೇಳುತ್ತಿದ್ದೀಯಂತೆ! ತನ್ನಲ್ಲಿ ಅಂತಹದ್ದು ಏನು ಕಂಡೆ,” ಎಂದರು.
ಭಾವ ಜೀವಿಯಾದ ಗಿರೀಶರು ಮಂಡಿಯೂರಿ ಗದ್ಗದಿತನಾಗಿ, ‘ವಾಲ್ಮೀಕಿ, ವ್ಯಾಸ ಮಹರ್ಷಿಗಳಂತಹ ಮಹಾಮಹಿಮರು ತಮ್ಮನ್ನು ರಾಮನಾಗಿ, ಕೃಷ್ಣನಾಗಿ ಅವತರಿಸಿ ಬಂದಾಗ ವರ್ಣಿಸಲು ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಈಗ ಅವರೇ ಶ್ರೀರಾಮಕೃಷ್ಣರಾಗಿ ಬಂದಿದ್ದಾರೆ. ಇನ್ನು ಈ ಪಾಮರ ಏನು ತಾನೇ ಹೇಳಲು ಸಾಧ್ಯ’ ಎಂದು ನಮಸ್ಕರಿಸಿದರಂತೆ. ಅವರ ನಿಷ್ಕಲ್ಮಶ, ಸರಳ ಭಕ್ತಿಯನ್ನು ಕಂಡ ಶ್ರೀರಾಮಕೃಷ್ಣರು ಭಾವಾವಿಷ್ಟರಾದರು, ಭಾವಸಮಾಧಿಗೆ ಹೋದರು. ಆ ಉನ್ನತ ಭಾವದಲ್ಲಿ ಅವರು ಭಕ್ತರನ್ನು ಉದ್ದೇಶಿಸಿ, ‘ನಿಮಗೆ ನಾನಿನ್ನೇನು ತಾನೆ ಹೇಳಲಿ? ನೀವು ಚೈತನ್ಯವಂತರಾಗಿ’ ಎಂದು ಹರಸಿದರು. ಅತ್ಯುನ್ನತ ಆಧ್ಯಾತ್ಮಿಕದ ಭಾವದಲ್ಲಿ ಆಡಿದ ಮಾತುಗಳು ವಿದ್ಯುಚ್ಛಕ್ತಿಯಂತೆ ಎಲ್ಲರ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸಿತು. ಅಲ್ಲೆಲ್ಲ ಒಂದು ದಿವ್ಯ ವಾತಾವರಣ ನಿರ್ಮಾಣವಾಯಿತು. ಗಿರೀಶರು ‘ಜೈ ರಾಮಕೃಷ್ಣ! ಜೈ ರಾಮಕೃಷ್ಣ!’ ಎಂದು ಕೂಗುತ್ತಾ ಶ್ರೀರಾಮಕೃಷ್ಣರಿಗೆ ಸಾಷ್ಟಾಂಗ ಪ್ರಾಣಾಮ ಮಾಡಿದರು. ಆ ಭಕ್ತಿ ಭಾವದಲ್ಲಿ ಶ್ರೀರಾಮಕೃಷ್ಣರ ಕರುಣೆಯು ಮೇರೆ ಮೀರಿ ಎಲ್ಲರ ಮೇಲೂ ಹರಿಯಿತು. ಶ್ರೀರಾಮಕೃಷ್ಣರು ಪ್ರತಿಯೊಬ್ಬರ ತಲೆಯನ್ನು ಸ್ಪರ್ಶಿಸಿ ಹರಸಿದರು. ಆ ಶಕ್ತಿಯುತ ಸ್ಪರ್ಶವು ಅವರ ಮನಸ್ಸುಗಳನ್ನು ಉದ್ದೀಪನಗೊಳಿಸಿತು. ಈ ರೀತಿ ಆಶೀರ್ವಚನ ಪಡೆದ ಭಕ್ತರೆಲ್ಲರೂ ವಿಶಿಷ್ಟವಾದ ಆಧ್ಯಾತ್ಮಿಕ ಅನುಭೂತಿಯನ್ನು ಪಡೆದರು ಆ ಸ್ಪರ್ಶವು ಪ್ರತಿಯೊಂದರ ಮೇಲೂ ವಿದ್ಯುನ್ಮಾನ ಪರಿಣಾಮವನ್ನು ಉಂಟುಮಾಡಿತು. ಕೆಲವರು ನಗತೊಡಗಿದರು. ಕೆಲವರು ಅಳಲು ಪ್ರಾರಂಭಿಸಿದರು; ಕೆಲವರು ಧ್ಯಾನದಲ್ಲಿ ಕುಳಿತುಕೊಂಡರು. ಭಾವೋದ್ವೇಗಕ್ಕೆ ಒಳಗಾದ ಭಕ್ತರು ಶ್ರೀರಾಮಕೃಷ್ಣರ ಸ್ಪರ್ಶದಿಂದ ತಮಗಾದ ಅನುಭವಗಳನ್ನು ತಕ್ಷಣ ಇತರರೊಂದಿಗೆ ಹಂಚಿಕೊಂಡರು. ಕೆಲವರು ಅವರು ಅಗಾಧವಾದ ಆನಂದವನ್ನು ಅನುಭವಿಸಿದರು, ಕೆಲವರು ದೈವಿಕ ಬೆಳಕನ್ನು ಕಂಡರು, ಕೆಲವರು ತಮ್ಮ ವೈಯಕ್ತಿಕ ದೇವರ ದರ್ಶನವನ್ನು ಪಡೆದರು. ಈ ಅನುಭವದ ಆನಂದ ವರ್ಣನಾತೀತ ಎಂದು ಎಲ್ಲರಿಗೂ ಅನಿಸಿತು. ಅಂದು ಗುರು ಕೃಪೆಗೆ ಪಾತ್ರನಾಗಿದ್ದ ರಾಮಕುಮಾರೆಂಬ ಭಕ್ತರು ತನ್ನ ಅನುಭವವನ್ನು ಮುಂದೆ ಹೀಗೆ ಹೇಳುತ್ತಾರೆ : ‘ನನಗೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವರ ಮೂರ್ತಿಯ ಯಾವುದಾದರೂ ಒಂದು ಭಾಗ ಮಾತ್ರ ಕಾಣುತ್ತಿತ್ತು. ಧ್ಯಾನ ಮಾಡಲು ತುಂಬಾ ಶ್ರಮಿಸುತ್ತಿದ್ದೆ. ಆದರೆ ಅಂದು ಶ್ರೀರಾಮಕೃಷ್ಣರ ಕೃಪೆ ದೊರೆತ ಮೇಲೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವರ ಮೂರ್ತಿ ಸಂಪೂರ್ಣವಾಗಿ ಕಾಣಲು ಪ್ರಾರಂಭವಾಯಿತು. ಅದು ಚಿನ್ಮಯವಾಗಿ, ಜೀವಂತವಾಗಿರುವ ಅನುಭವವೂ ಉಂಟಾಯಿತು. ಅಂದಿನಿಂದ ಇಂದಿಗೂ ನಾನು ಧ್ಯಾನದ ಸಮಯದಲ್ಲಿ ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದೇನೆ’.
ಕಲಿಯುಗದಲ್ಲಿ 19ನೆಯ ಶತಮಾನದಲ್ಲಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಅವರ ಅವತರಣದಲ್ಲಿ ಕಲ್ಪತರುವಾಗಿ, (ಬೇಡಿದ್ದನ್ನು ಕೊಡುವುದು ಎಂದು) ಭಕ್ತರ ಮನೋಕಾಮನೆಗಳನ್ನು, ಆಧ್ಯಾತ್ಮಿಕ ಜಾಗೃತಿಯನ್ನು ಸಾರ್ವತ್ರಿಕವಾಗಿ ಕರುಣಿಸಿದ ಸುದಿನ, ಅಂದು ತಮ್ಮ ನಿಜಸ್ವರೂಪವನ್ನು ಪ್ರಕಟಿಸಿ ಗುರುಕರುಣೆ, ಪತಿತ ಪಾವನರೆಂದು ತಾರತಮ್ಯ ಮಾಡದೆ ಕಲ್ಪತರುವಿನಂತೆ ಪ್ರತಿಯೊಬ್ಬರಿಗೂ ಪರಮಾನುಗ್ರಹ ನೀಡಿದ ಅಪರೂಪದ ಸಂದರ್ಭವಿದು. ಇದರ ನೆನಪಿಗೆ ಅವರ ಶಿಷ್ಯರಲ್ಲಿ ಒಬ್ಬರಾದ ರಾಮಚಂದ್ರ ದತ್ತ ಮೊದಲಿಗೆ “ಕಲ್ಪತರು ದಿನ”ದ ಆಚರಣೆ ಆರಂಭಿಸಿದರು .ಇಂದು ಅದು ಬೃಹದಾಚರಣೆಯಾಗಿ ಬೆಳೆದಿದೆ. ರಾಮಕೃಷ್ಣರು ತಮ್ಮ ಈ ದಿವ್ಯತ್ವವನ್ನು ತೋರಿದ ಕಾಶೀಪುರದ ಉದ್ಯಾನದಲ್ಲಂತೂ ಈ ದಿವಸ ಬಂತೆಂದರೆ, ಲಕ್ಷಾಂತರ ಜನ ಸೇರುತ್ತಾರೆ. ಜನವರಿಯ ಮೊದಲ ದಿನದಂದು ಮಧ್ಯಾಹ್ನ 3 ರಿಂದ 4 ರವರೆಗೆ ಧ್ಯಾನದ ಅವಧಿಯಲ್ಲಿ ಅಸಾಧಾರಣವಾದ ಶಾಂತಿಯನ್ನು ಅನುಭವಿಸಬಹುದೆಂದು ಶ್ರೀ ರಾಮಕೃಷ್ಣ ಮಠಗಳಲ್ಲಿ ಈ ಮಂಗಳಕರ ಅವಧಿಯಲ್ಲಿ ಶ್ರೀ ರಾಮಕೃಷ್ಣರ ಅನುಯಾಯಿಗಳು ಧ್ಯಾನವನ್ನು ಕೈಗೊಳ್ಳುತ್ತಾರೆ.

ಸೌಮ್ಯಾ ಸನತ್ ✍️



