ಮೈಸೂರು: ಎಸ್.ಎಂ.ಕೃಷ್ಣ ಅವರು ಸಾರ್ವಜನಿಕ ಜೀವನದಲ್ಲಿ ಸೌಜನ್ಯತೆ, ಮಾತಿನ ತೂಕ, ಶಾರೀರಿಕ ಭಾವನೆ ಆದರ್ಶ ರಾಜಕಾರಣಿಯಾಗಿದ್ದಾರೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಬಣ್ಣಿಸಿದರು.
ನಗರದ ಗೋಕುಲಂನಲ್ಲಿ ಆರಂಭಿಸಲಾಗಿರುವ ಎಸ್.ಎಂ.ಕೃಷ್ಣ ಸ್ಮಾರಕ ನ್ಯೂರೋ ಝೋನ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾರ ಹಾಗೂ ನಾಲಿಗೆ ಉದ್ದವಿರಬಾರದು, ದಾರ ಸುತ್ತಿಡಬೇಕು, ನಾಲಿಗೆ ಹಿಡಿತದಲ್ಲಿರಬೇಕು. ನಾಲಿಗೆ ಹರಿಬಿಟ್ಟು ವೃತ್ತಿ, ಸಮಾಜ, ಸಂಸಾರ, ಸಾರ್ವಜನಿಕ ಜೀವನದಲ್ಲಿ ನಾಲಿಗೆಯಿಂದ ತೊಂದರೆಯಾಗುತ್ತದೆ. ನಾಲಿಗೆಯಲ್ಲಿ ಅಮೃತ ಹಾಗೂ ವಿಷವಿದೆ. ಸಜ್ಜನರ ಜತೆ ಮನಸ್ಸು ಬಿಚ್ಚಿ ಮಾತನಾಡಬೇಕು. ದುರ್ಜನರ ಜತೆ ಮೌನವಾಗಿರಬೇಕು. ನಾಲಿಗೆ ಶಿಸ್ತು ಹೇಗಿರಬೇಕೆಂಬುದಕ್ಕೆ ಕೃಷ್ಣ ಅವರು ಉದಾಹರಣೆಯಾಗಿದ್ದಾರೆ ಎಂದರು.
ನಂಬರ್ ಒನ್ ಕಿಲ್ಲರ್: ಹೃದಯಘಾತ ಹಾಗೂ ಬ್ರೈನ್ ಸ್ಟ್ರೋಕ್ ಭಾರತದಲ್ಲಿ ನಂಬರ್ ಒನ್ ಕಿಲ್ಲರ್ ಆಗಿದೆ. ಪ್ರತಿ ವರ್ಷ ದೇಶದಲ್ಲಿ 30 ಲಕ್ಷ ಮಂದಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ಗೆ ತುತ್ತಾಗುತ್ತಿದ್ದು, ಶೇ.30 ಸಾವು ಇದರಿಂದಲ್ಲೇ ಸಂಭವಿಸುತ್ತಿದೆ. ಒತ್ತಡವೇ ಹಲವಾರು ಕಾಯಿಲೆಗಳಿಗೆ ಕಾರಣ. ಜನರಿಗೆ ತಾಳ್ಮೆ ಇಲ್ಲ. ಎಲ್ಲವೂ ಬೇಗ ಬೇಗ ಆಗಬೇಕು. ನಿವೃತ್ತಿ ಅಂಚಿನಲ್ಲಿ ಮನೆ ಕಟ್ಟುವ ಕಾಲ ಹೋಯಿತು. ಪ್ರೊಬೆಷನರಿ ಸಮಯದಲ್ಲೇ ಎಲ್ಲ ಮುಗಿಸಬೇಕಿದ್ದು, ಈ ಒತ್ತಡದಿಂದ ಕಾಯಿಲೆಗಳು ಜಾಸ್ತಿಯಾಗಿವೆ ಎಂದರು.
ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರುತ್ ಮಾತನಾಡಿ, ಇಂದು ನನ್ನ ಪಾಲಿನ ಸುದಿನವಾಗಿದ್ದು, ಸಂಸ್ಥೆ ಆರಂಭಕ್ಕೆ ಪ್ರೇಮಕ್ಕ ಅವರೇ ಕಾರಣ. 2019ರಲ್ಲಿ ಎಸ್.ಎಂ. ಕೃಷ್ಣ ಅವರು ಈ ಸಂಸ್ಥೆಯನ್ನು ಉದ್ಘಾಟಿಸಿದರು. ಎರಡನೇ ಶಾಖೆಯು ಎಲ್ಲ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒಳಗೊಂಡಿದೆ ಎಂದರು.ಇದನ್ನು ಓದಿ –ಅತ್ಯಾಚಾರ ಆರೋಪಿಗಳಿಗೆ ೨೦ ವರ್ಷ ಕಠಿಣ ಶಿಕ್ಷೆ
ಇದಕ್ಕೂ ಮುನ್ನ ಗೋಕುಲಂನಲ್ಲಿ ಆರಂಭಿಸಿರುವ ಎಸ್.ಎಂ.ಕೃಷ್ಣ ಮೆಮೋರಿಯಲ್ ನ್ಯೂರೋ ಝೋನ್ ಎರಡನೇ ಶಾಖೆಯನ್ನು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಧರ್ಮಪತ್ನಿ ಪ್ರೇಮಾ ಕೃಷ್ಣ ಉದ್ಘಾಟಿಸಿದರು. ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್, ಆಸ್ಪತ್ರೆ ಮುಖ್ಯಸ್ಥ ಧನ್ಯಾ ಶುಶ್ರುತ್ ಇತರರಿದ್ದರು.