ಮಹರ್ಷಿ ಪತಂಜಲಿ ಭಾರತದ ಸತ್ವಯುತ ಪರಂಪರೆಯಲ್ಲಿ ಅತ್ಯಂತ ಗೌರವನೀಯ ಋಷಿಗಳಲ್ಲೊಬ್ಬರು. ಅವರು ರಚಿಸಿದ ಯೋಗಸೂತ್ರಗಳು ಎಂಬ ಗ್ರಂಥವು ಯೋಗಶಾಸ್ತ್ರವನ್ನು ವ್ಯವಸ್ಥಿತವಾಗಿ ನಮ್ಮ ಮುಂದಿಡುತ್ತದೆ.
ಇವರು ಸುಮಾರು ಕ್ರಿಸ್ತಪೂರ್ವ 2ನೇ ಶತಮಾನದಲ್ಲಿ ಬದುಕಿದ್ದರೆಂದು ಅಂದಾಜಿಸಲಾಗಿದೆ. ಅವರು ಪಾಣಿನಿಯ ವ್ಯಾಕರಣದ ಮೇಲೆ ಬರೆಯಲಾದ ಮಹಾಭಾಷ್ಯ ಎಂಬ ಮಹತ್ವದ ಟಿಪ್ಪಣಿಗ್ರಂಥದ ಕರ್ತರೂ ಆಗಿದ್ದಾರೆ. ಅವರ ಯೋಗಸೂತ್ರಗಳು ನೈತಿಕ ಜೀವನ, ಮನಸ್ಸಿನ ನಿಯಂತ್ರಣ ಹಾಗೂ ಆತ್ಮದ ಮುಕ್ತಿಗೆ ದಾರಿ ತೋರಿಸುವ ಸೂತ್ರಗಳ ಸಂಕಲನವಾಗಿದೆ. ಯೋಗಪರಂಪರೆಯಲ್ಲಿ, ಪತಂಜಲಿಯನ್ನು ಶೇಷನಾಗನ ಅವತಾರವೆಂದು ಕೂಡ ಪರಿಗಣಿಸಲಾಗುತ್ತದೆ.
ಯೋಗಸೂತ್ರಗಳು
ಪತಂಜಲಿ ಎಂಬ ಹೆಸರು ಭಾರತೀಯ ಇತಿಹಾಸದ ಕನಿಷ್ಠ ಎರಡು ಪ್ರಮುಖ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿದೆ: ಯೋಗ ಮತ್ತು ವ್ಯಾಕರಣ. ಈ ಕೃತಿಗಳನ್ನು ಒಬ್ಬ ವ್ಯಕ್ತಿ ಅಥವಾ ಒಂದೇ ಹೆಸರಿನ ವಿಭಿನ್ನ ವ್ಯಕ್ತಿಗಳು ರಚಿಸಿದ್ದಾರೆಯೇ ಎಂದು ವಿದ್ವಾಂಸರಲ್ಲಿ ಇನ್ನೂ ಚರ್ಚೆಯಿದೆ. ಅವರ ಕೃತಿಗಳ ಸಾರಾಂಶವನ್ನು ಸ್ವಲ್ಪ ವಿವರಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ. “ಯೋಗ ಸೂತ್ರಗಳು” ಮೊದಲೇ ಹೇಳಿದ ಹಾಗೆ, ಯೋಗದ ತತ್ವ ಮತ್ತು ಅಭ್ಯಾಸದ ವ್ಯವಸ್ಥಿತ ಕ್ರೋಡೀಕರಣ. ಇಲ್ಲಿ ೧೯೬ ಸೂತ್ರಗಳನ್ನು ೪ ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಸಮಾಧಿ ಪಾದ – ಇಲ್ಲಿ ಏಕಾಗ್ರತೆ ಮತ್ತು ಧ್ಯಾನಸ್ಥ ಸ್ಥಿತಿಯ ಮೇಲೆ ೫೧ ಶ್ಲೋಕಗಳು; ಎರಡನೆಯದು ಸಾಧನ ಪಾದ – ಅಭ್ಯಾಸದ ಮೇಲೆ (ಪ್ರಸಿದ್ಧ ಅಷ್ಟಾಂಗ ಯೋಗವನ್ನು ಒಳಗೊಂಡಿದೆ) ೫೫ ಶ್ಲೋಕಗಳು; ಮೂರನೆಯದು ವಿಭೂತಿ ಪಾದ – ಯೋಗ ಶಕ್ತಿಗಳ ಮೇಲೆ ೫೬ ಶ್ಲೋಕಗಳು ಹಾಗೂ ಕೊನೆಯದಾಗಿ ಕೈವಲ್ಯ ಪಾದ – ವಿಮೋಚನೆಯ ಮೇಲೆ ೩೪ ಶ್ಲೋಕಗಳನ್ನು ಒಳಗೊಂಡಿದೆ. ಈ ಸೂತ್ರಗಳ ಮೇಲೆ ಸಂಸ್ಕೃತ ವಿದ್ವಾಂಸರಾದ ಭರ್ತೃಹರಿ ಮತ್ತು ರಾಜಭೋಜರು ಭಾಷ್ಯವನ್ನು ಬರೆದಿದ್ದಾರೆ.
ವ್ಯಾಕರಣದ ಮಹಾಭಾಷ್ಯ
ಪತಂಜಲಿ ಮಹರ್ಷಿಗಳ ಇನ್ನೊಂದು ಕೊಡುಗೆ ಪಾಣಿನಿಯ ಅಷ್ಟಾಧ್ಯಾಯಿ (ಸಂಸ್ಕೃತ ವ್ಯಾಕರಣ) ಮತ್ತು ಕಾತ್ಯಾಯನನ ವಾರ್ತಿಕಗಳ ಕುರಿತು ವಿವರವಾದ ವ್ಯಾಖ್ಯಾನ. ಇಲ್ಲಿ ಭಾಷೆಯ ವಾಕ್ಯರಚನೆ, ಶಬ್ದಾರ್ಥ ಮತ್ತು ಭಾಷೆಯ ಆಧಾರಗಳನ್ನು ವಿವರಿಸಲಾಗಿದೆ. ಭಾರತೀಯ ವ್ಯಾಕರಣ ಸಂಪ್ರದಾಯದಲ್ಲಿ ಈ ಗ್ರಂಥವನ್ನು ಆಧಾರ ಪಠ್ಯವೆಂದು ಪರಿಗಣಿಸಲಾಗಿದೆ. ಭಾರತೀಯ ಆರೋಗ್ಯಶಾಸ್ತ್ರವಾದ ಆಯುರ್ವೇದದ ಮೇಲೆ ಕೂಡ ಅವರು ಗ್ರಂಥ ಬರೆದಿದ್ದಾರೆ ಎಂದು ನಂಬಲಾಗಿದ್ದರೂ ಅದು ಲಭ್ಯವಿಲ್ಲ.
ಪುರಾಣದಲ್ಲಿ ಪತಂಜಲಿ
ಕತೆ ಹೇಳುವಿಕೆಯು ಸಂವಹನಕ್ಕಾಗಿ ಅತ್ಯಂತ ಹಳೆಯ ಮತ್ತು ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿದೆ. ಇದು ಸಂಕೀರ್ಣ ವಿಚಾರಗಳು, ಮೌಲ್ಯಗಳು ಮತ್ತು ಭಾವನೆಗಳನ್ನು ನೆನಪಿನಲ್ಲಿಡುವ ರೀತಿಯಲ್ಲಿ ತಿಳಿಸಲು ಸಹಾಯ ಮಾಡುತ್ತದೆ. ಪತಂಜಲಿಯ ಬಗ್ಗೆ ಕೂಡ ಪುರಾಣದಲ್ಲಿ ನಾವು ಕತೆಯನ್ನು ಕಾಣಬಹುದು. ಇದರ ಪ್ರಕಾರ ಪತಂಜಲಿಯು ತಮಿಳುನಾಡಿನ ಚಿದಂಬರಂ ನಲ್ಲಿ ಹುಟ್ಟಿ ಬಂದು, ವ್ಯಾಘ್ರಪಾದನೆಂಬ ಶಿವಭಕ್ತನನ್ನು ಗೆಳೆಯನಾಗಿ ಪಡೆದು, ಅವನ ಸಹಾಯದಿಂದ ಶಿವನ ತಾಂಡವನೃತ್ಯವನ್ನು ನೋಡುವ ಅವಕಾಶ ದೊರೆತಿತು. ವ್ಯಾಘ್ರಪಾದರು ಶಿವನ ಪೂಜೆಗೆ ಕಾಡಿನಲ್ಲಿ ಬರಿಗಾಲಲ್ಲಿ ನಡೆದು, ಮಕರಂದ ಸಮೇತವಿರುವ ಹೂವುಗಳನ್ನು ತರುತ್ತಿದ್ದರು. ಅದರಿಂದ ಅವರ ಪಾದಗಳಿಗೆ ಕಲ್ಲು ಮುಳ್ಳುಗಳು ಒತ್ತಿದ್ದು, ಅದರಿಂದ ಕಷ್ಟವಾಗುತ್ತಿತ್ತು. ಶಿವನು ಅವರಿಗೆ ಹುಲಿಯಂತಹಾ ಬಲಿಷ್ಟ ಕಾಲುಗಳನ್ನು ದಯಪಾಲಿಸಿ, ಕಷ್ಟದಿಂದ ಬಿಡುಗಡೆಗೊಳಿಸಿದನು. ಕೊನೆಗೆ ವ್ಯಾಘ್ರಪಾದರು ಮತ್ತು ಪತಂಜಲಿ, ಇಬ್ಬರೂ ಅಲ್ಲಿಯೇ ಸಮಾಧಿಯಾದರು ಎಂದು ತಿಳಿದುಬರುತ್ತದೆ. ಯೋಗದ ಒಂದು ಆಸನಕ್ಕೆ ವ್ಯಾಘ್ರಪಾದಾಸನ ಎಂದು ಹೆಸರಿದೆ. ಶಿವನ ವರದಿಂದ ವ್ಯಾಘ್ರಪಾದರು ಬಲಿಷ್ಠವಾದ ಪಾದಗಳನ್ನು ಪಡೆದರು ಎಂಬ ಪ್ರತೀತಿ. ಈ ಆಸನವನ್ನು ಮಾಡುವುದರಿಂದ ನಮ್ಮ ಕಾಲುಗಳನ್ನು ಬಲಿಷ್ಠಪಡಿಸಬಹುದು.
ಪತಂಜಲಿ ಮಹರ್ಷಿಯ ಕೊಡುಗೆಗಳ ಪ್ರಸ್ತುತತೆ
ಯೋಗವು ಕೇವಲ ಶಾರೀರಿಕ ವ್ಯಾಯಾಮವಲ್ಲ; ಇದು ದೇಹ, ಮನಸ್ಸು ಮತ್ತು ಆತ್ಮವನ್ನು ಸಂತುಲಿತಗೊಳಿಸುವ ಸಮಗ್ರ ವಿಜ್ಞಾನವಾಗಿದೆ. ಇದರ ಲಾಭಗಳು ಆರೋಗ್ಯ ಸುಧಾರಣೆ, ಮಾನಸಿಕ ಶಾಂತಿ, ಚಿತ್ತಶುದ್ಧಿ ಮತ್ತು ಆತ್ಮದ ಪ್ರಬುದ್ಧತೆಗೆ ಮೀಸಲಾಗಿವೆ. ಪತಂಜಲಿ ಮಹರ್ಷಿಗಳು ತಮ್ಮ ಯೋಗಸೂತ್ರಗಳ ಮೂಲಕ ಈ ಪವಿತ್ರ ಪಥವನ್ನು ಕ್ರಮಬದ್ಧವಾಗಿ ಜಗತ್ತಿಗೆ ನೀಡಿದರು. ಅವರು ನೀಡಿದ ಸೂತ್ರಗಳು ಆಂತರಿಕ ಪರಿವರ್ತನೆಗಾಗಿ ನಿತ್ಯಕ್ಕೂ ಮಾರ್ಗದರ್ಶನವನ್ನು ಒದಗಿಸುತ್ತವೆ. ಇಂದಿನ ಅಶಾಂತಿ ಮತ್ತು ಗದ್ದಲಗಳ ಯುಗದಲ್ಲಿ, ಅವರ ಉಪದೇಶಗಳು ನಿಯಮಶೀಲತೆ, ಮನೋನಿಗ್ರಹ ಮತ್ತು ಜೀವನದ ಗುರಿಯ ಅರಿವನ್ನು ಬೆಳೆಸುತ್ತವೆ. ಪತಂಜಲಿಯ ಮಾರ್ಗವನ್ನು ಅನುಸರಿಸುವುದು ಭಾರತೀಯ ತತ್ತ್ವಜ್ಞಾನದ ಆಳತೆಯನ್ನು ಗುರುತಿಸಿ, ಆತ್ಮಾನ್ವೇಷಣೆಯ ಪಥವನ್ನು ಶೀಘ್ರಗೊಳಿಸುವ ಮಾರ್ಗವಾಗಿದೆ. ಯೋಗವು ಜಗತ್ತಿಗೆ ಭಾರತದ ಮಹೋನ್ನತ ಕೊಡುಗೆ—ಇದು ಸಮಸ್ತ ಮಾನವಕುಲದ ಕಲ್ಯಾಣಕ್ಕಾಗಿ ರೂಪುಗೊಂಡಿದ್ದಾಗಿದೆ. ಅಂತರಾಷ್ಟ್ರೀಯ ಯೋಗ ದಿನವು ಈ ಶಾಶ್ವತ ಜ್ಞಾನಪರಂಪರೆಯ ಜಾಗತಿಕ ಮಾನ್ಯತೆಯನ್ನು ಪ್ರತಿಬಿಂಬಿಸುತ್ತದೆ. ಯೋಗವನ್ನು ಜೀವನದ ಭಾಗವನ್ನಾಗಿ ಮಾಡುವುದು ಪತಂಜಲಿಯ ದೃಷ್ಟಿಯನ್ನು ಗೌರವಿಸುವಂತಾಗಿದ್ದು, ನಮ್ಮ ಭಾರತೀಯತೆಗಾಗಿಯೂ ಹೆಮ್ಮೆಪಡುವಂಥದ್ದು. ನಾವು ಈ ಪರಂಪರೆಯ ಬೆಳಕನ್ನು ನಿಷ್ಠೆಯಿಂದ ಪ್ರಚುರಪಡಿಸೋಣ.

ಸಚಿನ್ ಮುಂಗಿಲ.