ಮಂಡ್ಯ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಕೆಆರ್ಎಸ್ ಅಣೆಕಟ್ಟಿಗೆ ಬರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಭಾನುವಾರಕ್ಕೆ 150 ಕ್ಯುಸೆಕ್ ಮಾತ್ರ ನೀರು ಬಂದಿದ್ದರೆ, ಸೋಮವಾರ ಮಳೆಯ ಪರಿಣಾಮವಾಗಿ 2053 ಕ್ಯುಸೆಕ್ ನೀರು ಅಣೆಕಟ್ಟಿಗೆ ಹರಿದುಬಂದಿದೆ.
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 89 ಅಡಿಗೆ ಇಳಿದಿದ್ದರಿಂದ ಆತಂಕ ಉಂಟಾಗಿತ್ತು. ಮುಂಗಾರು ತಡವಾದರೆ ಕುಡಿಯುವ ನೀರಿಗೆ ತೊಂದರೆ ಆಗಬಹುದೆಂಬ ಭಯವಿತ್ತು. ಆದರೆ ಇದೀಗ ಮಳೆಯ ಆಗಮನದಿಂದ ಒಳಹರಿವು ಉತ್ತಮವಾಗಿದೆ ಮತ್ತು ಆತಂಕವೂ ಕಡಿಮೆಯಾಗಿದೆ.
ಈಗ ಜಲಾಶಯದಲ್ಲಿ ಒಟ್ಟು 15.555 ಟಿಎಂಸಿ ನೀರಿದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆ ಮಾಡಲು ಸಾಧ್ಯವಿಲ್ಲ. ಉಳಿದ 8 ಟಿಎಂಸಿ ನೀರಿನಿಂದ ಬಿತ್ತನೆ ಕಾರ್ಯಗಳಿಗೆ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲಾಗುವುದು.
ಇಂದಿನ ಕೆಆರ್ಎಸ್ ಅಣೆಕಟ್ಟಿನ ಮಾಹಿತಿ:
- ಗರಿಷ್ಠ ನೀರಿನ ಮಟ್ಟ: 124.80 ಅಡಿ
- ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ನೀರಿನ ಮಟ್ಟ: 89.35 ಅಡಿ
- ಒಟ್ಟು ನೀರಿನ ಪ್ರಮಾಣ: 15.555 ಟಿಎಂಸಿ
- ಇಂದಿನ ಒಳಹರಿವು: 2053 ಕ್ಯುಸೆಕ್
ಇದನ್ನು ಓದಿ –ವಿದ್ಯುತ್ ಶಾಕ್ಗೆ 5 ವರ್ಷದ ಬಾಲಕ ಬಲಿ
ಮುಂಗಾರು ಚುರುಕುಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.