ಮೈಸೂರು: ಗುಂಪಿನಿಂದ ಅತ್ಯಾಚಾರ ನಡೆಸಿ ಮಹಿಳೆಯ ಸಾವಿಗೆ ಕಾರಣರಾದ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ರಮೇಶ್ ತೀರ್ಪು ನೀಡಿದ್ದಾರೆ.
ಈ ಪ್ರಕರಣದ 1ನೇ ಆರೋಪಿ ಶಾಂತಿನಗರದ ನಿವಾಸಿ ರಫೀಕ್ ಅಹಮ್ಮದ್(26), ಅಪರಿಚಿತ ಮಹಿಳೆಯನ್ನು ೨೦೨೧ರ ಫೆ.15ರ ರಾತ್ರಿ 9ಗಂಟೆ ನಂತರ ಬಿ.ಎನ್.ಸ್ಪೀಟ್ನ ಸ್ನೇಹ ಮೆನ್ಸವೇರ್ ಮುಂಭಾಗಕ್ಕೆ ಎಲ್ಲಿಂದಲೋ ಕರೆದುಕೊಂಡು ಬಂದು ಆಕೆಯ ಜೊತೆ ಮಾತನಾಡಿಕೊಂಡು ಕುಳಿತಿದ್ದು, ನಂತರ ಅಂಗಡಿ ಮುಂದೆ ಇದ್ದ ಫುಟ್ಪಾತ್ ಮೇಲೆ ಆಕೆ ಜೊತೆ ಗೋಣಿಚೀಲ ಹೊದ್ದುಕೊಂಡು ಮಲಗಿಕೊಂಡು ಲೈಂಗಿಕ ಕ್ರಿಯೆ ಮಾಡಿದ್ದನು.
ಆಕೆ ಸುಸ್ತಾಗಿದ್ದರಿಂದ ಯಾರಾದರೂ ನೋಡಬಹುದೆಂದು ಮಲಗಿದ್ದ ಆ ಮಹಿಳೆಯನ್ನು ಅಲ್ಲಿಂದ ಗೋಣಿಚೀಲ ಸಮೇತ ಎತ್ತಿಕೊಂಡು ಹೋಗಿ ಎದುರುಗಡೆ ಇರುವ ನ್ಯೂ ಶ್ರೀ ಪದಮ್ ಬ್ಯಾಂಗಲ್ ಸ್ಟೋರ್ ಮುಂಭಾಗ ಜಗಲಿಯ ಸ್ವಲ್ಪ ಕತ್ತಲೆ ಇರುವ ಜಾಗದಲ್ಲಿ ಮಲಗಿಸಿ ಮತ್ತೆ ಆ ಮಹಿಳೆ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದನು.
ನಂತರ ಅಲ್ಲಿಗೆ ಬಂದ ಆರೋಪಿ 2 ಮಂಡಿಮೊಹಲ್ಲಾದ ಮಂಜ(25), ಆರೋಪಿ 3 ಲಷ್ಕರ್ ಮನು(23), ಆರೋಪಿ 5 ಕೃಷ್ಣ(40) ಆ ಮಹಿಳೆ ಜೊತೆ ಮಲಗಿ ಲೈಂಗಿಕ ಕ್ರಿಯೆ ನಡೆಸಿದ್ದರು. ಅಲ್ಲೇ ಇದ್ದ ಆರೋಪಿ 4 ರೇವಣ್ಣ ಈತನು ಮೇಲ್ಕಂಡ ಆರೋಪಿ ಸದರಿ ಮಹಿಳೆ ಮೇಲೆ ಗುಂಪಿನಿಂದ ಅತ್ಯಾಚಾರ ನಡೆಸಲು ಸಹಕಾರ ನೀಡಿದ್ದನು. ಆರೋಪಿತರು ಏಕೋದ್ದೇಶದಿಂದ ಅಪರಿಚಿತ ಮಹಿಳೆ ಮೇಲೆ ನಿರಂತರ ಗುಂಪಿನಿಂದ ಲೈಂಗಿಕ ಅತ್ಯಾಚಾರ ಮಾಡಿದ ಪರಿಣಾಮ ಆಕೆಯು ಉಸಿರುಗಟ್ಟಿ ಸಾವನ್ನಪ್ಪಿರುವುದು ಸಾಕ್ಷ್ಯಾಧಾರ, ದಾಖಲೆ, ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟ ಮೇರೆಗೆ ಆರೋಪಿತರ ವಿರುದ್ಧ ಲಷ್ಕರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಇದನ್ನು ಓದಿ –ಡಿಎಪಿಗೆ ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಸಿ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ರಮೇಶ ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿ ಮತ್ತು ದಾಖಲಾತಿಗಳನ್ನು ಪರಿಗಣಿಸಿ ಆರೋಪಿತರು ಅಪರಾಧವೆಸಗಿರುವುದು ರುಜುವಾತಾಗಿರುತ್ತದೆ ಎಂದು ತೀರ್ಮಾನಿಸಿದರು. ಅಲ್ಲದೆ, 5 ಜನ ಆರೋಪಿತರಿಗೆ ಕಲಂ 376(ಎ) ರವಿ 149 ಐಪಿಸಿ ಅಡಿಯ ಅಪರಾಧಕ್ಕೆ 20 ವರ್ಷಗಳ ಕಠಿಣ ಸಜೆ ಮತ್ತು ಕಲಂ 376(ಡಿ), 149 ಐಪಿಸಿ ಅಡಿಯ ಅಪರಾಧಕ್ಕೆ ಆರೋಪಿ 1, 2, 3 ಮತ್ತು 5 ರವರಿಗೆ 20 ವರ್ಷಗಳ ಕಠಿಣ ಸಜೆಯನ್ನು ಮತ್ತು ತಲಾ 5,000 ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಸದರಿ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ಸರ್ಕಾರದ ಪರ ವಾದ ಮಂಡಿಸಿದ್ದರು.