- ಜಾಗತಿಕ ಅನಿಶ್ಚಿತತೆ ಮಧ್ಯೆ ಹಣದುಬ್ಬರ ನಿಯಂತ್ರಣ ಕಾರಣ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಜೂನ್ ತಿಂಗಳ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಪ್ರಮುಖ ಹಣಕಾಸು ತೀರ್ಮಾನ ಕೈಗೊಂಡಿದ್ದು, ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಿ ಶೇ. 5.50ಕ್ಕೆ ತರುವ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದಿನ ಶೇ. 6ರ ರಿಪೋ ದರಕ್ಕೆ ಹೋಲಿಸಿದರೆ, ಇದು ಶೇ. 0.50ರ ಇಳಿಕೆ.
ಈ ಮೂಲಕ ಆರ್ಬಿಐ ಸತತ ಮೂರನೇ ಬಾರಿ ಬಡ್ಡಿದರ ಕಡಿತ ಮಾಡಿರುವುದು ಗಮನಾರ್ಹವಾಗಿದೆ. ಈ ಮೊದಲು ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ತಲಾ 25 ಮೂಲಾಂಕಗಳಷ್ಟು ದರ ಇಳಿಸಲಾಗಿತ್ತು. ಈ ಬಾರಿ ನಿರೀಕ್ಷೆಯಂತೆ ಹೆಚ್ಚು ಪ್ರಮಾಣದಲ್ಲಿ ದರ ಇಳಿಕೆ ಮಾಡಲಾಗಿದೆ.
ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ಈ ತೀರ್ಮಾನವನ್ನು ಪ್ರಕಟಿಸಿದರು. ವರ್ಷ ಆರಂಭದಲ್ಲಿ ಶೇ. 6.50ರಷ್ಟಿದ್ದ ರಿಪೋ ದರ, ಕೇವಲ ಆರು ತಿಂಗಳಲ್ಲಿ ಶೇ. 1ರಷ್ಟು ಕಡಿಮೆಯಾಗಿದೆ. ಈ ಹೊಸ ಬಡ್ಡಿದರವು ತಕ್ಷಣದಿಂದಲೇ ಜಾರಿಗೆ ಬರುತ್ತದೆ.
ಬಡ್ಡಿದರ ಇಳಿಕೆಯು ಯಾಕೆ?
ಗವರ್ನರ್ ಮಲ್ಹೋತ್ರಾ ಅವರು ರಿಪೋ ದರ ಕಡಿತಕ್ಕೆ ಕಾರಣವನ್ನು ವಿವರಿಸುತ್ತಾ, “ಹಣದುಬ್ಬರ ನಿಯಂತ್ರಣದಲ್ಲಿರುವುದು ಈ ತೀರ್ಮಾನಕ್ಕೆ ದಾರಿ ಸಾದಿಸಿದೆ,” ಎಂದು ಹೇಳಿದರು. ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ದೇಶದ ಆರ್ಥಿಕತೆಯನ್ನು ಬೆಂಬಲಿಸಲು ಈ ರೀತಿ ಬಡ್ಡಿದರ ಕಡಿತದಿಂದ ಸಹಾಯವಾಗಲಿದೆ.
ಹಣಕಾಸು ನೀತಿಯ ನಿಲುವಿನಲ್ಲಿ ಬದಲಾವಣೆ
ಆರ್ಬಿಐ ತನ್ನ ಹಣಕಾಸು ನೀತಿಯ ನಿಲುವನ್ನು (Monetary Policy Stance) ಅಕಾಮೊಡೇಟಿವ್ ರಿಂದ ನ್ಯೂಟ್ರಲ್ ಗೆ ಬದಲಾಯಿಸಿದೆ. ಈ ಹಿಂದೆ ಎಂಪಿಸಿ ಸಭೆಯಲ್ಲಿ ನಿಲುವನ್ನು ನ್ಯೂಟ್ರಲ್ನಿಂದ ಅಕಾಮೊಡೇಟಿವ್ಗಾಗಿಸಿದ್ದರು, ಈಗ ಮರುಬದಲಾವಣೆ ಮಾಡಿದ್ದಾರೆ.
ಕ್ಯಾಷ್ ರಿಸರ್ವ್ ರೇಶಿಯೋ (CRR) ಕಡಿತ
ಇನ್ನೊಂದು ಮಹತ್ವದ ತೀರ್ಮಾನವಾಗಿ, ಆರ್ಬಿಐ ಕ್ಯಾಷ್ ರಿಸರ್ವ್ ರೇಶಿಯೋವನ್ನು 100 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಇದರೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ 2.5 ಲಕ್ಷ ಕೋಟಿ ರೂಪಾಯಿಗಳಷ್ಟು ಹಣದ ಹರಿವು ಸಿಗಲಿದೆ. ಇದು ಸಾಲ ವಿತರಣೆಗೆ ಉತ್ತೇಜನ ನೀಡಲಿದೆ.ಇದನ್ನು ಓದಿ –ಕಾಲ್ತುಳಿತ ದುರಂತ: ಆರ್ಸಿಬಿ ಆಯೋಜಕರ ಬಂಧನೆ, ತನಿಖೆ ಚುರುಕು
ಆರ್ಥಿಕತೆ ಮತ್ತು ಹಣದುಬ್ಬರ ಅಂದಾಜು
ಆರ್ಬಿಐ ಈ ವರ್ಷ (2025–26) ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದೆ. ಜೊತೆಗೆ, ಸರಿಯಾದ ಮುಂಗಾರು ಮಳೆಯ ಪೃಷ್ಟಭೂಮಿಯಲ್ಲಿ ಹಣದುಬ್ಬರ ಶೇ. 3.7ರಷ್ಟಿರಬಹುದೆಂದು ಅಂದಾಜಿಸಿದೆ.ಆರ್ಬಿಐ ಈ ಬಾರಿ ಬಡ್ಡಿದರ ಕಡಿತ ಮಾಡುವ ಮೂಲಕ ಸಾಲದ ಖರ್ಚು ಕಡಿಮೆ ಮಾಡುವ ಹೆಜ್ಜೆ ಇಟ್ಟಿದ್ದು, ಆರ್ಥಿಕ ಚಟುವಟಿಕೆಗೆ ಬಲ ನೀಡುವ ನಿರೀಕ್ಷೆಯಿದೆ.