ಸರಸ್ವತಿ ವೀಣೆ ಹಿಡಿದಿರುವುದು ಸಂಗೀತ ಮತ್ತು ಕಲೆಗಳ ಪ್ರತೀಕ. ಅಕ್ಷರ ಮಾಲೆ ತಪಸ್ಸು, ಏಕಾಗ್ರತೆ ಮತ್ತು ಜ್ಞಾನಪ್ರಾಪ್ತಿಯ ಸಂಕೇತ. ಗ್ರಂಥವು ವಿದ್ಯೆ ಮತ್ತು ಶಾಸ್ತ್ರದ ಸೂಚಕ. ಹಂಸವು ಶುದ್ಧತೆ, ವಿವೇಕ ಹಾಗೂ ನಿಜ–ಅನೃತವನ್ನರಿಯುವ ಶಕ್ತಿಯನ್ನು ತೋರಿಸುತ್ತದೆ.
ಅವಳ ಬಿಳಿ ವಸ್ತ್ರವು ಸತ್ಯ, ಜ್ಞಾನ ಮತ್ತು ಪಾವಿತ್ರ್ಯದ ಸಂಕೇತವಾಗಿದೆ .ಹಿಂದೂ ಧರ್ಮದಲ್ಲಿ ಜ್ಞಾನ, ಕಲೆ, ವಾಗ್ವೈಭವ ಮತ್ತು ವಿದ್ಯೆಯ ದೇವತೆ ತಾಯಿ ಸರಸ್ವತಿ ದೇವಿ. ಸರಸ್ವತಿಯನ್ನು ಬ್ರಹ್ಮದೇವರ ಪತ್ನಿಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೇವಲ ಪತ್ನಿಯ ರೂಪಕ್ಕಿಂತಲೂ ಹೆಚ್ಚಾಗಿ, ಅವಳು ಬ್ರಹ್ಮನ “ಶಕ್ತಿ” ಎಂದೇ ಪರಿಗಣನೆಗೆ ಒಳಪಟ್ಟಿದ್ದಾಳೆ. ಜ್ಞಾನವಿಲ್ಲದೆ ಸೃಷ್ಟಿಯೇ ಸಾಧ್ಯವಿಲ್ಲ ಎಂಬ ತತ್ತ್ವವನ್ನು ಪ್ರತಿಬಿಂಬಿಸುವ ಈ ಪರಿಕಲ್ಪನೆ ಅತಿ ಮಹತ್ವದ್ದು.
ಸರಸ್ವತಿಯನ್ನು “ವಿದ್ಯಾದೇವತೆ”,”ವಾಣಿ” “ವಾಗ್ದೇವಿ “, “ವಾದ್ವಾಣಿ”, “ಶಾರದೆ” ಎಂದು ಕರೆದರೂ, ಅವಳು ಭಾರತೀಯ ಸಂಸ್ಕೃತಿಯಲ್ಲಿಯೇ ಜ್ಞಾನಪ್ರತೀಕವಾಗಿ ಸ್ಥಾನ ಪಡೆದಿದ್ದಾಳೆ. ಶ್ವೇತವಸ್ತ್ರಗಳನ್ನು ಧರಿಸಿ, ಬಿಳಿಯ ಹಂಸದ ಮೇಲೆ ಅಥವಾ ಬಿಳಿ ತಾವರೆಯ ಮೇಲೆ ಆಸೀನಳಾದ, ಕೈಯಲ್ಲಿ ವೀಣೆ, ಅಕ್ಷರಮಾಲೆ, ಗ್ರಂಥವನ್ನು ಹಿಡಿದಿರುವ ಸ್ವರೂಪವು ನಮ್ಮೇಲ್ಲರ ಮನದಲ್ಲಿ ಮೂಡುವ ಸಾಮಾನ್ಯ ರೂಪ ಚಿತ್ರ.
ವೇದಗಳಲ್ಲಿ ಸರಸ್ವತಿ ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದ ಋಗ್ವೇದ. ಇಂತಹ ಋಗ್ವೇದದಲ್ಲಿಯೇ ಸರಸ್ವತಿ ಪ್ರಮುಖ ದೇವತೆಯಾಗಿ ಕಾಣಿಸಿಕೊಂಡಿದ್ದಾಳೆ. ಕ್ರಿ.ಪೂ. 3500ರಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಋಗ್ವೇದದಲ್ಲಿ, ಸುಮಾರು ತೊಂಬತ್ತಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತಿಯ ಸ್ತುತಿಗಳಿವೆ ಎಂದು ತಿಳಿದುಬರುವ ವಿಚಾರ. ಆರನೇ ಮಂಡಲದ 61ನೇ ಸೂಕ್ತದ ಎಲ್ಲಾ 14 ಋಕ್ಕುಗಳೂ ಸರಸ್ವತಿಗೆ ಅರ್ಪಿಸಲ್ಪಟ್ಟಿವೆ.
ವೇದಗಳಲ್ಲಿ ಅವಳನ್ನು ನದಿ ದೇವತೆ, ಯಜ್ಞದೇವತೆ, ವಾಗ್ದೇವತೆ, ರಕ್ಷಣಾ ದೇವತೆ, ಶಾಂತಿಯ ದೇವತೆ, ಅನ್ನಪೂರ್ಣೆ, ಭಾಗ್ಯದೇವತೆ, ಆರೋಗ್ಯದೇವತೆ, ಸಹೋದರಿ, ಮಗಳು ಮುಂತಾದ ವಿಭಿನ್ನ ರೂಪಗಳಲ್ಲಿ ಸ್ತುತಿಸಲಾಗಿದೆ.
ಪುರಾಣಗಳಲ್ಲಿ ಸರಸ್ವತಿ ಪುರಾಣಗಳಲ್ಲಿಯ ಸರಸ್ವತಿಯ ಚಿತ್ರಣವು ವೈವಿಧ್ಯಮಯವಾಗಿದೆ. ಕೆಲವು ಪುರಾಣಗಳಲ್ಲಿ ಅವಳನ್ನು ಬ್ರಹ್ಮನ ಪತ್ನಿ, ಮತ್ತಾವುದರಲ್ಲಿ ಬ್ರಹ್ಮನ ಮಗಳು ಎಂದು ಬಣ್ಣಿಸಲಾಗಿದೆ. ಈ ಪರಸ್ಪರ ವಿರುದ್ಧವಾದ ಉಲ್ಲೇಖಗಳು ಸಂಶೋಧಕರಿಗೆ ತಲೆಕೆಡವುವ ವಿಚಾರವಾಗಿದ್ದರೂ, ಜನಪರಂಪರೆಯಲ್ಲಿ ಅವಳನ್ನು ವೇದಮಾತೆ ಎಂದೇ ಗೌರವಿಸಲಾಗಿದೆ.
ಸರಸ್ವತೀ ರಹಸ್ಯೋಪನಿಷತ್ ಎಂಬ ಉಪನಿಷತ್ತೂ ಅವಳ ಮಹತ್ವವನ್ನು ವಿವರಿಸುತ್ತದೆ.
ಹಬ್ಬ – ವಸಂತ ಪಂಚಮಿ ಮತ್ತು ವಿದ್ಯಾರಂಭ
ಸರಸ್ವತಿ ಪೂಜೆಯ ಪ್ರಮುಖ ದಿನವೆಂದರೆ ವಸಂತ ಪಂಚಮಿ. ಈ ದಿನ ವಿದ್ಯಾರ್ಥಿಗಳು, ಕಲಾವಿದರು, ಪಂಡಿತರು ತಮ್ಮ ಪುಸ್ತಕ, ವಾದ್ಯಯಂತ್ರಗಳನ್ನು ದೇವಿಯ ಪಾದದಲ್ಲಿ ಇಟ್ಟು ಪೂಜಿಸುತ್ತಾರೆ. ದಕ್ಷಿಣ ಭಾರತದಲ್ಲಿ ನವರಾತ್ರಿಯ ಕೊನೆಯ ಮೂರು ದಿನಗಳನ್ನು ವಿಶೇಷವಾಗಿ ಸರಸ್ವತಿ ಪೂಜೆಗೆ ಮೀಸಲಾಗಿರುತ್ತದೆ. ಮಕ್ಕಳ ಅಕ್ಷರಾಭ್ಯಾಸ (ವಿದ್ಯಾರಂಭ) ಕೂಡಾ ಇದೇ ಸಂದರ್ಭದಲ್ಲಿ ನಡೆಯುತ್ತದೆ.

ಕಿರಣ ಜೋಶಿ
ಬೆಂಗಳೂರು








