ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಆಗಲು ಸಾಧ್ಯವಿಲ್ಲ, ಅವರ ಮಟ್ಟಕ್ಕೂ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದರು.
ಮಡಿಕೇರಿಯಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಅವರು ನಮ್ಮನ್ನು ಅಗಲಿ ನಾಲ್ಕು ದಶಕಗಳು ಕಳೆದರೂ ಜನರು ಇಂದಿಗೂ ಅವರನ್ನು ದೇವರಂತೆ ಪೂಜ್ಯಭಾವದಿಂದ ಸ್ಮರಿಸುತ್ತಿದ್ದಾರೆ. ಅದು ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ ಅಷ್ಟೇ; ಹೊಸ ದಾಖಲೆ ಬರೆದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ದೇವರಾಜ ಅರಸು ಆಗಲು ಅವರಿಗೆ ಸಾಧ್ಯವಿಲ್ಲ ಎಂದು ಟೀಕಿಸಿದರು.
ದೇವರಾಜ ಅರಸು ಅವರು ರಾಜ್ಯದ ಜನತೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಸಣ್ಣ ಸಮುದಾಯಗಳ ಕೈ ಹಿಡಿದು ಬೆಳೆಸಿದವರು. ‘ಉಳುವವನೇ ಭೂಮಿಯ ಒಡೆಯ’ ಎಂಬ ಧೋರಣೆಯೊಂದಿಗೆ ರೈತಾಪಿ ವರ್ಗಕ್ಕೆ ನ್ಯಾಯ ನೀಡಿದರು. ಬೆಂಗಳೂರಿನ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. ದೇವರಾಜ ಅರಸು ಅವರು ಸಾಮಾನ್ಯ ಹೋಲಿಕೆಗಳಿಗೆ ಮೀರಿದ ವ್ಯಕ್ತಿತ್ವ; ಅವರನ್ನು ಸಿದ್ದರಾಮಯ್ಯ ಅವರೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಇದಲ್ಲದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಕರ್ನಾಟಕ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವವರು. ಎರಡನೇ ಅವಧಿಯಲ್ಲಿ ಮತ್ತಷ್ಟು ಸಾಲ ಮಾಡಿದ್ದಾರೆ. ಇದೇ ನಿಮ್ಮ ಕೊಡುಗೆಯೇ ಎಂದು ಪ್ರಶ್ನಿಸಿದರು. ಅನ್ನಭಾಗ್ಯ ಯೋಜನೆ ನಮ್ಮದು ಎಂದು ಹೇಳಿಕೊಳ್ಳುತ್ತೀರಾದರೂ, ಅದು ಕೇಂದ್ರ ಸರ್ಕಾರದ ಯೋಜನೆ. ರಾಜ್ಯದ ಜನತೆಗೆ ದಿವಾಳಿತನದ ಭಾಗ್ಯ ನೀಡಿದ ಕೊಡುಗೆಯೇ ನಿಮ್ಮದು ಎಂದು ಕಟುವಾಗಿ ಟೀಕಿಸಿದರು.ಇದನ್ನು ಓದಿ –ನಕಲಿ ಸರ್ಕಾರಿ ನೇಮಕಾತಿ ಹಗರಣ: 6 ರಾಜ್ಯಗಳಲ್ಲಿ ಇಡಿ ದಾಳಿ
ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ ರಾಜ್ಯದ ಅಭಿವೃದ್ಧಿ ಬಗ್ಗೆ ಅಗತ್ಯ ಚಿಂತನೆ ನಡೆಸುತ್ತಿಲ್ಲ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.








