ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ ಬಂದಿದೆ. ಇನ್ನು ಮುಂದೆ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪಾಸ್ ಆಗಲು ಕೇವಲ ಶೇ.33 ಅಂಕಗಳೇ ಸಾಕು. ಇದನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹಿಂದಿನಂತೆ ಪಾಸ್ ಆಗಲು ಶೇ.35 ಅಂಕಗಳ ಅವಶ್ಯಕತೆ ಇತ್ತು. ಆದರೆ ಈಗ ವಿದ್ಯಾರ್ಥಿ ಸ್ನೇಹಿ ನೀತಿಯಂತೆ ಸರ್ಕಾರ ಉತ್ತೀರ್ಣ ಅಂಕವನ್ನು ಇಳಿಸುವ ನಿರ್ಧಾರ ಕೈಗೊಂಡಿದೆ. ಇದರಂತೆ, ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳಲ್ಲಿ ಕನಿಷ್ಠ 198 ಅಂಕ ಪಡೆದರೆ ಪಾಸ್ ಆಗುವ ಅವಕಾಶ ಸಿಗಲಿದೆ.
ಕನ್ನಡ ವಿಷಯದ 125 ಅಂಕಗಳನ್ನು 100ಕ್ಕೆ ಇಳಿಸುವ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. “ಈ ವಿಷಯವನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಟ್ಟಿದ್ದೆವು. ಒಟ್ಟು 709 ಪ್ರತಿಕ್ರಿಯೆಗಳಲ್ಲಿ 701 ಜನರು ಉತ್ತೀರ್ಣ ಅಂಕವನ್ನು 33ಕ್ಕೆ ಇಳಿಸಲು ಬೆಂಬಲ ವ್ಯಕ್ತಪಡಿಸಿದರು. ಕೇವಲ 8 ಪ್ರತಿಕ್ರಿಯೆಗಳು ಮಾತ್ರ ಹಳೆಯ ನಿಯಮವಾದ 35 ಅಂಕಗಳ ಪರವಾಗಿದ್ದವು,” ಎಂದು ಅವರು ವಿವರಿಸಿದರು.
ಈ ಹಿನ್ನೆಲೆ, ಮುಂದಿನ ಶೈಕ್ಷಣಿಕ ವರ್ಷದಿಂದ ಉತ್ತೀರ್ಣ ಅಂಕವನ್ನು ಶೇ.33 ಕ್ಕೆ ನಿಗದಿ ಮಾಡುವ ನಿರ್ಧಾರ ಕೈಗೊಂಡಿದ್ದು, ಇದರ ಕುರಿತು ಅಧಿಕೃತ ಅಧಿಸೂಚನೆ ನಾಳೆ ಹೊರಡಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಈ ತೀರ್ಮಾನದಿಂದ ವಿದ್ಯಾರ್ಥಿಗಳ ಮೇಲೆ ಇರುವ ಒತ್ತಡ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.








