ಆದಿಮಾನವ ಬೇಸಾಯ ಶುರು ಮಾಡಿದ ದಿನದಿಂದಲೂ ಬಗೆಬಗೆಯ ಗೆಡ್ಡೆಗೆಣಸು, ತರಾವರಿಯ ಹಣ್ಣು-ತರಕಾರಿ, ವಿವಿದ ಪ್ರಭೇದದ ಗಿಡಗಂಟೆಗಳನ್ನು ಬೆಳೆಯುತ್ತಾ ಅದನ್ನೇ ತನ್ನ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಂಡು ಬಂದಿದ್ದಾನೆ. ಇಂತಹ ವಿವಿಧ ರೀತಿಯ ಗಿಡಗಳಲ್ಲಿ “ಅವರೆಕಾಯಿ ಗಿಡ” ಕೂಡ ಒಂದು ವಿಶಿಷ್ಟ, ವಿಭಿನ್ನ ಮತ್ತು ಅದ್ಬುತವಾದದು.
ಅವರೆ ಬಗ್ಗೆ ಅಮ್ಮ ಹೇಳಿದ ಕತೆಯೊಂದು ಹೀಗಿದೆ. ( ಚಪ್ಪರದವರೇ ಹೌದೋ..ಅಲ್ಲವೋ.. ಗೊತ್ತಿಲ್ಲ. ಪ್ರದೇಶಾವಾರು ಕಥೆ ಬೇರೆ ರೂಪ ಪಡೆದಿರಲಿಕ್ಕು ಸಾಕು) ಪಾಂಡವರು ವನವಾಸಕ್ಕೆ ಹೊರಟು ನಿಂತಾಗ ಪುರಜನರು ಬಹಳ ಶೋಕ ಪಡುತ್ತಾ, ಪಾಂಡವರಿಲ್ಲದೆ ತಾವು ಹೇಗಿರುವುದೆಂದು ಸಂಕಟಪಡುವರು. ಆಗ ಕುಂತಿ ಪುರಜನರಿಗೆ ಅವರೆ ಬೀಜವನ್ನು ಹಂಚಿ ಇದನ್ನು ಬಿತ್ತಿ-ಬೆಳೆಯಿರಿ. ಅವರೆ ಬೀಜ ಇರುವವರೆಗೂ ಪಾಂಡವರು ನಿಮ್ಮ ಜೊತೆ ಇರುತ್ತಾರೆ. ಹಾಗು ಇಳೆಯಲ್ಲಿ ಪಾಂಡವರ
ನೆನಪು ಇರುತ್ತದೆ, ಎಂದು ಸಮಾಧಾನಿಸುವಳಂತೆ. ಹೀಗೆ ಅವರೆಯ ಮಹಿಮೆಗೆ ಸುಧೀರ್ಘ ಇತಿಹಾಸ ಉಂಟು.
ಡಿಸೆಂಬರ್ ಜನವರಿ ತಿಂಗಳು ಶುರುವಾಗುತ್ತಿದ್ದಂತೆ ಗಲ್ಲಿ ಗಲ್ಲಿಯಲ್ಲಿ, ತಳ್ಳೋ ಗಾಡಿಯಲ್ಲಿ, ತರಕಾರಿ ಸಂತೆಗಳಲ್ಲಿ ಕಾಣ ಸಿಗುವ ಸೊಗಡು ಅವರೆಕಾಳಿನದ್ದೆ. ರಸ್ತೆ ಬದಿಯಿಂದ ಹಿಡಿದು ಮನೆ, ಅಡುಗೆಮನೆ ತನಕವೂ ಅವರೆಕಾಳಿನದ್ದೇ ಗಮ. ತಣ್ಣನೆ ಶೀತ ಚಳಿಗೆ ಅವರೆಕಾಯಿ ಮದ್ದು ಎನ್ನುವುದು ಒಂದು ಓಪನ್ ಸೀಕ್ರೆಟ್. ತರಹೇವಾರಿ ತರಕಾರಿಗಳಿದ್ದರೂ ಚಳಿಗಾಲದಲ್ಲಿ ಅವರೆಕಾಳು ಎಲ್ಲರ ಮನೆಯಲ್ಲಿ ಕಾಯಂ ಅತಿಥಿ. ಬೆಂಗಳೂರಿನಲ್ಲಿ ಅವರೆಕಾಯಿಯ ಪರಸೆ ಕೂಡ ಬಲು ಜೋರಾಗಿಯೇ ನಡೆಯುತ್ತದೆ. ಅವರೆಕಾಳಿನ ವಿವಿದ ತಳಿಗಳನ್ನು ನೋಡಬಹುದು.
ಅವರೇಕಾಳಿನಲ್ಲಿ ತರಾವರಿ ತಿಂಡಿ ತಿನಿಸುಗಳನ್ನು ತಯಾರಿಸಬಹುದು. ಇದರ ಪ್ರಾಮುಖ್ಯತೆ ಎಷ್ಟೆಂದರೆ ಈ ಕಾಲದ ಎಲ್ಲ ಅಡುಗೆಯೂ ಅವರೇಮಯ. ಅವರೇ ಕಾಳಿನ ಸಾರು, ಅವರೇ ಕಾಳಿನ ಉಸಲಿ, ಅವರೇ ಕಾಳಿನ ರೊಟ್ಟಿ, ಅವರೇ ಕಾಳಿನ ಉಪ್ಪಿಟ್ಟು, ಅವರೇ ಕಾಳಿನ ಬಸ್ಸಾರು, ಅವರೇ ಕಾಳಿನ ಉಪ್ಪಾರು, ಅವರೇ ಕಾಳಿನ ಪಲ್ಯಅವರೇ ಕಾಳಿನ ತೊವ್ವ ಅವರೇ ಕಾಳಿನ ಬಿಸಿಬೇಳೆ ಬಾತ್,ಅವರೇ ಕಾಳಿನ ಪೊಂಗಲ್, ಅವರೇ ಕಾಳಿನ ಇಡ್ಲಿ, ದೋಸೆಗಳಲ್ಲದೆ, ತರಕಾರಿ ಸಾಂಬರ್, ಪುಲಾವ್, ಸಾಗೂ ಅವರೇ ಮಸಾಲ ಪೂರಿ ಅವರೇ ಪಾನಿಪೂರಿ ಅಬ್ಬಬ್ಬಾ ಒಂದಲ್ಲ ಹಲವಾರು ಹಲವಾರು ಅಡುಗೆಗಳಲ್ಲಿ ಇತರ ತರಕಾರಿಗಳೊಂದಿಗೆ ಬಳಸಲ್ಪಡುವ ಈ ಕಾಳುಗಳು ಭೋಜನ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅವರೇಕಾಯಿ ಕೇವಲ ನಾಲಿಗೆ ರುಚಿಗೆ ಮಾತ್ರ ಇದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನಗಳು ಇಲ್ಲವೆಂದು ತಿಳಿದಿದ್ದರೆ ಅದು ತಪ್ಪಾದೀತು. ಕಾಮಧೇನು, ಕಲ್ಪವೃಕ್ಷಕ್ಕೂ ಸಹ ಹೋಲಿಸಬಹುದಾಗಿದೆ. ಏಕೆಂದರೆ ಇದರ ಸೊಪ್ಪು, ಹೂವು, ಕಾಳುಗಳಷ್ಟೇ ಅಲ್ಲದೆ ಸಿಪ್ಪೆಗಳೂ ಸಹ ವ್ಯರ್ಥವಾಗುವುದಿಲ್ಲ. ಅವರೇಕಾಯಿಯ ಸಿಪ್ಪೆಯು ಜಾನುವಾರುಗಳಿಗೆ ಉತ್ತಮ ಮೇವಾಗಿ ಉಪಯೋಗಿಸಲ್ಪಡುವ ಇದರಲ್ಲಿ ಮಣಿ ಅವರೇ, ತಟ್ಟೆ ಅವರೇ, ಚಪ್ಪರದವರೇ ಹೀಗೆ ನಾನಾ ವಿಧಗಳಿವೆ.
ಅವ್ರೆ ಅವರೇ ಎಂದು ಕರೆಯುವ ಅವರೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ಫಾಸ್ಫರಸ್, ಕ್ಯಾಲ್ಸಿಯಂ ಮತ್ತು ವಿಟಮಿನ್ಗಳಾದ ಎ, ಸಿ, ಮತ್ತು ಕೆ1 ಸಮೃದ್ಧವಾಗಿವೆ ಇದರಲ್ಲಿ ನಾರಿನ ಅಂಶವಿರುವುದರಿಂದ ಪಚನ ಕ್ರಿಯೆಯನ್ನು ಸುಲಭಗೊಳಿಸುತ್ತವೆ. ಅವರೇ ಕಾಳುಗಳು ಬಿ ಮತ್ತು ಸಿ ಅನ್ನಾಂಗಗಳನ್ನು ಒಳಗೊಂಡಿದ್ದು. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಹೃದ್ರೋಗಿಗಳೂ ಕೂಡ ಇದರ ಸವಿಯನ್ನು ಆನಂದಿಸಬಹುದಾಗಿದೆ. ಶ್ವಾಸಕೋಶವನ್ನು ಆರೋಗ್ಯವಾಗಿಡುವಲ್ಲಿ ಮೆದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಗಟ್ಟುವಲ್ಲಿ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಅದಲ್ಲದೆ ಎಲೆಯ ಕಷಾಯದ ಜೊತೆ ಸ್ವಲ್ಪ ನಿಂಬೆ ರಸ ಸೇರಿಸಿ ಕುರು ಅಥವಾ ಗೆಡ್ಡೆ ಇರುವ ಜಾಗಕ್ಕೆ ಹಚ್ಚಿದರೆ ಶೀಘ್ರದಲ್ಲಿ ಗುಣ ಕಾಣಬಹುದು.
ಅವರೆ ಎಲೆಗಳನ್ನು ಜಜ್ಜಿ ಅದರ ವಾಸನೆ ನೋಡಿದರೆ ಸಾಕು ತಲೆ ನೋವು ಕಡಿಮೆಯಾಗುವುದು ಎಂಬ ನಂಬಿಕೆ ಪೂರ್ವ ಆಫ್ರಿಕಾ ದೇಶದವರದ್ದು. ಮಗುವಿನ ಜನನ ಪ್ರಕ್ರಿಯೆ ಸರಾಗ ವಾಗಿ ನಡೆಯಲು ದಕ್ಷಿಣ ಆಫ್ರಿಕಾದ ಜನರು ಅವರೆಕಾಳಿನ ಕಷಾಯ, ಅವರೆ ಹೂವಿನ ಕಷಾಯ ಮಾಡಿ ಕುಡಿಸುತ್ತಾರೆ.
ಹೆಂಗಸರ ತಿಂಗಳ ತೊಂದರೆ ಸರಿ ಮಾಡಲು ಅವರೆ ಹೂವನ್ನು ತಮ್ಮ ನಿತ್ಯ ಅಹಾರದಲ್ಲಿ ಬಳಸಿದರೆ ತಿಂಗಳ ಚಕ್ರ ಸರಿಯಾಗುತ್ತದೆ. ಅವರೆ ಎಲೆ ಮತ್ತು ಹೂವನ್ನು ಜಜ್ಜಿ ಅಕ್ಕಿ ಹಿಟ್ಟು ಮತ್ತು ಅರಿಶಿನದ ಜೊತೆ ಎಕ್ಸಿಮಾ ಆಗಿರುವ ಜಾಗಕ್ಕೆ ಹಚ್ಚದರೆ ಶೀಘ್ರದಲ್ಲಿ ಚೇತರಿಕೆ ಕಂಡು ಬರುತ್ತದೆ. ಅವರೆಕಾಳಿನಿಂದ ಮಾಡಿದ ಯಾವುದೇ ಅಡುಗೆ ಅಥವಾ ತಿಂಡಿ ತಿಂದರೆ ಹೊಟ್ಟೆ ಬೇಗ ತುಂಬುವುದರಿಂದ ಇದು ತೂಕ ಇಳಿಕೆಗೆ ಅನುಕೂಲವಾಗುತ್ತದೆ ಹಾಗೂ ಅವರೇಕಾಯಿ ಚಳಿಗಾಲದಲ್ಲಿ ದೇಹದ ಉಷ್ಣಾಂಶವನ್ನು ಕಾಯ್ದಿಡುವುದರಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಯಾವುದೇ ವಯಸ್ಸಿನ ತಾರತಮ್ಯವಿಲ್ಲದೆ ಚಿಕ್ಕ ಮಕ್ಕಳಿಂದ ಮುದುಕರವರೆಗೂ ಇದನ್ನು ಸವಿಯಬಹುದಾಗಿದೆ.
ಅವರೇಗೂ ಬೆಂಗಳೂರಿಗೂ ಇರುವ ಅವಿನಾಭಾವ ಸಂಬಂಧ
ಒಮ್ಮೆ ಬೆಂಗಳೂರಿನ ನಿರ್ಮಾತ್ಯ ನಾಡಪ್ರಭುಗಳೂ ಆದ ಕೆಂಪೇಗೌಡರು ಕುದುರೆ ಏರಿ ಹೊರಟರು. ಕಾಡಿನಲ್ಲಿ ದಾರಿತಪ್ಪಿ, ಹಸಿವು ಬಾಯಾರಿಕೆಯಿಂದ ಬಳಲುತ್ತಾ ಸಾಗುತ್ತಿದ್ದಾಗ ದೂರದಲ್ಲಿ ಒಂದು ಗುಡಿಸಲು ಕಣ್ಣಿಗೆ ಬಿತ್ತು. ಅದರ ಬಳಿಸಾರಿದ ಪ್ರಭುಗಳು, ಕುದುರೆಯಿಂದಿಳಿದು, ಗುಡಿಸಲಿನ ಬಾಗಿಲಿಗೆ ಬಂದು, ” ಯಾರಿದ್ದೀರಿ ಒಳಗೆ? ನಮಗೆ ಬಹಳ ಹಸಿವಾಗುತ್ತಿದೆ. ತಿನ್ನಲು ಏನಾದರೂ ಇದ್ದಲ್ಲಿ ದಯಮಾಡಿ ನೀಡಿ” ಎಂದು ವಿನಯದಿಂದ ಕೇಳಿಕೊಂಡರು. ಒಳಗೆ ಅಡುಗೆ ಮಾಡುತ್ತಿದ್ದ ಮುದುಕಿಯೊಬ್ಬಳು, ಅಡುಗೆ ಇನ್ನು ಆಗಬೇಕೆಂದೂ, ಸಾರು ಮಾಡಲು ಕಾಳುಗಳನ್ನು ಬೇಯಿಸಿರುವುದಾಗಿಯೂ, ಕೆಲ ಕಾಲ ಕಾದರೆ ಅಡುಗೆ ಸಿದ್ಧವಾಗುವುದೆಂದೂ ತಿಳಿಸಿದಳು. ಪ್ರಭುಗಳಿಗೆ ಹಸಿವು ತಡೆಯದಾಗಿತ್ತು. ಅವರು ಈ ತತ್ತಕ್ಷಣದಲ್ಲಿ ಏನಾದರೂ ನೀಡಬೇಕೆಂದು, ಬಹಳ ಹಸಿವಾಗುತ್ತಿದೆಯೆಂದೂ ಮತ್ತೆ ಹೇಳಿದಾಗ, ಆ ಮುದುಕಿ ಒಂದು ಮಣ್ಣಿನ ಸಾವೆಯ ತುಂಬಾ ಉಪ್ಪು ಹಾಕಿ ಬೇಯಿಸಿದ ಅವರೆಕಾಳುಗಳನ್ನು ತಂದು ಪ್ರಭುಗಳಿಗೆ ನೀಡಿದಳು. ಹಸಿವಿನಿಂದ ಕಂಗೆಟ್ಟಿದ್ದ ಪ್ರಭುಗಳು ಆ ಕಾಳುಗಳನ್ನು ತಿಂದಾಗ ಅದು ಅಮೃತಕ್ಕಿಂತಲೂ ರುಚಿಯೆನಿಸಿತು. ಅಷ್ಟು ಚೆನ್ನಾಗಿ ಬೆಂದ ಕಾಳುಗಳ ಪ್ರದೇಶವನ್ನು ‘ಬೆಂದಕಾಳೂರು’ ಎಂದು ಕರೆದರು. ಈ ಸ್ಥಳವೇ ಮುಂದೆ ಬೆಂಗಳೂರಾಗಿ ಪ್ರಸಿದ್ದಿಯನ್ನು ಪಡೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಬ್ಯಾಂಗಲೋರ್ ಆಗಿದ್ದು, ಪ್ರಸ್ತುತ ‘ಬೆಂಗಳೂರು’ ಎಂದೆನಿಸಿಕೊಂಡಿದೆ. ಒಟ್ಟಿನಲ್ಲಿ ಈ ಅವರೆಕಾಳನ್ನು ರಾಜರಿಂದ ಹಿಡಿದು ಜನ ಸಾಮಾನ್ಯರವರೆಗೂ ಇಷ್ಟಪಡದವರೇ ಇಲ್ಲ ಎಂದರೆ ತಪ್ಪಾಗಲಾರದು.
ಅವರೆಕಾಯಿ ಕೆಲಮಟ್ಟಿಗೆ ವಾಯುವಿನ ಅಂಶವನ್ನು ಒಳಗೊಂಡಿದೆ. ಕೆಲವರ ದೇಹದಲ್ಲಿ ವಾತವನ್ನು ಹೆಚ್ಚಿಸುತ್ತದೆ. ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಂತ ಇದನ್ನು ತಿನ್ನದೆ ಕೆಟ್ಟವರು ಉಂಟೇ! ಇದಕ್ಕೆಂದೇ ಅವರೆಕಾಯಿ ಅಡುಗೆಯನ್ನು ಮಾಡುವಾಗ ಇಂಗು, ಬೆಳ್ಳುಳ್ಳಿ ಹಾಗೂ ಶುಂಠಿಗಳನ್ನು ಖಡಾಖಂಡಿತವಾಗಿ ಬಳಸಲಾಗುತ್ತದೆ. ಈ ಒಂದು ದೋಷದ ಹೊರತಾಗಿ ಉಳಿದೆಲ್ಲಾ ಉತ್ತಮ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಸರ್ವಕಾಲಿಕ, ಸರ್ವಮಾನ್ಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸೌಮ್ಯ ಸನತ್.








