ಕಾಡುಗಳಲ್ಲಿ, ಬೆಟ್ಟಗುಡ್ಡ ಪ್ರದೇಶಗಳಲ್ಲಿ, ಪಾಳು ಭೂಮಿ, ರಸ್ತೆಗಳ ಪಕ್ಕ ಎಲ್ಲೆಂದರಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಯಥೇಚ್ಛವಾಗಿ ಕಾಣ ಸಿಗುವ ಗಿಡವೆಂದರೆ ತಂಗಡಿ. ಈ ಗಿಡವು 3 ರಿಂದ 6 ಅಡಿ ಎತ್ತರವಾಗಿ ಪೊದೆಯಂತೆ ಬೆಳೆದುಕೊಂಡಿರುತ್ತದೆ. ಸುಂದರವಾದ ಹಳದಿ ಹೂವು ಹೊಂದಿರುವ ಈ ಗಿಡವನ್ನು ಆವರ್ತಿಕಿ,ಆವರಿಕೆ, ತಂಗಡಿಗಿಡ, ಹೊನ್ನಂಬರಿ, ತಂಗಡಿಚೆಟ್ಟು, ಆವರಮ್ ಪೂ, ಚರ್ಮರಂಗ, ಮಾಯಹರಿ, ಆವರ್ತಿಕಾ ಎಂಬಾ ಹೆಸರುಗಳಿಂದ ಕರೆಯುತ್ತಾರೆ.
ಅಪಾರ ಔಷಧೀಯ ಗುಣಗಳುಳ್ಳ ಗಣಿ ತಂಗಡಿಯಲ್ಲಿ, ತಂಗಡಿ, ನೆಲತಂಗಡಿ, ಮರತಂಗಡಿ, ಸೀಮೆತಂಗಡಿ, ಕಾಡು ತಂಗಡಿ ಎಂಬ ಹತ್ತಾರು ಪ್ರಭೇದಗಳಿದ್ದುರು, ಅವುಗಳಲ್ಲೂ ಔಷಧೀಯ ಗುಣಗಳಿದ್ದರು, ಔಷಧೀಯವಾಗಿ ಉಪಯೋಗಿಸುವುದು ಈ ಕೆಳಗಿನ ಚಿತ್ರದಲ್ಲಿರುವ ತಂಗಡಿ ಗಿಡವನ್ನೆ. ತಂಗಡಿ ಎಲ್ಲೆಂದರಲ್ಲಿ ಬೆಳೆಯುವ ಗಿಡವೆಂದು ಜನರಲ್ಲಿ ತಾತ್ಸಾರ ಮನೋಭಾವ ಇದ್ದರೂ, ತಂಗಡಿ ಅಪಾರ ಪ್ರಮಾಣದ ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ಅನೇಕ ಔಷಧೀಯ ಗುಣ ಹೊಂದಿರುವ ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತವಾದದ್ದು. ‘ಜೀವಕ್ಕೆ ತಂಪು ಜುಟ್ಟಿಗೆ ಭದ್ರ’ ಎಂದು ಗ್ರಾಮೀಣ ಜನರು ಇದನ್ನು ವ್ಯಾಖ್ಯಾನಿಸುತ್ತಾರೆ.
ತೆಲಾಂಗಣ ಸರ್ಕಾರ ಐದು ವರ್ಷಗಳ ಹಿಂದೆ “ರಾಜ್ಯಪುಷ್ಫ” ಎಂದು ಘೋಷಣೆ ಮಾಡಿದೆ. ತೆಲಾಂಗಣದ ಜನರಲ್ಲಿ ತಂಗಡಿ ಗಿಡ ಎಷ್ಟು ಪವಿತ್ರ ಹಾಗು ಪ್ರಾಮುಖ್ಯತೆ ಪಡಿದಿದೆ ಎಂದರೆ “ಬದುಕಮ್ಮ ಪಂಡುಗ” ಹಬ್ಬವೆ ಸಾಕ್ಷಿ.ಈ ಹೂವುಗಳು ಇಲ್ಲದೆ ಹಬ್ಬವೆ ಇಲ್ಲಾ….!
ಉಪಯೋಗ ಹೇಗೆ :
ಹಳದಿ ಬಣ್ಣದ ಹೂವುಗಳ ದಳಗಳನ್ನು ಬಿಡಿಸಿ ಅವುಗಳನ್ನು ನೀರಿನಲ್ಲಿ ತೊಳೆದು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ 5 ಅಥವಾ 6 ದಳಗಳನ್ನು ಪ್ರತಿ ದಿನ ತಿನ್ನಬೇಕು. ಅಲ್ಲದೇ ಚಿಕ್ಕ ಮಕ್ಕಳಿಗೆ ಕೆಮ್ಮು, ನೆಗಡಿಯಾದರೆ ಹಾಲಿನಲ್ಲಿ ಈ ಹೂವಿನ ದಳವನ್ನು ಹಾಕಿ ಕುಡಿಸಿದರೆ ಮಕ್ಕಳ ಬಹಳ ದಿನಗಳ ಕೆಮ್ಮು ಹಾಗೂ ನೆಗಡಿ ಗುಣಮುಖವಾಗುತ್ತದೆ.
ಈ ಗಿಡದ ಚಕ್ಕೆಯನ್ನು ಅಡಕೆಯ ಬದಲಾಗಿ ಎಲೆಯೊಂದಿಗೆ ತಾಂಬೂಲದ ಜೊತೆಯಲ್ಲಿ ಜಗಿಯಲು ಈ ಹಿಂದೆ ಹಿರಿಯರು ಬಳಸುತ್ತಿದ್ದರು. ಈಗಲು ಕೆಲವರು ಅಡಿಕೆ ಬೇಯಿಸುವ ಸಂದರ್ಭದಲ್ಲಿ ತಂಗಡಿ ಚೆಕ್ಕೆ ಹಾಕಿ ಬೇಯಿಸುತ್ತಾರೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಕೈ, ಕಾಲು, ಕಣ್ಣು ಉರಿಯಲು ಪ್ರಾರಂಭವಾದಾಗ ಬೇಯಿಸಿದ ಹರಳೆಣ್ಣೆ ತಲೆಗೆ ಹಚ್ಚಿ ತಂಗಡಿ ಸೊಪ್ಪನ್ನು ತಲೆಗೆ ಕಟ್ಟಿಕೊಂಡರೆ ಸಾಕು. ದೇಹದ ಉಷ್ಣಾಂಶ ಕಡಿಮೆಯಾಗಿ ಸಮತೋಲನವಾಗುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೆಲವರು ರೂಢಿಸಿಕೊಂಡು ಬಂದಿದ್ದಾರೆ. ಆದರೆ ಅನೇಕರಿಗೆ ತಂಗಡಿ ಗಿಡ, ಹೂವು, ಸೊಪ್ಪು ಹಾಗೂ ಚೆಕ್ಕೆಯ ಮಹತ್ವ ತಿಳಿದಿಲ್ಲ .
ಗ್ರಾಮೀಣ ಭಾಗದಲ್ಲಿನ ರೈತರು, ಎತ್ತುಗಳ ಕೆಳಗೆ ಗೊಬ್ಬರದೊಂದಿಗೆ ತಂಗಡಿ ಗಿಡಗಳನ್ನು ಹಾಕಿ ಮಲಗಲು ಬಿಡುತ್ತಿದ್ದರು. ಇದರಿಂದ ಗಂಜಲ ಎತ್ತುಗಳಿಗೆ ಮೆತ್ತಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದರು. ದನಗಳ ದೇಹದಲ್ಲಿ ಚರ್ಮ ಕಾಯಿಲೆಗಳಿದ್ದರೂ ಈ ಗಿಡದಲ್ಲಿನ ಔಷಧಿಯ ಗುಣಗಳಿಂದಾಗಿ ವಾಸಿಯಾಗುತ್ತಿತ್ತು. ಈ ಗಿಡದ ಎಲೆಗಳ ಎರಡು ಬದಿಯಲ್ಲಿ 10 ಕಿರುಪತ್ರಗಳು ಅಭಿಮುಖವಾಗಿ ಜೋಡಣೆಗೊಂಡಿದ್ದು ಪ್ರತಿ ಶಾಖೆಯ ತುದಿಯಲ್ಲಿ 5 ದಳಗಳಿಂದ ಕೂಡಿದ ಹಳದಿ ಬಣ್ಣದ ಆಕರ್ಷಕ ಹೂವುಗಳು ಗೊಂಚಲುಗಳಲ್ಲಿ ಸಮಾವೇಶಗೊಂಡಿರುತ್ತವೆ. ಸುಮಾರು 7 ರಿಂದ 11 ಸೆಂಟಿಮೀಟರ್ ಉದ್ದದ ಹಸಿರು ಬಣ್ಣದ ನೀಳ,ದ ತೆಳುವಾದ ಕಾಯಿ ಗೊಂಚಲುಗಳಲ್ಲಿ ಕಾಣಸಿಗುತ್ತವೆ.
ತಾಜಾ ತಂಗಡಿ ಹೂವುಗಳನ್ನು ತಂದು, ನುಣ್ಣಗೆ ಅರೆದು, ಅದಕ್ಕೆ 2 ಚಮಚ ಗಟ್ಟಿಯಾದ ಮೊಸರು, ಚಿಟಿಕೆ ಅರಸಿಣ ಸೇರಿಸಿ, ಚೆನ್ನಾಗಿ ಮಿಶ್ರಣಮಾಡಿ, ಮುಖಕ್ಕೆ ಲೇಪನಮಾಡಿ, ಅರ್ಧ ಗಂಟೆ ಬಿಟ್ಟು ಮುಖವನ್ನು ಉಗರು ಬೆಚ್ಚಗಿನ ನೀರಲ್ಲಿ ತೊಳೆದುಕೊಂಡರೆ, ಮೊಡವೆ, ಕಪ್ಪುಕಲೆಗಳು, ಮಚ್ಚೆಗಳು ಮಾಯವಾಗಿ, ಮುಖದ ಚರ್ಮ ಮೃದುವಾಗಿ ಅದ್ಭುತವಾದ ಕಾಂತಿಯಿಂದ ಹೊಳೆಯುತ್ತದೆ.
100ಗ್ರಾಂ ತಂಗಡಿ ಹೂವುಗಳನ್ನು ತಂದು ಶುಭ್ರಗೊಳಿಸಿ, 250ml ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಹಾಕಿ, ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಾದಾಗ, ತಲೆಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಂಡರೆ, ತಲೆಯಲ್ಲಿನ ಹೊಟ್ಟು (dandruff) ನವೆ ಮಾಯವಾಗುತ್ತೆ. ತಲೆಕೂದಲು ಕಪ್ಪುಗೆ ಸೊಂಪಾಗಿ ಬೆಳೆಯುತ್ತೆ.
ದೇಹದಲ್ಲಿ ಮೂಳೆಮುರಿತವಾದಾಗ, ತಂಗಡಿ ಎಲೆಗಳನ್ನು ತಂದು ಅದಕ್ಕೆ ಕೋಳಿಮೊಟ್ಟೆಯ ಬಿಳಿಯಭಾಗ ಸೇರಿಸಿ, ನುಣ್ಣಗೆ ಅರೆದು ಮೂಳೆ ಮುರಿದಕಡೆ ಲೇಪನಮಾಡಿ, ಹತ್ತಿಬಟ್ಟೆಯಿಂದ ಕಟ್ಟುಕಟ್ಟಿದರೆ, ನೋವು, ಊತ ನಿವಾರಣೆಯಾಗಿ ಮುರಿದ ಮೂಳೆ ಬೇಗನೆ ಕೂಡಿಕೊಳ್ಳುತ್ತೆ.
ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಹತ್ತರಿಂದ ಹದಿನೈದು ಹೂವಿನ ದಳಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿದು ತಿನ್ನುತ್ತಾ ಬಂದರೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ (blood sugar) ಕಡಿಮೆಯಾಗುವುದಲ್ಲದೆ, ಹತೋಟಿಯಲ್ಲಿರುತ್ತೆ.ಬಹುಮೂತ್ರ ರೋಗವು ಸಹ ಹತೋಟಿಗೆ ಬರುತ್ತೆ.ಮಲಬದ್ಧತೆ ಸಹ ದೂರವಾಗುತ್ತೆ.
ತಂಗಡಿ ಮೊಗ್ಗು, ಬೀಜ ತೆಗೆದ ಬೆಟ್ಟದ ನೆಲ್ಲಿಕಾಯಿ, ನೇರಳೆ ಬೀಜ, ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ದಿನವು ಬೆಳಿಗ್ಗೆ ಸಂಜೆ ಉಗರು ಬೆಚ್ಚಗಿನ ನೀರಲ್ಲಿ 1 ಚಮಚ ಕಲಸಿ ಕುಡಿಯುತ್ತಿದ್ದರೆ, ಮಧುಮೇಹ ಹತೋಟಿಗೆ ಬರುತ್ತೆ.
ತಂಗಡಿ ಹೂವಿನ ಜೊತೆಗೆ ಬೆಳ್ಳುಳ್ಳಿ ಇಣಕು ಸೇರಿಸಿ ದಿನವು ಜಗಿದು ತಿನ್ನುತ್ತಿದ್ದರೆ ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗಿ, ನಪುಂಷಕತ್ವ ದೂರವಾಗುತ್ತೆ. ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ ಸಾಯುತ್ತವೆ.
10-12 ತಂಗಡಿ ಮೊಗ್ಗುಗಳನ್ನು ಚೆನ್ನಾಗಿ ನುಣ್ಣಗೆ ಅರೆದು, ಅದಕ್ಕೆ ಚಿಟಿಕೆ ಅತಿಮಧುರ ಚೂರ್ಣ ಸೇರಿಸಿ, ನುಣ್ಣಗೆ ಅರೆದು, ಗುಳಿಗೆಗಳನ್ನು ಮಾಡಿ, ನೆರಳಲ್ಲಿ ಒಣಗಿಸಿ, ದಿನವು ಬೆಳಿಗ್ಗೆ ಸಂಜೆ ಒಂದೊಂದು ಮಾತ್ರೆ ನುಂಗಿ, ಅದರ ಮೇಲೆ ಒಂದು ಲೋಟ ಹಸುವಿನ ಹಾಲು ಕುಡಿಯುತ್ತಾ ಬಂದರೇ ಧಾತು ವೃದ್ಧಿಯಾಗಿ ದೇಹಕ್ಕೆ ಅಪಾರ ಶಕ್ತಿಬರುತ್ತೆ.
ಮಕ್ಕಳಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಾಗ, ಮಜ್ಜಿಗೆಯಲ್ಲಿ ಕಾಂಡದ ತೊಗಟೆ ಅಥವಾ ಬೇರಿನ ಗಂಧ ತೇಯ್ದು, ಕಿಬ್ಬೊಟ್ಟೆಯ ಸುತ್ತ ಲೇಪನ ಮಾಡಿದರೆ ಶೀಘ್ರ ಶಮನವಾಗುತ್ತೆ.
ಒಂದು ಪಾತ್ರೆಯಲ್ಲಿ 250ml ನೀರು ಹಾಕಿ, 10-15 ತಂಗಡಿ ಹೂವುಗಳು, ಚಿಟಿಕೆ ಜೀರಿಗೆ ಐದಾರು ಕಾಳುಮೆಣಸು, ಚಿಟಿಕೆ ಉಪ್ಪು ಹಾಕಿ, ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 50ml ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಕೆಮ್ಮು ದಮ್ಮು ಕಫ, ನೆಗಡಿ, ಗಂಟಲು ನೋವು ನಿವಾರಣೆಯಾಗುತ್ತೆ. ಕಷಾಯ ಸೇವನೆಯಿಂದ ದೇಹ ತಂಪಾಗುತ್ತೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತೆ.ಇದು ತುಂಬಾ ಅದ್ಭುತವಾದ ಪಾನೀಯ.
ತಂಗಡಿ ಚಿಗರು ಎಲೆಗಳು ತಂದು, ಅದಕ್ಕೆ ಚಿಟಿಕೆ ಅರಸಿಣ, ಉಪ್ಪು ಸೇರಿಸಿ ನುಣ್ಣಗೆ ಅರೆದು, ಗಾಯ, ಬಾವು, ವ್ರಣದ ಮೇಲೆ ಲೇಪನ ಮಾಡಿದರೆ, ಶೀಘ್ರ ಗುಣವಾಗುತ್ತೆ. ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಹೊಟ್ಟೆಯಲ್ಲಿನ ಜಂತುಹುಳುಗಳು ಸಾಯುತ್ತವೆ. ಮೂತ್ರಕೋಶ ವ್ಯಾಧಿಗಳು, ಮೂತ್ರದಲ್ಲಿನ ಹುರಿ, ನೋವು ವಾಸಿಯಾಗುತ್ತೆ.
ತಂಗಡಿ ಬೀಜ, ನೇರಳೆ ಬೀಜ, ಮೆಂತ್ಯಕಾಳು ಸಮನಾಗಿ ತೆಗೆದುಕೊಂಡು, ನೆರಳಲ್ಲಿ ಒಣಗಿಸಿ ಪುಡಿಮಾಡಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು 1 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಕುಡಿಯುತ್ತಿದ್ದರೆ ಮಧುಮೇಹ ಹತೋಟಿಯಲ್ಲಿರುತ್ತೆ.
ತಂಗಡಿ ಹೂವುಗಳಲ್ಲಿ ರಸವನ್ನು ತೆಗೆದು, 2 ಚಮಚ ರಸಕ್ಕೆ1 ಚಮಚ ಕೆಂಪು ಕಲ್ಲುಸಕ್ಕರೆ ಕಲಸಿ ಸೇವಿಸಿದರೆ, ಉಷ್ಣತೆಯಿಂದ ಕೂಡಿರುವ ದೇಹವನ್ನು ತಂಪಾಗಿಸಿ, ಆಲಸ್ಯ ದೂರಮಾಡುತ್ತೆ.ಅತಿ ಮೂತ್ರ ಸಹ ಹತೋಟಿಗೆ ಬರುತ್ತೆ.
ಜೇನುಹುಳು, ಚೇಳು ಕಚ್ಚಿದ ಕಡೆ ಇದರ ಎಲೆಗಳ ರಸವನ್ನು ಲೇಪಿಸಿದ್ರೆ, ವಿಷ ನಿವಾರಣೆಯಾಗುತ್ತೆ. ಪಾದದಲ್ಲಿ ಬಿರಕು ಬಿಟ್ಟಾಗ, ತಂಗಡಿ ಎಲೆಗಳನ್ನು ಮಜ್ಜಿಗೆಯಲ್ಲಿ ನುಣ್ಣಗೆ ಅರೆದು ಲೇಪನ ಮಾಡಿದರೆ ಬೇಗನೆ ಕೂಡಿಕೊಂಡು ನೋವು ನಿವಾರಣೆಯಾಗುತ್ತೆ.
ಐದಾರು ತಂಗಡಿ ಚಿಗರು ನುಣ್ಣಗೆ ಅರೆದು, ಮೊಸರಲ್ಲಿ ಕಲಸಿ ಬೆಳಿಗ್ಗೆ ಸಂಜೆ ಸೇವಿಸಿದರೆ ಅತಿಸಾರಭೇದಿ ಬೇಗನೆ ಗುಣವಾಗುತ್ತೆ. ತಂಗಡಿ ಹೂವುಗಳನ್ನು ಶೇಖರಿಸಿ ಅದಕ್ಕೆ ಸಕ್ಕರೆ, ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ, ಉರಿಮೂತ್ರ ರೋಗ ನಿವಾರಣೆಯಾಗುತ್ತೆ.

ಸೌಮ್ಯ ಸನತ್.








