ಈ ಲೈಫ಼ು ಅನ್ನೋದೇ ಒಂಥರಾ ವಿಚಿತ್ರ, ವಿಸ್ಮಯ ಹಾಗೂ ವಿಲಕ್ಷಣಗಳ ಬ್ಲೆಂಡು ಕಣ್ರೀ ! ಅದು ತನ್ನೊಡಲೊಳಗೆ ಎಷ್ಟೆಲ್ಲಾ ಅದ್ಭುತಗಳ ಸಿಲಬಸ್ ಗಳನ್ನು ತುಂಬಿಟ್ಟುಕೊಂಡು ನಮಗೆಲ್ಲಾ ಪಾಠ ಕಲಿಸುತ್ತೇ ಅಂದ್ರೆ ಅದು ಕಲಿಸೋ ಕೆಲವೊಂದು ಸೂಕ್ಷ್ಮವಾದ ಪಾಠಗಳು ಬಹಳಷ್ಟು ಸಾರಿ ನಮ್ಮ ಬದುಕನ್ನೇ ಬದಲಿಸಿಬಿಡುತ್ತೆ. ಅಸಲಿಗೆ ಈ ಜೀವನ ಬರೀ ಪಾಠ ಕಲಿಸೋದು ಮಾತ್ರವಲ್ಲ , ಮೊದಲ ಬಾರಿ ಕಲಿಸಿದ ಪಾಠವನ್ನು ನಾವು ನೆಟ್ಟಗೆ ಕಲಿಯಲಿಲ್ಲ ಅಂದ್ರೆ ಮತ್ತೇ ಮತ್ತೇ ಅದನ್ನೇ ಅನೇಕ ಘಟನೆಗಳ ಮೂಲಕ ತಿಳಿ ಹೇಳುತ್ತಲೇ ನಾವು ಕಲಿಯುವವರೆಗೂ ಕಲಿಸುತ್ತಲೇ ಹೋಗುತ್ತೆ.
ಬೇಕಾದರೆ ನೀವೊಮ್ಮೆ ಪರೀಕ್ಷೆ ಮಾಡಿನೋಡಿ ಅಥವಾ ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳಿ. ನೀವು ಎಂದಾದರೂ ಬಿದ್ದು ಗಾಯಮಾಡಿಕೊಂಡಿದ್ದರೆ ಅಥವಾ ನಿಮಗೆ ದೇಹದ ಯಾವುದಾದರೂ ಭಾಗದಲ್ಲಿ ಪೆಟ್ಟು ಬಿದ್ದು ನೋವು ಅನುಭವಿಸುತ್ತಿದ್ದರೆ, ಒಮ್ಮೊಮ್ಮೆ ಮತ್ತೇ ಅದೇ ಜಾಗಕ್ಕೇ ಅಕಸ್ಮಾತ್ ಪೆಟ್ಟು ಬೀಳೋದು ಅಥವಾ ನೋವು ಆಗೋದು ಜಾಸ್ತಿ . ಉದಾಹರಣೆಗೆ ದುರದೃಷ್ಟವಶಾತ್ ಎಡವಿ ಬಿದ್ದೋ, ಅಪಘಾತಕ್ಕೀಡಾಗಿಯೋ ಪೆಟ್ಟು ತಿಂದು ಊತ ಮಾಡಿಕೊಂಡ ಕಾಲು, ಕೈ ಅಥವಾ ದೇಹದ ಇತರೆ ಭಾಗಕ್ಕೆ ಕೆಲವೊಮ್ಮೆ ನೋವಾದ ಅದೇ ಜಾಗಕ್ಕೇ ಮತ್ತೇ ನೋವಾಗುವಂತಹ ಪೆಟ್ಟು ಬೀಳುವುದು ವಿಚಿತ್ರವೋ ಕಾಕತಾಳೀಯವೋ ಗೊತ್ತಿಲ್ಲ.
ಅಲ್ಲಿಗೆ, ಒಮ್ಮೆ ಏಟು ತಿಂದಾಗ ನಾವು ಎಚ್ಚರವಾಗಿರದೇ ಸ್ವಲ್ಪ ಮೈಮರೆತಲ್ಲಿ ಇನ್ನೊಮ್ಮೆ ಅದೇ ಜಾಗಕ್ಕೆ ಪೆಟ್ಟು ತಿನ್ನುವ ಪಾಠವನ್ನೂ ಸಹಾ ಜೀವನಪಾಠಗಳ ಸಿಲಬಸ್ ನಲ್ಲೇ ಇದ್ದಿರಬಹುದು. ಆದರೆ ಆಬಗ್ಗೆ ಯೋಚಿಸದೇ “ಪೆಟ್ಟು ಬಿದ್ದ ಜಾಗಕ್ಕೇ ಪೆಟ್ಟು ಬೀಳೋದು ರೂಢಿ” ಎಂದು ಸಮಾಧಾನ ಮಾಡಿಕೊಳ್ಳುತ್ತೇವಲ್ಲವೇ..!
ಇದು ಕೇವಲ ದೇಹದ ಮೇಲಾಗುವ ನೋವಿಗೆ ಸಂಬಂಧಿಸಿದ್ದಲ್ಲ, ವ್ಯಕ್ತಿಯೊಬ್ಬ ಮಾನಸಿಕವಾಗಿ ಅನುಭವಿಸುವ ಸಂಕಷ್ಟಕ್ಕೂ ಈ ಪಾಠ ಸಮಾನ ಅನ್ವಯ.
ಸಪೋಸ್…ಜೀವನದಲ್ಲಿ ಒಮ್ಮೆ ಯಾರಿಂದಲಾದರೂ ಯಾವುದೇ ವಿಷಯದಲ್ಲಿ ಸರಿಯಾದ ಪೆಟ್ಟು ತಿಂದಾಗ ಅದರ ಅನುಭದಿಂದ ಪಾಠ ಕಲಿಯಲೇ ಬೇಕಲ್ಲವೇ ! ಅಂದರೆ, ನಾವು ಯಾರನ್ನೋ ನಂಬಿ ಮೋಸ ಹೋದಾಗ, ಒಬ್ಬರ ಮೇಲೆ ನಂಬಿಕೆಯಿಟ್ಟು ಹಣ ಕಳೆದುಕೊಂಡಾಗ, ಪ್ರೀತಿಸಿ ವಂಚನೆಗೊಳಗಾದಾಗ, ನಂಬಿದವರೇ ನಮ್ಮ ಬೆನ್ನಿಗೆ ಚೂರಿ ಹಾಕಿದಾಗ, ಅಕ್ರಮ, ಅಪರಾಧ ಅಥವಾ ಅನ್ಯಾಯವೆಸಗಿ ಅಥವಾ ಇನ್ನೊಬ್ಬರ ದಾಳಕ್ಕೆ ಬಲಿಪಶುವಾಗಿ ಮರೆಯಲಾಗದ ಶಿಕ್ಷೆಗೊಳಗಾದಾಗ, ಜೂಜು, ಕುಡಿತ ಇನ್ನಿತರ ಕೆಟ್ಟ ಸಹವಾಸಗಳಿಗೆ ಬಲಿಯಾದಾಗ, ಯಾರದ್ದೋ ತಪ್ಪಿಗೆ ಶಿಕ್ಷೆ ಅನುಭವಿಸಿದಾಗ, ಸ್ವಂತದವರಿಂದಲೇ ತಿರಸ್ಕಾರ, ಅಪಮಾನ ಅಪಮಾನಕ್ಕೊಳಗಾದಾಗ…ಇವೇ ಮುಂತಾದ ದಯನೀಯ ಸಂದರ್ಭಗಳಲ್ಲಿ ಅತೀವ ವೇದನೆಗಳ ಮೂಲಕ ಮನುಷ್ಯನಿಗೆ ಜೀವನವೆಂಬುದು ತಕ್ಕ ಪಾಠ ಕಲಿಸುತ್ತೆ. ಜೊತೆಗೆ ಒಮ್ಮೆ ಪೆಟ್ಟು ತಿಂದದ್ದು ಸಾಕು, ಇನ್ನು ಮೇಲಾದರೂ ಹೀಗೆ ಮಾಡದೇ ನೆಟ್ಟಗಿರಿ….ಎಂಬ ಸಂದೇಶವನ್ನೂ ಕೊಡುತ್ತೆ.
ಕೆಲವರು ತಮ್ಮ ಮೊದಲ ತಪ್ಪಿನ ಅನುಭವದಿಂದ ಬಹುಬೇಗ ಪಾಠ ಕಲಿತು ಬುದ್ದಿವಂತರಾದರೆ, ಮತ್ತೇ ಕೆಲವರು ಮತ್ತೊಬ್ಬರು ಮಾಡಿ ಅನುಭವಿಸಿದ ತಪ್ಪಿನಿಂದ ಪಾಠ ಕಲಿತು ತಾವು ಜಾಣರಾಗುತ್ತಾರೆ. ಆದರೆ ಇನ್ನೊಂದಷ್ಟು ಜನ ಜೀವನದುದ್ದಕ್ಕೂ ಎಷ್ಟೇ ಪೆಟ್ಟುಗಳನ್ನು ತಿಂದರೂ ತಪ್ಪುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರಂತರವಾಗಿ ಮಾಡುತ್ತಲೇ ಹೋಗುತ್ತಾರೆ ಅಥವಾ ಅವರನ್ನು ಅಂತಹ ಪರಿಸ್ಥಿತಿಗೆ ಸಂದರ್ಭವೇ ತಳ್ಳಿಬಿಡಲೂ ಬಹುದು.
ಅಂಥವರು ಪಾಠ ಕಲಿಯುವವರೆಗೂ ಜೀವನವೆಂಬುದು ಸತತ ಪೆಟ್ಟುಗಳನ್ನು ಅನೇಕ ರೀತಿಯ ನೋವು, ಕಷ್ಟ, ನಷ್ಟ, ಸಂಕಷ್ಟ ಪರೀಕ್ಷೆ, ಅಶಾಂತಿ ಅನಾರೋಗ್ಯಗಳ ಮೂಲಕ ಕೊಡುತ್ತಲೇ ಹೋಗುತ್ತದೆ. ಮನುಷ್ಯ ಇಂಥಾ ಏಟುಗಳಿಂದಲೂ ನೆಟ್ಟಗಾಗದೇ ತನ್ನ ಸರಿಪಡಿಸಿ ಕೊಳ್ಳಲಾಗದ ತಪ್ಪುಗಳಿಗೆ ಅವನು ಕೊಡುವ ಟೈಟಲ್ಲುಗಳೇ ಹಣೆಬರಹ, ವಿಧಿ , ಬ್ಯಾಡ್ ಟೈಮು, ಗ್ರಹಚಾರ , ಕೆಟ್ಟ ನಕ್ಷತ್ರ, ವಾಸ್ತು…..ಇತ್ಯಾದಿ…!!
ಸರಳವಾಗಿ ಹೇಳುವುದಾದರೆ ಕೆಲವು ಜಾಣರು ಜೀವನದ ಪಾಠವನ್ನು ಮೊದಲ ಪೆಟ್ಟಿನಿಂದಲೇ ಕಲಿತರೆ, ಹಲವರು ಪೆಟ್ಟು ತಿನ್ನುತ್ತಲೇ ಹೋಗುತ್ತಾರೆ. ಆದರೆ ಅದಕ್ಕೆ ನಮ್ಮ ಜೀವನವನ್ನು ಶಪಿಸಿ ದೂಷಿಸಿ ಪ್ರಯೋಜನವಿಲ್ಲ. ಏಕೆಂದರೆ ಜೀವನದ ಅದೇ ಶಾಲೆಯ ಅದೇ ತರಗತಿಯಲ್ಲಿ ಎಲ್ಲ ವಿಧ್ಯಾರ್ಥಿಗಳಿಗೂ ಒಂದೇ ಪಾಠವನ್ನು ಒಂದೇ ಸಮಯದಲ್ಲೇ ಸಮನಾಗಿ ಹೇಳಿಕೊಡುತ್ತದೆ.
ಒಬ್ಬ ವ್ಯಕ್ತಿಗೆ ಜೀವನದಲ್ಲಿ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ ಎಂದರೆ ಅರ್ಥ, ಆತ ಈ ಲೈಫ಼ು ಕಲಿಸುತ್ತಲೇ ಬಂದ ಪಾಠಗಳನ್ನು ಸರಿಯಾಗಿ ಕಲಿತಿಲ್ಲ ಎಂದು.! ಮತ್ತೊಬ್ಬರು ಮಾಡಿರುವ ತಪ್ಪುಗಳಿಂದ ಎಚ್ಚೆತ್ತುಕೊಂಡು ಪಾಠ ಕಲಿಯುವ ಜಾಣತನ ನಮ್ಮಲ್ಲಿರದೇ ಇದ್ದರೂ ಪರವಾಗಿಲ್ಲ, ಆದರೆ ನಮ್ಮವೇ ಹಿಂದಿನ ತಪ್ಪುಗಳಿಂದ ಪಾಠ ಕಲಿತು ಮುಂದಿನ ದಿನಗಳಲ್ಲಾದರೂ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವ ಕನಿಷ್ಠ ವಿವೇಕವಾದರೂ ನಮ್ಮಲ್ಲಿ ಬೆಳೆಯುವಂತಾಗಲಿ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯ ಧರ್ಮ. ಆದರೆ ಅದನ್ನು ದುರುಪಯೋಗಪಡಿಸಿ ಕೊಂಡವರಿಗೂ ಮತ್ತೇ ಸಹಾಯ ಮಾಡುವುದಿದೆಯಲ್ಲಾ ಅದು ನಮ್ಮ ಕರ್ಮ.! ಹೀಗಾಗಿ ಸಹಾಯ ಮಾಡಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ವಿವೇಚನೆ, ವಿವೇಕ ಹಾಗೂ ಸಹಾಯ ಬೇಡುವವರ ಮತ್ತು ಮಾಡುವವರ ನಡುವಿನ ಸಂಬಂಧಗಳೂ ಮುಖ್ಯವೆನಿಸುತ್ತವೆ. ಇಲ್ಲವಾದಲ್ಲಿ ಪೆಟ್ಟು ತಿಂದ ಜಾಗಕ್ಕೇ ಮತ್ತೇ ಪೆಟ್ಟು ಬೀಳುತ್ತಲೇ ಇರುತ್ತದೆ.
ಆದರೆ ಇದಕ್ಕಿಂತ ಬಹುಮುಖ್ಯವಾದದ್ದೆಂದರೆ, ಯಾರಿಗಾದರೂ ಸಹಾಯ ಮಾಡುವ ಮನಸ್ಸಿದ್ದರೆ ಅದನ್ನು ನಿಷ್ಕಾರಣವಾಗಿ ಅನ್ ಕಂಡೀಷನಲ್ ಆಗಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅವರಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದಂತೆ ಮಾಡಿಬಿಡಿ ! ಆಗ ಮನಸ್ಸು ನಿರಾಳವಾಗಿರುತ್ತದೆ. ಸಹಾಯ ಪಡೆದವನು ನಮಗೆ ತಿರುಗಿ ಏನೂ ಮಾಡಲಿಲ್ಲ…ಕೊನೇಪಕ್ಷ ಒಂದು ಥ್ಯಾಂಕ್ಸ್ ಕೂಡಾ ಹೇಳಲಿಲ್ಲ ಎಂಬ ಸಾಮಾನ್ಯ ಕೊರಗು ನಮ್ಮಿಂದ ಮರೆಯಾಗಿ ಲೈಫ಼ು ಕೊಡಮಾಡುವ ಸತತ ಪೆಟ್ಟಿನಿಂದ ಪಾರಾಗಬಹುದು.
ಬಹುಶಃ ನನಗನಿಸಿದ ಮಟ್ಟಿಗೆ ಈ ರೀತಿಯ ಮನಃಸ್ಥಿತಿಯನ್ನು ಹಿಡಿದಿಟ್ಟುಕೊಳ್ಳುವುದು ಒಂದು ದೊಡ್ಡ ಸಾಧನೆಯಿದ್ದಂತೆ. ಮೇಲಾಗಿ ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಒಬ್ಬರಿಗೆ ನಾವು ಮಾಡುವ ಸಹಾಯ, ಹೇಳುವ ಸಾಂತ್ವನ, ತೋರುವ ಪ್ರೀತಿಯಿದೆಯಲ್ಲಾ…ಅದು ನಮ್ಮೊಳಗಿನ ಆತ್ಮತೃಪ್ತಿಯನ್ನು ಉದ್ದೀಪಿಸಲೆಂದೇ ಈ ಜೀವನ ಕಲಿಸುವ ಬಹಳ ಸರಳ ಪಾಠವಿದ್ದಂತೆ.
ವಿಪರ್ಯಾಸವೆಂದರೆ ಈ ಸರಳ ಪಾಠವನ್ನು ಕಲಿಯುವುದು ಎಲ್ಲರಿಗೂ ಅಷ್ಟು ಸುಲಭವಲ್ಲ . ಹೀಗಾಗಿಯೇ ಅದನ್ನು ಕಲಿಯುವವರೆಗೂ ಜೀವನದಲ್ಲಿ ಸತತ ಪೆಟ್ಟು ಬೀಳುತ್ತಲೇ ಇರುತ್ತದೆ……ನಾವು ಕಲಿತುಕೊಳ್ಳುವವರೆಗೂ ಅದನ್ನು ಅನುಭವಿಸುತ್ತಲೇ ಇರುತ್ತೇವೆ.

ಹಿರಿಯೂರು ಪ್ರಕಾಶ್.








