ನಮ್ಮ ಭಾರತ ಸಂಪ್ರದಾಯಗಳ ನಾಡು. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳನ್ನು ತೊರೆದು ಕೆಲಸವನ್ನರಸಿ ದೊಡ್ಡ ದೊಡ್ಡ ಪಟ್ಟಣಗಳನ್ನು ಸೇರಿರುವ ನಮ್ಮ ಯುವಕರು, ದೀಪಾವಳಿ ಹಬ್ಬದ ಮಹತ್ವವನ್ನು ಮರೆತು ಬಿಟ್ಟಿದ್ದಾರೆ. ಕೇವಲ ಆಡಂಬರಕ್ಕೆ ಸೀಮಿತವಾಗಿರುವ ಜನರು ಈ ಹಬ್ಬವನ್ನು ಅಗತ್ಯಕ್ಕೂ ಮೀರಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸುವುದನ್ನೇ ಕಾಣುತ್ತೇವೆ. ಆದರೆ ಅದರ ಹಿಂದಿನ ವಿಶೇಷತೆ ಮತ್ತು ಮಹತ್ವವನ್ನು ಕೇಳಿದಾಗ ಅದೆಷ್ಟೋ ಜನರು ತಡವರಿಸುತ್ತ ಹೇಳುವ ಉತ್ತರ ಒಂದೆಡೆ ಆದರೇ, ಬೆರಳೆಣಿಕೆಯಷ್ಟು ಜನರು ಅದರ ಬಗ್ಗೆ ಹೇಳುವುದು ಕಂಡು ಬರುತ್ತದೆ.
ದೀಪಾವಳಿಯೆಂದರೆ ಕತ್ತಲನ್ನು ದೂರ ಮಾಡಿ ಬೆಳಕಿನೆಡೆಗೆ ಸಾಗುವ ಶುಭ ಸಂಕೇತವಾಗಿದೆ. ಈ ಹಬ್ಬವು ಭಾರತದಲ್ಲಿ ಹಿಂದೂ ಧರ್ಮದವರು ಮಾತ್ರವಲ್ಲದೇ ಸಿಖ್,ಬುದ್ಧ,ಜೈನರು ಆಚರಿಸುವ ಹಬ್ಬವಾಗಿದೆ. ಸಾಮಾನ್ಯವಾಗಿ ಎಲ್ಲ ಭಾರತೀಯರು ತಿಳಿದಂತೆ ಈ ಹಬ್ಬವು ರಾಮಾಯಣದ ಹಿನ್ನೆಲೆಯನ್ನು ಹೊಂದಿದೆ. ರಾಮ ಲಕ್ಷ್ಮಣರು ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ಅಯೋಧ್ಯಕ್ಕೆ ಹಿಂದಿರುಗುವಾಗ ಅಲ್ಲಿನ ಜನರೆಲ್ಲರೂ ನಗರವನ್ನು ದೀಪಾಲಂಕಾರ ಮಾಡಿ ಅವರ ಸ್ವಾಗತವನ್ನು ಕೋರುವ ಪ್ರತೀತಿಯನ್ನು ಸೂಚಿಸುತ್ತದೆ.
ಇನ್ನೊಂದು ರೀತಿಯಲ್ಲಿ ಬಲಿಚಕ್ರವರ್ತಿಯು ಗರ್ವದಿಂದ ಸಾಗುವಂತಹ ಸಮಯದಲ್ಲಿ ಅವನ ಅಟ್ಟಹಾಸವನ್ನು ಅಡಗಿಸಲು ವಾಮನ ಅವತಾರದಲ್ಲಿ ವಿಷ್ಣುವು ಅವತರಿಸಿ ಬಲಿಚಕ್ರವರ್ತಿಯನ್ನು ಸಂಹರಿಸಿದ ದಿನವನ್ನು ಬಲಿಪಾಡ್ಯ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ಮಾಡುವ ಪ್ರತೀತಿಯು ಇದೆ.
ಹೀಗೆ ಅನೇಕ ಹಿನ್ನೆಲೆ ಹೊಂದಿರುವ ಈ ಹಬ್ಬವು ಎಲ್ಲರ ಮನೆ ಮನಗಳಲ್ಲಿ ಹೊಸ ಹುಮ್ಮಸ್ಸು ಉತ್ಸಾಹದೊಂದಿಗೆ ಉತ್ಸವದ ಸಂಭ್ರಮವನ್ನು ಹಬ್ಬದ ಎರಡು ಮೂರು ದಿನಗಳ ಮುಂಚೆಯೇ ತನ್ನೊಟ್ಟಿಗೆ ಹೊತ್ತು ತರುತ್ತದೆ. ಹಬ್ಬಕ್ಕೆ ಎಂದೇ ಕುಟುಂಬ ಸದಸ್ಯರೆಲ್ಲರೂ ಕೂಡಿಕೊಂಡು ತರತರಹದ ಉಡುಗೆ ಖರೀದಿ ಮಾಡುವುದು. ಮನೆಯ ಅಲಂಕಾರಕ್ಕೆ ಬಣ್ಣ ಬಣ್ಣದ ದೀಪಾಲಂಕಾರಕಗಳು, ವಿದ್ಯುತ ದೀಪಗಳು ಒಂದೆಡೆಯಾದರೆ ತರತರಹದ ತಿಂಡಿ ತಿನಿಸುಗಳನ್ನು ತಯಾರಿ ಮಾಡುವುದು ಮತ್ತೊಂದೆಡೆ.
ಮನೆಯ ಅಕ್ಕಪಕ್ಕದವರೆಲ್ಲರೂ ಸೇರಿ ಚಕ್ಕುಲಿ,ಕೊಡಬೇಳೆ, ಕಜ್ಜಾಯ ಹಾಗೂ ಇನ್ನಿತರ ಸಿಹಿ ತಿನಿಸುಗಳನ್ನು ತಯಾರಿ ಮಾಡುವ ಸುಂದರ ಅನುಭವಗಳನ್ನು ತರುವ ಹಬ್ಬ ಇದಾಗಿದೆ. ಈ ಹಬ್ಬವು ರಾತ್ರಿ ವೇಳೆ ರಂಗು ರಂಗಿನ ದೀಪಾಲಂಕಾರ ಮಾಡುವಲ್ಲಿ ಹಣತೆಯನ್ನು ಬಳಸುವುದು ವಿಶೇಷ ಅದರೊಂದಿಗೆ ನವನವೀನ ಸಿಡಿಮದ್ದು ಮತ್ತೊಂದೆಡೆ. ಹಿರಿಯರ ಆಶೀರ್ವಾದ ಅವರ ಮಾರ್ಗದರ್ಶನದಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಈ ಹಬ್ಬವು ಎದುರಲ್ಲಿ ಬರುವ ಸಂಕಷ್ಟವನ್ನು ದೂರಮಾಡಿ ಪ್ರಗತಿಯೆಡೆಗೆ ಸಾಗುವ ಸಂಕೇತವನ್ನು ತಿಳಿಸುತ್ತದೆ. ಕೊನೆಯಲ್ಲಿ ಎಲ್ಲರೂ ಸುರಕ್ಷಿತವಾಗಿ ಈ ಹಬ್ಬವನ್ನು ಸಂಪ್ರದಾಯಬದ್ದವಾಗಿ ಆಚರಣೆ ಮಾಡೋಣ ಎನ್ನುತ್ತಾ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಆನಂದ ಜಿ.ಎನ್.
ದಾಂಡೇಲಿ.(ಉ.ಕ.)








