ಸಮಯವೆಂಬುದು ನಿಲ್ಲದ ನದಿ. ಅದು ಯಾವಾಗಲೂ ಹರಿಯುತ್ತಲೇ ಇರುತ್ತದೆ. ನಾವು ಸಂತೋಷದಲ್ಲಿರಲಿ, ದುಃಖದಲ್ಲಿರಲಿ, ಯಶಸ್ಸಿನ ಶಿಖರದಲ್ಲಿರಲಿ ಅಥವಾ ಸೋಲಿನ ತಳದಲ್ಲಿರಲಿ – ಸಮಯ ತನ್ನ ದಾರಿಯಲ್ಲಿ ಸಾಗುತ್ತಲೇ ಇರುತ್ತದೆ. ಈ ಒಂದು ವಾಕ್ಯ ಜೀವನದ ಬದಲಾವಣೆ, ಸಹನೆ, ಮತ್ತು ನಿರಂತರ ಪ್ರಯತ್ನದ ಮಹತ್ವವನ್ನು ನಮಗೆ ಬೋಧಿಸುತ್ತದೆ.
ನಮ್ಮ ಜೀವನದಲ್ಲಿ ಅನೇಕ ಕ್ಷಣಗಳು ಬರುತ್ತವೆ. ಕೆಲವೊಮ್ಮೆ ನಾವು ಅಪಾರ ಸಂತೋಷವನ್ನು ಅನುಭವಿಸುತ್ತೇವೆ. ಆ ಸಮಯದಲ್ಲಿ ನಮಗೆ ಅದು ಎಂದಿಗೂ ಮುಗಿಯಬಾರದೆಂದು ಅನಿಸುತ್ತದೆ. ಆದರೆ ನಿಜವೆಂದರೆ, ಆ ಸಂತೋಷದ ಕ್ಷಣವೂ ಕಳೆದು ಹೋಗುತ್ತದೆ. ಇದೇ ರೀತಿ, ದುಃಖದ ಸಮಯದಲ್ಲಿ ನಾವು ನಿರಾಶೆಯಾಗುತ್ತೇವೆ, ನಮ್ಮ ಜೀವನವೇ ಕತ್ತಲೆಯಾಗಿದೆ ಎಂದು ಭಾವಿಸುತ್ತೇವೆ. ಆದರೆ ಈ ಮಾತು ನಮಗೆ ಧೈರ್ಯ ನೀಡುತ್ತದೆ – “ಈ ಸಮಯವೂ ಕಳೆದು ಹೋಗುತ್ತದೆ”.
ಸಮಯದ ಮಹತ್ವವನ್ನು ಅರಿತವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅವರು ಪ್ರತಿಯೊಂದು ಕ್ಷಣವನ್ನೂ ಉಪಯೋಗಿಸಿಕೊಳ್ಳುತ್ತಾರೆ. ಏಕೆಂದರೆ ಒಮ್ಮೆ ಕಳೆದುಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಹಣವನ್ನು, ಆಸ್ತಿ ಸಂಪತ್ತನ್ನು ಮತ್ತೆ ಗಳಿಸಬಹುದು, ಆದರೆ ಸಮಯವನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಮಯವನ್ನು ಗೌರವಿಸಬೇಕು.
ಇದೇ ವೇಳೆ, ಈ ಮಾತು ನಮಗೆ ಅಹಂಕಾರವನ್ನು ಬಿಡುವಂತೆ ಮಾಡುತ್ತದೆ. ನಾವು ಯಶಸ್ಸಿನ ಶಿಖರದಲ್ಲಿ ಇದ್ದಾಗ, “ಈ ಸಮಯ ಕಳೆದು ಹೋಗುತ್ತದೆ” ಎಂದು ನೆನಪಿಸಿಕೊಂಡರೆ, ನಾವು ವಿನಯವನ್ನು ಕಾಪಾಡಿಕೊಳ್ಳಬಹುದು. ಏಕೆಂದರೆ ಯಾವುದೇ ಸ್ಥಾನ ಶಾಶ್ವತವಲ್ಲ. ಇಂದು ಇದ್ದ ಸ್ಥಾನ ನಾಳೆ ಇರದಿರಬಹುದು. ಆದ್ದರಿಂದ ನಾವು ಸದಾ ಸರಳತೆ ಮತ್ತು ವಿನಯದಿಂದ ಬದುಕಬೇಕು.
ಸಮಸ್ಯೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಆ ಸಮಸ್ಯೆಗಳು ನಮ್ಮನ್ನು ಕುಗ್ಗಿಸುತ್ತವೆ. ಆದರೆ ಈ ಮಾತು ನಮಗೆ ಪ್ರೇರಣೆ ನೀಡುತ್ತದೆ – “ಈ ಕಷ್ಟವೂ ಶಾಶ್ವತವಲ್ಲ”. ಇದರಿಂದ ನಾವು ಧೈರ್ಯವಾಗಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಕಷ್ಟಗಳನ್ನು ತಾತ್ಕಾಲಿಕವಾಗಿ ನೋಡಿ, ನಾವು ನಮ್ಮ ಗುರಿಯ ಕಡೆಗೆ ಪ್ರಯತ್ನಿಸಬೇಕು.
ಸಮಯ ನಮ್ಮ ಗುರು ಕೂಡ ಆಗಿದೆ. ಅದು ನಮಗೆ ಪಾಠಗಳನ್ನು ಕಲಿಸುತ್ತದೆ. ಸಂತೋಷದ ಸಮಯದಲ್ಲಿ ನಾವು ಕೃತಜ್ಞತೆಯನ್ನು ಕಲಿಯುತ್ತೇವೆ. ದುಃಖದ ಸಮಯದಲ್ಲಿ ಸಹನೆ ಮತ್ತು ಧೈರ್ಯವನ್ನು ಕಲಿಯುತ್ತೇವೆ. ಪ್ರತಿಯೊಂದು ಕ್ಷಣವೂ ನಮ್ಮ ಜೀವನವನ್ನು ರೂಪಿಸುತ್ತದೆ. ಆದ್ದರಿಂದ ನಾವು ಪ್ರತಿಯೊಂದು ಅನುಭವದಿಂದ ಏನಾದರೂ ಕಲಿಯಬೇಕು.
ಇಂದಿನ ಯುವಕರಾದ ನಾವು ಸಮಯವನ್ನು ವ್ಯರ್ಥ ಮಾಡುವ ಪ್ರವೃತ್ತಿಯನ್ನು ಹೊಂದಿದ್ದೇವೆ. ಸಾಮಾಜಿಕ ಜಾಲತಾಣಗಳು, ಅನಗತ್ಯ ವ್ಯಸನಗಳು ಮುಂತಾದ ಬೇಡದ ಕಾರ್ಯಗಳು ನಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದೇವೆ. ಆದರೆ ನಾವೆಲ್ಲ ಈ ಸತ್ಯವನ್ನು ಅರಿಯಬೇಕು – “ಈ ಸಮಯ ಕಳೆದು ಹೋಗುತ್ತದೆ”.
ಈ ವಯಸ್ಸಿನಲ್ಲಿ ಕಳೆದುಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲ ನಮ್ಮ ಗುರಿ ಸಾಧನೆಗೆ ಸಮಯವನ್ನು ಸರಿಯಾಗಿ ಬಳಸಬೇಕು.
ಸಮಯದ ಬೆಲೆ ಅರಿತವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಅವರು ತಮ್ಮ ದಿನಚರಿಯನ್ನು ಸರಿಯಾಗಿ ಯೋಜಿಸುತ್ತಾರೆ. ಅವರು ಸಮಯಕ್ಕೆ ಮಹತ್ವ ನೀಡಿ, ಪ್ರತಿಯೊಂದು ಕ್ಷಣವನ್ನೂ ಫಲಪ್ರದವಾಗಿಸುತ್ತಾರೆ. ಇಂತಹವರು ಮಾತ್ರ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಮಯವೂ ಬಹುಮುಖ್ಯ. ನಾವು ಪ್ರೀತಿಸುವ ಜನರೊಂದಿಗೆ ಕಳೆದ ಕ್ಷಣಗಳು ಮತ್ತೆ ಮರಳಿ ಬರುವುದಿಲ್ಲ. ಆದ್ದರಿಂದ ನಾವು ಅವರೊಂದಿಗೆ ಸಮಯ ಕಳೆಯಬೇಕು. ಏಕೆಂದರೆ ಜೀವನದ ಕೊನೆಯಲ್ಲಿ ನಾವು ಸಂಗ್ರಹಿಸಿದ ಸಂಪತ್ತಿಗಿಂತ, ನಮ್ಮ ಸಂಬಂಧಗಳೇ ಮುಖ್ಯವಾಗುತ್ತವೆ.
“ಈ ಸಮಯ ಕಳೆದು ಹೋಗುತ್ತದೆ” ಎಂಬುದು ಕೇವಲ ಒಂದು ವಾಕ್ಯವಲ್ಲ, ಅದು ಜೀವನದ ದಾರಿದೀಪ. ಅದು ನಮಗೆ ಸಮತೋಲನವನ್ನು ಕಲಿಸುತ್ತದೆ. ಸಂತೋಷದಲ್ಲೂ ಅತಿಯಾಗಿ ತೇಲಬಾರದು, ದುಃಖದಲ್ಲೂ ಮುಳುಗಬಾರದು. ಎಲ್ಲವೂ ತಾತ್ಕಾಲಿಕವೆಂದು ಅರಿತು, ನಾವು ಶಾಂತ ಮನಸ್ಸಿನಿಂದ ಬದುಕಬೇಕು.
ಕೊನೆಯಲ್ಲಿ, ಸಮಯವೇ ಜೀವನ. ಅದನ್ನು ಗೌರವಿಸಿ, ಅದನ್ನು ಸರಿಯಾಗಿ ಬಳಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಂದು ಕ್ಷಣವೂ ಅಮೂಲ್ಯ. ಅದನ್ನು ವ್ಯರ್ಥ ಮಾಡದೆ, ನಾವು ನಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಬೇಕು. ಏಕೆಂದರೆ “ಈ ಸಮಯ ಕಳೆದು ಹೋಗುತ್ತದೆ”.

ಪ್ರಶಾಂತ್ ಎಂ. ಕಂಬಳಿ
ಎಸ್.ಸಿ.ಎಸ್.ಜಿ ಮಹಾವಿದ್ಯಾಲಯ ಲಕ್ಷ್ಮೇಶ್ವರ








