ಬೆಂಗಳೂರು: ವಾಹನ ಸವಾರರನ್ನು ನಿಯಮಬಾಹ್ಯವಾಗಿ ತಡೆದು ತಪಾಸಣೆ ನಡೆಸುವುದು ತಪ್ಪು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಅವರು ಪೊಲೀಸರಿಗೆ ಅಗತ್ಯ ಮಾರ್ಗದರ್ಶನ ನೀಡಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಮಂಡ್ಯದಲ್ಲಿ ನಡೆದ ದುರ್ಘಟನೆಗೆ ಸಂಬಂಧಿಸಿ ಮಾತನಾಡಿದ ಗೃಹ ಸಚಿವರು, “ಮಂಡ್ಯದಲ್ಲಿ ಹೆಲ್ಮೆಟ್ ತಪಾಸಣೆಯ ವೇಳೆ ಪೊಲೀಸರು ಅಡಚಣೆ ಮಾಡಿದ ಪರಿಣಾಮ ಮಗು ಸಾವಿಗೀಡಾದ ಘಟನೆ ತಲೆ ತಗ್ಗಿಸುವಂತಹದ್ದು. ಇಂತಹ ಘಟನೆ ನಡೆಯಬಾರದು. ಸಾರ್ವಜನಿಕರ ಬದುಕು ಪೊಲೀಸ್ ಕೆಲಸದಿಂದ ಅಪಾಯದಲ್ಲಿಗೆ ಹೋಗಬಾರದು,” ಎಂದು ತಿಳಿಸಿದರು.
ಅವೈಜ್ಞಾನಿಕ ತಪಾಸಣೆ ವಿರೋಧ
ಪೊಲೀಸರು ರಸ್ತೆಯ ಮಧ್ಯದಲ್ಲಿ ಅಥವಾ ಮೂಲೆಗಳಲ್ಲಿ ನಿಂತು ವಾಹನಗಳನ್ನು ತಡೆಯುವುದು ತಪ್ಪು ಕ್ರಮ. ಇಂತಹ ಅಹಿತಕರ ಕ್ರಮಗಳನ್ನು ಕೈಗೊಳ್ಳಬಾರದು. ಸಂಚಾರ ನಿಯಮಗಳು ಎಷ್ಟು ಮುಖ್ಯವೋ, ಅವನ್ನು ಅನುಸರಿಸಲು ಬೇಕಾದ ಕ್ರಮಗಳು ಸಹ ವೈಜ್ಞಾನಿಕವಾಗಿರಬೇಕು ಎಂದು ಪರಮೇಶ್ವರ್ ಹೇಳಿದರು.
ಮಂಡ್ಯ ಘಟನೆ – ಅಧಿಕಾರಿಗಳಿಗೆ ಶಿಕ್ಷೆ
ಮಂಡ್ಯದ ನಂದ ಸರ್ಕಲ್ನಲ್ಲಿ ಹೆಲ್ಮೆಟ್ ತಪಾಸಣೆಯ ವೇಳೆ ಬೈಕ್ನಲ್ಲಿದ್ದ ದಂಪತಿಯನ್ನು ಅಡ್ಡಗಟ್ಟಿದಾಗ ಬೈಕ್ ಉರುಳಿದ್ದು, ಅವರ ಮಗು ತಲೆಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಯಿತು. ಈ ಹಿನ್ನಲೆಯಲ್ಲಿ ಸಂಚಾರಿ ಠಾಣೆಯ ಎಎಸ್ಐಗಳಾದ ಜಯರಾಮ್, ನಾಗರಾಜ್ ಮತ್ತು ಗುರುದೇವ್ ಅವರನ್ನು ಅಮಾನತುಗೊಳಿಸಲಾಗಿದೆ.
ಘಟನೆಯ ಹಿನ್ನೆಲೆ
ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿಯ ಮಗು ಹೃತಿಕ್ಷಳಿಗೆ ನಾಯಿ ಕಚ್ಚಿದ ಹಿನ್ನೆಲೆ, ಅವರು ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ, ಪೊಲೀಸರು ತಪಾಸಣೆಯ ನೆಪದಲ್ಲಿ ಬೈಕ್ನ್ನು ಅಡ್ಡಗಟ್ಟಿದಾಗ ದಂಪತಿ ಕೆಳಗೆ ಬಿದ್ದು ಮಗು ತಲೆಗೆ ಬಲವಾದ ಪೆಟ್ಟಾಗಿ ಸಾವನ್ನಪ್ಪಿತು. ತಲೆಯಿಂದ ತೀವ್ರ ರಕ್ತಸ್ರಾವವಾಗಿ ಮಗು ತಾಯಿಯ ಮಡಿಲಲ್ಲೇ ಉಸಿರು ತ್ಯಜಿಸಿತು.ಇದನ್ನು ಓದಿ –ಕಿರುತೆರೆ ನಟ ಶ್ರೀಧರ್ ನಾಯಕ್ ವಿಧಿವಶ
ಈ ಹೃದಯ ವಿದಾರಕ ಘಟನೆ ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ಹುಟ್ಟಿಸಿರುವುದರ ನಡುವೆ ಗೃಹ ಸಚಿವರ ಈ ಸ್ಪಷ್ಟ ಮಾರ್ಗದರ್ಶನ ಪೊಲೀಸರಿಗೆ ಎಚ್ಚರಿಕೆಯ ಸಿಂಘಾಸನವಾಗಿದೆ.