ನಮ್ಮ ಹತ್ತಿರದವರು, ಬಂಧುಗಳು, ಸ್ನೇಹಿತರು ಅಥವಾ ನಮಗೆ ಗೊತ್ತಿರುವವರು ಯಾರಾದರೂ ನಮ್ಮನ್ನಗಲಿದಾಗ ಅಂತಹ ವ್ಯಕ್ತಿ ಬಗ್ಗೆ ಸಾಧ್ಯವಾದರೆ ಎಲ್ಲರೂ ನಾಲ್ಕು ಒಳ್ಳೆಯದನ್ನೇ ಮಾತನಾಡಿ ಸಂತಾಪ ವ್ಯಕ್ತಪಡಿಸುತ್ತಾರೆಯೇ ವಿನಃ ಸಾಮಾನ್ಯವಾಗಿ ಸಾವಿನ ಸಮಯದಲ್ಲಿ ಯಾರೂ ಕೆಟ್ಟದಾಗಿ ಮಾತನಾಡುವುದಿಲ್ಲ. ಅದರಲ್ಲೂ ಸತ್ತ ಮನುಷ್ಯ ತುಂಬಾ ಒಳ್ಳೆಯವನಾಗಿದ್ದು, ಅತ್ಯಂತ ಸಂಭಾವಿತನಾಗಿ, ನಾಲ್ಕು ಜನರಿಗೆ ಬೇಕಾದವನಾಗಿ ಬದುಕಿದ್ದು ತನ್ನ ದೇಹದಲ್ಲಿ ಉಸಿರಿರುವವರೆಗೂ ಯಾರಿಗೂ ಯಾವ ಕೇಡನ್ನೂ ಬಯಸದೇ ಇರುವಂಥವನಾಗಿದ್ದಲ್ಲಿ ಅವರನ್ನು ಮನಸಾರೆ ಕೊಂಡಾಡಿ ಅವರ ಸದ್ಗುಣಗಳನ್ನು ಪಟ್ಟಿ ಮಾಡುತ್ತಾ ಸ್ಮರಿಸುತ್ತಾರೆ, ಕಂಬನಿ ಮಿಡಿಯುತ್ತಾರೆ.
ಅದಕ್ಕಿಂತ ಮುಖ್ಯವಾಗಿ ಅದೇ ಒಬ್ಬ ಒಳ್ಳೆಯ, ಸಂಭಾವಿತ ಮನುಷ್ಯ ತುಂಬಾ ತನ್ನ ಚಿಕ್ಕ ವಯಸ್ಸಿನಲ್ಲೋ, ಅಕಾಲಿಕವಾಗಿಯೋ, ಆಕಸ್ಮಿಕವಾಗಿಯೋ ಇದ್ದಕ್ಕಿದ್ದಂತೆ ಮರಣವನ್ನಪ್ಪಿದಾಗ ಎಲ್ಲರ ಬಾಯಲ್ಲಿ ಬರುವ ಸಾಮಾನ್ಯ ಮಾತೆಂದರೆ ” ಆ ದೇವರು ಒಳ್ಳೆಯವರನ್ನೇ ಇಷ್ಟು ಬೇಗ ಯಾಕೆ ಕರೆದುಕೊಳ್ಳುತ್ತಾನೆ ..? ಎಂಬುದು !
ಈ ಪ್ರಪಂಚದಲ್ಲಿ ಎಷ್ಟೋ ಜನ ಕ್ರೂರಿಗಳು, ಕೆಟ್ಟವರು, ಭ್ರಷ್ಟರು, ದ್ರೋಹಿಗಳು, ಪಾಪಿಗಳು ಹಾಗೂ ಎಲ್ಲರಿಗೂ ಕೆಟ್ಟದ್ದನ್ನೇ ಮಾಡಿದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಅವರನ್ನು ಬಿಟ್ಟು ಇಷ್ಟು ಒಳ್ಳೆಯ ವ್ಯಕ್ತಿಗೇಕೆ ಇಷ್ಟು ಬೇಗ ಸಾವಿನ ದುರಂತ ? ಎಂಬ ಉದ್ಘಾರಗಳೂ ಸಹಾ ಬಹುತೇಕ ಎಲ್ಲರ ಬಾಯಿಂದ ಬರುವಂಥವುಗಳೇ !
ಆ ದೇವರಿಗೂ ಒಳ್ಳೆಯವರೆಂದರೆ ಪ್ರೀತಿ ಹೆಚ್ಚು . ಹೀಗಾಗಿ ಒಳ್ಳೆಯವರನ್ನು ಬೇಗ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ ಎಂಬ ಮಾತೂ ಸಹಾ ಸರ್ವೇ ಸಾಮಾನ್ಯ. ! ಇನ್ನೂ ಕೆಲವರಂತೂ ಒಬ್ಬ ಒಳ್ಳೆಯ ವ್ಯಕ್ತಿ ಸಾಯಬಾರದ ವಯಸ್ಸಿನಲ್ಲಿ ದಾರುಣವಾಗಿ ಸಾವನ್ನಪ್ಪಿದಾಗ ಅಥವಾ ಘೋರ ದುರಂತದಲ್ಲಿ ಪ್ರಾಣ ಕಳೆದುಕೊಂಡಾಗ ಅವರನ್ನು ಹತ್ತಿರದಿಂದ ಬಲ್ಲ ಜನ ಭಾವಾವೇಶದಲ್ಲಿ ದೇವರಿಗೇ ಧಿಕ್ಕಾರ ಹಾಕಿ ದೇವರನ್ನೇ ಶಪಿಸುವ ಹಂತಕ್ಕೂ ಹೋಗುತ್ತಾರೆ. ಅಷ್ಟೇ ಅಲ್ಲ, ಅಂಥಾ ಸಂದರ್ಭಗಳಲ್ಲಿ ದೇವರ ಅಸ್ತಿತ್ವದಲ್ಲೇ ಪೂರ್ಣ ನಂಬಿಕೆ ಕಳೆದುಕೊಳ್ಳುತ್ತಾರೆ.
ಈ ಹಿನ್ನೆಲೆಯಲ್ಲಿ ಒಳ್ಳೆಯವರನ್ನೇ ದೇವರು ಬೇಗ ಏಕೆ ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆ ಎಂಬ ಪ್ರಶ್ನೆ ಅತಾರ್ಕಿಕವೆನಿಸಿದರೂ ಅವಾಸ್ತವವಲ್ಲ.
ಬಹುಶಃ ಸಾವೆಂಬುದು ಈ ಭೂಮಿ ಮೇಲಿನ ಅತ್ಯಂತ ನಿರ್ದಯಿ ರೂಪ, ಯಾರೂ ಬಯಸದ ಅತಿಥಿ ಮಾತ್ರವೇ ಅಲ್ಲ ಅದೊಂದು ಬೇಧಿಸಲಾಗದ ಗುಟ್ಟು, ವಿಸ್ಮಯ, ಕೌತುಕ, ಅನಿರೀಕ್ಷಿತ, ಆಕಸ್ಮಿಕ ಹಾಗೂ ಈ ಪ್ರಪಂಚದಲ್ಲಿ ಈವತ್ತಿನ ತನಕ ಎಂಥಾ ವಿಜ್ಞಾನಿಯೂ, ಮೇಧಾವಿಯೂ ಕಂಡುಕೊಳ್ಳಲಾಗದ ನಿಗೂಢ ರಹಸ್ಯ. ಅದು ಯಾವಾಗ ಯಾರಿಗೆ, ಹೇಗೆ, ಏಕೆ, ಯಾವ ರೂಪದಲ್ಲಿ, ಯಾವ ಸಮಯದಲ್ಲಿ ಆವರಿಸಿಕೊಳ್ಳುತ್ತದೆಯೆಂಬ ಬೇಧಿಸಲಾಗದ ಗುಟ್ಟನ್ನು ಈ ದುನಿಯಾ ಉದ್ಭವಿಸಿದ ಕ್ಷಣದಿಂದ ಇಲ್ಲಿಯವರೆಗೂ ಯಾರಿಗೂ ಬಿಟ್ಟುಕೊಟ್ಟಿಲ್ಲ . ಇಂದು ತನ್ನ ಪ್ರಚಂಡ ಬುದ್ದಿಶಕ್ತಿಯಿಂದ ಪ್ರಕೃತಿಯ ಎಲ್ಲಾ ಮೂಲಕ್ಕೂ ಕೈಹಾಕಿ ಬೀಗುತ್ತಿರುವ ಮನುಷ್ಯ ಈ ಒಂದು ಗುಟ್ಟನ್ನು ಅರಿಯುವಂಥವನಾಗಿದ್ದರೆ, ಬಹುಶಃ ಅವನಾಡುವ ಆಟಗಳಿಗೆ ಮಿತಿಯೇ ಇರುತ್ತಿರಲಿಲ್ಲವೆಂಬ ಕಾರಣಕ್ಕೆ ಅದನ್ನು ಆ ದೇವರು ತನ್ನಲ್ಲೇ ಇಟ್ಟುಕೊಂಡಿದ್ದಿರ ಬಹುದು !
ಅಸಲಿಗೆ ಸಾವೆಂಬುದು ನಿಜವಾದ ಅರ್ಥದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಸರಳ ಸತ್ಯ. ಅದಕ್ಕೆ ಬಡವ- ಬಲ್ಲಿದ, ಶ್ರೀಮಂತ- ಭಿಕ್ಷುಕ, ಕರಿಯ- ಬಿಳಿಯ, ಬಾಲಕ -ಮುದುಕ , ಸೆಲೆಬ್ರಿಟಿ- ಸಾಮಾನ್ಯ, ಹಿಂದೂಸ್ತಾನಿ- ಪಾಕಿಸ್ತಾನಿ ಎಂಬ ಬೇಧವಾಗಲೀ ಅಥವಾ ಬ್ರಾಹ್ಮಣ, ಶೂದ್ರ, ದಲಿತ ಎಂಬ ಜಾತಿ ತರತಮವಾಗಲೀ ಇಲ್ಲವೇ ಹಿಂದೂ, ಮುಸ್ಲೀಂ, ಕ್ರೈಸ್ತ, ಬೌದ್ಧ ಎಂಬ ಧರ್ಮಾಧಾರಿತ ವ್ಯತ್ಯಾಸಗಳಾಗಲೀ ಇರುವುದಿಲ್ಲ. ಸಾವಿನ ಕೋರ್ಟಿನಲ್ಲಿ ಎಲ್ಲ ಜೀವಿಗಳೂ ಒಂದೇ , ಎಲ್ಲರಿಗೂ ಒಂದೇ ವಿಧದ ಕಾನೂನು , ಒಂದೇ ಥರದ ಟ್ರೀಟ್ ಮೆಂಟು.
ಇಂಥಾ ಸಾವೆಂಬ ಸಾವಿಗೆ ಆಯಸ್ಸು ಮುಗಿದ ವ್ಯಕ್ತಿಯನ್ನು ತಾನು ಮುಲಾಜಿಲ್ಲದೇ ಸೆಳೆಯುವಾಗ ಆತ ಚಿಕ್ಕವನಾ, ದೊಡ್ಡವನಾ ಅಥವಾ ಅವನು ಒಳ್ಳೆಯವನಾ ಕೆಟ್ಟವನಾ ಎಂಬ ವಿಶ್ಲೇಷಣೆ ಬಗೆಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಉಸಿರಾಡುವ ಜೀವಿಯ ಆಯಸ್ಸು ಮುಗಿದಿರುವುದೊಂದೇ ಅದಕ್ಕೆ ಎಲಿಜಿಬಲ್ ಬೆಂಚ್ ಮಾರ್ಕು, ಮಿಕ್ಕ ಗುಣ ವಿಶೇಷಣಗಳಾವುವೂ ಆ ವಿಧಿಯನ್ನು ಧೃತಿಗೆಡಿಸಲಾರವು.
ಆದರೆ ನಮ್ಮ ನಡುವೆಯೇ ಇದ್ದ ಒಬ್ಬ ಒಳ್ಳೆಯ ಮನುಷ್ಯ, ಅದರಲ್ಲೂ ಇನ್ನೂ ಸಾಕಷ್ಟು ಕಾಲ ಬಾಳಿ ಬದುಕಬೇಕಾದ ವ್ಯಕ್ತಿ ಅಕಾಲಿಕವಾಗಿ ಸಾವಿನ ದುರಂತಕ್ಕೆ ಶರಣಾದಾಗ ” ಸಜ್ಜನರಿಗೇ ಏಕೇ ಈ ರೀತಿಯಾದ ದುರಂತಗಳು ಸಂಭವಿಸುತ್ತವೆ ” ಎಂಬ ಭಾವುಕತೆ ತಲೆಯೊಳಗೆ ತಕಧಿಮಿ ಆಡುವುದು ಸಹಜ. ಆ ಸಂದರ್ಭದಲ್ಲಿ ಸಾವಿನ ಗುಟ್ಟಿನ ಬಗೆಗಿನ ಅಸಲಿ ತರ್ಕವಾಗಲೀ ಅಥವಾ ಆ ಕುರಿತಾದ ವಾಸ್ತವತೆಯಾಗಲೀ ನಮ್ಮ ನೇರದ ವಿಶ್ಲೇಷಣೆಗೆ , ಮನದ ಮಾತಿನ ಮೀಮಾಂಸೆಗೆ ಒಳಪಡುವುದಿಲ್ಲ. ಅನೇಕ ಸಜ್ಜನರು ಅಕಾಲಿಕವಾಗಿ ಅಗಲಿದಾಗ ಈ ” ಸಾವು ನ್ಯಾಯವಲ್ಲ ” ಎಂದು ಅನಿಸಿದ್ದುಂಟು. ಹಾಗಾಗಿಯೇ ಸಾವನ್ನು ಕ್ರೂರಿಗೆ, ರಕ್ಕಸನಿಗೆ, ನಿರ್ದಯಿಗೆ, ಕಟುಕನಿಗೆ ಹೋಲಿಸುವುದುಂಟು. ದೇವರಿಗೇ ಧಿಕ್ಕಾರ ಕೂಗಿದ್ದೂ ಉಂಟು ! ಆದರೆ ಈ ಯಾವ ಕಟು ಮಾತುಗಳ ಬೌಂಡರಿ , ಸಿಕ್ಸರ್ ಗಳ ಆಕ್ರೋಶಕ್ಕೆ ವಿಧಿಯೆಂಬುದು ಕೇರೇ ಮಾಡೋಲ್ಲ. “ನೀವು ಏನಾದರೂ ಅಂದುಕೊಳ್ಳಿ ನನ್ನ ಕೆಲಸ ನಾನು ಮಾಡುತ್ತಾ ಮುಂದುವರೆಯುತ್ತೇನೆ” ಎಂಬುದೊಂದೇ ಅದಕ್ಕೆ ಗೊತ್ತಿರುವ ನಿತ್ಯ ಕಾಯಕ.
ಒಳ್ಳೆಯವರು, ಹೆಚ್ಚುಕಾಲ ಬದುಕಬೇಕಿತ್ತು , ಕ್ರೂರಿಗಳು , ಮನುಷ್ಯ ವಿರೋಧಿಗಳು ,ಕೆಟ್ಟವರಿಗೆ ಹೆಚ್ಚೆಚ್ಚು ಸಾವು ಬರಬೇಕಿತ್ತು ಎಂಬ ನಮ್ಮ ಬಹುತೇಕ ಜನರ ಆಶಯವೇನಾದರೂ ನಿಜವಾಗಿದ್ದಲ್ಲಿ…..ನೆನಪಿಡಿ, ಈ ಭೂಮಿ ಮೇಲಿನ ಇಂದಿನ ಜನಸಂಖ್ಯೆಯಲ್ಲಿ ಕನಿಷ್ಠ ಮುಕ್ಕಾಲು ಭಾಗದಷ್ಟು ಜನಸಂಖ್ಯೆ ಇಲ್ಲವಾಗಿರುತ್ತಿತ್ತು. !!
ವಿಧಿಯಾಟವೇನೆಂದು ಯಾರೂ ತಿಳಿದವರಿಲ್ಲ, ತಿಳಿಯಲು ಸಾಧ್ಯವೂ ಇಲ್ಲ. ಹುಟ್ಟಿನ ದಾನ, ಸಾವಿನ ಗುಟ್ಟು ಈ ಎರಡರ ಕೌತುಕದ ನಡುವೆ ಇರುವ ನಾಲ್ಕು ದಿನದ ಬದುಕಿನಲ್ಲಿ ಸಾವಿನ ಬಗೆಗಿನ ಅತಾರ್ಕಿಕ ತರ್ಕಕ್ಕಿಂತ ಮಾನವೀಯತೆಯುಳ್ಳ ಮನುಷ್ಯರಂತೆ, ನಾಲ್ಕು ಜನರಿಗೆ ಉಪಯೋಗವಾಗುವಂತೆ, ಸಮಾಜಕ್ಕೆ ಹೊರೆಯಾಗದಂತೆ, ದ್ವೇಷ, ಪ್ರತಿಷ್ಠೆ, ದುರಹಂಕಾರಗಳನ್ನು ತೊರೆದು ಆ ಜಾಗದಲ್ಲಿ ಪ್ರೀತಿ, ಸ್ನೇಹ, ವಿಶ್ವಾಸಗಳನ್ನು ಹಂಚುತ್ತ ಉಸಿರಾಡುವ ತನಕ ಆತ್ಮಸ್ಥೈರ್ಯದಿಂದ ಬದುಕು ಕಂಡುಕೊಳ್ಳುವುದರಲ್ಲೇ ಜೀವನದ ಸಾರ್ಥಕ್ಯ ಅಡಗಿರಬಹುದು.!
ಮರೆಯುವ ಮುನ್ನ
ನಾವು ಚಿಕ್ಕವರಿದ್ದಾಗಿನಿಂದಲೂ “ಒಳ್ಳೆಯವರಿಗೇ ಏಕೆ ಬೇಗ ಸಾವು ಬರುತ್ತೆ ” ಎನ್ನುವ ಪ್ರಶ್ನೆಯನ್ನು ಯಾರಾದರೂ ಹಿರಿಯರ ಮುಂದಿಟ್ಟಾಗ ಸಿಗುತ್ತಿದ್ದ ಉತ್ತರಗಳಲ್ಲಿ ಕೆಲವು ಇಲ್ಲಿವೆ.
“ದೇವರಿಗೂ ಒಳ್ಳೆಯವರೆಂದರೆ ತುಂಬಾ ಪ್ರೀತಿ. ಹಾಗಾಗಿ ಅವರನ್ನು ಬಹುಬೇಗ ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆ.”
“ಈ ಜಗತ್ತಿನ ತುಂಬಾ ಇರುವ. ಕೆಟ್ಟಶಕ್ತಿಗಳೊಂದಿಗೆ ಒಳ್ಳೆಯವರು ಇರಬಾರದೆಂದು ಆ ದೇವರು ಅವರನ್ನು ದುಷ್ಟರಿಂದ ರಕ್ಷಿಸಲು ತನ್ನಲ್ಲಿಗೆ ಬೇಗ ಕರೆಸಿಕೊಳ್ಳುತ್ತಾನೆ.”
” ತೋಟದಲ್ಲಿ ಬೆಳೆದಿರುವ ಅನೇಕ ಹೂಗಳಲ್ಲಿ ಮೊದಲು ಸುಂದರವಾದ ಹೂವನ್ನೇ ಕೀಳುತ್ತೇವಲ್ಲವೇ..? ಹಾಗೆಯೇ ಒಳ್ಳೆಯವರೇ ಮೊದಲು ಇಲ್ಲವಾಗುತ್ತಾರೆ.”
ಈ ರೀತಿಯಾದ ಸಮಾಧಾನಕರ ಮಾತುಗಳು ಸಾಂತ್ವನದ ರೂಪದಲ್ಲಿ ಬರುವುದುಂಟು. ಆದರೆ ಒಳ್ಳೆಯವರನ್ನು ಬೇಗನೇ ಕಳೆದುಕೊಂಡ ದುಃಖವಿದೆಯಲ್ಲಾ ಅದನ್ನು ಈ ಯಾವುದರಿಂದಲೂ ಸರಿದೂಗಿಸಲಾಗದು, ಎದೆಯೊಳಗಿನ ಭಾರವನ್ನು ಕಡಿಮೆ ಮಾಡಲಾಗದು.
ಒಳ್ಳೆಯತನದಿಂದ ಜೀವಿಸಿದ ವ್ಯಕ್ತಿ ಕೇವಲ ಭೌತಿಕವಾಗಿ ನಮ್ಮನ್ನು ಅಗಲಬಹುದೇ ವಿನಃ ಅಂಥವರ ನೆನಪಿನಲ್ಲಿ, ಅವರ ವ್ಯಕ್ತಿತ್ವದಲ್ಲಿ, ಸಾಧನೆಯಲ್ಲಿ, ಒಳ್ಳೆಯತನದಲ್ಲಿ ಹಾಗೂ ಅವರು ಜೀವನದುದ್ದಕ್ಕೂ ಬದುಕಿದ ಸಾರ್ಥಕ ರೀತಿಯಲ್ಲಿ ಅವರು ಚಿರಕಾಲ ಎಲ್ಲರ ಮನಗಳಲ್ಲಿ ಅನುಕ್ಷಣವೂ ಜೀವಿಸುತ್ತಲೇ ಇರುತ್ತಾರೆ. ಅದೊಂಥರ ಒಬ್ಬ ವ್ಯಕ್ತಿಯ ಉಸಿರು ನಿಂತ ಮೇಲೂ ಅವನು ಅನೇಕರ ಉಸಿರುಗಳಲ್ಲಿ ಸದಾ ಉಸಿರಾಡುತ್ತಲೇ ಇರುವಂತಹ ಅವ್ಯಕ್ತ ಭಾವ, ಅನನ್ಯ ಅನುಭೂತಿ .!
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.








