ನವದೆಹಲಿ: ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದಡಿ ಭಾರತದ ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕ ಸೌಲಭ್ಯ ದೊರೆಯುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶಕ್ಕೆ ದೊರೆತ ಪ್ರಯೋಜನಕ್ಕಿಂತ ಭಾರತ ಹಿನ್ನಡೆಯಲ್ಲಿದೆ ಎಂಬ ರಾಹುಲ್ ಗಾಂಧಿ ಆರೋಪಗಳನ್ನು ತಳ್ಳಿಹಾಕಿದರು. ಸಂಸತ್ತಿನಲ್ಲಿ ತಪ್ಪು ಮಾಹಿತಿ ಹರಡಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಅಮೆರಿಕವು ಬಾಂಗ್ಲಾದೇಶದ ಸರಕುಗಳ ಮೇಲಿನ ಪ್ರತಿಸುಂಕವನ್ನು ಶೇ.19ಕ್ಕೆ ಇಳಿಸುವುದಾಗಿ ಹೇಳಲಾಗಿದೆ. ಆದರೆ ಅಮೆರಿಕದ ಹತ್ತಿ ಬಳಸಿ, ಯಂತ್ರಗಳ ನೆರವಿಲ್ಲದೆ ತಯಾರಿಸಿದ ನೂಲಿನಿಂದ ಸಿದ್ಧವಾದ ಜವಳಿ ಉತ್ಪನ್ನಗಳಿಗೆ ಮಾತ್ರ ಶೂನ್ಯ ಸುಂಕ ಅನ್ವಯವಾಗಲಿದೆ. ಈಗ ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಒಟ್ಟು ಶೇ.31ರಷ್ಟು ಸುಂಕ ವಿಧಿಸಲಾಗುತ್ತಿದೆ.
ಅಂತಿಮ ಭಾರತ–ಅಮೆರಿಕ ಒಪ್ಪಂದದಲ್ಲಿ ಬಾಂಗ್ಲಾದೇಶಕ್ಕೆ ದೊರೆತಂತೆಯೇ ಭಾರತಕ್ಕೂ ಸೌಲಭ್ಯ ಸಿಗಲಿದೆ ಎಂದು ಗೋಯಲ್ ಹೇಳಿದ್ದಾರೆ. ಭಾರತೀಯ ಕಂಪನಿಗಳು ಅಮೆರಿಕದ ಹತ್ತಿ ಮತ್ತು ನೂಲು ಖರೀದಿಸಿ ಉತ್ಪನ್ನ ತಯಾರಿಸಿ ಅಮೆರಿಕ ಮಾರುಕಟ್ಟೆಗೆ ರಫ್ತು ಮಾಡಿದರೆ ಶೂನ್ಯ ಸುಂಕ ಪ್ರಯೋಜನ ದೊರೆಯಲಿದೆ ಎಂದರು. ಇದರಿಂದ ದೇಶದ ಹತ್ತಿ ಬೆಳೆಗಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ –ಭೀಕರ ಸರಣಿ ಅಪಘಾತ; 7 ಮಂದಿ ಸ್ಥಳದಲ್ಲೇ ಸಾವು
ಮಧ್ಯಂತರ ಒಪ್ಪಂದದ ಮೂಲಕ ಅಮೆರಿಕ, ಯುರೋಪಿಯನ್ ಯೂನಿಯನ್, ಯುಕೆ, ಸ್ವಿಟ್ಜರ್ಲೆಂಡ್, ನಾರ್ವೆ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ರಫ್ತು ಹೆಚ್ಚಾಗಲಿದೆ. ಪ್ರಸ್ತುತ 5 ಲಕ್ಷ ಕೋಟಿ ರೂ. ಇರುವ ರಫ್ತು ಪ್ರಮಾಣವನ್ನು 10 ಲಕ್ಷ ಕೋಟಿ ರೂ.ಗೆ ಏರಿಸುವ ಗುರಿಯಿದೆ ಎಂದರು. ಈ ಹಿನ್ನೆಲೆಯಲ್ಲಿ ರೈತರು, ಮೀನುಗಾರರು, ಎಂಎಸ್ಎಂಇ ಕಾರ್ಮಿಕರು ಮತ್ತು ವಿಶ್ವಕರ್ಮರಿಂದ ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿಗೆ ಅವರು ಆಗ್ರಹಿಸಿದರು.








