ಬೆಂಗಳೂರು: ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್, ಲೋಕಾಯುಕ್ತ ಪೊಲೀಸರ ದಾಳಿಯ ಭೀತಿಯಲ್ಲಿ ಪರಾರಿಯಾಗಿದ್ದಾರೆ.
ಭ್ರಷ್ಟಾಚಾರ ಪ್ರಕರಣ: ಸುಳ್ಳು ಪ್ರಕರಣ ದಾಖಲಿಸಿ ₹4 ಕೋಟಿ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹೇರುತ್ತಿದ್ದ ಎಂಬ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, ಡೀಲ್ ಮಾಡುವಾಗ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಧಿಕಾರ ದುರ್ಬಳಕೆ ಆರೋಪದಡಿ ಇಬ್ಬರು ಪಿಸಿಗಳು ಸೇರಿ ಐವರು ಬಂಧನಕ್ಕೊಳಗಾಗಿದ್ದಾರೆ.
ಆರೋಪದ ವಿವರಗಳು:
- ಇನ್ಸ್ಪೆಕ್ಟರ್ ಕುಮಾರ್, ಸಿವಿಲ್ ಗುತ್ತಿಗೆದಾರ ಚನ್ನೇಗೌಡರ ಪತ್ನಿ ಅನುಷಾಗೆ ಕಿರುಕುಳ ನೀಡಿದ ಆರೋಪ.
- ಸುಳ್ಳು ಪ್ರಕರಣ ದಾಖಲಿಸಿ, ಚನ್ನೇಗೌಡ ಅವರ ₹4 ಕೋಟಿ ಮೌಲ್ಯದ ಮನೆಯ ಮಾರಾಟಕ್ಕೆ ಒತ್ತಾಯ.
- ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಕಿರುಕುಳ.
- ಗೂಂಡಾಗಳನ್ನು ಕಳುಹಿಸಿ ಬೆದರಿಕೆ, ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲಾದ ಬಗ್ಗೆ ಮಾಹಿತಿ.
- ಅಗ್ರಿಮೆಂಟ್ಗೆ ಸಹಿ ಹಾಕಿಸಲು ಒತ್ತಾಯ, ₹4 ಲಕ್ಷ ಆನ್ಲೈನ್ ವರ್ಗಾವಣೆ.
- ಸೋದರ ಸಂಬಂಧಿ ಗವಿ ಗೌಡ ಮತ್ತು ದಿವ್ಯಾ ಹೆಸರಿಗೆ ಮನೆ ನೋಂದಣಿಗೆ ಒತ್ತಡ.
ಲೋಕಾಯುಕ್ತ ದಾಳಿ:
ನಿನ್ನೆ ಸಂಜೆ ನಾಗರಬಾವಿಯ ಖಾಸಗಿ ಹೋಟೆಲ್ನಲ್ಲಿ ಡೀಲ್ ನಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾದರು. ಈ ಕಾರ್ಯಾಚರಣೆ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮುಂಜಾನೆ 3 ಗಂಟೆಯವರೆಗೆ ನಡೆಯಿತು. ಇದೀಗ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಸೇರಿದಂತೆ ಐವರು ಬಂಧನಕ್ಕೊಳಗಾಗಿದ್ದಾರೆ.