ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಕೆಎಸ್ಆರ್ಟಿಸಿ ಹಾಗೂ ಮೆಟ್ರೋ ಟಿಕೆಟ್ ದರಗಳನ್ನು ಹೆಚ್ಚಿಸಿ ನಾಗರಿಕರಿಗೆ ಭಾರೀ ಹೊರೆ ತಂದಿದ್ದು, ಇದೀಗ ಬೆಂಗಳೂರಿನ ನಿವಾಸಿಗಳಿಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಆಟೋ ರಿಕ್ಷಾ ಮಿನಿಮಮ್ ಪ್ರಯಾಣ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ ಹಾಗೂ ಪ್ರತಿ ಹೆಚ್ಚುವರಿ ಕಿಲೋಮೀಟರ್ ದರವನ್ನು 15ರಿಂದ 20 ರೂಪಾಯಿಗೆ ಏರಿಸುವ ಸಾಧ್ಯತೆ ಇದೆ.
ಈ ಕುರಿತಾಗಿ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಪ್ರಮುಖ ಆಟೋ ಚಾಲಕರ ಸಂಘಟನೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯ ಸಂದರ್ಭ, ಆಟೋ ದರ ಏರಿಕೆ ಕುರಿತಂತೆ ಚರ್ಚಿಸಿ, ಅಧಿಕೃತ ಆದೇಶ ಹೊರಡಿಸಬಹುದೆಂಬ ನಿರೀಕ್ಷೆ ಇದೆ.
ಈ ಹಿಂದೆ, ಎರಡು ತಿಂಗಳುಗಳ ಹಿಂದೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿಯೂ ಇದೇ ವಿಷಯ ಚರ್ಚೆಯಾಗಿತ್ತು. ಆದರೆ, ಆಗ ತಕ್ಷಣ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ನಂತರವೂ ಆಟೋ ಸಂಘಟನೆಗಳು ಪದೇ ಪದೇ ಸರ್ಕಾರದ ಗಮನ ಸೆಳೆದು, ದರ ಪರಿಷ್ಕರಣೆಗಾಗಿ ಒತ್ತಾಯ ಮಾಡುತ್ತ ಬಂದಿದ್ದವು.ಇದನ್ನು ಓದಿ –ಜನತೆಗೆ ಸೂರು ನೀಡುವುದೇ ನನ್ನ ಆದ್ಯತೆ: ನೂತನ ಆಯುಕ್ತ ಕೆ.ಆರ್.ರಕ್ಷಿತ್
ಇಂದಿನ ಸಭೆಯ ಬಳಿಕವೇ ಅಧಿಕೃತವಾಗಿ ಹೊಸ ದರ ಜಾರಿಗೆ ಬರುವ ಕುರಿತು ಸ್ಪಷ್ಟತೆ ಲಭ್ಯವಾಗುವ ಸಾಧ್ಯತೆ ಇದೆ. ಆಗಲೆ ಜನರು ಇಂಧನ ಬೆಲೆ ಏರಿಕೆ, ವಾಹನ ಭದ್ರತಾ ಶುಲ್ಕ, ಮತ್ತು ಇನ್ನಿತರೆ ಹಣಕಾಸು ಒತ್ತಡಗಳನ್ನು ಎದುರಿಸುತ್ತಿರುವ ಈ ಸಂದರ್ಭ, ಆಟೋ ದರ ಏರಿಕೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಬಜೆಟ್ ಹೊರೆ ಆಗುವ ಸಂಭವವಿದೆ.