ದಾವಣಗೆರೆ: ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಅವುಗಳನ್ನು ನಿಲ್ಲಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಮಾದರಿಯಾಗುವಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಪ್ರಧಾನಮಂತ್ರಿ ಕರ್ನಾಟಕದಲ್ಲಿ ಈ ಯೋಜನೆಗಳು ಜಾರಿಯಾಗಿಲ್ಲ ಎಂದು ಹೇಳಿರುವುದು ಆಶ್ಚರ್ಯಕರ. ನಮ್ಮ ಯೋಜನೆಗಳನ್ನು ಟೀಕಿಸಿದವರೇ ಬೇರೆ ರಾಜ್ಯಗಳಲ್ಲಿ ಅವನ್ನು ಅನುಸರಿಸಿದ್ದಾರೆ” ಎಂದು ಹೇಳಿದರು.
“ಬಿಜೆಪಿಯವರ ನಡೆ ಬಡವರು ಹಾಗೂ ನಿರುದ್ಯೋಗಿ ಯುವಕರ ವಿರುದ್ಧವಾಗಿದೆ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಇಲ್ಲಿಯವರೆಗೆ ಸರ್ಕಾರ ಸುಮಾರು ₹1.25 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ವಿನಿಯೋಗಿಸಿದೆ. ಈ ಯೋಜನೆಗಳು ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ, ಸರ್ಕಾರದ ಬದ್ಧತೆಯ ಭಾಗವಾಗಿದೆ ಎಂದರು.
“ಈ ತಿಂಗಳ ಕಂತು ಚುನಾವಣೆಯ ನಂತರ ಬಿಡುಗಡೆ ಆಗಲಿದೆ. ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ನಾವು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ. ಜನರಲ್ಲಿ ಆತಂಕ ಹುಟ್ಟಿಸುವವರು ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಪ್ರಚಾರ ನಡೆಯುತ್ತಿದೆ. ಪಕ್ಷದ ಸಂಪ್ರದಾಯದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ದಾವಣಗೆರೆ ನಗರದ ಅಭಿವೃದ್ಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, “ಈ ನಗರವು ಕಾಂಕ್ರೀಟ್ ರಸ್ತೆ, ಪಾರ್ಕ್, ಕೆರೆಗಳ ಸ್ವಚ್ಛತೆ ವಿಷಯದಲ್ಲಿ ಬೆಂಗಳೂರಿಗಿಂತಲೂ ಉತ್ತಮವಾಗಿದೆ. ಇದಕ್ಕೆ ಶ್ರಮಪಟ್ಟ ಅಧಿಕಾರಿಗಳು ಹಾಗೂ ಶಾಮನೂರು ಶಿವಶಂಕರಪ್ಪ ಅವರಿಗೆ ಅಭಿನಂದನೆಗಳು” ಎಂದರು.
“ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ನಡೆಸಿದ ಸಮೀಕ್ಷೆಯಲ್ಲಿ 70% ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಈ ಕ್ಷೇತ್ರದಲ್ಲಿ ಶಾಂತಿ, ಅಭಿವೃದ್ಧಿ ಕಾಪಾಡಲಾಗಿದೆ” ಎಂದು ಹೇಳಿದರು.
ಶಾಮನೂರು ಕುಟುಂಬವು ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ ಸಮಯದಲ್ಲಿ ಉಚಿತ ಲಸಿಕೆ ವಿತರಣೆ ಮಾಡಿತ್ತು. ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದನ್ನು ಓದಿ –ಕದನ ವಿರಾಮದ ಬಳಿಕ ಕಚ್ಚಾ ತೈಲ ದರ ಭಾರೀ ಕುಸಿತ
ಯುವಕರು ಹಾಗೂ ಹೊಸ ಪೀಳಿಗೆಯ ಚಿಂತನೆಗಳನ್ನು ಬಳಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.








