ದಾಸ ಸಾಹಿತ್ಯ ಭಕ್ತಿ ಪಥ. ಭಗವಂತನನ್ನು ಭಜನೆ ದೇವರನಾಮಗಳ ಮೂಲಕ ಆರಾಧಿಸಲು ಪರಿಣಾಮಕಾರಿ ಮಾಧ್ಯಮವಾಗಿದೆ. ದೇವರನ್ನು ಆರಾಧಿಸುವ ಜೀವನದ ಉದ್ದೇಶ, ಬದುಕುವ ರೀತಿಗಳನ್ನು ಇದರಲ್ಲಿ ಕಾಣಬಹುದು.
ಪುರಂದರದಾಸರ ತಾತ್ವಿಕ ನೆಲೆಗಟ್ಟಿನ ದೇವರನಾಮಗಳು ಮನುಷ್ಯನ ಬದುಕಿಗೆ ಜೊತೆಗೆ ಭಗವಂತನ ಅನುಗ್ರಹಕ್ಕೆ ಸಹಾಯಕವಾಗಿದೆ. ಇಂತಹ ಸಾಹಿತ್ಯ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ಮನರಂಜನಾ ಕ್ಷೇತ್ರದಲ್ಲೂ ಸೇರಿದೆ.
ಕಿರುತೆರೆ ಮತ್ತು ಹಿರಿತೆರೆ ಕ್ಷೇತ್ರದಲ್ಲಿ ಪುರಂದರದಾಸರ ಸಾಹಿತ್ಯ ಸಾಕಷ್ಟು ಕಡೆ ಬಳಸಲಾಗಿದೆ. ಕನ್ನಡ ಸಿನಿಮಾಗಳಲ್ಲಿ ಪುರಂದರದಾಸರ ದೇವರನಾಮಗಳನ್ಮು ಕನ್ನಡ ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಬಳಸಿ ಆಧುನಿಕ ಲೇಪ ನೀಡಿ ಹಾಡಿದ್ದಾರೆ. ಇಂತಿಷ್ಟು ಸುಶ್ರಾವ್ಯವಾಗಿರುವುದರ ಜೊತೆಗೆ ತನ್ನ ಸ್ವಂತಿಕೆಯನ್ನೂ ಕಾಪಾಡಿಕೊಂಡಿದೆ.
ನವಕೋಟಿ ನಾರಾಯಣ ಚಿತ್ರದ ಆದದ್ದೆಲ್ಲಾ ಒಳಿತೇ ಆಯಿತು,ಹಾಲು ಜೇನು ಚಿತ್ರದ ಪೋಗಾದಿರೆಲೋ ರಂಗ, ನೋಡಿ ಸ್ವಾಮಿ ನಾವಿರೋದೇ ಹೀಗೆ ಚಿತ್ರದ ಭಾಗ್ಯದ ಲಕ್ಷ್ಮೀ ಬಾರಮ್ಮ, ಉಪಾಸನೆ ಚಿತ್ರದ ಆಚಾರವಿಲ್ಲದ ನಾಲಿಗೆ, ಗರ್ವ ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆ ಪುರಂದರದಾಸರ ಆರು ಹಿತವರು ನಿನಗೆ ಈ ಮೂವರೊಳಗೆ.
ಇತ್ತೀಚಿನ ಕಾಲಘಟ್ಟದಲ್ಲಿ ಅಮೃತಧಾರೆ ಚಿತ್ರದ ಗಿಳಿಯು ಪಂಜರದೊಳಿಲ್ಲ ರಾಮ, ರನ್ನ ಚಿತ್ರದ ಆಡಿಸಿದಳೆ ಯಶೋಧೆ, ಗರುಡ ಗಮನ ವೃಷಭ ವಾಹನ ಚಿತ್ರದ ಚಂದ್ರಚೂಡ ಶಿವ ಶಂಕರ ಪಾರ್ವತಿ ಸೇರಿದಂತೆ ಸಾಕಷ್ಟು ದೇವರನಾಮಗಳು ಸಿನಿಮಾ ಹಾಡು ಗಳಾಗಿವೆ. ಕ್ರಿಯಾಶೀಲ ಪ್ರಯೋಗಗಳಲ್ಲೂ ದಾಸರ ಪದಗಳು ಮನರಂಜನೆ ನೀಡಿ ಸೈ ಎನಿಸಿಕೊಂಡಿವೆ.

ಕಾವೇರಿ ಭಾರದ್ವಾಜ್








