ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು, ಆಷಾಢದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹಾಗೂ ತಾಯಿ ಚಾಮುಂಡೇಶ್ವರಿ ದೇವಿಯ ಸೇವೆಗಳ ಶುಲ್ಕಗಳನ್ನು ಏಕಾಏಕೀ ಅತೀ ಹೆಚ್ಚು ಏರಿಕೆ ಮಾಡಿರುವುದನ್ನು ಖಂಡಿಸಿ ಇಂದು ಪ್ರತಿಭಟನೆಯನ್ನು ನಡೆಸಲಾಯಿತು.
ನಾಡ ದೇವತೆ ತಾಯಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಸರಿಯಾಗಿ ಕುಡಿಯುವ ನೀರೇ ಇಲ್ಲ. 5-6 ದಿನಗಳಿಗೊಮ್ಮೆ ಚಾಮುಂಡಿ ಬೆಟ್ಟಕ್ಕೆ ನೀರನ್ನು ಬಿಡಲಾಗುತ್ತಿದೆ. ದಿನಾಲು ನೀರಿಲ್ಲದೆ, ಅಲ್ಲಿನ ಸ್ಥಳೀಯ ನಿವಾಸಿಗಳು ಪರದಾಡುತ್ತಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಕುಡಿಯುವ ನೀರಿಗಾಗಿ ಬೆಟ್ಟಕ್ಕೆ ಹೊಸ ಪೈಪ್ ಲೈನ್ ಅನ್ನು ಹಾಕಲು ಕಾಮಗಾರಿ ಶುರು ಮಾಡಿದರೂ, ಇನ್ನೂ ಪೂರ್ಣವಾಗಿ ಕೆಲಸ ಮುಗಿದಿಲ್ಲದ ಪರಿಣಾಮ ಬೆಟ್ಟದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ಆದಾಯವಿರುವ ಬೆಟ್ಟಕ್ಕೆ ಸಮರ್ಪಕವಾಗಿ ದಿನಾಲು ನೀರನ್ನು ಬಿಡಬೇಕು.
ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಮೂಲಭೂತ ಸೌಕರ್ಯಗಳೇ ಇಲ್ಲ. ಕುಡಿಯಲು ಶುಚಿಯಾದ ಉಚಿತ ನೀರಿನ ವ್ಯವಸ್ಥೆಯಾಗಲಿ, ಸುಸಜ್ಜಿತ ಶೌಚಾಲಯಗಳಾಗಲಿ, ಹೊರಗಿನಿಂದ ಬರುವವರಿಗೆ ಮಡಿಯಾಗಿ ದೇವರ ದರ್ಶನ ಮಾಡಲು ಸ್ನಾನದ ಗೃಹಗಳಾಗಲಿ ಇಲ್ಲವೇ ಇಲ್ಲ. ಈಗಿರುವ ಒಂದೇ ಶೌಚಾಲಯದಲ್ಲಿ ಒಂದಕ್ಕೆ ( ಮೂತ್ರ ವಿಸರ್ಜನೆ ) 5 ರೂ ಹಾಗೂ ಎರಡಕ್ಕೆ (ಮಲ ವಿಸರ್ಜನೆ )10 ರೂ. ಗಳನ್ನು ವಸೂಲಿ ಮಾಡಲಾಗುತ್ತಿದೆ. ಇದು ಉಚಿತ ಮಾಡಬೇಕು. ಈಗ ಆಷಾಢದಲ್ಲಂತೂ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಸಮಯದಲ್ಲಿ ಸರ್ಕಾರ ಇವುಗಳ ಬಗ್ಗೆ ಗಮನ ಹರಿಸಿ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಕಲ್ಪಿಸಬೇಕು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು 5 ಬಿಟ್ಟಿ ಭಾಗ್ಯಗಳನ್ನು ಘೋಷಿಸಿ, ಆ ಯೋಜನೆಗಳಿಗೆ ಹಣ ಪೂರೈಸಲು ಆಗದೆ ಈಗ ಚಾಮುಂಡೇಶ್ವರಿ ದೇವಿಯ ಸೇವೆಗಳ ಶುಲ್ಕಗಳನ್ನು (ಅಭಿಷೇಕದ ಶುಲ್ಕವನ್ನು) ಏಕಾಏಕಿ 300 ರೂ ನಿಂದ 550 ರೂ ಗಳಿಗೆ ಏರಿಸಿರುವುದು ಭಕ್ತಾದಿಗಳಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಭಕ್ತಾದಿಗಳ ಧಾರ್ಮಿಕ ಆಚರಣೆ ಮೇಲೆ ಕಣ್ಣಿಟ್ಟು ಭಕ್ತಾದಿಗಳಿಂದ ಬಿಟ್ಟಿ ಭಾಗ್ಯಗಳಿಗೆ ಹಣವನ್ನು ಹೊಂದಿಸಲು ಹೊರಟಿರುವುದು ಸರ್ಕಾರದ ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಸರ್ಕಾರ ಈ ಕೂಡಲೇ ಏರಿಸಿರುವ ಅಭಿಷೇಕದ ಶುಲ್ಕವನ್ನು 300 ರೂ. ಗೆ ಯಥಾ ಸ್ಥಿತಿಗೆ ತರಬೇಕೆಂದು ಆಗ್ರಹಿಸುತ್ತಿದ್ದೇವೆ.
ಸರ್ಕಾರ ಈ ವರ್ಷ ಆಷಾಡ ಶುಕ್ರವಾರದ ವಿಶೇಷ ದರ್ಶನಕ್ಕಾಗಿ ಬೆಟ್ಟಕ್ಕೆ ರೂ. 2000 ಟಿಕೆಟ್ ಮಾಡಿರುವುದು ಅತ್ಯಂತ ಖಂಡನೀಯ. ಸರ್ಕಾರ ಬಿಟ್ಟಿ ಭಾಗ್ಯಗಳಿಗಾಗಿ ಸಿಕ್ಕ ಸಿಕ್ಕ ಕಡೆಯಿಂದ ಸಾರ್ವಜನಿಕರಿಂದ (ಭಕ್ತಾದಿಗಳಿಂದ) ಹಣ ದೋಚಿ ಹಗಲು ದರೋಡೆ ಮಾಡುತ್ತಿದೆ. ದೇವರ ದರ್ಶನಕ್ಕೆ ಸರಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಿಂದ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಹಾಗೂ ಈ ಕೂಡಲೇ 2000 ರೂ ದುಬಾರಿ ಟಿಕೆಟ್ ಅನ್ನು ರದ್ದುಗೊಳಿಸಿ (ಹಿಂಪಡೆದು) ಪ್ರತಿಯೊಬ್ಬರಿಗೂ ಹಣದ ಭೇದ ಭಾವವಿಲ್ಲದೆ ಕಳೆದ ವರ್ಷದಂತೆ ದರ್ಶನ ಸಿಗುವಂತೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.ಇದನ್ನು ಓದಿ –ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ
ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ ಪ್ರಜೀಶ್.ಪಿ, ಲಕ್ಷ್ಮೀದೇವಿ, ಪ್ರಭುಶಂಕರ್, ಶಿವಲಿಂಗಯ್ಯ, ಕೇಬಲ್ ರಮೇಶ್ , ಸಿಂಧುವಳ್ಳಿ ಶಿವಕುಮಾರ್, ಕೃಷ್ಣೆಗೌಡ, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಡಾ. ಶಾಂತರಾಜೇ ಅರಸ್, ಲಕ್ಷ್ಮಿ, ನೇಹಾ , ಹನುಮಂತಯ್ಯ, ಭಾಗ್ಯಮ್ಮ, ಕುಮಾರ್ , ಪದ್ಮ , ನಾಗರಾಜ್, ರಾಧಾಕೃಷ್ಣ, ಮೂರ್ತಿ ಲಿಂಗಯ್ಯ, ಬಸವರಾಜ್, ಕುಮಾರ್, ಗಣೇಶ್ ಪ್ರಸಾದ್, ರವಿ ನಾಯಕ್ , ಪ್ರದೀಪ್, ಪ್ರಭಾಕರ್, ವಿಷ್ಣು ಮುಂತಾದವರು ಉಪಸ್ಥಿತರಿದ್ದರು .