- ಎಫ್ಎಸ್ಎಲ್ ತಂಡದಿಂದ 2 ಜೀವಂತ ಕಾರ್ಟ್ರಿಡ್ಜ್ ವಶ
ನವದೆಹಲಿ, ನವೆಂಬರ್ 11: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಸ್ಫೋಟ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸ್ಫೋಟದ ಸ್ಥಳ ಪರಿಶೀಲನೆ ವೇಳೆ ಎಫ್ಎಸ್ಎಲ್ (FSL) ತಂಡವು 2 ಜೀವಂತ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದೆ. ಇತ್ತ ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ತನಿಖಾ ತಂಡದ ಪ್ರಕಾರ, ಸ್ಥಳದಿಂದ ಎರಡು ವಿಭಿನ್ನ ಮಾದರಿಯ ಸ್ಫೋಟಕಗಳ ಸ್ಯಾಂಪಲ್ಗಳು ಸಂಗ್ರಹಿಸಲ್ಪಟ್ಟಿವೆ. ಒಂದು ಅಮೋನಿಯಂ ನೈಟ್ರೇಟ್ಗೆ ಹೋಲಿಕೆಯ ವಸ್ತುವಾಗಿದ್ದರೆ, ಇನ್ನೊಂದು ಅದಕ್ಕಿಂತ ಹೆಚ್ಚು ಪ್ರಬಲವಾದ ಸ್ಫೋಟಕವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟ ಸ್ಥಳದಿಂದ ಒಟ್ಟು 42 ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 20 ವಸ್ತುಗಳು ವಾಹನ ಭಾಗಗಳು — ಟೈರ್ಗಳು, ಚಾಸಿಸ್, ಸಿಎನ್ಜಿ ಸಿಲಿಂಡರ್ ಮತ್ತು ಬಾನೆಟ್ ಭಾಗಗಳಿವೆ. ಇವುಗಳ ವಿಶ್ಲೇಷಣಾ ಕಾರ್ಯ ಇಂದು ಆರಂಭವಾಗಿದೆ.
ತನಿಖಾ ಅಧಿಕಾರಿಗಳು ಸ್ಫೋಟಗೊಂಡ ಕಾರಿನ ಮೂಲ ಮತ್ತು ಮಾಲೀಕತ್ವದ ಬಗ್ಗೆ ಹೆಚ್ಚಿನ ವಿವರಗಳನ್ನು ಹುಡುಕುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಾಹುತಿ ದಾಳಿ ಅಲ್ಲ, ಬದಲಾಗಿ ಶಂಕಿತ ಉಗ್ರ ಡಾ. ಉಮರ್ ಮೊಹಮದ್ನಿಂದ ಉಂಟಾದ ಅಪಘಾತ ಅಥವಾ ಅಪಕವ ಸ್ಫೋಟ ಎಂದು ಅಂದಾಜಿಸಲಾಗಿದೆ. ಕಾರಿನಲ್ಲಿ ಸುಧಾರಿತ ಸ್ಫೋಟಕಗಳಿಲ್ಲ, ಬದಲಾಗಿ “ಅಪಕ್ವ ರೀತಿಯ ಸ್ಫೋಟಕಗಳು” ಬಳಸಲಾಗಿದ್ದವು ಎಂದು ತನಿಖಾ ವರದಿ ಸೂಚಿಸಿದೆ.
ಗುಪ್ತಚರ ಇಲಾಖೆಯು ಇದೀಗ ಡಾ. ಉಮರ್ ಮೊಹಮದ್ನ ಹಾದಿ ಮತ್ತು ನಂಟುಗಳ ಬಗ್ಗೆ ತನಿಖೆ ನಡೆಸುತ್ತಿದೆ. ಉಮರ್ ಕಳೆದ ಅಕ್ಟೋಬರ್ನಲ್ಲಿ ದೆಹಲಿಗೆ ಭೇಟಿ ನೀಡಿ ನಂತರ ಶ್ರೀನಗರಕ್ಕೆ ಪ್ರಯಾಣಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ಟೋಬರ್ 5ರಿಂದ 9ರವರೆಗೆ ಆತ ಶ್ರೀನಗರದ ಆವಂತಿಪೊರಾ ಮತ್ತು ಬತ್ಮಾಲೂ ಪ್ರದೇಶಗಳಲ್ಲಿ ಇದ್ದು, ಅಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಬೆಂಬಲಿಗರೊಂದಿಗೆ ಗುಪ್ತ ಸಭೆ ನಡೆಸಿದ್ದಾನೆಂದು ಶಂಕೆ ವ್ಯಕ್ತವಾಗಿದೆ. ಇದೇ ಅವಧಿಯಲ್ಲಿ ಆತ ಸ್ಫೋಟಕ್ಕೆ ಬಳಸಿದ ಕಾರು ಖರೀದಿಸಿದ್ದಾನೆ ಎಂಬ ಮಾಹಿತಿ ಕೂಡ ದೊರಕಿದೆ.ಇದನ್ನು ಓದಿ –ದೆಹಲಿ ಸ್ಫೋಟ :ಶಂಕಿತ ಆತ್ಮಾಹುತಿ ಬಾಂಬರ್ ಫೋಟೋ ಬಿಡುಗಡೆ
ಈ ಪ್ರಕರಣದಲ್ಲಿ ಈಗಾಗಲೇ ಶೋಪಿಯಾನ್ ಜಿಲ್ಲೆಯ ಮೌಲ್ವಿ ದಂಪತಿಯನ್ನು ಬಂಧಿಸಲಾಗಿದ್ದು, ಅವರ ಬಳಿಯಿಂದ 5 ಮೊಬೈಲ್ಫೋನ್ಗಳು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಮೌಲ್ವಿ ಇಮಾಮ್ ಮತ್ತು ಉಗ್ರ ಮುಜಮ್ಮಿಲ್ ನಡುವೆ ಸಂಪರ್ಕವಿದ್ದದ್ದು ಬಹಿರಂಗವಾಗಿದೆ. ತನಿಖೆಯಿಂದ ಪಾಕಿಸ್ತಾನ ಮೂಲದ ತಂಡದೊಂದಿಗೆ ಟೆಲಿಗ್ರಾಂ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಶಂಕಿತರು ಪತ್ತೆಯಾಗಿದ್ದಾರೆ.








