ಮಂಡ್ಯ: ಶ್ರೀರಂಗಪಟ್ಟಣದ 415ನೇ ದಸರಾ ಮಹೋತ್ಸವಕ್ಕೆ ಇಂದು (ಸೆ.25) ಭವ್ಯವಾಗಿ ಚಾಲನೆ ದೊರೆತಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಂಭ್ರಮಕ್ಕೆ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತ ಆರಂಭ ನೀಡಲಾಯಿತು.
ಕಿರಂಗೂರು ಬನ್ನಿಮಂಟಪದಲ್ಲಿ ಮಂಗಳಾರತಿ ಹಾಗೂ ಪೂಜಾ ಕೈಂಕರ್ಯಗಳ ಬಳಿಕ ಪ್ರಸಿದ್ಧ ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ದಸರಾ ಆನೆ ಮಹೇಂದ್ರನ ಮೇಲೆ ಮರದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡದೇವಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಮಹೇಂದ್ರನಿಗೆ ಜೊತೆಯಾಗಿ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಲಕ್ಷ್ಮೀ ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಆಕರ್ಷಣೆಯ ಕೇಂದ್ರಬಿಂದುಗಳಾಗಿದವು.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಸಾಂಪ್ರದಾಯಿಕ ನೃತ್ಯ, ವಾದ್ಯಮೇಳ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮನಸೆಳೆಯಿತು. ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ದಚಿತ್ರಗಳ ಪ್ರದರ್ಶನ ಪ್ರೇಕ್ಷಕರ ಕಣ್ತುಂಬಿಸಿಕೊಂಡಿತು.ಇದನ್ನು ಓದಿ –ದಸರಾ ಕಳೆ ಹೆಚ್ಚಿಸಿದ ಲೋಹದ ಹಕ್ಕಿಗಳ ರೋಮಾಂಚಕಾರಿ ವೈಮಾನಿಕ ಪ್ರದರ್ಶನ
ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಂಜೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿಯ ವೇದಿಕೆಯಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಸಂಭ್ರಮಕ್ಕೆ ಇನ್ನಷ್ಟು ಕಳೆ ನೀಡಲಿವೆ.








