ನಮಸ್ತೇ ಸದಾ ವತ್ಸಲೇ ಮಾತೃಭೂಮೇ |
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ ||
ಈ ಪ್ರಾರ್ಥನೆಯನ್ನು ಕೇಳದೆ ಇರುವ ಭಾರತೀಯ ಬಹುಶಃ ಇರಲಿಕ್ಕಿಲ್ಲ. ನಮ್ಮ ಉಪಮುಖ್ಯಮಂತ್ರಿಗಳು. ಹಾಗು, ಹುಟ್ಟಾ
ಕಾಂಗ್ರೆಸ್ನ ನಾಯಕರಾದ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಇದನ್ನು ವಿಧಾನಸಭೆಯಲ್ಲಿ ಹಾಡಿ ಅನಂತರ ಕ್ಷಮೆ ಕೇಳಿದ್ದು
ದೊಡ್ಡ ವಿಷಯವಾಗಿತ್ತು. ಹೀಗಾಗಿ ಆರ್ ಎಸ್ ಎಸ್ ಅಲ್ಲದವರು ಸಹ ಈ ಪ್ರಾರ್ಥನೆಯನ್ನು ಪ್ರೀತಿಸಿ , ಹಾಡುವಷ್ಟು ಪ್ರಸಿದ್ಧಿ
ಈ ಪ್ರಾರ್ಥನೆಗಿದೆ . ಇದು ಆರ್ ಎಸ್ಎಸ್ ನ ಪ್ರಾರ್ಥನಾ ಗೀತೆ ಮತ್ತು ಸಂಘದಲ್ಲಿ ಪ್ರಾರ್ಥನೆಯನ್ನು ಕಡ್ಡಾಯವಾಗಿ
ಹಾಡಲಾಗುತ್ತದೆ .
1940 ರಲ್ಲಿ ಡಾ. ಹೆಡ್ಗೆವಾರ್ , ಮಾಧವ ಸದಾಶಿವ ಗೋಲ್ವಾಲ್ಕರ್ ಮತ್ತು ಹಿರಿಯ ಅರ್ ಎಸ್ ಎಸ್ ನಾಯಕರ
ಮಾರ್ಗದರ್ಶನದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದ ನರಹರಿ ನಾರಾಯಣ ಬಿಡೆ ಅವರು ಈ ಪ್ರಾರ್ಥನೆಯನ್ನು ಬರೆದರು. ಈ
ಪ್ರಾರ್ಥನೆಯನ್ನು ಮೇ 18, 1940 ರಲ್ಲಿ ನಾಗಪುರದಲ್ಲಿ ನಡೆದ ಶಿಕ್ಷಾ ವರ್ಗದಲ್ಲಿ ಅಂದು ಪ್ರಚಾರಕರಾಗಿದ್ದ ಯಾದವ ರಾವ್
ಜೋಶಿ ಅವರು ಸಂಘದ ಪ್ರಾರ್ಥನೆಯನ್ನು ಸಾರ್ವಜನಿಕವಾಗಿ ಪ್ರಥಮವಾಗಿ ಹಾಡಿದರು.
ಭಾರತದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟ ಹಾಗು ಪ್ರಭಾವ ಬೀರಿದ ಸಂಘಟನೆಗಳಲ್ಲಿ ರಾಷ್ಟ್ರೀಯ
ಸ್ವಯಂ ಸೇವಕ ಸಂಘ ಪ್ರಮುಖವಾದದ್ದು. ಎಷ್ಟೇ ಅಡೆತಡೆಗಳು, ನಿರ್ಬಂಧಗಳು ಇದ್ದರೂ, ಎದೆಗುಂದದೆ , ಧೈರ್ಯದಿಂದ
ಎದುರಿಸಿ, ತನ್ನ ಸಿದ್ಧಾಂತಕ್ಕೆ ಬದ್ಧವಾಗಿ 100 ವರ್ಷಗಳಲ್ಲಿ ಬೆಳೆಯುತ್ತಲೇ ಬಂದು ವಿಶ್ವದಲ್ಲೇ ಒಂದು ಬೃಹತ್ ಶಿಸ್ತಿನ
ಸಂಘಟನೆಯಾಗಿ ಬೆಳೆದಿರುವುದು ಒಂದು ಅದ್ಭುತ ವಿಷಯ.
ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಭಾರತವನ್ನು ಒಡೆದು ಆಳುತ್ತಿದ್ದ ಬ್ರಿಟಿಷರು ಸಮಾಜವನ್ನು ಜಾತಿ ಜಾತಿಯಾಗಿ ಒಡೆದು,
ಹಿಂದೂ ಸಮಾಜ ಒಗ್ಗಟ್ಟಾಗಿ ಇರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಸಮಾಜದಲ್ಲಿ ಅದರಲ್ಲೂ ,
ಹಿಂದೂಗಳಲ್ಲಿ ಏಕತೆಯ ಕೊರತೆಯಿತ್ತು. ಇಂತಹ ಕ್ಲಿಷ್ಟ ಸಮಯದಲ್ಲಿ ಡಾ. ಹೆಡ್ಗೆವಾರ್ ಅವರು 1925 ರ ವಿಜಯದಶಮಿಯ
ದಿನದಂದು ನಾಗಪುರದಲ್ಲಿ.ಆರ್. ಎಸ್ ಎಸ್. ಸ್ಥಾಪಿಸಿದರು. ಅಂದು ಡಾ. ಹೆಡ್ಗೆವಾರ್ ಅವರು ನೆಟ್ಟ ಸಸಿ ಇಂದು ಬೃಹತ್
ಮರವಾಗಿ ಬೆಳೆದು ವಿಶ್ವದಲ್ಲೇ ಅತಿ ಶಿಸ್ತಿನ ಸೇವಾ ಮನೋಭಾವದ ಕಾರ್ಯಕರ್ತರಿಂದ ತುಂಬಿ , ಅತಿ ಯಶಸ್ವಿ ಸಂಘಟನೆಯಾಗಿ ತನ್ನ ನೂರನೇ ವರ್ಷದ ಸಂಭ್ರಮೋತ್ಸವವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ.
ಡಾ. ಹೆಡ್ಗೆವಾರ್ ಅವರಿಂದ ಸ್ಥಾಪಿತವಾದ ಆರೆಸ್ಸೆಸ್ ಅವರ ನಾಯಕತ್ವದಲ್ಲಿ ಬಲವಾಗಿ ಬೇರೂರಿತು. 1940 ರಲ್ಲಿ ಡಾ.
ಹೆಡ್ಗೇವಾರ್ ಅವರ ನಿಧನದ ನಂತರ ಸಂಘದ ನೇತೃತ್ವ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ನೇತೃತ್ವಕ್ಕೆ ಬಂದಿತು. ಅವರ ನೇತೃತ್ವದಲ್ಲಿ ಸಂಘವು ದೇಶದಾದ್ಯಂತ ಸಾವಿರಾರು ಶಾಖೆಗಳನ್ನು ಪ್ರಾರಂಭಿಸಿತು. ರಾಷ್ಟ್ರದ ಏಕತೆಗೆ ಹಿಂದುತ್ವವೇ ಮುಖ್ಯ ಎಂದು ಪ್ರತಿಪಾದಿಸಲಾಯಿತು. ಆರ್ ಎಸ್ ಎಸ್ ವಿದ್ಯಾರ್ಥಿ , ಕಾರ್ಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಆರೆಸ್ಸೆಸ್ನ ಅಂಗ ಸಂಸ್ಥೆಗಳು ಬೆಳೆಯಿತು.
ಆರ್ ಎಸ್ ಎಸ್ ತನ್ನ ತತ್ವದಲ್ಲಿ ಹಿಂದುತ್ವವನ್ನೇ ಆಧಾರವಾಗಿಟ್ಟುಕೊಂಡು, ದೇಶದ ಗುರುತು, ಅಸ್ಮಿತೆ ಅದರ ಮೂಲ ದೇಶದ
ಸಂಸ್ಕೃತಿಯಲ್ಲಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಾ ಬಂದು ಅದರಲ್ಲಿ ಬಹುಶಃ ಯಶಸ್ವಿಯಾಯಿತು. ವ್ಯಕ್ತಿತ್ವ ನಿರ್ಮಾಣದಲ್ಲಿ
ಶಿಸ್ತು ಮತ್ತು ಸೇವೆಯೇ ಮುಖ್ಯವೆಂದು ತನ್ನ ಕಾರ್ಯಕರ್ತರನ್ನು ಅದರಂತೆ ತಯಾರು ಮಾಡಿತು. ಸಮಾಜದಲ್ಲಿ ಏಕತೆಯನ್ನು
ಪ್ರತಿಪಾದಿಸುತ್ತ ಜಾತಿ ವಿರೋಧಕ್ಕೆ ಒತ್ತು ಕೊಟ್ಟಿತು . ಆದರೂ, ಆರೆಸ್ಸೆಸ್ ಮೇಲ್ವರ್ಗದ ಮತ್ತು ಬ್ರಾಹ್ಮಣರ ಸಂಘವೆಂಬ
ಹಣೆಪಟ್ಟಿಯನ್ನು ಮತ್ತು ಆರೋಪವನ್ನು ಇಂದಿಗೂ ತೊಡೆದು ಹಾಕಲು ಸಾಧ್ಯವಾಗಿಲ್ಲ.
ತನ್ನ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟು, ಸಂಘಟನೆಯನ್ನು ಸ್ವಾವಲಂಬನೆಯ ಸಂಘಟನೆಯನ್ನಾಗಿ ಮಾಡಿದ್ದು ಸಂಘದ
ಯಶಸ್ಸಿಗೆ ಕಾರಣವಾಯಿತು. ಸಾಮೂಹಿಕ ನಾಯಕತ್ವ, ರಾಷ್ಟ್ರಾಭಿಮಾನ, ರಾಷ್ಟ್ರದ ಏಕತೆಯ ಪ್ರತಿಪಾದನೆ , ಹಿಂದುತ್ವವೇ
ಭಾರತದ ಅಸ್ಮಿತೆಯೆಂದು ಬಲವಾದ ಪ್ರತಿಪಾದನೆ , ಎಲ್ಲದಕ್ಕಿಂತ ಸ್ವಯಂ ಸೇವಕರಲ್ಲಿ ವ್ಯಕ್ತಿತ್ವ ನಿರ್ಮಾಣ ಇವೆಲ್ಲವು ಸಂಘದ
100 ವರ್ಷಗಳ ಪ್ರಯಾಣದ ಯಶಸ್ಸಿಗೆ ಕಾರಣವಾದವು .
ಹಿಂದುತ್ವದ ಪ್ರತಿಪಾದನೆಯಿಂದ ವಿರೋಧಿಗಳು ಆರ್ ಎಸ್ ಎಸ್ ನವರನ್ನು ಕೋಮವಾದಿಗಳು , ಜಾತ್ಯಾತೀತ ತತ್ವಕ್ಕೆ
ವಿರೋಧವೆಂದು ವಿರೋಧಿಸುತ್ತಲೇ ಬಂದರು. ಆದಾಗ್ಯೂ, ಆರೆಸ್ಸೆಸ್ ತನ್ನ ಸಿದ್ಧಾಂತದಲ್ಲಿ ರಾಜಿ ಆಗದೆ ಹಿಂದುತ್ವಕ್ಕೆ ತನ್ನ
ಬದ್ಧತೆಯನ್ನು ಕಾಪಾಡಿಕೊಂಡು ಬಂದಿದೆ .
ಆರ್ ಎಸ್. ಎಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ ಎಂಬುದು ಆರೆಸ್ಸೆಸ್ ವಿರೋಧಿಗಳ ಮುಖ್ಯ ಆರೋಪ. ಈ
ಆರೋಪಕ್ಕೆ ಆರೆಸ್ಸೆಸ್ ನಾಯಕರಾದ ದತ್ತಾತ್ರೇಯ ಹೊಂಬಾಳೆಯವರು 2023 ರಲ್ಲಿ ಕೇರಳದಲ್ಲಿ ಮಾತನಾಡುತ್ತ ಡಾ.
ಹೆಡ್ಗೆವಾರ್ ರವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು ಮತ್ತು ಅವರು ಲೋಕಮಾನ್ಯ ತಿಲಕ್ ಅವರಿಂದ ಸಾಕಷ್ಟು
ಪ್ರಭಾವಿತರಾಗಿದ್ದರು ಎಂದು ತಿಳಿಸುತ್ತ, 1899 ಮತ್ತು 1919 ರ ನಡುವೆ, ದೇಶಾದ್ಯಂತ ಬ್ರಿಟಿಷರ ವಿರುದ್ಧ ಸಶಸ್ತ್ರ
ಹೋರಾಟವನ್ನು ಸಂಘಟಿಸಲು ಮತ್ತು ತಮ್ಮದೇ ಆದ ಕ್ಷೇತ್ರಗಳಲ್ಲಿ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸಿದ ಅನೇಕ
ಜನರಿದ್ದರು. ಜೋಗೇಶ್ ಚಂದ್ರ ಚಟರ್ಜಿ ರವರು ತಮ್ಮ ಪುಸ್ತಕ ಇನ್ ಸರ್ಚ್ ಆಫ್ ಫ್ರೀಡಂ ಪುಸ್ತಕದಲ್ಲಿ ತಿಳಿಸಿರುವಂತೆ
ಹೆಡ್ಗೇವಾರ್ ಅವರು ಬಂಗಾಳದಲ್ಲಿ ಕ್ರಾಂತಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಬಂಗಾಳದಿಂದ ಶಸ್ತ್ರಾಸ್ತ್ರಗಳನ್ನು ತಂದು
ನಾಗಪುರದ ಕೇಂದ್ರ ಪ್ರಾಂತ್ಯದಲ್ಲಿ ವಿತರಿಸುತ್ತಿದ್ದರು .
ಹೆಡ್ಗೇವಾರ್ ಅವರು ಜನವರಿ 1904 ರಲ್ಲಿ ಪೊಲೀಸರು ಪ್ರಕಟಿಸಿದ ರಾಜಕೀಯ ಅಪರಾಧಗಳು ಎಂಬ ಕಿರು ಪುಸ್ತಕದಲ್ಲಿ ಅವರ ಹೆಸರು ಇತ್ತು. ಕ್ರಾಂತಿಕಾರಿ ಸಂಘಟನೆಗಳು ಮತ್ತು ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದ ಬಾಂಬ್ ಮತ್ತು ಇತರ ಸ್ಫೋಟಕಗಳನ್ನು ಹೇಗೆ ತಯಾರಿಸಬೇಕೆಂದು ತಿಳಿದಿದ್ದ ವ್ಯಕ್ತಿಗಳನ್ನು ಮಾತ್ರ ಅಲ್ಲಿ ಪಟ್ಟಿ ಮಾಡಲಾಗಿತ್ತು. ಆರ್ ಎಸ್ ಎಸ್ ಮತ್ತು ಅದರ ಸಂಸ್ಥಾಪಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದರು ಎಂದು ಇದು ತಿಳಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸ್ವಯಂ ಸೇವಕ ಸಂಘದ ವಿರೋಧಿಗಳ ಮತ್ತೊಂದು ದೊಡ್ಡ ಆರೋಪ ಆರ್ ಎಸ್ ಎಸ್ ಭಾರತದ ರಾಷ್ಟ್ರಧ್ವಜವನ್ನು
ಒಪ್ಪುವುದಿಲ್ಲ ಎಂಬುದು. ಆಗಸ್ಟ್ 12, 2022 ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯಂತೆ, ಆರ್ ಎಸ್. ಎಸ್ . ಆಗಸ್ಟ್
15, 1947 ಮತ್ತು 26 ಜನವರಿ 1951 ರಂದು ತನ್ನ ಕೇಂದ್ರ ಸ್ಥಾನ ನಾಗಪುರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿತು ಎಂದು
ತಿಳಿಸಿದೆ. 1950 ರಿಂದ 2001 ರವರೆಗೆ ರಾಷ್ಟ್ರಧ್ವಜವನ್ನು ತನ್ನ ಕೇಂದ್ರ ಕಛೇರಿಯಲ್ಲಿ ಹಾರಿಸಿರಲಿಲ್ಲ. ಎಂ ಎಸ್
ಗೋಲ್ವಾಲ್ಕರ್ ಸರಸಂಘಚಾಲಕರಾಗಿ ಬರೆದ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಕಾಂಗ್ರೆಸ್ ರಾಷ್ಟ್ರ ಧ್ವಜವನ್ನು ತ್ರಿವರ್ಣ
ರೂಪದಲ್ಲಿ ಅಳವಡಿಸಿಕೊಂಡಿದ್ದನ್ನು ಬಲವಾಗಿ ಆಕ್ಷೇಪಿಸಿದ್ದಾರೆ. ತಿರಂಗಾ ಮೂರು ಬಣ್ಣಗಳನ್ನು. ಹೊಂದಿರುವುದರಿಂದ ಅದು
ಅಪಶಕುನವೆಂದು ಹಾಗೂ ಅದು ಭಾರತದ ಹಿಂದೂ ಮತ್ತು ಸನಾತನ ಪರಂಪರೆಯನ್ನು ಬಿಂಬಿಸುವುದಿಲ್ಲವೆಂದು ಬಲವಾಗಿ
ವಿರೋಧಿಸಿದರು . ಆರ್. ಎಸ್. ಎಸ್ ನ ಮೋಹನ್ ಭಾಗವತ್ ಅವರು 2018 ರಲ್ಲಿ ಮಾತನಾಡುತ್ತ ಆರ್ ಎಸ್. ಎಸ್
ರಾಷ್ಟ್ರಧ್ವಜವನ್ನು ಯಾವಾಗಲು ಗೌರವಿಸುತ್ತಾ ಬಂದಿದೆ ಎಂದು ತಿಳಿಸಿದ್ದಾರೆ. 2002 ರಿಂದ ಆರ್ಎಸ್ಎಸ್ ನಾಗಪುರದ ತನ್ನ
ಕೇಂದ್ರ ಸ್ಥಳದಲ್ಲಿ ಧ್ವಜವನ್ನು ಹಾರಿಸುತ್ತಿದೆ.
ಆರ್ ಎಸ್ ಎಸ್ ನಲ್ಲಿ ಎಷ್ಟೇ ವಿವಾದಗಳಿದ್ದರೂ.ಅಲ್ಲಿಗೆ ಅನೇಕ ನಾಯಕರು ಭೇಟಿ ಕೊಟ್ಟಿದ್ದಾರೆ. 1934 ರಲ್ಲಿ ಮಹಾತ್ಮಾ
ಗಾಂಧಿಯವರು ವಾರ್ಧಾದ ಆರೋಗ್ಯ ಶಿಬಿರಕ್ಕೂ , 1939 ರಲ್ಲಿ ಬಿ ಆರ್ ಅಂಬೇಡ್ಕರ್ ಅವರು ಪುಣೆಯ ಶಿಬಿರಕ್ಕೂ ಆಗಮಿಸಿ ,
ಸಂಘದ ಸಮರಸತೆಯ ವಾತಾವರಣವನ್ನು ಕೊಂಡಾಡಿದ್ದಾರೆ. 2008 ರಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಮಾಜಿ ರಾಷ್ಟ್ರಪತಿ
ಪ್ರಣವ್ ಮುಖರ್ಜಿ ಅವರು ಆರೆಸ್ಸೆಸ್ ನಾಗಪುರಕ್ಕೆ ಆಗಮಿಸಿ ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ 83129 ನಿತ್ಯ ಶಾಖೆಗಳು 32147 ಮಿಲನ್ ಗಳು, 12091 ಸಂಘ ಮಂಡಳಿಗಳು
ಇದ್ದು ಇಲ್ಲಿ ವ್ಯಾಯಾಮದ ಮೂಲಕ ಶಾರೀರಿಕ ಕ್ಷಮತೆ, ವರ್ಧನೆ, ಭೌದ್ಧಿಕ ಚಟುವಟಿಕೆಗಳ ಮೂಲಕ ವೈಚಾರಿಕ ಕ್ಷಮತೆ
ಮುಂತಾದವನ್ನು ತನ್ನ ಸ್ವಯಂ ಸೇವಕರಲ್ಲಿ ತುಂಬುತ್ತಿದೆ ಆರ್ ಎಸ್ ಎಸ್ ನಲ್ಲಿ ಎಲ್ಲರಿಗೂ.ಮುಕ್ತ ಪ್ರವೇಶವಿದ್ದು ಯಾವುದೇ ಜಾತಿ , ವಯೋಮಾನದ ನಿರ್ಬಂಧವಿಲ್ಲ. ಆರ್ ಎಸ್ ಎಸ್ ತನ್ನ ಸೇವಾ ಚಟುವಟಿಕೆಗಳಿಂದ ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿದೆ. ವಿದ್ಯಾಭಾರತಿಯ ಮೂಲಕ 20 ಸಾವಿರ ಕ್ಕೂ ಹೆಚ್ಚು ಶಾಖೆಗಳು, ಸೇವಾಭಾರತಿ ಆಸ್ಪತ್ರೆಗಳು, ಮೊಬೈಲ್ ಕ್ಲಿನಿಕ್ ಗಳು, ಅಸ್ಪೃಶ್ಯತೆ ವಿರೋಧಿ ಅಭಿಯಾನಗಳು, ವನವಾಸಿ ಕಲ್ಯಾಣ ಆಶ್ರಮ ಕಾರ್ಯಕ್ರಮಗಳು ಮುಂತಾದವನ್ನು ನಡೆಸಿಕೊಂಡು ಬರುತ್ತಿದೆ. ಯಾವುದೇ ನೈಸರ್ಗಿಕ ಆಪತ್ತುಗಳು.
ರೈಲ್ವೆ ಅಪಘಾತಗಳು.ಸುನಾಮಿ ಭೂಕಂಪ ಇಂತಹ ಯಾವುದೇ ಆಪತ್ತುಗಳು ದೇಶಕ್ಕೆ ಬಂದಾಗ ಆರ್ ಎಸ್ ಎಸ್ ಪಡೆ ತನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತದೆ. ಇದನ್ನು ಆರೆಸ್ಸೆಸ್ ವಿರೋಧಿಗಳು ಕೂಡ ಮುಕ್ತಕಂಠದಿಂದ ಹೊಗಳುತ್ತಾರೆ.
ಆರ್. ಎಸ್.ಎಸ್ ಸ್ವಾತಂತ್ರ್ಯಾನಂತರ.ಅನೇಕ ಸಲ ನಿಷೇಧಕ್ಕೊಳಗಾಗಿದೆ.1948 ರಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ
1948 ರಿಂದ 1949 ರವರೆಗೆ ಆರ್ಎಸ್ಎಸ್ನ್ನು ನಿಷೇಧಿಸಲಾಯಿತು.
1975 ಅಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಜಾಪ್ರಭುತ್ವ ವಿರೋಧಿಯಾದ ತುರ್ತು ಪರಿಸ್ಥಿತಿಯನ್ನು
ರಾಷ್ಟ್ರದ ಮೇಲೆ ಹೇರಿದಾಗ , ಅಂದಿನ ಜನ ಸಂಘದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ.ಎಲ್ ಕೆ. ಅಡ್ವಾಣಿ ಮುಂತಾದ ನಾಯಕರಲ್ಲದೇ , ಎಲ್ಲ ವಿರೋಧ ಪಕ್ಷದ ನಾಯಕರುಗಳು , ಕಾರಾಗೃಹ ವಾಸ ಅನುಭವಿಸುವಂತಾಯಿತು. ಆರ್ ಎಸ್ ಎಸ್ ಕಾರ್ಯಕರ್ತರು ಭೂಗತರಾಗಿ , ಸತ್ಯಾಗ್ರಹಗಳಲ್ಲಿ ಭಾಗವಹಿಸಿ , ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಸಮಯವನ್ನು ಸ್ವಾತಂತ್ರ್ಯಾನಂತರದ ಮತ್ತೊಂದು ಸಂಗ್ರಾಮವೆಂದೇ ಗುರುತಿಸಲಾಗುತ್ತದೆ. ತುರ್ತು ಪರಿಸ್ಥಿತಿಯ ಸಮಯ , 1975 ರಿಂದ 1977 ರವರಗೆ ಅಂದಿನ ಸರ್ಕಾರ ಆರ್ ಎಸ್ ಎಸ್ ನ್ನು ನಿಷೇಧಿಸಿತ್ತು.1977 ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ನಿಷೇಧವನ್ನು ಹಿಂಪಡೆಯಲಾಯಿತು .
1984 ರಿಂದ 1992 ರವರಗೆ ಭಾರತದ ಇತಿಹಾಸ ರಾಜಕೀಯ ಮಹತ್ತರ ತಿರುವು ಪಡೆದುಕೊಂಡಿದ್ದು, ಇಂದಿರಾಗಾಂಧಿ, ರಾಜೀವ್
ಗಾಂಧಿಯ ಹತ್ಯೆ ನಂತರ ದೊಡ್ಡ ರಾಜಕೀಯ ಸ್ಥಿತ್ಯಂತರವಾಯಿತು. ಅಡ್ವಾಣಿಯವರ ರಥಯಾತ್ರೆ, ರಾಮಜನ್ಮಭೂಮಿ
ಆಂದೋಲನ, ಕರಸೇವೆಯಲ್ಲಿ, ಆರ್ ಎಸ್ ಎಸ್ ತುಂಬಾ ಆಳವಾಗಿ ತನ್ನನ್ನು ತೊಡಗಿಸಿಕೊಂಡಿದ್ದು, ಇದರಿಂದ, ಭಾರತೀಯ
ಜನತಾ ಪಕ್ಷ ಸಹ ಬಲವಾಗಿ ಬೇರೂರಿ, ಕಾಂಗ್ರೆಸ್ ಕೇಂದ್ರ ಸರಕಾರದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ತನ್ನ ಅಧಿಕಾರ
ಕಳೆದುಕೊಂಡು, ಬಿಜೆಪಿ ಯುಗ ಪ್ರಾರಂಭವಾಯಿತು. ಬಾಬ್ರಿ ಮಸೀದಿ ಧ್ವಂಸದ ನಂತರ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ನ್ನು
ನಿಷೇಧಿಸಿತ್ತು.1993 ರಲ್ಲಿ ನ್ಯಾಯಾಲಯದ ಆದೇಶದಂತೆ ನಿಷೇಧವನ್ನು ತೆರವುಗೊಳಿಸಲಾಯಿತು.
ಬಿಜೆಪಿಯ ಹಿರಿಯ ನಾಯಕರುಗಳಾದ ವಾಜಪೇಯಿ, ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಉಮಾಭಾರತಿ, ರಾಜನಾಥ್
ಸಿಂಗ್, ನಿತಿನ್ ಗಡ್ಕರಿ , ಅವರಿಂದ ಹಿಡಿದು ಇಂದಿನ ಜನಪ್ರಿಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರೆಲ್ಲರೂ ಆರ್ ಎಸ್ ಎಸ್ ಮೂಲದವರೇ ಆಗಿದ್ದು ಆಡಳಿತದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ಆರ್ ಎಸ್ ಎಸ್ ಗೆ ಕೀರ್ತಿ ತಂದವರು .
ಆರ್ ಎಸ್ ಎಸ್ ತನ್ನ ಅಂಗಸಂಸ್ಥೆ ಹಿಂದೂ ಸ್ವಯಂಸೇವಕ ಸಂಘದ (HSS) ಮೂಲಕ 40 ಕ್ಕೂ ಹೆಚ್ಚು ದೇಶಗಳಲ್ಲಿ ಚಟುವಟಿಕೆ ನಡೆಸುತ್ತಿದೆ. ಭಾರತೀಯ ಸಂಸ್ಕೃತಿ , ಯೋಗ , ಹಬ್ಬಗಳನ್ನು ವಿದೇಶಗಳಲ್ಲಿ ಪರಿಚಯಿಸುತ್ತಿದೆ
ಆರ್. ಎಸ್.ಎಸ್ ಆರ್ಗನೈಸರ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಮತ್ತು ಪಾಂಚಜನ್ಯ ಎಂಬ ಹಿಂದಿ ವಾರ ಪತ್ರಿಕೆಯನ್ನು
ಪ್ರಕಟಿಸುತ್ತಿದೆ.
ಆರ್ ಎಸ್ ಎಸ್ ಪ್ರಮುಖವಾಗಿ ಸಾಮೂಹಿಕ ಚಿಂತನೆ ಮತ್ತು ಸಾಮೂಹಿಕ ನಿರ್ಣಯದ ಮೇಲೆ ಕಾರ್ಯನಿರ್ವಹಿಸುತ್ತದೆ. ಸ್ವಯಂ ಸೇವಕರೇ ಆರ್ ಎಸ್ ನ ಆಧಾರ ಸ್ತಂಭ . ಹಿಂದೂರಾಷ್ಟ್ರ, , ಹಿಂದು ಸಂಸ್ಕೃತಿ, ಹಿಂದು ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಪ್ರತಿಯೊಬ್ಬ ಸ್ವಯಂ ಸೇವಕನೂ ಕಟಿ ಬದ್ಧನಾಗಿರುತ್ತಾನೆ. ಆರ್ ಎಸ್ ನ ಶಾಖೆಗಳು ವ್ಯಕ್ತಿ ನಿರ್ಮಾಣದ ಮೂಲ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತದೆ.
ಆರ್ ಎಸ್ ಎಸ್ ರಾಷ್ಟ್ರಾದ್ಯಂತ ತನ್ನ ಶಾಖೆಗಳಲ್ಲಿ ಪ್ರಮುಖ ವಾದ ಆರು ಹಬ್ಬಗಳನ್ನು ಆಚರಿಸುತ್ತದೆ.
- 1. ವಿಜಯ ದಶಮಿ
- 2.ಮಕರ ಸಂಕ್ರಾಂತಿ
- 3. ವರ್ಷ ಪ್ರತಿಪದ ಮಹೋತ್ಸವ (ಯುಗಾದಿ )
- 4. ಹಿಂದೂ ಸಾಮ್ರಾಜ್ಯ ದಿನ( ಛತ್ರಪತಿ ಶಿವಾಜಿ ಅವರಪಟ್ಟಾಭಿಷೇಕದ ದಿನ)
- 5. ಗುರುಪೂರ್ಣಿಮಾ
- 6. ರಕ್ಷಾಬಂಧನ.
ಆರ್ ಎಸ್ ಎಸ್ ಸನಾತನ ಪರಂಪರೆಯ ಅಸ್ಮಿತೆಯಾದ ಭಗವಾಧ್ವಜವನ್ನು ತನ್ನ ಗುರುವಾಗಿ ಸ್ವೀಕರಿಸಿದೆ. ವ್ಯಕ್ತಿ ಪರಿಪೂರ್ಣ
ಅಲ್ಲ, ವ್ಯಕ್ತಿಯ ಕೊರತೆಗಳು, ತಪ್ಪುಗಳು ಅವರನ್ನು ಅನುಸರಿಸುವವರನ್ನು ಪ್ರಭಾವಿಸುತ್ತವೆ. ಹಾಗಾಗಿ ಭಗವಾಧ್ವಜವನ್ನು
ಗುರುವಾಗಿ ಸ್ವೀಕರಿಸಲಾಗಿದೆ. ಆಷಾಡ ಪೂರ್ಣಿಮೆ ದಿನದಂದು ಸ್ವಯಂ ಸೇವಕರು ಗುರುಪೂಜಾ ಉತ್ಸವವನ್ನು ಆಚರಿಸಿ ಧ್ವಜಕ್ಕೆ
ಗುರು ವಂದನೆ ಸಲ್ಲಿಸುತ್ತಾರೆ.
ಆರೆಸ್ಸೆಸ್ ನ ಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ 100 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಾಣ್ಯದಲ್ಲಿ ಭಾರತ ಮಾತೆಯ ಚಿತ್ರವನ್ನು
ಬಳಸಲಾಗಿದೆ.
ಆರ್ ಎಸ್ ಎಸ್ ತನ್ನ ಶತಮಾನೋತ್ಸವಕ್ಕೆ ಪಂಚ ಪರಿವರ್ತನ್ ಎಂಬ ಐದು ಕಾರ್ಯಕ್ರಮಗಳನ್ನು ತನ್ನ ಸ್ವಯಂ ಸೇವಕರ
ಮುಖಾಂತರ ದೇಶಾದ್ಯಂತ ಆಚರಿಸಲು ಕಾರ್ಯಕ್ರಮ ರೂಪಿಸಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಭಾವ, ಪರಿಸರ ಜಾಗೃತಿ,ಸ್ವದೇಶಿ ಮತ್ತು ನಾಗರಿಕ ಕರ್ತವ್ಯ ಇವೇ ಈ ಪಂಚ ಕಾರ್ಯಕ್ರಮಗಳು .
100 ವರ್ಷಗಳ ಏಳು ಬೀಳಿನ ಹಾದಿಯಲ್ಲಿ ಸಂಘವು ಗಟ್ಟಿಯಾಗುತ್ತಲೇ ಬರುತ್ತಿದೆ. ಉತ್ತಮ ಶ್ರೇಣಿಯ ವ್ಯಕ್ತಿತ್ವ ರೂಪಿಸುತ್ತ
ಅತ್ಯಂತ ದೃಢ ನಾಯಕತ್ವವನ್ನು ತನ್ನ ಸ್ವಯಂ ಸೇವಕರಲ್ಲಿ ತುಂಬುತ್ತ , ಆ ನಾಯಕತ್ವ ವನ್ನು ದೇಶಕ್ಕೆ ಕೊಟ್ಟು ತಾನು
ರಾಜಕೀಯವಾಗಿ ಗುರುತಿಸಿಕೊಳ್ಳದೆ ತನ್ನ ಕಾರ್ಯದಲ್ಲಿ ಮಗ್ನವಾಗಿದೆ . ಇದರಿಂದ ಆರೆಸ್ಸೆಸ್ ಮತ್ತು ಬಿಜೆಪಿ ಎರಡೂ
ಪ್ರಬಲವಾಗುತ್ತಿವೆ. ಪ್ರಪಂಚದಲ್ಲಿ ಬಹುಶಃ ಇಂತಹ ಶಿಸ್ತಿನ ಸಂಘ ಮತ್ತೊಂದಿಲ್ಲ ಎಂದು ಹೆಸರು ಪಡೆದಿದೆ.
ಆರ್ ಎಸ್ ಎಸ್ ಅಭಿಮಾನಿಗಳು ಸಂಘವನ್ನು ಹಿಂದೂ ರಕ್ಷ ಣೆಗಾಗಿ , ಸಂಸ್ಕೃತಿ ಮತ್ತು ಶಿಸ್ತಿನ ರಕ್ಷಕ ಎಂದು ನೋಡುತ್ತಾರೆ.
ಜಾತ್ಯಾತೀತ ಎನ್ನುವ ಆರೆಸ್ಸೆಸ್ ವಿರೋಧಿಗಳು ಇದನ್ನು ವಿಭಜಕ ಶಕ್ತಿ ಎಂದು ನೋಡುತ್ತಾರೆ. ಯಾವ ದೃಷ್ಟಿಕೋನದಲ್ಲಿ
ನೋಡಿದರು, ಆರೆಸ್ಸೆಸ್ ಪ್ರಭಾವವು ಭಾರತದ ರಾಜಕೀಯದಲ್ಲಿ ದಿನೇ ದಿನೇ ವರ್ಧಿಸುತ್ತಿದ್ದು, ಭಾರತದ ಭವಿಷ್ಯವನ್ನು
ನಿರ್ಧರಿಸುವುದರಲ್ಲಿ ಅದರ ಅಸಾಧಾರಣ ಪಾತ್ರವನ್ನು ಯಾರು ಅಲ್ಲಗಳೆಯುವಂತಿಲ್ಲ. ಅದು ವಿರೋಧಗಳನ್ನು ಮೆಟ್ಟಿ
ಪ್ರಬಲವಾಗುತ್ತಲೇ ಇದೆ . ಇದಕ್ಕೆ ಮೂಲ ಕಾರಣ ಸಂಘದ ಶಿಸ್ತು, ಸಂಯಮ ಮತ್ತು ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ಮೊದಲು
ಎಂಬ ಧ್ಯೇಯ .
ನೂರು ವರ್ಷ ಪೂರೈಸಿದ ರಾಷ್ಟ್ರೀಯ ಸ್ವಯಂ ಸಂಘಕ್ಕೆ ಶುಭಾಶಯಗಳನ್ನು ಹೇಳೋಣ .
ನಮಸ್ಕಾರಗಳೊಂದಿಗೆ
ಸ್ವಾಮಿನಾಥನ್
ಮೊಬೈಲ್ : 9880041516
Email : Swamynathann@gmail.com








