ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಗುಂಡಾಲ್ ಡ್ಯಾಂನಲ್ಲಿ ಪತ್ತೆಯಾದ ಗಂಡು ಹುಲಿಯ ಸಾವಿಗೆ ಸ್ಕೂಟರ್ ಕ್ಲಚ್ ವೈರ್ ಉರುಳು ಕಾರಣವಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಇದೀಗ ಉರುಳು ಹಾಕಿದವರ ಪತ್ತೆಗೆ ಅರಣ್ಯ ಇಲಾಖೆ ತೀವ್ರ ತನಿಖೆ ಆರಂಭಿಸಿದೆ.
ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ ತೇಲುವ ಸ್ಥಿತಿಯಲ್ಲಿ ಹುಲಿಯ ಕಳೇಬರ ಸಿಕ್ಕಿತ್ತು. ಪರಿಶೀಲನೆ ವೇಳೆ ಹುಲಿಯ ಕತ್ತಿಗೆ ಕ್ಲಚ್ ವೈರ್ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಜಮೀನಿನ ಬೇಲಿ ಅಥವಾ ಕಾಲುದಾರಿ ಬಳಿ ಇಂತಹ ಉರುಳು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಪಶುವೈದ್ಯರ ಪ್ರಕಾರ, ಮೂರರಿಂದ ನಾಲ್ಕು ದಿನಗಳ ಹಿಂದೆ ಉರುಳು ಕತ್ತಿಗೆ ಸುತ್ತಿಕೊಂಡಿದ್ದು, ಕ್ರಮೇಣ ಬಿಗಿದ ಪರಿಣಾಮ ಹುಲಿ ಸಾವನ್ನಪ್ಪಿದೆ. ಜೊತೆಗೆ ನೀರು ಕುಡಿಯಲು ಹೋದ ವೇಳೆ ಜಲಾಶಯಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.ಇದನ್ನು ಓದಿ –ಸ್ನೇಹಮಯಿ ಕೃಷ್ಣಗೆ ಆಮಿಷ ? ಮುಡಾ ಮಾಜಿ ಆಯುಕ್ತ ವಿರುದ್ಧ ಆರೋಪ
ಉರುಳು ಬೇರೆ ಪ್ರಾಣಿಗೆ ಹಾಕಿದದ್ದೋ ಅಥವಾ ಹುಲಿಯನ್ನೇ ಗುರಿಯಾಗಿಸಿಕೊಂಡದ್ದೋ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯ ರೈತರು ಹಾಗೂ ಸಾರ್ವಜನಿಕರಿಂದ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಇಂತಹ ಉರುಳುಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.








