ಮುಂಬೈ, ಜೂನ್ 9: ಮುಂಬೈನಲ್ಲಿ ಜನದಟ್ಟಣೆಯಿಂದ ಕಿರಿದಾಗಿದ್ದ ಸ್ಥಳೀಯ ರೈಲಿನಲ್ಲಿ ಸಂಭವಿಸಿದ ಭೀಕರ ದುರ್ಘಟನೆಯ ಪರಿಣಾಮವಾಗಿ ಆರುಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಅಧಿಕಾರಿಗಳ ಪ್ರಕಾರ, ಈ ದುರ್ಘಟನೆ ಮುಂಬ್ರಾ ಮತ್ತು ದಿವಾ ರೈಲು ನಿಲ್ದಾಣಗಳ ನಡುವೆ ಸಂಭವಿಸಿದ್ದು, ಪುಷ್ಪಕ್ ಎಕ್ಸ್ಪ್ರೆಸ್ ಹಾಗೂ ಕಸರಾ ಲೋಕಲ್ ರೈಲುಗಳು ಪರಸ್ಪರ ದಾಟುತ್ತಿದ್ದ ಸಂದರ್ಭದಲ್ಲಿತ್ತು. ಈ ವೇಳೆ ರೈಲಿನಲ್ಲಿ ಅತಿಯಾದ ಜನಸಂದಣಿಯಿಂದಾಗಿ, ಕನಿಷ್ಠ 10 ರಿಂದ 12 ಪ್ರಯಾಣಿಕರು ಬೋಗಿಗಳ ಬಾಗಿಲುಗಳಿಂದ ಕೆಳಗೆ ಬಿದ್ದುದು ವರದಿಯಾಗಿದೆ.
ಪ್ರಯಾಣಿಕರು ಬಾಗಿಲುಗಳನ್ನು ಹಿಡಿದುಕೊಂಡು ನೇತಾಡುತ್ತಾ ಸಾಗುತ್ತಿದ್ದು, ಹಠಾತ್ ತೂಗಾಟದಿಂದ ಸಮತೋಲನ ತಪ್ಪಿ ಬಿದ್ದಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಗಾಯಗೊಂಡವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನೆ ನೆಡೆಯುತ್ತಿದ್ದ ಸಮಯದಲ್ಲಿ ರೈಲಿನಲ್ಲಿ ಇದ್ದ ಪ್ರಯಾಣಿಕರ ಭದ್ರತೆ ಕುರಿತ ಪ್ರಶ್ನೆಗಳು ಮತ್ತೆ ಎದ್ದು ಬಂದಿದ್ದು, ಮುಂಬೈ ನಗರದ ಸ್ಥಳೀಯ ರೈಲು ವ್ಯವಸ್ಥೆಯ ದೌರ್ಬಲ್ಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.ಇದನ್ನು ಓದಿ –ಜೂನ್ 12ರವರೆಗೆ ಭಾರೀ ಮಳೆಯ ಮುನ್ಸೂಚನೆ
ಈ ದುರ್ಘಟನೆಯ ಪರಿಣಾಮವಾಗಿ ಕೇಂದ್ರ ರೈಲು ಮಾರ್ಗದ ಕೆಲವೆಡೆ ಸ್ಥಳೀಯ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.