ನವರಾತ್ರಿ ಹಬ್ಬ ಎಂದರೆ ಒಂಬ್ಬತ್ತು ದಿನಗಳು ನವ ವಿಧ ಭಕ್ತಿಯಲ್ಲಿ, ನವವಿಧ ಅಲಂಕಾರದಿಂದ ದೇವರು-ದೇವತೆಯರನ್ನು ಪೂಜಿಸುವ ನಮ್ಮ ನಾಡ ಹಬ್ಬ. ಮಾತೆ ದುರ್ಗಾದೇವಿಯನ್ನು ಹೆಚ್ಚು ಆರಾಧಿಸುವ ಹಬ್ಬ. ನಮ್ಮ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವವಿದೆ.
ಆದರೆ ನವರಾತ್ರಿಯ ವಿಜಯದಶಮಿಯಂದು ಶಮೀ ವೃಕ್ಷವನ್ನು ಪೂಜಿಸುವರು. ಅದರ ಪತ್ರೆ ಅಥವಾ ಎಲೆಗಳನ್ನು ತಂದು ದೇವರಿಗೆ ಅರ್ಪಿಸಿ, ಪೂಜಿಸುವುದು ಪದ್ಧತಿ. ಅಂದಿನ ದಿನ ಅನೇಕ ಸಂಪ್ರದಾಯಗಳನ್ನು ಪಾಲಿಸಬೇಕು.
ಮುಖ್ಯವಾಗಿ ಬನ್ನಿ ಎಲೆಯನ್ನು ಕೊಟ್ಟು ಬನ್ನಿ ಬಂಗಾರವಾಗಲಿ ಎಂದು ಹಾರೈಸಲಾಗುತ್ತದೆ. ನವರಾತ್ರಿಯ ೯ ದಿನಗಳ ಕಾಲ ದೇವಿಯನ್ನು ಪೂಜಿಸಲಾಗುತ್ತದೆ. ಇದರ ನಂತರ ೧೦ನೇ ದಿನದಂದು ಎಲ್ಲರೂ ವಿಜಯದಶಮಿ ಅಂದರೆ
ದಸರಾ ಹಬ್ಬವನ್ನು ಆಚರಿಸುತ್ತಾರೆ.
ಎಲ್ಲರ ಮನೆಮನೆಗಳಲ್ಲೂ ಘಟಸ್ಥಾಪನೆ ಅಂದರೆ ಅಖಂಡ ದೀಪ ದೇವರ ಮನೆಯಲ್ಲಿ ೯ದಿನಗಳು ಬೆಳಗುವಂತೆ ಅವರವರ ಪದ್ಧತಿಯಂತೆ ಬೆಳಗಿ ಪೂಜಿಸುವರು ಮತ್ತು ಗೊಂಬೆಗಳನ್ನು(ಮರದ ಗೊಂಬೆ), ಅನೇಕ ವಿಧ-ವಿಧ ಗೊಂಬೆಗಳನ್ನು ಇಟ್ಟು ನಿತ್ಯವೂ ಅಂದರೆ ನವರಾತ್ರಿದಿನಗಳಲ್ಲಿ ದಿನನಿತ್ಯ ತರ-ತರದ ಹೂಗಳಿಂದ ಅಲಂಕರಿಸಿ ಪೂಜಿಸಿ ವಿಧ-ವಿಧ ತಿಂಡಿಗಳನ್ನು ತಯಾರಿಸಿ ಮಕ್ಕಳಿಗೆ ಹಂಚುವರು.
ಈ ಸಂದರ್ಭದಲ್ಲಿ ತಾಯಿ ಸರಸ್ವತಿಯನ್ನು ಪೂಜಿಸುವರು. ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮ ಹಿಂದೂಗಳಿಗೆ ಅತ್ಯಂತ ದೊಡ್ಡಹಬ್ಬ ಇದು ನಮ್ಮ ನಾಡ ಚರಿತೆಯ ಮೆರೆಸುವ-ನೆನಪಿಸುವ ಅತ್ಯಂತ ವೈಭವಯುತ ಒಂದು ಸಾಂಪ್ರಾದಾಯಿಕ, ಸಾಂಸ್ಕ್ರತಿಕ ವಿಜೃಂಭಣೆಯಿಂದ ನಡೆಯುವ ತಾಯಿ ಭುವನೇಶ್ವರಿ, ಜಗನ್ಮಾತೆ ಚಾಮುಂಡೇಶ್ವರಿಯನ್ನು ನಮ್ಮ ಮೈಸೂರು ರಾಜರ ಮನೆತನದವರು ಅಂಬಾರಿಯಲ್ಲಿ ಆ ತಾಯಿ ಚಾಮುಂಡೇಶ್ವರಿಯ ಉತ್ಸವದ ಮೂಲಕ ನೆರವೇರಿಸುವರು. ನಮ್ಮ ನಾಡಿನ ಹಿರಿಮೆ-ಗರಿಮೆ ಇಡೀ ವಿಶ್ವವೇ ಹೆಮ್ಮೆ ಪಡುವ ಹಾಗೆ ಆಚರಿಸುವ ನಮ್ಮ ಹೆಮ್ಮೆಯ ನಾಡಹಬ್ಬವೂ ಹೌದು! ನಮ್ಮ ಭೂವೈಕುಂಟ ಎನ್ನುವ ತಿರುಮಲದಲ್ಲಿ ಶ್ರೀನಿವಾಸನಿಗೆ ವಿಶೇಷವಾಹನಗಳ ಮೂಲಕ ಪ್ರತಿದಿನವೂ ಅಲಂಕರಿಸಿ(ಶೇಷ, ಗರುಡ, ಸರಸ್ವತಿ)ಹೀಗೆ ಹಲವು ಬಗೆಯ ಅಲಂಕರಣೆಯಿಂದ ಉತ್ಸವ ನೆರವೇರಿಸುವರು, ಇದರಲ್ಲಿ ಆ ಸ್ವಾಮಿಗೆ ಚಕ್ರಸ್ನಾನ ಸ್ವಾಮಿ ಪುಕ್ಷರಣಿಯಲ್ಲಿ ಮಾಡಿಸಿ, ಭಕ್ತರನ್ನು ಪುನೀತಗೊಳಿಸುವರು.
ನಮ್ಮ ಪುರಾಣಗಳಲ್ಲಿ ನವರಾತ್ರಿಯ ಹಬ್ಬಕ್ಕೆ ವಿಶೇಷತೆಯಿದೆ. ನವರಾತ್ರಿಯಲ್ಲಿ ತಾಯಿ ಚಾಮುಂಡೇಶ್ವರಿ/ ದುರ್ಗಾದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿ(ಆ ಒಂಬತ್ತು) ದಿನದರಾತ್ರಿ
ಆ ರಾತ್ರಿ-ಹಗಲು ಒಂದೊಂದು ದಿನ ಒಂದೊಂದು ಅವತಾರವೆತ್ತಿ ಹತ್ತನೇ ದಿನ ಆ ರಾಕ್ಷಸನನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಹಾಗೆ ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ್ದು ವಿಜಯದಶಮಿಯ ದಿನವೆಂದು
ಪುರಾಣಗಳಲ್ಲಿ ಉಲ್ಲೇಖವಾಗಿದೆ. ದ್ವಾಪರಯುಗದಲ್ಲಿ ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ. ಅಜ್ಞಾತವಾಸದಿಂದ ಮರಳಿದಾಗ ಅವರು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ನೋಡುತ್ತಾರೆ. ಯಾರೊಬ್ಬರೂ ಅದನ್ನು ಮುಟ್ಟಿರುವುದಿಲ್ಲ.
ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿದರ ಫಲವಾಗಿ ಕೌರವರ ಜೊತೆಗಿನ ಯುದ್ಧದಲ್ಲಿ ವಿಜಯ ಸಾಧಿಸುತ್ತಾರೆ. ಹೀಗಾಗಿ ವಿಜಯ ದಶಮಿಯ ದಿನ ಬನ್ನಿ ಪೂಜೆ ಮಾಡುತ್ತಾರೆ. ಅಂದಿನಿಂದ ಬನ್ನಿಯ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಬನ್ನಿಯನ್ನು ಬಂಗಾರ ಎನ್ನಲು ಕಾರಣ. ಬನ್ನಿ ಮರವೆಂದರೇ ಚಿನ್ನ, ಬಂಗಾರ ಎನ್ನುವ ನಂಬಿಕೆ ಮೂಡಿಬಂದಿದೆ. ಹೀಗೆ ದಸರಾ ಹಬ್ಬವು ಒಂದು ಸಂಭ್ರಮದಾಚರಣೆಯ ಹಬ್ಬವಾಗಿದೆ.
ಎಲ್ಲೆಲ್ಲೂ ಅತ್ಯಂತ ಸಂತೋಷ, ಸಂಭ್ರಮದ ಜೊತೆಗೆ ದೀಪಾಲಂಕಾರ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆರಾಧನೆ ದುರ್ಗಾಹೋಮ, ಸಹಸ್ರನಾಮಾರ್ಚನೆ, ವಿಷ್ಣುಸಹಸ್ರನಾಮ ಪಠಣೆ, ದುರ್ಗಾನಮಸ್ಕಾರ, ಮಹಾನವಮಿ ಅಥವಾ ಆಯುಧಪೂಜೆ ದಿನ ತಮ್ಮ ತಮ್ಮ ವಾಹನ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ, ಆಯುಧಪೂಜೆಗೆ ಸಜ್ಜುಗೊಳಿಸುವರು, ಬೀದಿ-ಬೀದಿಗಳಲ್ಲಿ ದೀಪಾಲಂಕಾರ, ಮಾವಿನ ತೋರಣ, ಹಬ್ಬದ ವಿಶೇಷತೆಯ ಫಲಕಗಳು, ಅಂಗಡಿ ಬೀಡುಗಳು ವರ್ಣರಂಜಿತವಾಗಿರುವುದು.
ಆಯುಧ ಪೂಜೆ ದಿನ ಎಲ್ಲಾ ವಾಹನಗಳು, ವಸ್ತುಗಳು, ಆಯುಧಗಳು ಪೂಜಿಸಲ್ಪಟ್ಟು ಎಲ್ಲೆಲ್ಲೂ ರಂಗುರಂಗಿನ ವಾತಾವರಣ ಅದನ್ನು ಕಣ್ತುಂಭಿಸಿಕೊಂಡು, ಮೈ ರೋಮಾಂಚನದಂತಹ ಅನುಭವವೇ ಆಹಾ! ಎನ್ನುವಂತೆ ಇರುತ್ತದೆ. ದಸರಾ ಇದೊಂದು ಸಾಮಾಜಿಕ, ಸಾಂಪ್ರಾದಾಯಿಕ, ಸಾಂಸ್ಕೃತಿಕವಾದ ನಾಡ ಹಬ್ಬ. ವಿಜಯದಶಮಿ ಹೆಸರೇ ಸೂಚಿಸುವಂತೆ ಪೌರಾಣಿಕ ಹಿನ್ನೆಲೆ
ಹೊಂದಿರುವ ವಿಜಯದ ಸಂಕೇತದ ಹಬ್ಬ, ಕೆಟ್ಟದರಲ್ಲಿ ಒಂದೊಳ್ಳೆದು ಎಂಬಂತೆ, ವಿಜಯದ ಹಬ್ಬ. ಇನ್ನೂ ಈ ನವರಾತ್ರಿ ತಾಯಿ ನವ ಅವತಾರ ತಾಳಿ ತಾಯಿ ದುರ್ಗೆ ಈ ಭೂಲೋಕದ ವಿವಿಧ ರೂಪಗಳಿಂದ ಆರಾಧಿತಳಾಗಿ ಭಕ್ತರು ಬೇಡಿದಿಷ್ಟಾರ್ಥಗಳ
ನೀಡುತಾ ಆಶೀರ್ವದಿಸುವಳು. ಆಕೆಯು ತನ್ನ ನವದುರ್ಗೆಯರ ಅವತಾರಗಳ ಮಹತ್ವವನ್ನು ಇಡೀ ವಿಶ್ವಕ್ಕೆ ತಿಳಿಸಿದ್ದಾರೆ.
ನವಶಕ್ತಿ ರೂಪಗಳು ಮತ್ತು ಮಹತ್ವ:- ಮಹಾಶಕ್ತಿ ದುರ್ಗೆ, ಸರಸ್ವತಿ, ಲಕ್ಷ್ಮಿ, ಯರ ಸ್ವರೂಪಿಣಿ ಈ ಆದಿಶಕ್ತಿ ದೇವಿ ಭಾಗವತ ಸಪ್ತಶತಿಯಲ್ಲಿ ” ಯಾ ದೇವಿ ಸರ್ವಭೂತೇಶು ವಿಷ್ಣುಮಾಯೇತಿ ಶಬ್ಧಿತಾ ನಮಸ್ಥಸ್ಯೆೈ,ನಮಸ್ಥಸ್ಯೆೈ ನಮೋ ನಮಃ|| ಎಂದು
ಆರಾಧಿಸುವರು. ಇನ್ನು ಪುರಾಣದ ಪ್ರಕಾರ ದೇವಿ ಭಾಗವತ ಸಪ್ತಶತದ ಏಕಾದಶದಲ್ಲಿ ಹೇ ಜಗನ್ಮಾತೆ!! ಜಗದಲ್ಲಿ ಯಶೋದೆಯ ಮಗಳಾಗಿ ಶ್ರೀಕೃಷ್ಣನಿಗೆ ತಂಗಿಯಾಗಿ ಜನಿಸಿ ಮುಂದೆ ನಡೆಯುವ ದುಷ್ಠರ ಸಂಹಾರ ಮಾಡಿ ಶಿಷ್ಠರ ರಕ್ಷಣೆ ಮಾಡುವ ಮೂಲಕ ಭೂಲೋಕವ ರಕ್ಷಿಸು ಎಂದು ಭಗವಂತ ಶ್ರೀಹರಿಯು ತಿಳಿಸುತ್ತಾರೆ. ಆಗ ನವಶಕ್ತಿ ರೂಪಗಳಾದಂತಹ “ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತ, ಕಾಳರಾತ್ರಿ, ಕಾತ್ಯಾಯಿನಿ, ಮಹಾಗೌರಿ ಮತ್ತು ಸಿದ್ಧಿರಾತ್ರಿ”, ಎಂಬುದಾಗಿ
ನವವಿಧ ಭಕ್ತಿಯಿಂದ ಪೂಜಿಸಲ್ಪಡುವಳು. ಈ ನವವಿಧ ಶಕ್ತಿಯ ಆರಾಧನೆಯಿಂದ ಮಾನವನ ದೇಹ ನವದ್ವಾರಗಳಿಂದ ಕೂಡಿದ ಪಿಂಡಾಂಡವು ಪ್ರಕೃತಿಬದ್ಧತೆಯಿಂದ ಶುದ್ಧಿಗೊಳ್ಳುತ್ತದೆ. ವೈಜ್ಞಾನಿಕವಾಗಿ ಋತುಮಾನಕ್ಕೆ ಹೋಲಿಸಿ ನೋಡಿದರೆ, ಮಳೆಗಾಲ
ಮುಗಿದು, ಸೂರ್ಯರಷ್ಮಿಯ ಪ್ರಖರತೆ ಹೆಚ್ಚಾಗಿರುವಾಗ, ಪ್ರಕೃತಿಯ ಋತುಮಾನದಲ್ಲಿ ಸಮತೋಲನ ತಂದು, ರೋಗ-ರುಜಿನಗಳ, ಪ್ರಕೃತಿಯ ಅಸಮತೋಲನೆಯಿಂದಾಗುವ ತೊಂದರೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ದೇವಿ ಆರಾಧನೆ ಬಹುಮುಖ್ಯ.
ನಮ್ಮ ಇಡೀ ಭಾರತದೇಶವೇ ಅವರವರ ಅನುಷ್ಠಾನದಂತೆ ಆಚರಿಸುವರು. ಹೀಗೆ ಇಡೀ ಭಾರತಾದ್ಯಂತ ಅತ್ಯಂತ ವಿಜೃಂಭಣೆಯಿಂದ ಅವರವರ ಸಾಂಪ್ರಾದಾಯಿಕ ಅನುಷ್ಠಾನದಂತೆ ಆಚರಿಸುವರು.

ವೀಣಾ ರವಿಕುಮಾರ್.








