ಬ್ಯಾಂಕರ್ಸ್ ಡೈರಿ ನನ್ನ ಮತ್ತು ಗ್ರಾಹಕರ ನಡುವಿನ ಅನುಭವ ಅನುಭೂತಿಯನ್ನು ಮಾನವೀಯ ನೆಲೆಗಳಿಂದ ನೋಡುವ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ.
ಮೊನ್ನೆ ಮೊನ್ನೆ ಅಂದರೆ ನವಂಬರ್ ತಿಂಗಳಿನಲ್ಲಿ ಮಗನ ಮನೆಗೆ ಎಂದು ಒಂದು ತಿಂಗಳ ಆಸ್ಟ್ರೇಲಿಯಾ ಪ್ರವಾಸ ಹೋಗಿದ್ದಾಗ ‘ಓ ನವೆಂಬರ್ ತಿಂಗಳಿನಲ್ಲಿ ನಾನು ಬ್ಯಾಂಕಿನಲ್ಲಿ ಇಲ್ಲವಲ್ಲ ಎಂದು ಅನಿಸುತ್ತಿತ್ತು. ಏಕೆಂದರೆ ವಯಸ್ಸಾದವರೆಲ್ಲರೂ ಲೈಫ್ ಸರ್ಟಿಫಿಕೇಟ್ ಕೊಡಲು ಬ್ಯಾಂಕಿಗೆ ಬಂದೇ ಬರುವ ಕಾಲವದು.
ನನ್ನ ಬದುಕಿನ ಅನುಭವವನ್ನು ಹೆಚ್ಚಿಸುವ ಕಾಲವೆಂದರೆ ಅದು ನವೆಂಬರ್ ತಿಂಗಳು ಎಂದರೆ ತಪ್ಪಲ್ಲ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳು ಎಟಿಎಂ ನಲ್ಲಿ ದುಡ್ಡು ತಂದುಕೊಡುತ್ತಾರೆ, ಚೆಕ್ ಸಹಿ ಮಾಡಿದರೆ ಅದನ್ನು ಮನೆಯವರು ಯಾರಾದರೂ ಡ್ರಾ ಮಾಡಿಕೊಂಡು ಬರುತ್ತಾರೆ ಹೀಗೆ ಮನೆಯಲ್ಲಿ ಕುಳಿತೇ ಅನೇಕ ಕೆಲಸಗಳನ್ನು ಮಾಡಿಕೊಳ್ಳುವ ಕೈಲಾಗದವರು ಕೂಡ ನವಂಬರ್ ತಿಂಗಳಿನಲ್ಲಿ ಒಮ್ಮೆ ಹಾಜರಿ ಹಾಕಲು ಬರುತ್ತಾರೆ. ನನ್ನ ಗುರುಗಳು ಲೀಲಾ ಅಪ್ಪಾಜಿ ತಮಾಷೆ ಮಾಡುತ್ತಾರೆ – ನಾನು ಇನ್ನೂ ಬದುಕಿದ್ದೇನೆ ಕಣೋ. ಅದನ್ನು ಬ್ಯಾಂಕಿಗೆ ದೃಢಪಡಿಸಲಾದರೂ ನಾನು ಬರಬೇಕು ಎಂದು. ನನ್ನ ಅನೇಕ ಆತ್ಮೀಯರ ಅಥವಾ ಅಸಹಾಯಕರ ಮನೆಗಳಿಗೆ ನಾನೇ ಹೋಗಿ ಲೈಫ್ ಸರ್ಟಿಫಿಕೇಟ್ ಸೈನ್ ಮಾಡಿಸಿಕೊಂಡು ಬರುತ್ತಿದ್ದೆ. ಈ ಬಾರಿ ಅದನ್ನೆಲ್ಲ ನಾನು ಅಲ್ಲಿ ಕುಳಿತು ತುಂಬಾ ಮಿಸ್ ಮಾಡಿಕೊಂಡೆ. ನನ್ನನ್ನು ಅನೇಕ ಗ್ರಾಹಕರು ಕೂಡ ಮಿಸ್ ಮಾಡಿಕೊಂಡರು ಎಂದು ವಾಪಸ್ ಬಂದಾಗ ತಿಳಿಯಿತು.
ಅನೇಕ ಗ್ರಾಹಕರು ‘ಮೇಡಂ ನಾವು ಬಂದಿದ್ದೆವ,Å ನೀವು ಪ್ರವಾಸ ಹೋಗಿದ್ರಂತೆ, ತುಂಬಾ ಮಿಸ್ ಮಾಡ್ಕೊಂಡ್ವಿ ಒಂದು ತಿಂಗಳು’ ಎಂದರು. ನಮ್ಮ ಸಹೋದ್ಯೋಗಿಗಳು ಕೂಡ ‘ಅನೇಕ ಕಸ್ಟಮರ್ಸ್ ನಿಮ್ಮನ್ನು ಬಹಳಷ್ಟು ನೆನಪು ಮಾಡಿಕೊಳ್ಳುತ್ತಿದ್ದರು’ ಎಂದು ಹೇಳಿದ್ದು ಕೇಳಿ ಮನಸ್ಸು ತುಂಬಿ ಬಂತು. ಈ ಸೇವೆಗಾಗಿಯೇ ಅಲ್ಲವೇ ನಾವು ಸಂಬಳ ತೆಗೆದುಕೊಳ್ಳುವುದು. ಆದರೂ ಇತ್ತೀಚಿನ ಯುವ ಜನಾಂಗ ಸೇವೆ ಎನ್ನುವ ಪದದ ಬದಲು ಕೆಲಸ ಎನ್ನುವ ಪರ್ಯಾಯ ಪದವನ್ನು ತಮಗೆ ತಾವೇ ಹೇಳಿಕೊಂಡು ಗಡಿಯಾರಕ್ಕೆ ತಕ್ಕಂತೆ ಕೆಲಸ ಮಾಡುವುದನ್ನು ನೋಡಿದಾಗ ನಾವು ಸೇವಾ ಕ್ಷೇತ್ರದಲ್ಲಿ ಇದ್ದೇವೆಯೋ ಇಲ್ಲವೋ ಎಂದು ಅನುಮಾನವೂ ಆಗುತ್ತದೆ, ಮುಂದೆ ಹೇಗೋ ಏನೋ ಎಂಬ ಆತಂಕವು ಕೂಡಾ ಎದುರಾಗುತ್ತದೆ. ಆದರೆ ಈಗಿನ ಯುವ ಜನಾಂಗ ಸೇವೆಯ ಕಡೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಏಕೆಂದರೆ ಮಾನವೀಯ ನೆಲೆಯ ಬಗ್ಗೆ ಅವರಿಗೆ ಅರಿವಿಲ್ಲ. ‘ನಾನು ನನ್ನ ಸರ್ಕಲ್ – ಅದರಲ್ಲೂ ಮೊದಲ ಸರ್ಕಲ್’ ಎಂದು ಸೀಮಿತಗೊಳಿಸಿಕೊಳ್ಳುವ ಈ ಯುವ ಜನತೆ ತಮ್ಮ ತಂದೆ ತಾಯಿ ಅಜ್ಜ ಅಜ್ಜಿ ಮಾವ ಅತ್ತೆ ಬಹುತೇಕ ಇಷ್ಟಕ್ಕೇ ಸೀಮಿತವಾಗಿರುವಾಗ, ಅದಕ್ಕೆ ಹೊರಟಾದ ಸಂಬAಧಗಳ ಕಡೆ ಕಣ್ಣು ಹಾಯಿಸುವುದನ್ನು ಇಷ್ಟಪಡದಿದ್ದಾಗ ಹೀಗೆ ಹೊರಗಿನ ಯಾರದೋ ಜೊತೆ ಬಾಂಧವ್ಯ ಬೆಳೆಸಿಕೊಂಡು ಅವರಿಗ್ ಅನುಕಂಪ ಸಹಾನುಭೂತಿ ತೋರಿಸಬೇಕು ಎಂಬುದು ನಾವು ಬಯಸಲು ಸಾಧ್ಯವೇ? ಪ್ರಸ್ತುತವೇ? ಗೊತ್ತಿಲ್ಲ. ಏಕೆಂದರೆ ಸೇವೆಗೆ ಬೇಕಾದದು ಮೊದಲಿಗೆ ಗುಣ. ನಾವು ಮನಷ್ಯರು. ನಾಳೆ ಇವರಂತೆ ನಾವು ಆದಾಗ ನಮ್ಮ ಪರಿಸ್ಥಿತಿ ಏನು ಇರುತ್ತದೆಯೋ ಇವತ್ತು ಅವರು ಅದೇ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಭಾವಿಸುವುದು ಇನ್ನೊಬ್ಬರ ಶೂನಲ್ಲಿ ನಮ್ಮ ಕಾಲನ್ನು ಹಾಕುವುದು – ಎಂಪತಿ ಎನ್ನುತ್ತಾರಲ್ಲ ಅದು. ಹಾಗೆ.. ಎಂದರೆ ಅವರ ಕಷ್ಟವನ್ನು ಅರಿಯಬೇಕಾದರೆ ನಾವು ಅವರ ಸ್ಥಾನಕ್ಕೆ ಹೋದಾಗ ಮಾತ್ರ ಎಂದಾದರೆ ಅಷ್ಟು ವಯಸ್ಸಾದ ಮೇಲೆ ನಾವು ಅದನ್ನು ಅರ್ಥೈಸಿಕೊಂಡು ಮತ್ತೆ ಸಮಾಜಕ್ಕೆ ತಿರುಗಿ ಕೊಡುವುದು ಸಾಧ್ಯವೇ ಇಲ್ಲ. ಹಾಗಾಗಿ ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳು ಕಲಿಸಬೇಕು ಅಥವಾ ನಮ್ಮಂತಹ ಸೀನಿಯರ್ ಉದ್ಯೋಗಿಗಳು ಅವರನ್ನು ನಮ್ಮ ಮಕ್ಕಳಂತೆ ಭಾವಿಸಿ, ಪ್ರೀತಿಯಿಂದ ಹೇಳಿದರೆ ಸ್ವಲ್ಪವಾದರೂ ತಲೆಗೆ ಹಾಕಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ನಾವು ೧೦೦ ಹೇಳಿದರೆ ಅವರು ೨೦- ೩೦ ಆದರೂ ಕೇಳಿದರೆ ಅಷ್ಟಾದರೂ ಪರವಾಗಿಲ್ಲ ಒಂದು ಹೆಜ್ಜೆಯಾದರೂ ಮುಂದೆ ಇಟ್ಟ ಹಾಗೆ.
ಈ ವಿಷಯ ಯಾಕೆ ಇಲ್ಲಿ ಬಂತು ಎಂದರೆ ನಾನು ಆಸ್ಟ್ರೇಲಿಯಾದಲ್ಲಿ ಇದ್ದಾಗ ಒಂದು ಗುಂಪಿನಲ್ಲಿ ಒಂದು ಸಂದೇಶವನ್ನು ನೋಡಿದೆ. ನನ್ನ ತಾಯಿಯವರು ಇಂಥ ದಿನ ತೀರಿಕೊಂಡಿದ್ದಾರೆ ಎಂದು ವಿಷಾದದಿಂದ ತಿಳಿಸಿದ್ದೇನೆ ಎನ್ನುವ ಒಂದು ಫೋಟೋವಿನ ಜೊತೆ ಇದ್ದ ಸಂದೇಶ ಅದನ್ನು ನೋಡಿದ ಕೂಡಲೇ ನನಗೆ ಇದು ಇತ್ತೀಚಿನ ಫೋಟೋ ಅಲ್ಲ ಆದರೆ ನನಗೆ ತುಂಬಾ ಬೇಕಾದವರೇ ಎನ್ನುವ ಅನಿಸಿಕೆ ಬಂತು. ಆದರೆ ಯಾರನ್ನು ನಾನು ಇಂಥವರು ಹೋಗಿಬಿಟ್ಟರೇ? ಎಂದು ಕೇಳುವುದು ಸಾಧ್ಯವಿಲ್ಲ. ಅಕಸ್ಮಾತ್ ಅವರು ಬದುಕಿದ್ದರೆ ಅವರ ಕುಟುಂಬದವರಿಗೆ ಆಗುವ ನೋವು ಕಸಿವಿಸಿ ಎಲ್ಲವನ್ನು ನಾನು ಅವಾಯ್ಡ್ ಮಾಡಬೇಕಿತ್ತು. ನನಗೆ ಅದು ಪದ್ಮಾವತ್ತಮ್ಮ ಎಂದೇ ತೋರುತ್ತಿತ್ತು. ಯೋಚಿಸಿದೆ ಏನು ಮಾಡಲಿ ಏನು ಮಾಡಲಿ ಎನ್ನುತ್ತಲೇ ಯಾರು ಗುಂಪಿನಲ್ಲಿ ಮೆಸೇಜ್ ಮಾಡಿದ್ದರೋ ಅವರಿಗೆ ವಾಟ್ಸಪ್ ಕರೆ ಮಾಡಿದೆ. ಗುಂಪಿನಲ್ಲಿ ಅವರ ಹೆಸರು ಶ್ರೀನಿವಾಸ ಎಂದಿತ್ತು.
ಆ ಕರೆ ಮಾಡುತ್ತಲೇ ಆ ಕಡೆಯಿಂದ ಗಂಡು ಧ್ವನಿ ಕೇಳಿಸಿತು. ನಾನು ;ನಮಸ್ತೆ ನನ್ನ ಹೆಸರು ಶುಭಶ್ರೀ ಎಂದು ಎಸ್ ಬಿ ಐ ಇಂದ’ ಎಂದು ಹೇಳಿದೆ. ಅದಕ್ಕಾತ ‘ನೀವು ಯಾರೆಂದು ನನಗೆ ಗೊತ್ತು; ಎಂದು ಹೇಳಿದ. ‘ಗುಂಪಿನಲ್ಲಿ ಮೆಸೇಜ್ ಮಾಡಿದ್ದವರು ನೀವೇ ಅಲ್ಲವೇ? ನಿಮ್ಮ ತಾಯಿ ಪದ್ಮಾವತಿಯವರಾ ಅದು?’ ಎಂದು ಕೇಳಿದೆ. ‘ಹೌದು ಅವರು ನಮ್ಮ ತಾಯಿಯವರೇ ಇಂದು ಬೆಳಿಗ್ಗೆ ತೀರಿಕೊಂಡರು’ ಎಂದು ಹೇಳಿದರು.
ಗ್ರಾಹಕರಾದ ಪದ್ಮಾವತಿ ಅವರದ್ದು ನನಗೆ ೧೯೯೩ರಿಂದ ಪರಿಚಯ. ನನ್ನ ಮೊದಲ ಶಾಖೆ ಫಾರಂ ಗೆ ಹೋಗುವಾಗ ಆಕೆ ಪಣಕನಹಳ್ಳಿಯ ಶಾಲೆಗೆ ಹೋಗುತ್ತಿದ್ದರು. ಆಗ ಆಕೆಗೂ ೪೦ರ ಆಸು ಪಾಸು. ನನಗೆ ೨೨ರ ಆಸು ಪಾಸು. ನನ್ನ ಮದುವೆ ಆದದ್ದು ಆ ಶಾಖೆಯಲ್ಲಿದ್ದಾಗಲೇ. ನಾನು ಗರ್ಭಿಣಿಯಾಗಿದ್ದಾಗಲೂ ಆ ಶಾಖೆಗೇ ಬಸ್ಸಿನಲ್ಲಿ ಓಡಾಡುತ್ತಿದ್ದೆ. ಈಗಿನ ಹಾಗೆ ಆಗೆಲ್ಲ ಬಸ್ಸುಗಳು ಹೆಚ್ಚು ಇರುತ್ತಿರಲಿಲ.್ಲ ನನ್ನ ಬಳಿ ಇದ್ದ ಲೂನಾವನ್ನು ಅಪರೂಪಕ್ಕೆ ತೆಗೆದುಕೊಂಡು ಹೋದರೆ ರಸ್ತೆಯಲ್ಲಿ ಮುಷ್ಕರ ಹೂಡುತ್ತಿತ್ತು. ಹಾಗಾಗಿ ಸಾಮಾನ್ಯ ಬಸ್ಸಿನಲ್ಲಿಯೇ ಹೋಗುತ್ತಿದ್ದಿದ್ದು, ಬೆಳಿಗ್ಗೆ ಇದ್ದುದೋಂದೇ ಸರ್ಕಾರಿ ಬಸ್. ಬೆಳಿಗ್ಗೆ ೯ ವರೆಯ ಬಸ್ಸು ಹತ್ತಿದರೆ ಹತ್ತೂ ಕಾಲರ ಹೊತ್ತಿಗೆ ಬ್ಯಾಂಕಿನ ಸಮೀಪ ಬಸ್ ನಿಲ್ಲುತ್ತಿತ್ತು. ನಮಗೆ ಹತ್ತೂವರೆಗೆ ಕೆಲಸ ಶುರುವಾದದರಿಂದ ಸರಿಯಾಗುತ್ತಿತ್ತು. ಎಷ್ಟೋ ದಿನ – ಅಂದರೆ ವಾರದಲ್ಲಿ ಎರಡು ದಿನ ಆ ಬಸ್ ಹೊರಡುತ್ತಲೇ ಇರಲಿಲ್ಲ. ಆಗ ನಮ್ಮ ಬ್ರಾಂಚಿನ ಕೀ ಹೋಲ್ಡರ್ ಸೋಮಣ್ಣನವರು ತಮ್ಮ ಗಾಡಿಯಲ್ಲಿ ಮತ್ತೊಬ್ಬ ಸಹೋದ್ಯೋಗಿ ಬಾಲಕೃಷ್ಣ ಅವರನ್ನು ಕೂರಿಸಿಕೊಂಡು ಗಾಡಿಯಲ್ಲಿ ಬ್ಯಾಂಕಿಗೆ ಹೋಗುತ್ತಿದ್ದರು.
ನಾನಾದರೋ ಗೌರ್ಮೆಂಟ್ ಬಸ್ ಸ್ಟ್ಯಾಂಡ್ ಇಂದ ಹೊಳಲು ವೃತ್ತದ ತನಕ ನಡೆದುಕೊಂಡು ಹೋಗಿ ಅಲ್ಲಿ ಖಾಸಗಿ ಬಸ್ ಹಿಡಿದು ಹೊರಡಬೇಕಿತ್ತು. ಅದು ಗಾಣದಾಳುವಿನಲ್ಲಿ ನಿಲ್ಲುತ್ತಿತ್ತು. ಅಲ್ಲಿಂದ ಗದ್ದೆಗಳ ಬಯಲಿನ ನಡುವೆ ಅಡ್ಡ ದಾರಿಯಲ್ಲಿ ನಡೆದು ಶಾಖೆ ಸೇರುವ ವೇಳೆಗೆ ೧೧ ದಾಟಿರುತ್ತಿತ್ತು. ಮೊದಲೇ ಹೋಗಿ ಬೀಗ ತೆಗೆದ ನಮ್ಮ ಸಹೋದ್ಯೋಗಿಗಳು ಮ್ಯಾನೇಜರ್ ಗೆ ಈಥರ ಆಗಿದೆ ಉಳಿದವರೆಲ್ಲ ಬರುತ್ತಾರೆ ನಿಧಾನಕ್ಕೆ ಎಂದು ಹೇಳುತ್ತಿದ್ದರು. ವಿ ಸಿ ಫಾರ್ಮ್ ಶಾಖೆಯ ಅನುಭವ ನನಗೆ ಇಂದಿಗೂ ಮುದ ಕೊಡುತ್ತದೆ. ಆಗೆಲ್ಲಾ ವಾರದಲ್ಲಿ ಒಂದು ದಿನ ನಾನ್ ಪಬ್ಲಿಕ್ ವರ್ಕಿಂಗ್ ಡೇ ಎಂದು ಇರುತ್ತಿತ್ತು. ನಾವೆಲ್ಲ ಬಾಗಿಲು ಮುಚ್ಚಿ ಕೆಲಸ ಮಾಡುತ್ತಿದ್ದೆವು ಗ್ರಾಹಕರಿಗೆ ಮಾತ್ರ ಸೇವೆ ಇರುತ್ತಿರಲಿಲ್ಲ. ಆಗೆಲ್ಲಾ ಕೈಯಿಂದಲೇ ಲೆಡ್ಜರ್ಗಳನ್ನು ಬರೆಯುವುದು, ಡೇ ಬುಕ್ ಟ್ಯಾಲಿ ಮಾಡುವುದು, ಬ್ಯಾಲೆನ್ಸ್ ತೆಗೆಯುವುದು, ಬಡ್ಡಿ ಹಾಕುವುದು, ಬಡ್ಡಿ ಪಡೆಯುವುದು, ಜೆಡಿ ಲೆಡ್ಜರ್ ಗೆ ಪೋಸ್ಟ್ ಮಾಡುವುದು ಎಲ್ಲವನ್ನ್ನೂ ಕೈಯಿಂದಲೇ ಮಾಡಬೇಕಾಗುತ್ತಿತ್ತು. ಹಾಗಾಗಿ ವಾರಕ್ಕೆ ಒಂದು ದಿನ ಈ ರೀತಿ ರಜೆಯ ದಿನ ಆ ಕೆಲಸಗಳನ್ನು ಮಾಡಿಕೊಳ್ಳುತ್ತಾ ಇದ್ದೆವು.
ತಿಂಗಳಲ್ಲಿ ಒಂದು ದಿನ ಸೇವಿಂಗ್ಸ್ ಬ್ಯಾಂಕ್ ಲೆಡ್ಜರ್ಗಳನ್ನು ಟ್ಯಾಲಿ ಮಾಡಬೇಕು, ವಾರಕ್ಕೆ ಒಂದು ದಿನ ಶುಕ್ರವಾರ ಕರೆಂಟ್ ಅಕೌಂಟ್ ಲೆಡ್ಜರ್ಗಳನ್ನು ಟ್ಯಾಲಿ ಮಾಡುವುದು, ಆರು ತಿಂಗಳಿಗೆ ಒಮ್ಮೆ ಎಸ್ ಬಿ ಅಕೌಂಟ್ ಗಳಿಗೆ ಬಡ್ಡಿ ಹಾಕುವುದು, ಮೂರು ತಿಂಗಳಿಗೆ ಒಮ್ಮೆ ಸಾಲಗಳಿಗೆ ಬಡ್ಡಿ ಲೆಕ್ಕ ಹಾಕುವುದು ಹೀಗೆ…
ದಿನವೂ ಎಲ್ಲ ವೋಚರ್ಗಳನ್ನು ಹಿಡಿದುಕೊಂಡು ಡೇ ಬುಕ್ ಮಾಡಿದರೆ ಒಂದು ಯುದ್ಧ ಗೆದ್ದ ಹಾಗೆ ಆಗುತ್ತಿತ್ತು ದೊಡ್ಡ ದೊಡ್ಡ ಶಾಖೆಗಳಲ್ಲಿ. ದೊಡ್ಡ ಶಾಖೆಗಳಲ್ಲಿ ಶುಕ್ರವಾರ ಕರೆಂಟ್ ಅಕೌಂಟ್ ಸ್ಟ್ರೆಚ್ ಟ್ಯಾಲಿ ಆಗಿ ಬಿಟ್ಟರೆ ಕುಣಿದಾಡುವಷ್ಟು ಸಂತೋಷ ಆಗುತ್ತಿತ್ತು. ಡೇ ಬುಕ್ ಕೂಡ ಒಂದೂ ತಪ್ಪಿಲ್ಲದ ಹಾಗೆ ಸ್ಟ್ರೆಚ್ ಟ್ಯಾಲಿ ಆಗಿ ಬಿಟ್ಟರೆ ಹರ್ರೇ ಎಂದು ಜೋರಾಗಿ ಕೂಗಿದರೆ ಇಡೀ ಶಾಖೆಯವರೆಲ್ಲ ಸಂತೋಷಪಡುತ್ತಿದ್ದರು. ಎಲ್ಲರ ಕಷ್ಟ ಸುಖಗಳಲ್ಲಿ ಎಲ್ಲರೂ ಭಾಗಿ. ಒಂದು ಕುಟುಂಬದ ಹಾಗೆ ಕೆಲಸ ಮಾಡುತ್ತಿದ್ದ ಕಾಲ ಅದು . ಈಗಿನ ಮಕ್ಕಳಿಗೆ ಇದನ್ನೆಲ್ಲ ಹೇಳಿದರೆ ನಗು ಬರುತ್ತದೆಯೋ ಏನೋ ಕಾಣೆ. ಅವರಿಗೆ ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ.
ಅಯ್ಯೋ ವಿಷಯ ಅಂತರವಾಯಿತು. ನಾನು ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಹೊಳಲು ಶಾಖೆಯ ಒಂದು ಹುಡುಗಿ ನನ್ನ ಜೊತೆಗೆ ಕೂಡುತ್ತಿದ್ದಳು. ಪಣಕನಹಳ್ಳಿಗೆ ಹೋಗುವ ಈ ಪದ್ಮಾವತಮ್ಮ ನಮ್ಮ ಅಕ್ಕ ಪಕ್ಕವೇ ಕೂರುತ್ತಿದ್ದರು. ತಿಟ್ಟು ಎನ್ನುವ ಸ್ಥಳದಲ್ಲಿ ಇಳಿಯುತ್ತಿದ್ದ ಉದ್ದ ಜಡೆಯ ಮುಸ್ಲಿಂ ಟೀಚರ್ ಕೂಡ ನಮ್ಮ ಜೊತೆ.
ಹೀಗೆ ಬಸ್ಸಿನ ಪ್ರಯಾಣ ಕೂಡ ಬದುಕಿನ ಬೇರೆ ಮುಖಗಳನ್ನು ಪರಿಚಯಿಸುತ್ತಿತ್ತು. ಅನೇಕರ ಪರಿಚಯದ ಜೊತೆಗೆ ಸ್ನೇಹ ಬಾಂಧವ್ಯ ಕೂಡ ಉಂಟಾಗುತ್ತಿತ್ತು. ಕೇವಲ ಅರ್ಧ ಗಂಟೆಯ ಆ ಯಾತ್ರೆ ನನ್ನ ಬದುಕಿನುದ್ದಕ್ಕೂ ನೆನಪಿನಲ್ಲಿ ಉಳಿಯುವಂತದ್ದು.
ನಾನು ಗರ್ಭಿಣಿಯಾಗಿದ್ದಾಗ ಇದೇ ಪದ್ಮಾವತಮ್ಮ ಗರ್ಭಿಣಿ ಹುಡುಗಿ ಎಂದು ಕರಿದ ತಿಂಡಿಗಳನ್ನು ಮಾಡಿ ನನ್ನ ಪಕ್ಕ ಕುಳಿತಿರುವ ವೇಳೆ ಯಾರಿಗೂ ಕಾಣದ ಹಾಗೆ ತೆಗೆದುಕೊಳ್ಳಿ ಎಂದು ಮುಚ್ಚಿಟ್ಟು ಕೊಡುತ್ತಿದ್ದರು. ಅದೇನು ಅನುಬಂಧವೋ? ಹೆಚ್ಚು ಪರಿಚಿತರಲ್ಲದಿದ್ದರೂ ಕೇವಲ ಬಸ್ಸಿನಲ್ಲಿ ಜೊತೆ ಓಡಾಡುತ್ತಿದ್ದ ನನಗೆ ಆಕೆ ಆ ರೀತಿ ಉಪಚಾರ ಮಾಡಬೇಕೆಂದೇನೂ ಇರಲಿಲ್ಲ. ಆದರೂ ಅದು ಆಕೆಯ ಪ್ರೀತಿ, ದೊಡ್ಡತನ ಮತ್ತು ಮನುಷ್ಯತ್ವ. ಆಕೆ ನಾ ಈಗ ಕೆಲಸ ಮಾಡುತ್ತಿರುವ ವಿ.ವಿ.ರಸ್ತೆ ಶಾಖೆಗೂ ನೂರಾರು ಬಾರಿ ಬಂದಿದ್ದಾರೆ ಪಿಂಚಣಿಗೆAದು. ಕಂಡಾಗಲೆಲ್ಲಾ ಮುಖದ ತುಂಬಾ ನಗು ಇಬ್ಬರಿಗೂ. ಪುರುಸೊತ್ತಿದ್ದರೆ ಎರಡು ಮಾತು ಆಡುತ್ತಿದ್ದೆವು.
ಬಹುಶಃ ಇಂಥವರಿAದ ನಾನು ಕಲಿತ ಪಾಠವೇ ಇಂದಿಗೂ ನನ್ನ ಶಾಖೆಯಲ್ಲಿ ಇರುವ ಸಣ್ಣಪುಟ್ಟ ಹುಡುಗರಿಗೆ ಹುಷಾರಿರದಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಏನಾದರೂ ತಿಂಡಿ ತಂದು ಕೊಡಬೇಕೆಂದು ಆಸೆ ಪಡುವುದು, ನಮ್ಮ ಮನೆಯ ಮಕ್ಕಳಂತೆ ಅವರನ್ನು ಟ್ರೀಟ್ ಮಾಡಬೇಕೆಂದು ಒಳಗಿನಿಂದ ವಾತ್ಸಲ್ಯ ಹೊಮ್ಮುವುದು. ಬಹುಶಃ ಇಂತಹ ಘಟನೆಗಳಿಂದ ನಾನು ಕಲಿತ ಪಾಠ ಜೊತೆಗೆ ಯಾರೇ ಆದರೂ ಕಷ್ಟದಲ್ಲಿರುವವರನ್ನು ಕಂಡರೆ ಮಮ್ಮಲ್ಲ ಮರುಗಿ ಕಣ್ಣು ನೀರು ತುಂಬಿಕೊಳ್ಳುವ ಸ್ವಭಾವ ಅಮ್ಮನಿಂದ ನನಗೆ ರಕ್ತಗತವಾಗಿ ಬಂದಿದ್ದು ಇರಬಹುದು.
ಈ ಸಾವು ನನ್ನಲ್ಲಿ ಒಂದಿಷ್ಟು ಕಾಲ ನೋವನ್ನು ತಂದು ಕಾಡುತ್ತಿತ್ತು. ನಾನು ಊರಿನಲ್ಲಿ ಇದ್ದಿದ್ದರೆ ಕಡೆಯ ಪಕ್ಷ ಒಂದೆರಡು ದಿನ ಬಿಟ್ಟಾದರೂ ಅವರ ಮನೆಗೆ ಹೋಗಿ ಬರಬಹುದಿತ್ತು ಎನಿಸುತ್ತಿತ್ತು.
ಇದಾಗಿ ಬಹುಶಃ ಒಂದು ವಾರವಾಗಿರಬಹುದು. ಆ ಕಡೆಯಿಂದ ರಮ್ಯನ ಫೋನ್. ನಾನು ನನ್ನ ಮೊದಲ ಬ್ಯಾಂಕರ್ಸ್ ಡೈರಿಯ ಅಂಕಣದಲ್ಲಿ ಆಸ್ಪತ್ರೆಯ ಸತ್ಯನಾರಾಯಣ್ ಅವರ ಬಗ್ಗೆ ಬರೆದಿದ್ದೆ. ರಮ್ಯಾ ಅವರ ಸೊಸೆ. ಸತ್ಯನಾರಾಯಣ್ ಅವರು ನಮ್ಮ ಬ್ಯಾಂಕಿನ ಎಲ್ಲರಿಗೂ ಆತ್ಮೀಯರು. ನಮಗೆ ಯಾರಿಗೆ ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸವಾದರೆ ತಾವೇ ಖುದ್ದಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗ್ಗಗ್ಗೆ ವಿಚಾರಿಸಿ ಸಲಹೆಗಳನ್ನು ಕೊಡುತ್ತಿದ್ದರು. ಆದರೆ ಅವರ ಕೊನೆಯ ಕಾಲದಲ್ಲಿ ಹೊಟ್ಟೆಯ ಕ್ಯಾನ್ಸರ್ ನಿಂದಾಗಿ ಅವರು ನರಳಿದ್ದನ್ನು ನಾನು ಇಂದಿಗೂ ಮರೆಯಲಾರೆ. ಹಾಸಿಗೆಯಲ್ಲಿ ಈ ಕಡೆಯಿಂದ ಆ ಕಡೆ ಹೊರಳಿ ಹೊರಳಿ ಕಿರುಚಿಕೊಂಡು ನರಳುತ್ತಿದ್ದರು. ಸಾಯುವ ಎರಡು ತಿಂಗಳ ಮೊದಲು ನನ್ನ ಬಳಿ ಕುಳಿತು ಅವರ ನಂತರ ಅವರ ಬ್ಯಾಂಕಿನ ಖಾತೆಯ ಯಾವ್ಯಾವ ಕೆಲಸಗಳು ಹೇಗೆ ನಡೆಯುತ್ತವೆ? ತಮ್ಮ ಪತ್ನಿಗೇನು ತೊಂದರೆ ಆಗುವುದಿಲ್ಲವೇ ಎಂದು ನನ್ನಲ್ಲಿ ಖಾತ್ರಿಪಡಿಸಿಕೊಂಡು ನಾನು ಕೊಟ್ಟ ಭರವಸೆಯನ್ನು ಅವರು ನಂಬಿ ‘ನನಗೆ ಈಗ ನೆಮ್ಮದಿ. ನೀವು ಎಲ್ಲವನ್ನೂ ಸೆಟಲ್ ಮಾಡಿ ಕೊಡುತ್ತೀರಾ’ ಎಂದು ಹೇಳಿದ್ದರು. ಸಾಯುವ ಎರಡು ದಿನಗಳ ಮುಂಚೆ ಅವರ ಮಾತು ನಿಂತು ಹೋಗಿತ್ತು. ಕೊನೆಯಲ್ಲಿ ಮಾತನಾಡಿದಿದ್ದು ನನ್ನ ಬಳಿಯೇ. ಎರಡು ದಿನಗಳ ಮೊದಲು ನಾನು ಅವರ ಮನೆಗೆ ಹೋದಾಗ ‘ದೇವ್ರೂ…’ ಎಂದು (ಅವರು ನನ್ನನ್ನು ಹಾಗೆಯೇ ಕರೆಯುತ್ತಿದ್ದುದು) ಬ್ಯಾಂಕಿಗೆ ಬಂದಾಗಲೂ ‘ದೇವ್ರೂ ಹೇಗಿದ್ದೀರಾ?’ ಎಂದೇ ಕೇಳುತ್ತಿದ್ದುದು. ‘ಮೇಡಂ ತುಂಬಾ ನೋವು. ಯಾವ ಜನ್ಮದ ಕರ್ಮವೋ ಗೊತ್ತಿಲ್ಲ ಅಥವಾ ಮದುವೆಯಾದ ಹೊಸತರಲ್ಲಿ ನನಗೆ ತುಂಬಾ ಸಿಟ್ಟು ರೌದ್ರಾವತಾರ ಹೆಂಡತಿಗೆ ಹೊಟ್ಟೆ ಉರಿಸಿದ್ದೆ ಆಗೆಲ್ಲ ಅವಳು ಅದೆಷ್ಟು ನೊಂದಿರಬಹುದೋ ಗೊತ್ತಿಲ್ಲ. ಅವಳ ಹೊಟ್ಟೆ ಉರಿಸಿದ್ದಕ್ಕೆ ಈಗ ನನಗೆ ಹೊಟ್ಟೆ ಕ್ಯಾನ್ಸರ್ ಬಂದಿರುವುದು’ ಎಂದು ಅಲವತ್ತುಕೊಂಡಿದ್ದರು. ‘ದೇವ್ರೂ ನಾನು ಇನ್ನು ಹೆಚ್ಚು ಕಾಲ ಬದುಕುವುದಿಲ್ಲ. ಈ ನೋವು ತಡೆಯಲಾರೆ. ನಾನು ಸತ್ತ ನಂತರ ಯಾವ ತೊಂದರೆಯೂ ಆಗದ ಹಾಗೆ ನನ್ನ ಹೆಂಡತಿಗೆ ಕ್ಲೇಮ್ ಸೆಟಲ್ ಮಾಡಿಕೊಡಿ. ನನ್ನ ಅಪರ ಕರ್ಮಕ್ಕೆಂದು ನೋಟುಗಳನ್ನು ಕಾಯಿನ್ಗಳನ್ನು ಎಲ್ಲಾ ತಂದಿಟ್ಟಿದ್ದೇನೆ. ನೀವು ನನ್ನ ಪತ್ನಿಗೆ ಎಲ್ಲ ರೀತೆಯ ಸಹಕಾರ ಕೊಡಬೇಕು’ ಎಂದು ಹೇಳಿದ್ದರು
ಮನುಷ್ಯ ಪಶ್ಚಾತ್ತಾಪ ಪಟ್ಟರೆ ಎಲ್ಲ ಪಾಪವೂ ಪರಿಹಾರವಾಗುತ್ತದೆ ಎನ್ನುತ್ತಾರೆ. ಆದರೆ ಪಶ್ಚಾತ್ತಾಪ ಬರುವುದು ತೀರಾ ಕೊನೆಯಲ್ಲಾದರೆ ಏನೂ ರಿಪೇರಿ ಮಾಡಲು ಸಾಧ್ಯವಿರುವುದಿಲ್ಲ. ಮೈ ಮನಗಳಲ್ಲಿ ಶಕ್ತಿ ಇರುವಾಗಲೇ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಪ್ರಾಯಶ್ಚಿತ್ತ ಮಾಡಿಕೊಂಡರೆ ಮನುಷ್ಯನ ಬದುಕು ಸಹ್ಯವಾಗುತ್ತದೆ.
ಸತ್ಯನಾರಾಯಣ್ ಸರ್ ಬಹುತೇಕ ಪ್ರತಿ ದಿನವೂ ಜಿಲ್ಲಾಸ್ಪತ್ರೆಯ ಕ್ಯಾಶ್ ಕಟ್ಟಲು ಬ್ಯಾಂಕಿಗೆ ಬರುತ್ತಿದ್ದರು. ಬಂದವರು ಎಲ್ಲರನ್ನೂ ಮಾತನಾಡಿಸಿಯೇ ಹೋಗುತ್ತಿದ್ದುರು. ನಾನು ಆಗೆಲ್ಲಾ ಡೆಪಾಸಿಟ್ ಕೌಂಟರಿನಲ್ಲಿಯೇ ಹೆಚ್ಚಾಗಿ ಇರುತ್ತಿದ್ದುರು. ಡೆಪಾಸಿಟ್ ಕೌಂಟರಿಗೆ ವಿಶೇಷ ಆಸನದ ವ್ಯವಸ್ಥೆ, ಜೊತೆಗೆ ಸೆಪರೇಟ್ ರೂಮು ಇರುತಿತ್ತು. ನಾನು ಪಾಸ್ ಮಾಡಿಸಲು ಆ ಕಡೆ ಈ ಕಡೆ ಹೋದಾಗ ನನಗೆ ಕಾಣದಂತೆ ಕಾಲದಲ್ಲಿ ಹಸಿ ಕಡಲೆ ಕಾಯಿಯನ್ನು ಕಾಲದಲ್ಲಿ ತಂದು ನನ್ನ ಡ್ರಾವಲ್ಲಿ ಇಟ್ಟು ಹೊರಡುವಾಗ ‘ಮೇಡಂ ಕಡಲೆಕಾಯಿ ಇಟ್ಟಿದ್ದೇನೆ. ಬೈಬೇಡಿ ತಿನ್ನಿ’ ಎಂದು ಹೇಳುತ್ತಿದ್ದರು. ಅವರ ಕೊನೆಗಾಲದಲ್ಲಿ ನನಗೆ ಪಿಹೆಚ್.ಡಿ ಅವಾರ್ಡ್ ಆಗಿದ್ದು. ಆಸ್ಪತ್ರೆಗೆ ಹೋಗುತ್ತೇನೆಂದು ಮನೆಯಲ್ಲಿ ಸುಳ್ಳು ಹೇಳಿ ಸೊಸೆಯ ಜೊತೆ ನಮ್ಮ ಮನೆಗೆ ಬಂದು ಹೂವು, ಹಣ್ಣು, ಸಿಹಿ ಜೊತೆಗೆ ಕವರಿನಲ್ಲಿ ಒಂದು ಸಾವಿರ ಇಟ್ಟು ನಿಮಗೆ ಬೇಕಾದ್ದು ತೊಗೊಳಿ ಎಂದು ಕುಂಕುಮ ಕೊಡಿಸಿ ಹೋದ ಆ ಪ್ರೀತಿಯನ್ನು ಹೇಗೆ ಮರೆಯಲಿ? ಈಗ್ಗೆ ಹತ್ತು ವರ್ಷದ ಹಿಂದಿನ ಮಾತದು.
ಸತ್ಯನಾರಾಯಣ್ ಸರ್ ಹೋದ ನಂತರ ಅವರ ಪತ್ನಿಗೆ ಇಡೀ ದಿನ ಸಮಯ ತೆಗೆದುಕೊಂಡು (ಅಷ್ಟೊಂದು ಖಾತೆಗಳಿದ್ದವು ಸತ್ಯನಾರಾಯಣ ಅವರ ಹೆಸರಿನಲ್ಲಿ. ಆರ್.ಡಿಗಳು ಎಫ್ ಡಿ ಗಳು) ಎಲ್ಲವನ್ನು ಸೆಟಲ್ ಮಾಡಿಕೊಟ್ಟಿದ್ದೆ. ಆಗ ನನಗೆ ಅವರಿಗೆ ಕೊಟ್ಟ ಮಾತನ್ನು ನಡೆಸಿದ್ದೇನೆ ಎನ್ನುವ ತೃಪ್ತಿಯಾಗಿತ್ತು. ಆನಂತರ ಅವರ ಪತ್ನಿ ಏನು ಬೇಕಿದ್ದರೂ ನನಗೆ ಕರೆ ಮಾಡುತ್ತಿದ್ದರ.Ä ಈಗ ಅವರ ಪತ್ನಿಯ ಹೆಸರಿನಲ್ಲಿಯೇ ರಮ್ಯಾ ನನಗೆ ಕರೆ ಮಾಡಿದ್ದು. ಇಂಟರ್ ನ್ಯಾಷನಲ್ ರೋಮಿಂಗ್ ಇದ್ದುದರಿಂದ ತೆಗೆದುಕೊಳಲೋ ಬೇಡವೋ ಎನ್ನುವ ಒಂದು ಗೊಂದಲ ಇತ್ತು ನನಗೆ. ಸಿಕ್ಸ್ತ್ ಸೆನ್ಸ್ ಎನ್ನುತ್ತಾರಲ್ಲ ಅದು ಕೆಲಸ ಮಾಡಿನನಗೆ ಯಾಕೋ ಕರೆ ತೆಗೆದುಕೊಳ್ಳಬೇಕು ಎನಿಸಿತು. ತೆಗೆದುಕೊಂಡ ಕೂಡಲೇ ರಮ್ಯಾ ‘ಆಂಟಿ ನಿಮಗೆ ವಿಷ್ಯ ಗೊತ್ತಾ? ಎಂದಳು. ನನಗೆ ನಿಜಕ್ಕೂ ಏನೂ ಗೊತ್ತಿರಲಿಲ.್ಲ ‘ಏನಾಯ್ತು ರಮ್ಯ’ ಎಂದು ಕೇಳುತ್ತಿದ್ದ ಹಾಗೆ ಅವಳ ಅಳು ಕೇಳಿಸಿತು. ‘ಆಂಟೀ ಅತ್ತೆಗೆ ತುಂಬಾ ಹುಷಾರಿಲ್ಲ ಆಸ್ಪತ್ರೆಯಲ್ಲಿದ್ದಾರೆ. ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಸೇರಿಸಿದ್ದೇವೆ, ಕಳೆದ ವಾರ ಅವರಿಗೆ ಮಲಗಿದಾಗ ಉಸಿರಾಟಕ್ಕೆ ತೊಂದರೆ ಆಗುತ್ತಿತ್ತು. ಹಾಗಾಗಿ ಇಲ್ಲಿ ಹಾರ್ಟ್ ಸ್ಪೆಷಲಿಸ್ಟ್ ಪ್ರಶಾಂತ ಅವರ ಬಳಿ ತೋರಿಸಿದಾಗ ತುಂಬಾ ತಡ ಮಾಡಿದ್ದೀರಿ ಹೃದಯ ಅರ್ಧದಷ್ಟು ಮಾತ್ರವೇ ಕೆಲಸ ಮಾಡುತ್ತಿರುವುದು ಎಂದು ಹೇಳಿದರು. ಹಾಗಾಗಿ ಮೈಸೂರಿನ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಬಂದಿದ್ದೇವೆ. ಮೈಸೂರಿನಲ್ಲಿ ಡಾಕ್ಟರ್ ಭರವಸೆ ಕೊಟ್ಟಿಲ್ಲ. ಅತ್ತೆಗೆ ಜ್ಞಾನವೂ ಇಲ್ಲ. ಇನ್ನೆಷ್ಟು ದಿನ ಇರುತ್ತಾರೋ ಗೊತ್ತಿಲ್ಲ.
ಹೋದ ತಿಂಗಳು ಅರವತ್ತು ತುಂಬಿತು ಎಂದು ಮೈಸೂರಿನ ಒಂಟಿಕೊಪ್ಪಲಿನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಕಲ್ಯಾಣೋತ್ಸವ ಇಟ್ಟುಕೊಂಡಿದ್ದರು. ಮುಂದಿನ ತಿಂಗಳು ಜೋರಾಗಿ ಫಂಕ್ಷನ್ ಮಾಡಬೇಕೆಂದು ಮೈಸೂರು ಸಿಲ್ಕ್ ತೆಗೆದುಕೊಂಡು, ವರ್ಕಾ್ಮಡಿಸಿ ಬ್ಲೌಸ್ ಹೊಲಿಸಿಟ್ಟಿದ್ದಾರೆ. ಒಂದು ಹೊಸಾ ಒಡವೆಯನ್ನೂ ಮಾಡಿಸಿಕೊಂಡರು. ಅಷ್ಟರಲ್ಲೆ ಹೀಗಾಯಿತಲ್ಲಾ ಅಂಟೀ’ ಎಂದು ಮತ್ತೆ ಕಣ್ಣೀರಾದಳು. ನನಗೆ ಗಾಬರಿ – ಅಷ್ಟು ಚೆನ್ನಾಗಿದ್ದ ಹೆಂಗಸು, ಒಳ್ಳೆಯ ಮೈಸೂರ್ ಸಿಲ್ಕು ಉಟ್ಟು ಮೈತುಂಬ ಒಡವೆ ತೊಟ್ಟು ಲಕ್ಷಣವಾಗಿ ಓಡಾಡುತ್ತಿದ್ದರು. ಕಂಡಾಗಲೆಲ್ಲಾ, ಫೋನ್ ಮಾಡಿದಾಗಲೆಲ್ಲಾ ‘ಯಾವಾಗ ಬರ್ತೀರಾ ನಮ್ಮನೆಗೆ? ವಿರಾಮವಾಗಿ ಬನ್ನಿ, ನೀವು ಸಂಗೀತ ವಿರಾಮವಾಗಿ ಬನ್ನಿ’ ಎಂದು ಪದೇ ಪದೇ ಹೇಳುತ್ತಿದ್ದರು. ಪ್ರತಿ ಸಂಕ್ರಾAತಿ ದಿನ ನಾನು ಅವರ ಮನೆಗೆ ಎಳ್ಳು ಬೀರಲು ಹೋದಾಗ (ಅಂದು ಅವರ ಮನೆಯ ದೇವರ ಜಾತ್ರೆ, ಹುಲುಗನಗನ ಮರಡಿ ರಥೋತ್ಸವ) ಹಾಗಾಗಿ ಸತ್ಯನಾರಾಯಣ ಸರ್ ಅಂದು ಹಣೆಗೊಂದು ನಾಮವಿಟ್ಟು ಮಗುಟದಲ್ಲಿ ಇರುತ್ತಿದ್ದರು. ‘ದೇವ್ರೂ ಬನ್ನಿ, ಇವತ್ತು ನಮ್ಮ ಮನೆಯ ದೇವರ ರಥೋತ್ಸವ’ ಎಂದು ಹೇಳಿ ಕೋಸಂಬರಿ ಪಾನಕ ಕೊಟ್ಟು ನಂತರ ಎಳ್ಳು ಬೀರಿಸುತ್ತಿದ್ದರು. ಅವರ ನಂತರ ಕೂಡ ಅವರ ಮನೆಗೆ ಹೋದಾಗ ಸೊಸೆ ‘ಆಂಟಿ ಕೋಸಂಬರಿ ಪಾನಕ ತೆಗೆದುಕೊಳ್ಳಿ ಇವತ್ತು ನಮ್ಮನೆ ದೇವರ ಉತ್ಸವ’ ಎಂದು ಹೇಳುತ್ತಿದ್ದಳು. ಆಗ ಪ್ರತಿ ಬಾರಿ ಸಂಕ್ರಾAತಿ ದಿನ ನಾನು ಸತ್ಯನಾರಾಯಣ ಸರ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೆ ‘ಅಯ್ಯೋ ನಿಮ್ಮ ಮಾವ ಇಲ್ಲೇ ನಿಂತು ನನಗೆ ಉಪಚಾರ ಮಾಡುತ್ತಿದ್ದರು’ ಎಂದು ಅನ್ನದೇ ಇರಲು ಆಗುತ್ತಿರಲಿಲ್ಲ. ಅದಾದ ನಂತರ ಅವರ ಪತ್ನಿ ಸುವರ್ಣ ಕೂಡ ಅಷ್ಟೇ ವಿಶ್ವಾಸದಲ್ಲಿ ನಡೆದುಕೊಳ್ಳುತ್ತಿದ್ದರು. ಅಂತಹ ಹೆಂಗಸಿಗೆ ಇದ್ದಕ್ಕಿದ್ದ ಹಾಗೆ ಒಂದು ವಾರದಲ್ಲಿ ಈ ರೀತಿ ಆಯಿತು ಎಂದಾಗ ಶಾಕ್ ಆಯ್ತು ನನಗೆ.
‘ಆಸ್ಪತ್ರೆಗೆ ಹೋಗೋಣ ಎಂದು ಎಷ್ಟು ಹೇಳಿದರೂ ಅತ್ತೆ ಒಪ್ಪುತ್ತಿರಲಿಲ್ಲ. ಇತ್ತೀಚೆಗೆ ತುಂಬಾ ದಪ್ಪವಾಗಿದ್ದರು. ಎಲ್ಲಿ ಡಾಕ್ಟರ್ ಬಳಿ ಹೋದರೆ ವಾಕ್ ಮಾಡು, ಡಯಟ್ ಮಾಡು ಎನ್ನುತ್ತಾರೋ ಎನ್ನುವ ಭಯ ಅತ್ತೆಗೆ. ಕಾಲು ಮಂಡಿ ತುಂಬಾ ನೋವಿತ್ತು ಹಾಗಾಗಿ ವಾಕ್ ಮಾಡು ಎಂದರೆ ಎಂಬ ಭಯವಿತ್ತು. ಹರೀಶ್ (ಸುವರ್ಣ ಅವರ ಮಗ) ಆಸ್ಪತ್ರೆಗೆ ಹೋಗುವಾಗ ಅಮ್ಮಾ ಆಂಬುಲೆನ್ಸ್ ಕರೆಸಲಾ ಎಂದಾಗ ಬೇಡ ಕಾರಿನಲ್ಲಿ ಹೋಗೋಣ ಎಂದರು, ತಾವೇ ನಡೆದುಕೊಂಡು ಹೋಗಿ ಕಾರಿನಲ್ಲಿ ಕುಳಿತರು ಆಂಟೀ. ಆಸ್ಪತ್ರೆ ತಲುಪುವ ಒಂದು ಗಂಟೆಯ ಒಳಗೆ ಅವರ ಮಾನಸಿಕ ಸ್ಥಿತಿ ಎಷ್ಟು ಬದಲಾಗಿತ್ತು ಎಂದರೆ ಹರೀಶ ನನಗೆ ನಡೆಯಕ್ಕೆ ಆಗಲ್ಲ ಸ್ಟೆçಚಸ್ ತರಿಸು ಅಥವಾ ವೀಲ್ ಚೇರ್ ತರಿಸು ಎಂದರು ಆಂಟೀ’ ಎಂದಳು. ಎಂದರೆ ಹೋಗುವ ಒಂದು ಗಂಟೆಯ ಕಾಲದಲ್ಲಿ ಆಕೆಯ ಮೈ ಮನಸ್ಸಿನ ತುಂಬಾ ಭಯ ತುಂಬಿಕೊAಡಿತ್ತು. ಇಂತಹ ದೊಡ್ಡ ಆಸ್ಪತ್ರೆಗೆ ಹೋಗುತ್ತಿದ್ದೇನೆ ಏನೆಂದು ಬಿಡುತ್ತಾರೋ? ಆಪರೇಷನ್ ಹೇಳುತ್ತಾರೋ ಅಡ್ಮಿಟ್ ಮಾಡಿಕೊಳ್ಳುತ್ತಾರೋ? ಎಂದು ಭಯ ಪಟ್ಟರು ಎಂದು ಕಾಣುತ್ತದೆ?
ಮನುಷ್ಯ ಬೇಗ ಸಾಯುವುದು ಭಯದಿಂದಾಗಿ ಕಾಯಿಲೆಯಿಂದಲ್ಲ.
‘ಆAಟೀ ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಒಳಗೆ ಅಡ್ಮಿಟ್ ಮಾಡಿಕೊಳ್ಳಲು ಆಕೆಯ ಸೀರೆಯನ್ನು ತೆಗೆಸಿ ಆಸ್ಪತ್ರೆ ಡ್ರೆಸ್ ಕೊಟ್ಟರು, ಸೊಸೆಗೆ ಎಲ್ಲ ಒಡವೆಗಳನ್ನು ಕೊಟ್ಟುಬಿಡಿ ಎಂದು ಹೇಳಿದರು. ಬಳೆ ಸರ ಓಲೆ ತೆಗೆಯುವಾಗ ಆಕೆಯ ಮುಖ ಬಣ್ಣ ಕಳೆದುಕೊಂಡಿತ್ತು’ ಎಂದು ಸೊಸೆ ಹೇಳಿದಳು.
ಯಾವಾಗ ತಮ್ಮ ಎಲ್ಲಾ ನಿಜರೂಪವನ್ನು ತೆಗೆದು ಆಸ್ಪತ್ರೆಯ ರೂಪಕ್ಕೆ ಬದಲಾಯಿಸಿದರೋ ಆಕೆಗೆ ಸಂಪೂರ್ಣವಾಗಿ ಭಯ ಆವರಿಸಿ ಹಾಸಿಗೆ ಮೇಲೆ ಮಲಗಿಸಿದ ಕೂಡಲೇ ಜ್ಞಾನ ಹೋಯ್ತು. ಹೋದ ಜ್ಞಾನ ಮತ್ತೆ ಬರಲೇ ಇಲ್ಲ. ಡಾಕ್ಟರ್ ‘ನ್ಯುಮೋನಿಯಾ ಕೂಡ ಆಗಿದೆ, ತುಂಬಾ ಕಫ ಸೇರಿಕೊಂಡಿದೆ. ಅದನ್ನು ತೆಗಿಯಬೇಕಾದರೆ ಆಕೆಗೆ ಜ್ಞಾನ ಬರಬೇಕು. ಜ್ಞಾನ ಬಂದ ಕೂಡಲೇ ಅವರು ರೆಸ್ಪೋನ್ಡ್ ಮಾಡುತ್ತಾರೆ, ಕಫವನ್ನು ತೆಗೆದರೆ ಸ್ವಲ್ಪ ಸುಧಾರಿಸಬಹುದು, ಸುಧಾರಿಸಿಕೊಳ್ಳುವ ಚಾನ್ಸಸ್ ಇದೆ’ ಎಂದು ಹೇಳಿದರಂತೆ. ಆದರೆ ಆಕೆಗೆ ಯಾವಾಗ ಜ್ಞಾನ ಬರಲಿಲ್ಲವೋ ಮನೆಯವರು ಭರವಸೆ ಕಳೆದುಕೊಂಡರು.
ಇವರಿಗೆ ಕೂಡ ಮನೆಯಲ್ಲಿ ಶಾಲೆಗೆ ಹೋಗುವ ಮಗು, ಮಗನದ್ದು ಪ್ರೆöÊವೇಟ್ ಕೆಲಸ ಎಷ್ಟು ದಿನ ಕೆಲಸಕ್ಕೆ ರಜಾ ಕೊಡುತ್ತಾರೆ? ಐದು ದಿನಗಳ ಕಾಲ ದಿನಕ್ಕೆ ಒಂದು ಲಕ್ಷದಂತೆ ಖರ್ಚು ಮಾಡಿ, ಇನ್ನು ಜ್ಞಾನ ಬಂದರೆ ಮಾತ್ರ ಸಾಧ್ಯ ಎಂದು ಆಸ್ಪತ್ರೆಯವರು ಎಂದ ಮೇಲೆ ಹಿತೈಷಿಗಳ ಸಲಹೆಯ ಮೇರೆಗೆ ಮಂಡ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಿದರು. ಅಲ್ಲಿಯವರೂ ಉಳಿಯುವ ಭರವಸೆ ಕೊಡದಿದ್ದಾಗ (ಮಗ ಸೊಸೆ ಆತುರ ಪಟ್ಟು ಡಿಸ್ಚಾರ್ಜ್ ಮಾಡಿದರು, ಆಸ್ಪತ್ರೆಯಲ್ಲೇ ಇದ್ದರೆ ಉಳಿಯುತ್ತಿದ್ದಳು, ಅವಳು ಮತ್ತುಭಾವ ಕೂಡಿಟ್ಟಿದ್ದ ಹಣವನ್ನು ಅವಳಿಗೇ ಖರ್ಚು ಮಾಡಲು ಮಗ ಸೊಸೆ ಹಿಂಜರಿದರು ಎಂದು ಸುವರ್ಣ ಅವರ ಅಕ್ಕ ತಂಗಿಯರು ಮುನಿಸಿಕೊಂಡರAತೆ. ಇಂಥ ಸಂದರ್ಭದಲ್ಲಿ ಯಾರದು ತಪುö್ಪ ಯಾರದು ಸರಿ ಎಂದು ಮೂರನೆಯವರಾಗಿ ನಾವು ತೀರ್ಮಾನಿಸುವುದು ಸರಿಯಲ್ಲ) ಇರುವಷ್ಟು ದಿನ ಮನೆಯಲ್ಲೇ ಇರಲಿ ಮನೆಗೆ ಕರೆದುಕೊಂಡು ಬಂದರು. ವೆಂಟಿಲೇಟರ್ ತೆಗೆದರೆ ಮೂರು ಗಂಟೆಗಳ ಕಾಲ ಇದ್ದರೆ ಹೆಚ್ಚು ಎಂದರAತೆ ಆಸ್ಪತ್ರೆಯವರು.
ಇವೆಲ್ಲ ನಾನು ಅಲ್ಲಿದ್ದಾಗಲೇ ಆಗಿದ್ದು. ನನಗೆ ವಿಷಯ ತಿಳಿದ ಕೂಡಲೇ ಸಹೋದ್ಯೋಗಿ ಗೆಳಗಿ ಸಂಗೀತಾಗೆ ಕೂಡ ಕರೆ ಮಾಡಿದೆ ಮತ್ತು ಅವರ ಕುಟುಂಬ ಸದಸ್ಯರಾದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅನಂತರಾಮ್ ಸರ್ ಗೆ ಕೂಡ ತಿಳಿಸಿದೆ. ಅವರಿಬ್ಬರೂ ಹೋಗಿ ನೋಡಿಕೊಂಡು ಬಂದಿದ್ದರು. ಸತ್ಯನಾರಾಯಣ್ ಸರ್ ಅವರಿಗೆ ನನ್ನ ಮೇಲಿದ್ದಷ್ಟೇ ಅಭಿಮಾನ ಸಂಗೀತಾ ಮೇಲೂ ಇತ್ತು. ಸಂಗೀತಾ ಹುಣಸೂರಿನಿಂದ ಮತ್ತೆ ಮಂಡ್ಯಕ್ಕೆ ವರ್ಗವಾಗಿ ಬರಬೇಕೆಂದು ತುಂಬಾ ಅಪೇಕ್ಷೆ ಪಟ್ಟಿದ್ದರು. ಸಂಗೀತಾ ಹುಣಸೂರಿನ ಶಾಖೆಯಿಂದ ಮಂಡ್ಯಕ್ಕೆ ವರ್ಗವಾದ ದಿವಸವೇ ಸತ್ಯನಾರಾಯನ್ ಸರ್ ತೀರಿಕೊಂಡಿದ್ದು.
ಸುವರ್ಣ ಅವರನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಎರಡು ಮೂರು ಗಂಟೆಗಳ ಕಾಲ ಎಂದು ಹೇಳಿದ್ದರಲ್ಲಆಸ್ಪತ್ರೆಯವರು, ಆಕೆಯ ಬದುಕು ಅಷ್ಟಕ್ಕೇ ಮುಗಿದಿರಲಿಲ.್ಲ ಮನೆಗೆ ಕರೆದುಕೊಂಡ ಮೇಲೆ ಬಂದ ಮೇಲೆಯೂ ಐದು ದಿನಗಳ ಕಾಲ ಉಸಿರಾಡಿಕೊಂಡಿದ್ದರು. ಆಗಲೇ ನಾನು ಭಾರತಕ್ಕೆ ಬಂದಾಗಿತ್ತು. ನಾನು ಸಂಗೀತ ಸುಧಾ ಎಲ್ಲಾ ಅವರ ಮನೆಗೆ ಹೋಗಿ ಆಕೆಯನ್ನು ನೋಡಿಕೊಂಡು ಬಂದೆವು. ಕೈಯಲ್ಲ ಚುಚ್ಚಿ ನಾಲಿಗೆಯಲ್ಲ ಒಣಗಿ ತುಂಬಾ ಕಷ್ಟಪಟ್ಟು ಉಸಿರಾಡುತ್ತಿದ್ದುದನ್ನು ನೋಡಿ ಸಂಕಟವಾಯಿತು.
ಸೀರೆ, ಒಡವೆ, ಹಣ, ಪ್ರದರ್ಶನ, ಹಮ್ಮು ಬಿಮ್ಮು ಎಲ್ಲವೂ ಮನುಷ್ಯ ಚೆನ್ನಾಗಿದ್ದಾಗ ಮಾತ್ರವೇ. ಆರೋಗ್ಯ ಕೆಟ್ಟಾಗ ಯಾವುದು ಬರುವುದಿಲ್ಲ. ಆರೋಗ್ಯಕ್ಕಿಂತ ಬೇರೆ ಭಾಗ್ಯವಿಲ್ಲ ಎಂಬುದು ಆರೋಗ್ಯ ಕೈಕೊಟ್ಟಾಗಲೇ ಸಾಮಾನ್ಯವಾಗಿ ಸರಿಯಾಗಿ ಅರ್ಥವಾಗುವುದು.ಕೆಲವರಿಗೆ ಮಾತ್ರ ಮುಂಜಾಗ್ರತೆ, ಜಾಗೃತಿ ಇರುತ್ತದೆ.
ಆಕೆಯ ಸೊಸೆಯಂತೂ ಸದಾ ಕಣ್ತುಂಬಿ ಅಳುತ್ತಲೇ ಇದ್ದಳು. ‘ಅವರು ಎಷ್ಟು ಚೆನ್ನಾಗಿ ಅಲಂಕರಿಸಿಕೊAಡು ತಿರುಗಾಡುತ್ತಿದ್ದರು, ಇನ್ನು ಈ ಪರಿಸ್ಥಿತಿಯಲ್ಲಿ ನೋಡಲು ನನಗೆ ಆಗುವುದಿಲ್ಲ. ಎಲ್ಲರೊಡನೆ ಮಾತನಾಡಿಕೊಂಡು ನಮಗೆ ಮಾರ್ಗದರ್ಶನ ಮಾಡುತ್ತಾ ಈ ಫಂಕ್ಷನ್ ಆ ಫಂಕ್ಷನ್ ಎಂದ್ ಓಡಾಡಿಕೊಂಡಿದ್ದವರು ಹೀಗೆ ಮೈಕೈ ಚುಚಿಸಿಕೊಂಡು ಒದ್ದಾಡುವುದನ್ನು ನೋಡಲಾಗುವುದಿಲ್ಲ’ ಎಂದು ಅಳುತ್ತಿದ್ದಳು.
ಒಂದರ್ಧ ಗಂಟೆ ಇದ್ದು ನೋಡಿಕೊಂಡು ಸಮಾಧಾನ ಹೇಳಿ ವಾಪಸ್ ಬಂದಾಯ್ತು. ಇದಾಗಿ ಎರಡು ದಿನಕ್ಕೆ ಸುವರ್ಣ ತೀರಿಕೊಂಡರು. ನಮ್ಮ ಮತ್ತೊಬ್ಬ ಗ್ರಾಹಕರು ಇಹಲೋಕ ಬಿಟ್ಟು ತ್ಯಜಿಸಿದರು. ಇವರೆಲ್ಲರನ್ನು ನಾನು ಗ್ರಾಹಕರು ಎಂದಷ್ಟೇ ಹೇಳಲು ಸಾಧ್ಯವಿಲ್ಲ. ಸುಮಾರು ಜನರು ಹೀಗೆಯೇ ಗ್ರಾಹಕರಾಗಿದ್ದುಕೊಂಡೇ ನಮ್ಮ ಕುಟುಂಬದ ಸ್ನೇಹಿತರು ಕೂಡ ಆಗಿಬಿಟ್ಟಿರುತ್ತಾರೆ.
ಬದುಕು ಯಾವ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆಯೋ, ಯಾರಿಗೆ ಯಾವಾಗ ಹೊಸ ಬದುಕೋ, ಯಾವಾಗ ಯಾರಿಗೆ ಸಾವೋ ಯಾವುದೂ ನಮಗೆ ತಿಳಿದಿರುವುದಿಲ್ಲ. ಎಲ್ಲಾ ವಿಧಿಯ ಲೀಲೆ ಮತ್ತು ಪ್ರಕೃತಿ ನಿಯಮ.
ಎರಡು ಸಾವುಗಳು ಒಂದಾದ ಮೇಲೆ ಒಂದು ಆಗಿದ್ದು ಒಂದಿಷ್ಟು ಕಾಲ ನನ್ನನ್ನು ಬದುಕಿನ ಬಗೆಗೆ, ಸಾವಿನ ಬಗೆಗೆ ಯೋಚನೆ ಮಾಡುವಂತೆ ಮಾಡಿದ್ದು.
ಆಗ ನನ್ನ ಜೊತೆ ಕೆಲಸ ಮಾಡಿದ ಅನೇಕ ಸಹೋದ್ಯೋಗಿಗಳ ಬಗ್ಗೆ ಕೂಡ ಬರೆಯಬೇಕು ಎನಿಸಿತು. ಕೇವಲ ಗ್ರಾಹಕರ ಜೊತೆಗಿನ ನನ್ನ ಅನುಭವ ಬ್ಯಾಂಕರ್ಸ್ ಡೈರಿಗೆ ಸೀಮಿತವಾಗದೆ ಒಂದು ಅಂಕಣವನ್ನಾದರೂ ನನ್ನೊಡನೆ ಕೆಲಸ ಮಾಡಿ ನನ್ನ ಬದುಕಿಗೆ ಒಂದಿಷ್ಟು ಹೊಸ ತಿರುವುಗಳನ್ನು ನೀಡಿದ, ಸ್ನೇಹ ಪ್ರೀತಿಯನ್ನು ನೀಡಿದ ಸಹೋದ್ಯೋಗಿಗಳ ಬಗ್ಗೆ ಕೂಡ ಬರೆಯಬೇಕು ಎನಿಸಿತು. ಆದರೆ ಈ ಅಂಕಣ ಸಾಕಷ್ಟು ದೊಡ್ಡದಾಗಿರುವುದರಿಂದ ಮುಂದಿನ ಅಂಕಣದಲ್ಲಿ ನನ್ನ ಜೊತೆ ಈ ೩೩ ವರ್ಷಗಳ ಕಾಲ ಒಡನಾಡಿದ ಸಹೋದ್ಯೋಗಿಗಳ ಬಗ್ಗೆ ಕೂಡ ಬರೆಯುತ್ತೇನೆ.
ಹುಟ್ಟು ಸಾವು ನಮ್ಮ ಕೈಲಿ ಇಲ್ಲ. ಇರುವಷ್ಟು ಕಾಲ, ಬದುಕಿರುವಷ್ಟು ಕಾಲ ಬದುಕನ್ನು ಚೆಂದ ಮಾಡಿಕೊಂಡು, ನಮ್ಮಿಂದ ನಾಲ್ಕಾರು ಜನರಿಗೆ ಉಪಯೋಗವಾಗುವ ಹಾಗೆ ಬದುಕಿದ್ದರೆ ಹುಟ್ಟಿಗೂ ಸಾವಿಗೂ ಸಾರ್ಥಕತೆ.

-ಡಾ. ಶುಭಶ್ರೀಪ್ರಸಾದ್, ಮಂಡ್ಯ.
೯೮೪೪೪೯೮೪೩೨








