ಮೈಸೂರು: ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಸಂಭವಿಸಿದೆ.
ತಾಲೂಕಿನ ಅಂಕನಾಥಪುರ ಗ್ರಾಮದ ಸುಪ್ರೀತ್ (36) ಮೃತ ದುರ್ದೈವಿ. ಅವರು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಸುಪ್ರೀತ್, ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಉದ್ಬೂರು ಗೇಟ್ ಸಮೀಪದ ಕಳ್ಳಬೇಟೆ ತಡೆ ಶಿಬಿರದ ಬಳಿ ಹರಿಯುತ್ತಿದ್ದ ಕಬಿನಿ ಜಲಾಶಯ ಹಿನ್ನೀರಿನಲ್ಲಿ ಇಬ್ಬರು ಸಹೋದ್ಯೋಗಿಗಳಾದ ಅಯ್ಯಪ್ಪ ಹಾಗೂ ಅಮನ್ ಜೊತೆ ಈಜಲು ತೆರಳಿದ್ದರು.
ಈ ವೇಳೆ ಏಕಾಏಕಿ ಆಯಾಸಗೊಂಡ ಸುಪ್ರೀತ್, ತಾವು ದಡಕ್ಕೆ ಹೋಗುವುದಾಗಿ ಹೇಳಿ ನೀರಿನಿಂದ ಹೊರಬರಲು ಯತ್ನಿಸಿದರು. ಆದರೆ ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದ್ಯೋಗಿಗಳ ಕೂಗಾಟ ಕೇಳಿ ಸ್ಥಳೀಯರು ತಕ್ಷಣ ಆಗಮಿಸಿ ಹುಡುಕಾಟ ನಡೆಸಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿ ಸುಪ್ರೀತ್ ಅವರ ಮೃತದೇಹವನ್ನು ಪತ್ತೆಹಚ್ಚಿದರು.ಇದನ್ನು ಓದಿ –SSLC ಫಲಿತಾಂಶ : ದಾಖಲೆಯ 94.10% ಉತ್ತೀರ್ಣತೆ
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರಕರಣ ಅಂತರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.








