ವೈಶಾಖ ಮಾಸ ಬಂತೆಂದರೆ ಸಾಕು… ಈ ಬೇಸಿಗೆಯ ಉರಿಬಿಸಿಲಿನ ಮಧ್ಯೆಯೇ ಸಾಲು ಸಾಲಾಗಿ ಸಮಾರಂಭಗಳು ಶುರುವಾಗುತ್ತವೆ. ಅದರಲ್ಲೂ ಈ ಬಾರಿ ಅಧಿಕ ಮಾಸ ಬಂದಿರುವುದರಿಂದ, ಅಧಿಕ ಮಾಸ ಆರಂಭವಾಗುವ ಮುನ್ನವೇ ಮುಗಿಸಿಬಿಡಬೇಕೆಂಬ ಆತುರದಲ್ಲಿ ಮದುವೆಗಳು, ಮುಂಜಿಗಳು, ಗೃಹಪ್ರವೇಶ, ವಾಸ್ತು, ಶಾಂತಿ ಹೀಗೆ ಅನೇಕ ಶುಭಕಾರ್ಯಗಳು ಮನೆಮನೆಗೂ ಜಾತ್ರೆಯಂತೆ ಕಂಗೊಳಿಸುತ್ತಿವೆ.
“ಕಾರ್ಯಕ್ರಮ” ಎಂಬ ಪದ ಕೇಳಿದ ತಕ್ಷಣ ಕಣ್ಣೆದುರಿಗೆ ಮೂಡುವುದು ಸಂಭ್ರಮದ ಚಿತ್ರಣ—ಜಗಮಗಿಸುವ ದೀಪಗಳು, ಹೂವಿನ ತೋರಣಗಳು, ಬಣ್ಣ ಬಣ್ಣದ ವಸ್ತ್ರಗಳು, ಝಳಪಿಸುವ ಒಡವೆಗಳು, ಸುಗಂಧ ಹರಡುವ ಭೋಜನದ ಪದಾರ್ಥಗಳು. ಅದರ ಜೊತೆಗೆ ಇನ್ನೊಂದು ಮುಖ್ಯವಾದ ಅಂಶ—ಉಡುಗೊರೆ!
ನಿಜವಾದ ಅರ್ಥದಲ್ಲಿ ಉಡುಗೊರೆ ಎಂದರೆ ಏನು?
ನಮ್ಮ ಪ್ರೀತಿಪಾತ್ರರಿಗೆ ನಮ್ಮ ಹೃದಯದ ತುಣುಕಿನಂತೆ ನೀಡುವ ಪುಟ್ಟ ಕಾಣಿಕೆ. ಅದು ನೆನಪಿನಲ್ಲಿ ಉಳಿಯುವಂತಿರಬಹುದು, ಇಲ್ಲವೇ ಉಪಯೋಗಕ್ಕೆ ಬರುವಂತಿರಬಹುದು. ಆದರೆ ದಿನಗಳು ಕಳೆದಂತೆ ಈ “ಉಡುಗೊರೆ” ಎಂಬ ಪದ ಪ್ರೀತಿಯ ಸಂಕೇತವಾಗಿರುವುದಕ್ಕಿಂತ, ಕಿರಿಕಿರಿಯ ತಲೆನೋವಾಗಿಬಿಟ್ಟಿದೆ.
ಒಂದು ಸಮಾರಂಭ ಹಮ್ಮಿಕೊಂಡರೆ ಸಾಕು—“ಯಾರಿಗೆ ಏನು ಮರಳಿ ಕೊಡಬೇಕು?” ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಅವರ ಸ್ಥಾನಮಾನ, ಸಂಬಂಧ, ಆರ್ಥಿಕ ಸ್ಥಿತಿ… ಎಲ್ಲವನ್ನೂ ತೂಕಮಾಪನದ ತಕ್ಕಡಿಯಲ್ಲಿ ಇಟ್ಟಂತೆ ಅಳೆದು ನೋಡಲಾಗುತ್ತದೆ. ಕೆಲವರು ಕೊಟ್ಟ ಸೀರೆಯ ಬಗ್ಗೆ, ಕೆಲವರು ಕೊಟ್ಟ ಪಾತ್ರೆಯ ಬಗ್ಗೆ, ಕೆಲವರು ಕೊಟ್ಟ ಶರ್ಟ್ಪೀಸ್ ಬಗ್ಗೆ ಹಿಂದೆ ಕುಳಿತು ನಡೆಯುವ ವಿಮರ್ಶೆಗಳು ವಾರ್ತಾ ಬಿಗ್ ಬುಲೆಟ್ಟಿನಂತೆ ತೀಕ್ಷ್ಣ
“ಅಯ್ಯೋ… ಮಗನ ಮದುವೆಯಲ್ಲಿ ಇಂಥ ಸೀರೆ ಕೊಟ್ಟಾರಲ್ಲ!
ಮಚ್ಚರದಾನಿಯ ಇದ್ದಂಗ ಅದ!”
“ನಮ್ಮ ಮನೆ ಕೆಲಸದವಳೂ ಇದಕ್ಕಿಂತ ಚಂದ ಸೀರೆ ಉಡುತ್ತಾಳೆ!”
ಎಂಬ ಮಾತುಗಳು ನಗುಮುಖದ ಹಿಂದೆ ಮಚ್ಚಿಟ್ಟ ಕಟುವಾದ ಮುಳ್ಳುಗಳಂತೆ ಇರಿಸುತ್ತವೆ.
ಸಮಾರಂಭಗಳಿಗೆ ಹೋಗುವುದು ಯಾರಿಗೆ ಇಷ್ಟವಿಲ್ಲ ಹೇಳಿ?
“ಅವರು ಬಹಳ ಬೇಕಾದವರು… ಹೋಗಲೇಬೇಕು…”
“ಹೋಗಲಿಲ್ಲ ಅಂದ್ರೆ ತಪ್ಪಾಗುತ್ತದೆ…”
“ನಮ್ಮ ಖಾಸ ಬಳಗ…”
ಹೀಗೆ ಹೇಳುತ್ತಾ ನಾವು ಸಿದ್ಧರಾಗುತ್ತೇವೆ. ಹೊಸ ಸೀರೆ, ಹೊಸ ಆಭರಣ, ಬ್ಲೌಸ್ ಸರಿಹೊಂದದಿದ್ದರೆ ಹೊಲಿಗೆ ಬಿಚ್ಚುವ ಗೋಜು—ಇವೆಲ್ಲ ಹೆಣ್ಣುಮಕ್ಕಳ ಸಡಗರದ ಭಾಗವೇ ಸರಿ. ಕೆಲವರು ಹಿಂದಿನ ಸಮಾರಂಭದಲ್ಲಿ ಹಾಕಿದ ಸೀರೆಯನ್ನು ಮತ್ತೆ ಹಾಕಬಾರದೆಂಬ ಒತ್ತಡದಲ್ಲೇ ಬದುಕುತ್ತಾರೆ. ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ, ಅಲಂಕಾರ ಮಾಡಿಕೊಂಡು, ಪ್ರೀತಿಪಾತ್ರರ ಸಮಾರಂಭಕ್ಕೆ ತೆರಳುವುದು ಅವರಿಗೊಂದು ಹಬ್ಬ.
ಅಲ್ಲಿ ಭೇಟಿಯಾಗುವ ಬಂಧುಗಳು, ಯೋಗಕ್ಷೇಮ ವಿಚಾರಿಸುವ ಮಾತುಗಳು, ಬಾಲ್ಯದ ನೆನಪುಗಳು,ಆ ಸಮಾರಂಭದಲ್ಲಿ ಒಂದಿಷ್ಟು ಪ್ರೀತಿಯ ಮಧುರ ಬಾಂಧವ್ಯಗಳು, ಅವರಿವರನು ಮತ್ತೆ ತಡಕಾಡುವ ಕಣ್ಣುಗಳು. ಯಾರದೋ ಮಗನಿಗೆ ಯಾರದೋ ಮಗಳ ಜೊತೆ ಬ್ರಹ್ಮಗಂಟು ಹಾಕುವ ಕಾಕು… ಮಾಮಿಗಳು…ಹೀಗೆ ಒಂದು ಸಮಾರಂಭವು ಎಲ್ಲರು ಲವಲವಿಕೆಯಿಂದ ಸಂಪನ್ನಗೊಳಿಸುತ್ತಾರೆ. ನಾವು ಹೋಗದಿದ್ರೆ ಹೆಂಗೆ? ಅಂತ ಕೇಳುವ ನಿಜ ಅರ್ಥದಲ್ಲಿ ಹೋಗಬೇಕು ಎನ್ನುವ ತುಡಿತ ಮತ್ತು ಜೀವನ ಪ್ರೀತಿ ಇರುತ್ತದೆ ವಿನಹ ಯಾರು ಹೋಗದಿದ್ದರೂ ಯಾವ ಸಮಾರಂಭವು ನಿಲ್ಲುವುದಿಲ್ಲ!! ಆಗುವ ಮದುವೆಗಳು ಆಗುತ್ತವೆ,ಆದರೆ ಅದರಲ್ಲಿ ನಮ್ಮದೊಂದಿಷ್ಟು ಬಡಿವಾರವನ್ನು ತೋರಿಸಿಕೊಳ್ಳುತ್ತಾ ತಪ್ಪಿಸಲಾರದ ಪರಿಸ್ಥಿತಿಯಲ್ಲಿ ಬಂದೇವು ಎಂದು ಹೇಳಿಕೊಳ್ಳುತ್ತಾ ಒಂದು ಸುಖವನ್ನು ಕಾಣುತ್ತೇವೆ.ಇವೆಲ್ಲ ಸಮಾರಂಭಗಳಿಗೆ ಜೀವ ತುಂಬುತ್ತವೆ. ಮನುಷ್ಯ ಸಂಘಜೀವಿ. ಒಂದಿಷ್ಟು ಬದಲಾವಣೆ, ಒಂದಿಷ್ಟು ಜನಸಂಗಮ—ಮನಸ್ಸಿಗೆ ಹೊಸ ಚೈತನ್ಯ ತುಂಬುತ್ತದೆ.ಅಲ್ಲಿಯ ಆಹಾರ ಊಟ ಉಪಚಾರ ಸವಿದು, ಬಂದವರ ಬಾರದವರ ಯೋಗ ಕ್ಷೇಮವನ್ನು ಕೇಳಿ ಅವರಿವರ ಬಾಯಿಯಿಂದ ಎಲ್ಲರ ವಿಷಯಗಳನ್ನು ತಿಳಿದು ತಿಳಿಸುವದು ಒಂದು ಜನಗಣತಿ ಸಮೀಕ್ಷೆಯೇ ಸರಿ.
ಆದರೆ ಇದೇ ಸಮಾರಂಭಗಳಲ್ಲಿ ಉಡುಗೊರೆ ಎಂಬುದು ಕೆಲವೊಮ್ಮೆ ಬಂಡೆಯಷ್ಟು ಭಾರವಾಗಿಬಿಡುತ್ತದೆ. ಬಂದ ಪ್ರತಿಯೊಬ್ಬರಿಗೂ ಏನಾದರೂ ಕೊಡಲೇಬೇಕು ಎಂಬ ಒತ್ತಡ. ಕೆಲವೊಮ್ಮೆ ಕಡಿಮೆ ಬೆಲೆಯ ವಸ್ತುಗಳನ್ನು ಗುಡ್ಡಗಟ್ಟಿಯಾಗಿ ತಂದು ಹಂಚಿಬಿಡುತ್ತಾರೆ. ಆಗ ಲಾಭವಾಗುವುದು ವ್ಯಾಪಾರಿಗೇ ಹೊರತು ಸಂಬಂಧಗಳಿಗೆ ಅಲ್ಲ.
ಹೋದವರೂ ಹಿಂದೆ ತಾವು ಕೊಟ್ಟಿದ್ದನ್ನು ನೆನಪಿಸಿಕೊಂಡೇ ಉಡುಗೊರೆ ಆರಿಸುತ್ತಾರೆ. “ಅವರು ನಮಗೆ ಇಷ್ಟು ಕೊಟ್ಟಿದ್ದರು… ನಾವು ಕಡಿಮೆ ಕೊಡಬಾರದು…” ಎಂಬ ಭಾವನಾ ಲೆಕ್ಕಾಚಾರ ಶುರುವಾಗುತ್ತದೆ. ನಂತರ ಆ ಉಡುಗೊರೆಯ ವಿಮರ್ಶೆ ಮಹಾಭಾರತದ ಸಭೆಯ ಚರ್ಚೆಯಂತೆ ಮುಂದುವರಿಯುತ್ತದೆ.
“ನೋಡ್ರಿ… ಎಂಥ ಸೀರೆ ಕೊಟ್ಟಾರೆ!”
“ಆ ಶರ್ಟ್ಪೀಸ್ಗೆ ಅರಿಶಿನದ ಕಲೆ ಹೋಗಲೇ ಇಲ್ಲ!”
“ನನ್ನ ಮಗಳಿಗೆ ಇಂಥ ರಬ್ಬ ಬಣ್ಣದ ಸೀರೆ ಕೊಡ್ತಾರಾ?”
” ಆ ಧೋತರ ಜೋಡಿ ಇಟ್ಟಲ್ಲೇ ಮಡಚಿ ಕಟಗರಿಸಿ ಬಿದ್ದಾವ”
ಹೀಗೆ ಮಾತುಗಳು ಕಾದಂಬರಿಯ ವಿಮರ್ಶೆಗಿಂತ ಸ್ವಾರಸ್ಯಕರ.ಈ ಸನ್ಮಾನ ಪತ್ರಗಳು
ಇನ್ನು ಉಡುಗೊರೆ ಪಡೆದವರ ಕಥೆಯೂ ಕಡಿಮೆಯಿಲ್ಲ. ಅನೇಕ ಸಮಾರಂಭಗಳನ್ನು ಕಂಡ ಗಡಿಯಾರದ ಪೆಟ್ಟಿಗೆಗಳು, ಕೈಯಿಂದ ಕೈ ಗೆ ಬದಲಾದ ಸೀರೆಗಳು., ಒಂದು ಮನೆಯಿಂದ ಇನ್ನೊಂದು ಮನೆಗೆ ಸುತ್ತಾಡುವ ಬ್ಲೌಸ್ಪೀಸ್ಗಳು—ಇವೆಲ್ಲ ಸಂಬಂಧಗಳಿಗಿಂತ ವಸ್ತುಗಳ ಸಂಚಾರವೇ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತವೆ. ಮೊಬೈಲ್ ನೆಟ್ವರ್ಕ್ಗಿಂತ ವೇಗವಾಗಿ ಈ ಉಡುಗೊರೆಗಳು ಕೈ ಬದಲಾಯಿಸುತ್ತವೆ.
“ಅವರ ಮದುವೆಗೆ ನಾನು ಚಂದದ ಸೀರೆ ಕೊಟ್ಟಿದ್ದೆ… ಅವರು ಏನು ಕೊಟ್ಟಿದ್ದಾರೆ ನೋಡಿ!”
“ಮಗ-ಸೊಸೆ ಇಬ್ಬರೂ ದುಡಿಯುತ್ತಾರೆ ಅಂದ್ರೂ ಇಂಥ ಉಡುಗೊರೆ!”
ಎಂಬ ಟಿಪ್ಪಣಿಗಳಲ್ಲಿ ಕೆಲವರು ಕಂದಾಯ ಅಧಿಕಾರಿಗಳಿಗಿಂತ ಹೆಚ್ಚಾಗಿ ಇತರರ ಆಸ್ತಿ-ಅಂತಸ್ತನ್ನೇ ಲೆಕ್ಕ ಹಾಕುತ್ತಾರೆ.
ಆದರೆ ನಿಜವಾದ ಅರ್ಥದಲ್ಲಿ ಉಡುಗೊರೆ ಎಂದರೆ ಪ್ರೀತಿಯ ಸಂಕೇತ. ಅದು ನೆನಪಿನಲ್ಲಿ ಉಳಿಯಬೇಕು ಅಥವಾ ಉಪಯೋಗಕ್ಕೆ ಬರಬೇಕು. ಇಲ್ಲದಿದ್ದರೆ ಅದು ಉಡುಗೊರೆಯಲ್ಲ, ಗುಜರಿಗೆ ಹೋಗುವ ವಸ್ತು ಮಾತ್ರ.
ಮಧ್ಯಮ ವರ್ಗದ ಜನರಿಗೆ ಹತ್ತಾರು ಮದುವೆಗಳಿಗೆ ಹೋಗಿ ಒಳ್ಳೆಯ ಉಡುಗೊರೆ ಕೊಡುವುದು ಸುಲಭವಲ್ಲ. ಪ್ರಯಾಣದ ಖರ್ಚು, ಬಟ್ಟೆ, ಇತರೆ ವೆಚ್ಚಗಳು—ಎಲ್ಲವೂ ಸೇರಿ ಭಾರವಾಗುತ್ತವೆ. ಇನ್ನು ಸಮಾರಂಭ ಮಾಡುವವರ ಪರಿಸ್ಥಿತಿ ಇನ್ನೂ ಕಷ್ಟ. ಮನೆ ಕಟ್ಟಿದ ಸಾಲ, ಮದುವೆಯ ಖರ್ಚು, ಊಟೋಪಚಾರ, ಅಲಂಕಾರ… ಇವೆಲ್ಲದ ನಡುವೆ ಮರಳಿ ಉಡುಗೊರೆ ನೀಡುವುದು ಕೆಲವೊಮ್ಮೆ ಕೈಮೀರಿದ ಹೊರೆ ಆಗಿಬಿಡುತ್ತದೆ.
ಮನೆ ಕಟ್ಟುವವನ ಗೋಡೆಯೊಳಗೆ ಅವನ ಬೆವರ ಹನಿಗಳು ಅಡಗಿರುತ್ತವೆ. ಮಗಳನ್ನು ಮದುವೆ ಮಾಡುವ ತಂದೆಯ ನಗುವಿನ ಹಿಂದೆ ಅವನ ನಿದ್ದೆರಹಿತ ರಾತ್ರಿಗಳು ಅಡಗಿರುತ್ತವೆ ಸಾಲದ ಹೊರೆಗಳು ಇರುತ್ತವೆ. ಅನ್ನ ಹಾಕಿಸುವವನ ಕೈಯಲ್ಲಿ ಕೇವಲ ಆಹಾರವಲ್ಲ, ಅವನ ಮಾನ, ಪ್ರೀತಿ ಮತ್ತು ಪರಿಶ್ರಮ ಕೂಡ ಬೆರೆತಿರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ “ಅನ್ನ ಹೇ ಪರಬ್ರಹ್ಮ” ಎಂದು ಹೇಳುತ್ತಾರೆ. ಅಂತಹ ಅನ್ನವನ್ನು ಉಂಡು, ಅದರ ಲೆಕ್ಕ ಹಾಕಿ ಮಾತಾಡುವುದು ಬಹಳ ಅನುಚಿತ.
ಉಡುಗೊರೆ ಲೆಕ್ಕದಲ್ಲಿ ಬಂದ ಅತಿಥಿಗಳನ್ನು ಎಂದಿಗೂ ಅಳೆಯಬಾರದು. ಸಮಾರಂಭಗಳು ಸಂತೋಷದ ಸಹಿಬಾಗಿತ್ವ ಆಗಬೇಕು ವಿನಃ ತೋರಿಕೆಯ ಸಂಧಾನಗಳು ಖಂಡಿತ ಅಲ್ಲ.
ಇಂದು ಹಲವಾರು ಮಧ್ಯಮ ವರ್ಗದ ಕುಟುಂಬಗಳು “ಏನು ಹೇಳ್ತಾರೋ?” ಎಂಬ ಸಮಾಜದ ಭಯಕ್ಕೆ ಸಾಲ ಮಾಡಿ ಉಡುಗೊರೆ ಕೊಡುವ ಪರಿಸ್ಥಿತಿಗೆ ತಲುಪಿವೆ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಲೆಕ್ಕ ಹಾಕುವ ಕೈಗಳು, ತಿಂಗಳ ಖರ್ಚನ್ನು ಜೋಪಾನ ಮಾಡುವ ಮನಸ್ಸುಗಳು, ಒಂದು ಸಮಾರಂಭಕ್ಕೆ ಹೋಗುವಾಗ ಮಾತ್ರ “ಖಾಲಿ ಕೈಯಲ್ಲಿ ಹೋದರೆ ಹೇಗೆ?” ಎಂಬ ಸಂಕೋಚಕ್ಕೆ ನಲುಗಿ ಸಾಲದ ಬಾಗಿಲು ತಟ್ಟುತ್ತವೆ. ಆದರೆ ನಿಜವಾಗಿ ನೋಡಿದರೆ ಸಾಲ ಮಾಡಿ ಕೊಟ್ಟ ಉಡುಗೊರೆಯಲ್ಲಿ ಪ್ರೀತಿಯ ಸುವಾಸನೆಗಿಂತ ಆತಂಕದ ಬೆವರೇ ಹೆಚ್ಚು ಇರುತ್ತದೆ. ಉಡುಗೊರೆಯ ಭಾರದಲಿ ಬಂದವರ ಮಾನವನ್ನಾಗಲಿ, ಆತ್ಮೀಯತೆಯನ್ನಾಗಲಿ ಅಳೆಯಬಾರದು. ಕೆಲವರ ಕೈಯಲ್ಲಿ ದುಬಾರಿ ಪೆಟ್ಟಿಗೆ ಇರಬಹುದು, ಇನ್ನೂ ಕೆಲವರ ಕೈಯಲ್ಲಿ ಕೇವಲ ಅಕ್ಷತೆ, ಆಶೀರ್ವಾದ ಮತ್ತು ಹೃದಯಪೂರ್ವಕ ನಗು ಇರಬಹುದು; ಆದರೆ ಎರಡರ ಹಿಂದೆ ಇರುವ ಮನಸ್ಸಿನ ಮೌಲ್ಯವನ್ನು ಯಾವ ತಕ್ಕಡಿಯೂ ಅಳೆಯಲು ಸಾಧ್ಯವಿಲ್ಲ. ಪ್ರೀತಿ, ಗೌರವ, ಸಮಯ, ಹಿತವಾದ ಮಾತು — ಇವು ಬೆಲೆ ಕಟ್ಟಲಾಗದ ಉಡುಗೊರೆಗಳು. ಹಣ ಕೊಟ್ಟು ತಂದ ವಸ್ತುಗಳು ಕಾಲದೊಂದಿಗೆ ಮಸುಕಾಗಬಹುದು; ಆದರೆ ಹೃದಯದಿಂದ ನೀಡಿದ ಸೌಹಾರ್ದ ಮಾತ್ರ ಜೀವಮಾನವಿಡೀ ಮನಸ್ಸಿನಲ್ಲಿ ದೀಪದಂತೆ ಬೆಳಗುತ್ತಿರುತ್ತದೆ.
ತೀರಾ ಹತ್ತಿರದವರನ್ನು ಬಿಟ್ಟು ಉಡುಗೊರೆ ಕೊಡುವುದು-ಪಡೆಯುವುದು ಎರಡನ್ನೂ ನಿಲ್ಲಿಸಿದರೆ ಎಷ್ಟು ಒಳ್ಳೆಯದು! ನಾವು ಯಾರಿಗಾದರೂ ಕೊಡಬಹುದಾದ ಅತ್ಯಮೂಲ್ಯ ಉಡುಗೊರೆ ಎಂದರೆ ನಮ್ಮ ಸಮಯ. ನಮ್ಮ ವ್ಯಸ್ತ ಬದುಕಿನ ಮಧ್ಯೆಯೂ ಸಮಯ ತೆಗೆದು ಅವರ ಸಂತೋಷದಲ್ಲಿ ಭಾಗಿಯಾಗುವುದು—ಅದೇ ನಿಜವಾದ ಕಾಣಿಕೆ.
ಪ್ರೀತಿಯಿಂದ ಸ್ವಾಗತಿಸುವ ನಗುಮುಖ, “ಬಂದಿದ್ದಕ್ಕೆ ಧನ್ಯವಾದ” ಎಂಬ ಹೃದಯದ ಮಾತು, ಪ್ರೀತಿಯಿಂದ ಬಡಿಸಿದ ಒಂದು ಊಟ—ಇವೆಲ್ಲ ಸಾವಿರ ರೂಪಾಯಿಯ ಉಡುಗೊರೆಯಿಗಿಂತ ಮಿಗಿಲಾದವು. ಹಾಗೆಯೇ ದೂರದ ಊರಿನಿಂದ ಪ್ರಯಾಣ ಮಾಡಿ ಸಮಾರಂಭಕ್ಕೆ ಬರುವ ಅತಿಥಿಯ ಉಪಸ್ಥಿತಿಯೇ ಅಮೂಲ್ಯ ಉಡುಗೊರೆ.
ಸಮಾರಂಭಗಳು ಸ್ನೇಹಸಮ್ಮೇಳನವಾಗಬೇಕು; ಬಣ್ಣದ ಪೆಟ್ಟಿಗೆಗಳಲ್ಲಿ ಸಿಲುಕಿದ ಲೆಕ್ಕಾಚಾರದ ಸಂಬಂಧಗಳಾಗಬಾರದು. ಉಡುಗೊರೆಗಳ ಹೆಸರಿನಲ್ಲಿ ಮಾನವೀಯತೆ ಕುಸಿಯಬಾರದು.
ಯಾವ ಸಮಾರಂಭಗಳೂ ತಮ್ಮ ಸಂಪತ್ತಿನ ತೋರಿಕೆಯಾಗಲಿ, ಧರಸಿದ ಆಭರಣಗಳ ಪ್ರದರ್ಶನವಾಗಲಿ ಆಗಬಾರದು. ಇರುವ ಸಂಪತ್ತನ್ನು ಸಂಭ್ರಮಿಸುವ ಗುಣವಿರಲಿ ವಿನಃ ಇನ್ನೊಬ್ಬರಿಗೆ ತೋರಿಸಿ ಮೆರೆಯುವ ಸಾಧನಗಳಾಗದಿರಲಿ. ನಿಮ್ಮ ಹತ್ತಿರ ಒಳ್ಳೆಯ ಸೀರೆ, ಆಭರಣ ಇದೆ ಎಂದು ಜಂಬದಿಂದ ಎಲ್ಲರೆದರೂ ಬೀಗಿದರೆ ಖಂಡಿತ ಅದು ಹೆಚ್ಚುಗಾರಿಕೆ ಅಲ್ಲ, ನೀವು ಧನಿಕರೆಂದು ಇನ್ನೂಬ್ಬರಿಗೆ ಸಂಪತ್ತು ಹಂಚುತಿಲ್ಲ ಅಂದ ಮೇಲೆ ಗರ್ವ ಯಾವದರ ಬಗ್ಗೆ…. ಅದನ್ನು ನೀವೇ ಅನುಭವಿಸುವ ಸುಖದ ಸೊರೆಯನು ಇನ್ನೋರ್ವರ ಮುಂದೆ ಭ್ರಮಣವೆ. ಹಾಗೆಯೇ ನಮ್ಮ ಬಳಿ ಅವು ಇಲ್ಲವೆಂದು ಕೀಳರಿಮೆಯೂ ಬೇಡ. ನಾವು ಉಣ್ಣುವ ಅನ್ನ ನಮ್ಮ ದುಡಿಮೆಯಾಗಿರುವರೆಗೆ ನಾವು ಸದಾ ಅಭಿಮಾನದಿಂದ ಬದುಕಬೇಕು.
ಕಾಡಿನಲ್ಲಿದ್ದರೂ ರಾಮ, ರಾಮನೇ ಆಗಿದ್ದ. ಪರ್ಣಕುಟೀರದಲ್ಲಿದ್ದರೂ ಅಯೋಧ್ಯೆಯ ಅರಮನೆಗಿಂತ ಹೆಚ್ಚು ಸಂತಸದಿಂದ ಬದುಕಿದ್ದ. ಸಂತೋಷವು ಬಂಗಾರದ ಆಭರಣಗಳಲ್ಲಿ ಅಲ್ಲ; ಮನಸ್ಸಿನ ಸಮಾಧಾನದಲ್ಲಿ ಇದೆ. ಸಂಬಂಧಗಳ ಬೆಲೆ ಉಡುಗೊರೆಯ ಪೆಟ್ಟಿಗೆಯಲ್ಲಿ ಅಲ್ಲ; ಪ್ರೀತಿಯಿಂದ ನೆನೆಸುವ ಹೃದಯಗಳಲ್ಲಿ ಇದೆ. ನೀವು ಯಾರಿಗಾದರೂ ಕೊಡುವ ಬಹುಮೂಲ್ಯ ಉಡುಗೊರೆ ಎಂದರೆ ಅದು ನಿಮ್ಮ ಸಮಯ!!

ಸಾಕ್ಷಿ ಶ್ರೀಕಾಂತ ತಿಕೋಟಿಕರ








