ಬೆಂಗಳೂರು: ವರ್ಗಾವಣೆ ಮತ್ತು ಪ್ರಮೋಷನ್ ಆಗಲೆಂದು ಗಿಳಿಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದ ನಗರದಲ್ಲಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಮೋಸಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಇನ್ಕಮ್ ಟ್ಯಾಕ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆ ಮೇಲೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, ನಿಮ್ಮ ಮುಖ ನೋಡಿ ಜಾತಕ ಭವಿಷ್ಯ ಹೇಳುತ್ತೇನೆ, ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ ಎಂದು ನಂಬಿಸಿದ್ದ.
ಜೀವನ ಸುಧಾರಣೆಗಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿ ಮೊದಲು 50 ಸಾವಿರ ರೂಪಾಯಿ ಹಣ ಪಡೆದು ಪೂಜೆ ನಡೆಸಿದ್ದಾನೆ.
ಪೂಜೆಯ ನಂತರವೂ ಶೇಖರ್ ಪದೇಪದೇ ಐಟಿ ಅಧಿಕಾರಿಗೆ ಕರೆ ಮಾಡಿ ಅವರ ವರ್ಗಾವಣೆ ವಿಚಾರವಾಗಿ ಮಾತನಾಡುತ್ತಿದ್ದ. ನಂತರ ಗಿಳಿಶಾಸ್ತ್ರ ನೋಡಿ ನಿಮ್ಮ ವರ್ಗಾವಣೆಗಾಗಿ ಮತ್ತೊಂದು ದೊಡ್ಡ ಪೂಜೆ ಮಾಡಬೇಕು ಎಂದು ಹೇಳಿ, ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಲು ಸೂಚಿಸಿದ್ದಾನೆ.
ಶೇಖರ್ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಆತನಿಗೆ ನೀಡಿದ್ದಾರೆ.
ಒಂದು ದಿನದಲ್ಲೇ ಚಿನ್ನಾಭರಣಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದ ಶೇಖರ್, ಪೂಜೆ ಇನ್ನೂ ಮುಗಿದಿಲ್ಲ ಎಂದು ಹೇಳುತ್ತಾ ನಾಳೆ–ನಾಡಿದ್ದು ಎಂದು ಒಂದು ವಾರದ ಕಾಲ ಅಧಿಕಾರಿಯನ್ನು ಅಲೆಸಿದ್ದಾನೆ.
ಕೊನೆಗೆ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ತೆರಳಿದಾಗ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಅಲ್ಲಿಂದಲೇ ನಾಪತ್ತೆಯಾಗಿರುವುದು ತಿಳಿದುಬಂದಿದೆ.ಇದನ್ನು ಓದಿ –ವಾಣಿಜ್ಯ ಎಲ್ಪಿಜಿ ಕೊರತೆ:ಕೇಂದ್ರ ಸಚಿವರಿಗೆ ಸಿಎಂ ಪತ್ರ
ತಾನು ಮೋಸಹೋಗಿರುವುದನ್ನು ಅರಿತ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.








